<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Ambedkar odu &#8211; Peepal Media</title>
	<atom:link href="https://peepalmedia.com/tag/ambedkar-odu/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 24 Aug 2024 13:10:49 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Ambedkar odu &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಒಳಮೀಸಲಾತಿ ಹೋರಾಟದ ಸೈದ್ಧಾಂತಿಕ ಬೆನ್ನೆಲುಬು ಡಾ.ಕೆ.ಬಾಲಗೋಪಾಲ್</title>
		<link>https://peepalmedia.com/dr-k-balagopal-was-the-ideological-backbone-of-the-internal-reservation-struggle/</link>
		
		<dc:creator><![CDATA[Peepal Media]]></dc:creator>
		<pubDate>Sat, 24 Aug 2024 13:10:39 +0000</pubDate>
				<category><![CDATA[ಅಂಕಣ]]></category>
		<category><![CDATA[ಸತ್ಯ ಶೋಧ]]></category>
		<category><![CDATA[Ambedkar]]></category>
		<category><![CDATA[Ambedkar odu]]></category>
		<category><![CDATA[Ambedkar Parinirvan Day]]></category>
		<category><![CDATA[Bhimrao Ramji Ambedkar]]></category>
		<category><![CDATA[Dr BR Ambedkar]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=44426</guid>

					<description><![CDATA[-ವಿ.ಎಲ್.ನರಸಿಂಹಮೂರ್ತಿ ಒಳಮೀಸಲಾತಿ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಹೊರಬಂದ ಮೇಲೆ MRPS ನೇತಾರ ಮಂದಾಕೃಷ್ಣ ಮಾದಿಗ ಹಲವರನ್ನು ಬೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಮಂದಾಕೃಷ್ಣ ಮಾದಿಗ ಭೇಟಿ ಮಾಡಿದ ಹಲವರಲ್ಲಿ ಒಳಮೀಸಲಾತಿ ಹೋರಾಟಕ್ಕೆ ನಿಜವಾಗಿಯೂ ಬೆಂಬಲ ಕೊಟ್ಟವರ ಜೊತೆಗೆ ಬಿಜೆಪಿ-ಸಂಘಪರಿವಾರದ ಹಲವರೂ ಇದ್ದಾರೆ. ಇವೆಲ್ಲವೂ ಅವರ ರಾಜಕೀಯ ಲೆಕ್ಕಾಚಾರ. ಆದರೆ ಇಂದು ಮಂದಾಕೃಷ್ಣ ಅವರು ಈಗ ಭೌತಿಕವಾಗಿ ನಮ್ಮ ನಡುವೆ ಇಲ್ಲದ ಚಿಂತಕ, ಮಾನವ ಹಕ್ಕುಗಳ ಹೋರಾಟಗಾರ ಡಾ. ಕೆ. ಬಾಲಗೋಪಾಲ್ ಅವರ ಮನೆಗೆ ಭೇಟಿ ಕೊಟ್ಟು [&#8230;]]]></description>
										<content:encoded><![CDATA[
<p><strong>-ವಿ.ಎಲ್.ನರಸಿಂಹಮೂರ್ತಿ</strong></p>



<p>ಒಳಮೀಸಲಾತಿ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಹೊರಬಂದ ಮೇಲೆ MRPS ನೇತಾರ ಮಂದಾಕೃಷ್ಣ ಮಾದಿಗ ಹಲವರನ್ನು ಬೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಮಂದಾಕೃಷ್ಣ ಮಾದಿಗ ಭೇಟಿ ಮಾಡಿದ ಹಲವರಲ್ಲಿ ಒಳಮೀಸಲಾತಿ ಹೋರಾಟಕ್ಕೆ ನಿಜವಾಗಿಯೂ ಬೆಂಬಲ ಕೊಟ್ಟವರ ಜೊತೆಗೆ ಬಿಜೆಪಿ-ಸಂಘಪರಿವಾರದ ಹಲವರೂ ಇದ್ದಾರೆ. ಇವೆಲ್ಲವೂ ಅವರ ರಾಜಕೀಯ ಲೆಕ್ಕಾಚಾರ.</p>



<p>ಆದರೆ ಇಂದು ಮಂದಾಕೃಷ್ಣ ಅವರು ಈಗ ಭೌತಿಕವಾಗಿ ನಮ್ಮ ನಡುವೆ ಇಲ್ಲದ ಚಿಂತಕ, ಮಾನವ ಹಕ್ಕುಗಳ ಹೋರಾಟಗಾರ ಡಾ. ಕೆ. ಬಾಲಗೋಪಾಲ್ ಅವರ ಮನೆಗೆ ಭೇಟಿ ಕೊಟ್ಟು ಕೃತಜ್ಞತೆ ಸಲ್ಲಿಸಿ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ವೈಯಕ್ತಿಕವಾಗಿ ನನಗೆ ಮಂದಾಕೃಷ್ಣ ಅವರ ಈ ನಡೆ ತುಂಬಾ ಖುಷಿ ಕೊಟ್ಟಿದೆ.</p>



<p>ಒಳಮೀಸಲಾತಿ ಹೋರಾಟ ಶುರುವಾಗಿ ಅದು ಆಂಧ್ರಪ್ರದೇಶದಲ್ಲಿ ತಾರಕಕ್ಕೆ ಹೋದಾಗ ಅದನ್ನು ಬೌದ್ಧಿಕ ವಲಯ ಅಸಂವಿಧಾನಿಕ, ದಲಿತ ಚಳುವಳಿಗೆ ಮಾರಕ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಪರಿಕಲ್ಪನೆಗೆ ವಿರುದ್ಧ ಅಂತ ಬಿಂಬಿಸುವುದಕ್ಕೆ ಪ್ರಯತ್ನಿಸಿತು. ಒಳಮೀಸಲಾತಿ ಹೋರಾಟವೇ ಅಪ್ರಸ್ತುತ ಎಂದು ವಾದಿಸಿದ ಚಿಂತಕರಲ್ಲಿ ದಲಿತೇತರರು, ದಲಿತ ಚಿಂತಕರು ಎಲ್ಲರೂ ಇದ್ದರು.</p>



<p>ದಲಿತ ಸಮುದಾಯದ ನಡುವೆ ಎದ್ದ ಪ್ರಾತಿನಿಧ್ಯದ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಎಲ್ಲರೂ ಒದ್ದಾಡುತ್ತಿದ್ದಾಗ ಡಾ. ಕೆ. ಬಾಲಗೋಪಾಲ್ EPW ಪತ್ರಿಕೆ ಅಂಕಣದಲ್ಲಿ ಒಳಮೀಸಲಾತಿ ಕುರಿತು ಬರೆದರು. ಬಾಲಗೋಪಾಲ್ ಒಳಮೀಸಲಾತಿ ಹೋರಾಟದ ಅಗತ್ಯದ ಕುರಿತು ಬರೆದ A Tangled Web: Subdivision of SC Reservations in AP(2000) ಮತ್ತು ಒಳಮೀಸಲಾತಿಯನ್ನು ಅಸಿಂಧುಗೊಳಿಸಿ ಸುಪ್ರೀಂಕೋರ್ಟ್ ನೀಡಿದ ಇ.ವಿ. ಚಿನ್ನಯ್ಯ ಕೇಸಿನ ಕುರಿತು ಬರೆದ Justice for Dalits among Dalits: All the Ghosts Resurface(2005) ಈ ಎರಡೂ ಲೇಖನಗಳು<br>ಒಳಮೀಸಲಾತಿ ಹೋರಾಟಕ್ಕೆ ಸ್ಪಷ್ಟ ಮತ್ತು ಬಲಿಷ್ಠವಾದ ಸೈದ್ಧಾಂತಿಕ ಚೌಕಟ್ಟನ್ನು ಒದಗಿಸಿದವು.<br>ಒಳಮೀಸಲಾತಿ ಹೋರಾಟ ಕೇವಲ ರಾಜಕೀಯ ಸಂಚು, ನಾಯಕತ್ವದ ಪ್ರಶ್ನೆ, ಐಡೆಂಟಿಟಿ ರಾಜಕಾರಣದ ಅಪಾಯಕಾರಿ ಬೆಳವಣಿಗೆ ಎನ್ನುವ ನೆರೇಟಿವ್‌ ಅನ್ನು ಹೊಡೆದು ಉರುಳಿಸಿದ ಬಾಲಗೋಪಾಲ್ ಚಿಂತನೆ ದಲಿತ ಮತ್ತು ದಲಿತೇತರ ಬುದ್ದಿಜೀವಿಗಳನ್ನು ಅಲುಗಾಡಿಸಿತು. ಬಾಲಗೋಪಾಲ್ ತಮ್ಮ ಓರಿಜಿನಲ್ ಅಂಬೇಡ್ಕರ್‌ವಾದಿ ಕಣ್ಣೋಟದ ಮುಖಾಂತರ ಒಳಮೀಸಲಾತಿ ಹೋರಾಟವನ್ನು ವಿಶ್ಲೇಷಿಸಿದ ನಂತರ ಅದಕ್ಕೆ ಉತ್ತರ ಕೊಡಲಾಗದೆ ಬೌದ್ಧಿಕ ವಲಯ ಮೌನಕ್ಕೆ ಶರಣಾಯಿತು.</p>



<p>ಈಗ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟ ಮೇಲೂ ಬೌದ್ಧಿಕ ವಲಯ ಮೀಸಲಾತಿ ಕುರಿತು ಮೇಲ್ಜಾತಿಯ ಚಿಂತಕರು ಕಟ್ಟಿರುವ ಮಿಥ್‌ಗಳನ್ನೇ ಮುಂದುವರೆಸಿಕೊಂಡು ಒಳಮೀಸಲಾತಿ ಜಾರಿಯಾದರೆ ದಲಿತ ಸಮುದಾಯದ ಒಗ್ಗಟ್ಟು ಮುರಿಯುತ್ತದೆ, ಪ್ರತಿಭೆಗೆ ಅವಕಾಶವಿಲ್ಲದಂತಾಗುತ್ತದೆ, ಮೀಸಲಾತಿ ಅಪ್ರಸ್ತುತವಾಗುತ್ತದೆ, ಸರಿಯಾದ ಅಂಕಿಅಂಶಗಳಿಲ್ಲದ ಕಾರಣ ಒಳಮೀಸಲಾತಿ ಜಾರಿ ಅಸಂಭವ ಎನ್ನುವ ಅಡ್ಡಗೋಡೆಯ ಮೇಲೆ ದೀಪ ಇಡುವ ಮಾದರಿಯ ಜಾಣ ನಡೆ ಅನುಸರಿಸುತ್ತಿದೆ. ದಲಿತರೊಳಗಿನ ಬಲಾಢ್ಯ ಜಾತಿಗಳ ನಾಯಕರು ಇದನ್ನು ಮುಂದುಮಾಡಿ ಒಳಮೀಸಲಾತಿ ಜಾರಿಯಾಗದಂತೆ ಪ್ರಯತ್ನಿಸುತ್ತಿರುವಾಗ ಬಾಲಗೋಪಾಲ್ ಬದುಕಿದ್ದರೆ ಇವರೆಲ್ಲರಿಗೂ ಉತ್ತರಿಸುತ್ತಿದ್ದರು.</p>



<p>ತನ್ನ ಕಾಲದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದ ಬಾಲಗೋಪಾಲ್ ತರದ ಚಿಂತಕರಿಲ್ಲದೆ ಇವತ್ತು Intellectual void ಸೃಷ್ಟಿಯಾಗಿದೆ.</p>



<p>ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಕುರಿತಂತೆ ಡಾ.ಕೆ. ಬಾಲಗೋಪಾಲ್ ಅವರ ಕಾಣ್ಕೆಯನ್ನು ನೆನಪು ಮಾಡಿಕೊಳ್ಳುವುದು ಇವತ್ತಿನ ಬಿಕ್ಕಟ್ಟಿನ ಸಮಯದಲ್ಲಿ ಹೆಚ್ಚು ಪ್ರಸ್ತುತ.</p>



<p>ಜೈ ಭೀಮ್‌ ಡಾ. ಕೆ. ಬಾಲಗೋಪಾಲ್ ಸರ್…</p>
]]></content:encoded>
					
		
		
			</item>
		<item>
		<title>ʼಮಹಾಡ್ʼ ಮರೆಯಲಾಗದ ಮೊದಲ ದಲಿತ ಕ್ರಾಂತಿ</title>
		<link>https://peepalmedia.com/%ca%bcmahad%ca%bc-was-the-first-dalit-revolution-that-will-never-be-forgotten/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 20 Mar 2024 11:26:53 +0000</pubDate>
				<category><![CDATA[ಇತಿಹಾಸ]]></category>
		<category><![CDATA[ದಲಿತ ನೋಟ]]></category>
		<category><![CDATA[ಸತ್ಯ ಶೋಧ]]></category>
		<category><![CDATA[Ambedkar]]></category>
		<category><![CDATA[Ambedkar odu]]></category>
		<category><![CDATA[ambedkasr]]></category>
		<category><![CDATA[amdedkar]]></category>
		<category><![CDATA[anand teltumbde]]></category>
		<category><![CDATA[anand theldumbde]]></category>
		<category><![CDATA[Dalit]]></category>
		<category><![CDATA[dalit activists]]></category>
		<category><![CDATA[Dalit cultural resistance]]></category>
		<category><![CDATA[india]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=37232</guid>

					<description><![CDATA[(ಮಹಾಡ್ ಚೌಡರ್ ಕೆರೆ ಚಳವಳಿ ದಲಿತ ಚಳವಳಿಯಲ್ಲಿ ಒಂದು ಮರೆಯಲಾಗದ ಅಧ್ಯಾಯ. ಈ ಕುರಿತು 2016ರಲ್ಲಿ ಇಂಗ್ಲಿಷ್‌ನಲ್ಲಿ ಡಾ. ಆನಂದ್ ತೇಲ್ತುಂಬ್ಡೆ ಅವರು&#160; “Mahad: The Making of the First Dalit Revolt” ಎಂಬ ಮಹತ್ವದ ವಿವರವಾದ ವಿಶ್ಲೇಷಣಾತ್ಮಕ ಪುಸ್ತಕ ಬರೆದು ಪ್ರಕಟಿಸಿದರು. ಈ ಪುಸ್ತಕವನ್ನು ಹಿರಿಯ ಲೇಖಕ ಅಬ್ದುಲ್ ರೆಹಮಾನ್ ಪಾಷಾ ಅವರು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದು, ಕ್ರಿಯಾ ಮಾಧ್ಯಮ &#160;ಪ್ರಕಟಿಸಿದೆ. ) ‘‘ಮಹಾಡ್ ದಲಿತರಿಗೆ ಮುಂದಿನ ಹಾದಿಯನ್ನು ತೋರಿಸುವ ದೀಪಸ್ತಂಭವಾಗಿದೆ. ಮಹಾಡ್ ಚಳವಳಿಗೆ [&#8230;]]]></description>
										<content:encoded><![CDATA[
<ul class="wp-block-list">
<li><strong>ಆನಂದ್‌ ತೇಲ್ತುಂಬ್ಡೆ (ಕನ್ನಡಕ್ಕೆ: ಅಬ್ದುಲ್‌ ರೆಹಮಾನ್‌ ಪಾಷ)  </strong></li>
</ul>



<p>(ಮಹಾಡ್ ಚೌಡರ್ ಕೆರೆ ಚಳವಳಿ ದಲಿತ ಚಳವಳಿಯಲ್ಲಿ ಒಂದು ಮರೆಯಲಾಗದ ಅಧ್ಯಾಯ. ಈ ಕುರಿತು 2016ರಲ್ಲಿ ಇಂಗ್ಲಿಷ್‌ನಲ್ಲಿ ಡಾ. ಆನಂದ್ ತೇಲ್ತುಂಬ್ಡೆ ಅವರು&nbsp; “Mahad: The Making of the First Dalit Revolt” ಎಂಬ ಮಹತ್ವದ ವಿವರವಾದ ವಿಶ್ಲೇಷಣಾತ್ಮಕ ಪುಸ್ತಕ ಬರೆದು ಪ್ರಕಟಿಸಿದರು. ಈ ಪುಸ್ತಕವನ್ನು ಹಿರಿಯ ಲೇಖಕ ಅಬ್ದುಲ್ ರೆಹಮಾನ್ ಪಾಷಾ ಅವರು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದು, ಕ್ರಿಯಾ ಮಾಧ್ಯಮ &nbsp;ಪ್ರಕಟಿಸಿದೆ. )</p>



<p>‘‘ಮಹಾಡ್ ದಲಿತರಿಗೆ ಮುಂದಿನ ಹಾದಿಯನ್ನು ತೋರಿಸುವ ದೀಪಸ್ತಂಭವಾಗಿದೆ. ಮಹಾಡ್ ಚಳವಳಿಗೆ ಎರಡು ದಶಕಕ್ಕೂ ಮುನ್ನ ಕೇರಳದಲ್ಲಿ ನಡೆದ ಅಯ್ಯಂಕಾಳಿ ಚಳವಳಿಯ ಗೌರವಾರ್ಹ ಉದಾಹರಣೆ ಬಿಟ್ಟರೆ, ದಲಿತರು ಮೊಟ್ಟ ಮೊದಲ ಬಾರಿಗೆ ಜಾತಿ ಗುಲಾಮಗಿರಿಯ ನೊಗವನ್ನು ಕಿತ್ತೊಗೆದು ತಮ್ಮ ಮಾನವ ಹಕ್ಕುಗಳನ್ನು ನಿಶ್ಚಿತವಾಗಿ ಪ್ರತಿಪಾದಿಸುವ ತಮ್ಮ ನಿರ್ಧಾರವನ್ನು ತೋರಿದ್ದು ಮಹಾಡ್‌ನಲ್ಲಿಯೇ. ಜಾತಿಗೆ ಸಂಬಂಧಿಸಿದ ಕೆಲವು ಅಂಶಗಳನ್ನು ವಿರೋಧಿಸಿದ್ದು ಮತ್ತು ದೇವಸ್ಥಾನದಲ್ಲಿ ಪ್ರವೇಶದ ಹಕ್ಕು, ಸಾರ್ವಜನಿಕ ನೀರಿನ ಮೂಲಗಳಿಂದ ನೀರನ್ನು ಬಳಸುವ ಹಕ್ಕು ಇಂಥ ನಾಗರಿಕ ಹಕ್ಕುಗಳಿಗಾಗಿ ಇತರ ಆಂದೋಲನಗಳೂ ಮಹಾಡ್‌ಗಿಂತ ಮುಂಚೆ ನಡೆದಿದ್ದವು. ನಿಜವೆಂದರೆ, ಮಹಾಡ್ ಆಂದೋಲನದ ಒಂದು ಭಾಗವಾಗಿ, ಸ್ವಲ್ಪವೇ ಮುಂಚೆ ದಾಸ್‌ಗಾಂವ್‌ನಲ್ಲಿರುವ ಕ್ರಾಫೋರ್ಡ್ ಬಾವಿಯನ್ನು ಬಳಸುವಲ್ಲಿ ಮಾಡಿದ ಆಂದೋಲನವು ಆ ಹೊತ್ತಿಗೆ ಯಶಸ್ವಿಯಾಗಿತ್ತು.</p>



<p>ದಲಿತ ಚಳವಳಿಯ ಹೆಗ್ಗುರುತುಗಳಾಗಿ ಮತ್ತು ದಲಿತ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ನೀಡಿದ ಕೊಡುಗೆಗಾಗಿ ಅವೆಲ್ಲವೂ ಬಹಳ ಮಹತ್ವವನ್ನು ಪಡೆದಿವೆ. ಆದರೆ, ಅವಕ್ಕೂ ಮತ್ತು ಮಹಾಡ್ ಚಳವಳಿಗೂ ಇರುವ ಪ್ರಮುಖ ವ್ಯತ್ಯಾಸವಿರುವುದು ಸಂಘಟನೆ ಮತ್ತು ನಾಯಕತ್ವದ ಸ್ವರೂಪದಲ್ಲಿ. ಸಂಘಟನೆಯ ದೃಷ್ಟಿಯಿಂದ ಮತ್ತು ಡಾ.ಅಂಬೇಡ್ಕರ್ ಅವರಂಥ ವರ್ಚಸ್ವಿ ನಾಯಕತ್ವದ ಕೊರತೆ ಅಲ್ಲಿತ್ತು. ಇದರಿಂದಾಗಿ ಅವು ತಮ್ಮ ಸ್ಥಳೀಯ ಮಿತಿಯನ್ನು ದಾಟಿ ಹೊರಗೆ ಸೈದ್ಧಾಂತಿಕ ಮತ್ತು ಐತಿಹಾಸಿಕ ಪ್ರಭಾವವನ್ನು ಬೀರಲಿಲ್ಲ. ಮಹಾಡ್‌ಗಿಂತ ಮುಂಚೆ, ದೇವಸ್ಥಾನದ ಪ್ರವೇಶದ ನಾಗರಿಕ ಹಕ್ಕಿಗಾಗಿ ನಡೆದ ವೈಕೊಮ್ ಸತ್ಯಾಗ್ರಹವೂ(1924-25) ಕೂಡ, ಮಹಾತ್ಮಾ ಗಾಂಧಿ ಮತ್ತು ಅವರಂಥ ಇನ್ನೂ ಹಲವಾರು ಮುಖ್ಯವಾಹಿನಿ ನಾಯಕರುಗಳ ದಂಡೇ ಅದರಲ್ಲಿ ಭಾಗವಹಿಸಿತ್ತು. ಮಹಾಡ್‌ನ ತೇಜಸ್ಸಾಗಲಿ, ಅದಕ್ಕೆ ಸಿಕ್ಕ ಪ್ರಚಾರದ ವ್ಯಾಪಕತೆಯಾಗಲಿ ವೈಕೊಮ್ ಸತ್ಯಾಗ್ರಹಕ್ಕೆ ಇರಲಿಲ್ಲ. ಅದು ಮುಖ್ಯವಾಹಿನಿಯ ಇತಿಹಾಸದಲ್ಲಿ ಮಹತ್ವವನ್ನು ಪಡೆದರೂ ದಲಿತರಲ್ಲಿ ಮಹಾಡ್‌ನಂಥ ಪ್ರತಿಷ್ಠಿತ ಸ್ಥಾನವನ್ನು ಗಳಿಸಿಕೊಳ್ಳುವಲ್ಲಿ ಸೋತಿತು. ವೈಕೊಮ್ ಚಳವಳಿಗೆ ಸ್ಫೂರ್ತಿಯಾಗಲಿ ನಾಯಕತ್ವವಾಗಲಿ ದಲಿತರಿಂದ ಬಂದಿರಲಿಲ್ಲ. ಆದರೆ ಮಹಾಡ್ ಚಳವಳಿ, ತನ್ನ ಸಂಘಟನೆಯ ಪರಿಮಾಣ, ಧ್ಯೇಯದೃಷ್ಟಿಯ ಸಂವಹನ, ಸ್ವಯಂಪ್ರೇರಣೆ ಮತ್ತು ನಾಯಕತ್ವದ ದೃಷ್ಟಿಯಿಂದ ದಲಿತರು ತಮ್ಮ ನಾಗರಿಕ ಹಕ್ಕುಗಳಿಗಾಗಿ ಹೂಡಿದ ಬಂಡಾಯದ ಅಭೂತಪೂರ್ವ ನಿದರ್ಶನವಾಗಿತ್ತು. ದಮನಿತರ ನಾಗರಿಕ ಹಕ್ಕುಗಳ ಹೋರಾಟವಾಗಿ ಅದು ದೇಶದ್ದಷ್ಟೇ ಅಲ್ಲ, ಜಾಗತಿಕ ಇತಿಹಾಸದಲ್ಲಿಯೂ ಪ್ರಮುಖ ಸ್ಥಾನವನ್ನು ಪಡೆಯಬೇಕು.</p>



<p><strong>2. </strong><strong>ಎರಡು ಚಾರಿತ್ರಿಕ ಚಳವಳಿಗಳ ರೋಮಾಂಚಕ ಭಾಗಗಳು</strong></p>



<p>ಪುಸ್ತಕದಲ್ಲಿರುವ ಆರ್.ಬಿ. ಮೋರೆ ಅವರ ಮೂಲ ಕಥನದ ಕೆಲವು ರೋಮಾಂಚಕ ಭಾಗಗಳು ಹೀಗಿವೆ:</p>



<p><strong>ಕೆರೆ ನೀರನ್ನು ನಿರಾಕರಿಸುವ ಅಸ್ಪಶ್ಯತೆಯನ್ನು ಧಿಕ್ಕರಿಸಿದವರ ಮೇಲೆ ದಾಳಿ</strong></p>



<p>ಸಾಂಪ್ರದಾಯಿಕ ಮತ್ತು ಕ್ರೂರ ಪರಂಪರಾಗತ ಧೋರಣೆಯನ್ನು ಪೋಷಿಸಿಕೊಂಡು ಬಂದಿದ್ದವರಿಗೆ ಇದೆಲ್ಲವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ತಮ್ಮ ಜನರನ್ನು ಕಾಲ್ನಡಿಗೆಯಲ್ಲೋ ಸೈಕಲ್ ಹತ್ತಿಕೊಂಡೋ ಹೋಗಿ, ‘ಮಹಾರ್‌ರು ಈಗಾಗಲೇ ಕೆರೆಯನ್ನು ಕಲುಷಿತಗೊಳಿಸಿದ್ದಾರೆ, ಇನ್ನು ಅವರು ವೀರೇಶ್ವರ ದೇವಸ್ಥಾನವನ್ನು ಪ್ರವೇಶಿಸುವವರಿದ್ದಾರೆ’ ಎಂಬ ವದಂತಿಯನ್ನು ರೈತ ಸಮುದಾಯದಲ್ಲಿ ಹಬ್ಬಿಸಿದರು. ಇವರ ಸುಳ್ಳು ವದಂತಿಗೆ ಕಿವಿಗೊಟ್ಟು, ಮೇಲ್ಜಾತಿಯ ಭೂಮಾಲಕರು ಮತ್ತು ಲೇವಾದೇವಿ ಸಾಹುಕಾರರ ಚಿತಾವಣೆಗೆ ಬಲಿಯಾಗಿ ಸ್ಪೃಶ್ಯ ಜಾತಿಗಳ ಸಾವಿರಾರು ಬಡ ಜನ ತಮ್ಮ ದೇವರು ಮತ್ತು ಧರ್ಮವನ್ನು ಕಾಪಾಡಲು ಮಹಾಡ್‌ನತ್ತ ಧಾವಿಸಿದರು. ವೀರೇಶ್ವರ ದೇವಸ್ಥಾನದ ಆವರಣದಲ್ಲಿ ಒಗ್ಗೂಡಿದರು. ಅವರ ಉಪಸ್ಥಿತಿಯಿಂದ ಉತ್ತೇಜಿತರಾದ ಕೆಲವು ಅಶಿಸ್ತಿನ ವ್ಯಕ್ತಿಗಳು ಸಮ್ಮೇಳನದ ನಂತರ ಮಾರ್ಕೆಟ್‌ನಲ್ಲಿ ಓಡಾಡುತ್ತಿದ್ದ ಅಸ್ಪೃಶ್ಯ ವ್ಯಕ್ತಿಗಳನ್ನು ಹಿಡಿದು ಹೊಡೆಯತೊಡಗಿದರು.</p>



<p>ಅಸ್ಪೃಶ್ಯರು ಕೆರೆಯಿಂದ ಹಿಂದಿರುಗಿದ ಎರಡು ಮೂರು ಗಂಟೆಗಳ ಕಾಲ ಇದು ನಡೆಯಿತು. ಈ ಹೊತ್ತಿಗೆ ಸಮ್ಮೇಳನಕ್ಕೆ ಬಂದಿದ್ದ ಹೆಚ್ಚಿನ ಜನ ಊಟ ಮಾಡಿ ತಮ್ಮ ತಮ್ಮ ಗ್ರಾಮಗಳಿಗೆ ಹೊರಟಿದ್ದರು, ಕೆಲವರು ಆಗಲೇ ಹೋಗಿಯೇ ಬಿಟ್ಟಿದ್ದರು. ಇನ್ನು ಕೆಲವರು ಇನ್ನೂ ಊಟ ಮಾಡುತ್ತಿದ್ದರು, ತಮ್ಮ ಜನರ ಮೇಲೆ ಆಗುತ್ತಿರುವ ದಾಳಿಯ ಸುದ್ದಿ ಕೇಳಿ ಅವರು ಊಟವನ್ನು ಅರ್ಧದಲ್ಲಿಯೇ ಬಿಟ್ಟು ಎದ್ದರು. ಅವರು ದಾಳಿಕೋರರನ್ನು ಮುಖಾಮುಖಿ ಎದುರಿಸುವ ನಿರ್ಧಾರವನ್ನು ಮಾಡಿದ್ದರು. ಪೆಂಡಾಲುಗಳನ್ನು ಮುರಿದು ಅದರಿಂದ ಕೋಲು, ಬಡಿಗೆಗಳನ್ನು ಎತ್ತಿಕೊಂಡರು. ಕೆಲವು ಡಾಕ್ ಬಂಗಲೆಗೆ ಓಡಿ ಹೋಗಿ ಅಸಹಾಯಕ ಜನರ ಮೇಲೆ ದಾಳಿ ಮಾಡುತ್ತಿರುವ ಹೇಡಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಅನುಮತಿಯನ್ನು ಕೋರಿದರು. ಆದರೆ ಅವರಿಗೆ ಆಕ್ರೋಶಕ್ಕೆ ಒಳಗಾಗದೆ ಶಾಂತವಾಗಿ ತಮ್ಮ ತಮ್ಮ ಗ್ರಾಮಗಳಿಗೆ ಮರಳಲು ಹೇಳಲಾಯಿತು. ಬಸ್ ಡಿಪೋದ ಪಶ್ಚಿಮ ಭಾಗದಲ್ಲಿ ಸಾವಿರಾರು ಅಸ್ಪೃಶ್ಯರು ಸೇರಿದ್ದರು. ಮೇಲೆ ಹೇಳಿದ ಗೂಂಡಾಗಳು ಮಾರ್ಕೆಟ್ ಪ್ರದೇಶದಲ್ಲಿ, ಓಣಿ ಓಣಿಗಳಲ್ಲಿ ಮುಕ್ತವಾಗಿ ಓಡಾಡಿ ಅಸ್ಪಶ್ಯ ಜಾತಿಯ ಒಬ್ಬೊಬ್ಬರೇ ಸಿಗುವ ವ್ಯಕ್ತಿಗಳನ್ನು ಹಿಡಿದು ಹೊಡೆಯುವುದಕ್ಕಾಗಿ ನೋಡುತ್ತಿದ್ದರು. ಇಂಥವರ ಮಾರಣಾಂತಿಕ ಹಲ್ಲೆಗೆ ಸಿಕ್ಕವರಲ್ಲಿ ಒಬ್ಬರು ಮಹಾರ್ ಸಮಾಜ್ ಸೇವಾ ಸಂಘದ ಅಧ್ಯಕ್ಷರಾದ ಭಿಕಾಜಿ ಸಾಂಭಾಜಿ ಗಾಯಕ್ವಾಡ್ ಮತ್ತು ಬಾಂಬೆಯಿಂದ ಬಂದಿದ್ದ ಇನ್ನು ಕೆಲವರು.</p>



<p>ಪಟ್ಟಣದ ರಸ್ತೆಗಳು ತಮ್ಮ ಮೂಲಭೂತ ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಮುಗ್ಧ ದಲಿತರ ರಕ್ತದಿಂದ ಕಲೆಯಾಗಿದ್ದವು. ಗೂಂಡಾಗಳು ಮಾರ್ಕೆಟ್‌ನಲ್ಲಿ ಬೇಸ್ ಕ್ಯಾಂಪ್‌ಗಳ ಮೇಲೆಯೂ ದಾಳಿ ನಡೆಸಲು ಏಳು ಬಾರಿ ಪ್ರಯತ್ನಿಸಿದ್ದರು; ಆದರೆ, ಬಾಗಿಲಲ್ಲೇ ಕೈಯಲ್ಲಿ ಕುಡಗೋಲು, ಕಬ್ಬಿಣದ ರಾಡುಗಳನ್ನು ಹಿಡಿದು ನಿಂತಿದ್ದ, ವಯಸ್ಸಾದ ಆದರೂ ಕಟ್ಟುಮಸ್ತಾದ ಶರೀರದ ಇಬ್ಬರು ಕಾರ್ಯಕರ್ತರು, ಶಿವರಾಮ್ ಗೋಪಾಲ್ ಜಾಧವ್ ಮತ್ತು ಸಾಂಭಾಜಿ ತುಕಾರಾಮ್ ಗಾಯಕ್ವಾಡ್ ಮತ್ತು ಅವರ ಬೆನ್ನಿಗೆ ನಿಂತಿದ್ದ ಯುವಜನರ ಬಲವಾದ ಗುಂಪನ್ನು ನೋಡಿ ಹಿಮ್ಮೆಟ್ಟಿದ್ದರು. ಅವರ ಕೋಪೋದ್ರಿಕ್ತ ಮುಖ ಮತ್ತು ಕೈಯಲ್ಲಿನ ಆಯುಧಗಳನ್ನು ನೋಡಿ ಅವರ ಮೇಲೆ ಹಲ್ಲೆ ಮಾಡುವ ಧೈರ್ಯ ಆ ಗೂಂಡಾಗಳಿಗೆ ಬರಲಿಲ್ಲ. ಹಾಗೆಯೇ ಗುಂಪುಗುಂಪುಗಳಲ್ಲಿ ಓಡಾಡುತ್ತಿದ್ದ ಅಸ್ಪೃಶ್ಯರನ್ನು ಅವರು ಮುಟ್ಟಲು ಹೋಗಲಿಲ್ಲ. ನಂತರ ಈ ಗೂಂಡಾಗಳು ತಮ್ಮ ಗಮನವನ್ನು ಮೋಚಿಗಳ ಅಂಗಡಿಗಳ ಮೇಲೆ ತಿರುಗಿಸಿದರು. ಕಂಡೇಶ್‌ನಿಂದ ಬಂದಿದ್ದ ಈ ಅಂಗಡಿಕಾರ ಪುರುಷರನ್ನಷ್ಟೇ ಅಲ್ಲ, ಎಳೆಯ, ವೃದ್ಧ ಮಹಿಳೆಯರನ್ನು ಚಚ್ಚಿದರು. ಈ ಕ್ರೌರ್ಯಕ್ಕೆ ಮಕ್ಕಳೂ ಬಲಿಯಾದರು. ಭಾನುದಾಸ್ ಕಾಂಬ್ಳಿ ಮತ್ತು ಪಿ.ಎನ್.ರಾಜ್‌ಭೋಗ್‌ರಂಥ ಹೆಸರಾಂತ ಅಸ್ಪೃಶ್ಯ ನಾಯಕರೂ ಈ ಹಲ್ಲೆಗಳಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.’’</p>



<p><strong>ಮನುಸ್ಮತಿಯ ದಹನ</strong></p>



<p>‘‘ಕೆಲವರು, ಸತ್ಯಾಗ್ರಹವನ್ನು ಮಾಡಬೇಕು, ಆದರೆ ಬಾಬಾಸಾಹೇಬರು ಅದರಲ್ಲಿ ಭಾಗವಹಿಸಬಾರದು ಎಂದು ಸಲಹೆ ನೀಡಿದರು. ಹೆಚ್ಚಿನವರು ಸತ್ಯಾಗ್ರಹದ ಪರವಾಗಿಯೇ ಇದ್ದರು. ಬಾಬಾಸಾಹೇಬ್ ಮೌನವಾಗಿ ಎಲ್ಲರ ಅಭಿಪ್ರಾಯಗಳನ್ನು ಜಾಗರೂಕತೆಯಿಂದ ಆಲಿಸುತ್ತಿದ್ದರು. ಕೊನೆಯಲ್ಲಿ, ಅವರೆಂದರು, ‘‘ಸತ್ಯಾಗ್ರಹವನ್ನು ಮಾಡಿ ಜೈಲಿಗೆ ಹೋಗಲು 1,000 ಜನ ಸಿದ್ಧವಾಗಿದ್ದರೆ ನಾವು ಸತ್ಯಾಗ್ರಹ ಮಾಡೋಣ.’’ ಈ ನಿರ್ಧಾರವನ್ನು ತೆಗೆದುಕೊಳ್ಳುವ ಹೊತ್ತಿಗೆ ರಾತ್ರಿ 12 ಆಗಿತ್ತು. ಸತ್ಯಾಗ್ರಹಿಗಳು ತೆಗೆದುಕೊಳ್ಳಬೇಕಾಗಿದ್ದ ಶಪಥದ ಕರಡನ್ನು ತಯಾರಿಸಲಾಯಿತು. ಕರಡಿನ ಮುಖ್ಯವಾದ ಭಾಗದ ಒಕ್ಕಣೆ ಹೀಗಿತ್ತು: ‘‘ನಾನು ಜೈಲಿಗೆ ಹೋಗಲು, ಹೋರಾಡಲು, ಸತ್ಯಾಗ್ರಹವನ್ನು ಮಾಡುತ್ತಾ ಮಡಿಯಲೂ ಸಿದ್ಧನಿದ್ದೇನೆ’’. ಧರ್ಮಶಾಲಾದ ಕಚೇರಿಯಲ್ಲಿ ಇದರ ಹಲವಾರು ಪ್ರತಿಗಳನ್ನು ತಯಾರಿಸಲಾಯಿತು. ಶಿಕ್ಷಿತ ಪ್ರತಿನಿಧಿಗಳಲ್ಲಿ ಅದನ್ನು ಹಂಚಿ, ಸತ್ಯಾಗ್ರಹಿಗಳಿಗೆ ಓದಿ ಹೇಳಿ ಅವರ ಸಮ್ಮತಿಗಾಗಿ ಹೆಬ್ಬೆಟ್ಟಿನ ಗುರುತನ್ನು ಪಡೆಯಲು ಹೇಳಲಾಯಿತು. ಬೆಳಗಿನ ಜಾವ 4 ಗಂಟೆಗೆ 3,500 ಜನ ತಮ್ಮ ಸಮ್ಮತಿಯನ್ನು ದಾಖಲಿಸಿದ್ದರು. ಇದಲ್ಲದೇ ಇನ್ನೂ ಹೆಚ್ಚಿನ ಜನ ಮುಂದೆ ಬರುತ್ತಲಿದ್ದರು. ಆದ್ದರಿಂದ ಸಹಿಯನ್ನು ಸಂಗ್ರಹಿಸುವ ಕೆಲಸವನ್ನು ನಿಲ್ಲಿಸಲಾಯಿತು.</p>



<p>ಬೆಳಗ್ಗೆ 4:30ರ ಹೊತ್ತಿಗೆ ಸತ್ಯಾಗ್ರಹಿಗಳು ಸಹಿ ಹಾಕಿದ್ದ ಕಾಗದಗಳ ಕಟ್ಟುಗಳನ್ನು ಬಾಬಾಸಾಹೇಬರ ಸಮ್ಮುಖದಲ್ಲಿ ಇಡಲಾಯಿತು. ಅಷ್ಟು ಹೊತ್ತಿಗೆ ಕ್ಯಾಂಪಿನಲ್ಲಿದ್ದ ಇತರರ ಹಾಗೆಯೇ ಅವರು ಎದ್ದು ಬಹಳ ಹೊತ್ತಾಗಿತ್ತು. ಬೆಳಗ್ಗೆ 7 ಗಂಟೆಗೆ ಅವರು ಕಲೆಕ್ಟರ್‌ರಿಗೆ ಒಂದು ಪತ್ರವನ್ನು ತಲುಪಿಸಲು ಹೇಳಿದರು. ನಾನು ಆ ಪತ್ರವನ್ನು ತೆಗೆದುಕೊಂಡು ಹೋಗುತ್ತಿರುವಾಗ ಡಾಕ್ ಬಂಗಲೆಯ ಹಾದಿಯಲ್ಲಿ ಒಬ್ಬ ಮನುಷ್ಯ ಜೀವಿಯನ್ನೂ ಕಾಣಲಿಲ್ಲ. ಇಡೀ ಮಾರ್ಕೆಟ್ ನಿರ್ಜನವಾಗಿತ್ತು. ನಾನು ಪತ್ರವನ್ನು ಕಲೆಕ್ಟರ್‌ಅವರ ಕೈಗೊಪ್ಪಿಸಿದೆ, ಅದರ ಮೇಲೆ ಕಣ್ಣಾಡಿಸಿದವರೇ ತಾವು ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿಗೆ ಆಗಮಿಸುವುದಾಗಿ ನನ್ನ ಮೂಲಕ ಮೌಖಿಕ ಸೂಚನೆ ನೀಡಿ ನನ್ನನ್ನು ಕಳುಹಿಸಿಕೊಟ್ಟರು. ನಾನು ಬಂದು ಅದನ್ನು ಬಾಬಾಸಾಹೇಬರಿಗೆ ತಿಳಿಸಿದೆ.</p>



<p>ಬಾಬಾಸಾಹೇಬರ ಜೊತೆ ಸ್ನೇಹದಿಂದ ಇದ್ದ ಬಾಪು ಸಹಸ್ರಬುದ್ಧೆ, ತಮಾಷೆಯಾಗಿ ಹೇಳಿದರು, ‘‘ನಿನ್ನನ್ನು ಬಂಧಿಸದೇ ಹಿಂದಕ್ಕೆ ಹೇಗೆ ಕಳುಹಿಸಿದರು?’’ ಅದಕ್ಕೆ ನಾನು ಏನೂ ಹೇಳಲಿಲ್ಲ. ಆ ಹೊತ್ತಿನಲ್ಲಿ ಬಾಬಾಸಾಹೇಬ್ ಸುತ್ತ ಕೆಲವರಿದ್ದರು. ಉಳಿದವರು ಸಭಾಂಗಣಕ್ಕೆ ಹೊರಟು ಹೋಗಿದ್ದರು. ಆ ದಿನದ ಗೋಷ್ಠಿ ಬೆಳಗಿನ 9 ಗಂಟೆಗೆ, ಮನುಸ್ಮತಿಯ ಪ್ರತಿಯನ್ನು ಸುಡುವುದರೊಂದಿಗೆ ಆರಂಭವಾಯಿತು. ಪವಿತ್ರ ಚಿತೆಗಾಗಿ ಒಂದು ವಿಶೇಷ ಸ್ಥಳವನ್ನು ಪೆಂಡಾಲ್ ಹತ್ತಿರದಲ್ಲಿ ನಿರ್ಮಿಸಲಾಗಿತ್ತು. ಹೋಮ ಹವನಕ್ಕೆ ಬೇಕಾದ ಎಲ್ಲಾ ಸಾಮಗ್ರಿಯನ್ನು ವ್ಯವಸ್ಥೆ ಮಾಡಲಾಗಿತ್ತು. ಬಾಬಾಸಾಹೇಬ ಬೆಂಕಿಯ ಎದುರಿಗೆ ನಿಂತಿದ್ದರು ಮತ್ತು ಬಾಪು ಸಹಸ್ರಬದ್ಧೆ ಮನುಸ್ಮತಿಯ ಆಕ್ಷೇಪಾರ್ಹ ಭಾಗಗಳ ಹಾಳೆಗಳನ್ನು ಬಾಬಾಸಾಹೇಬರ ಕೈಗಳಿಂದ ತೆಗೆದುಕೊಂಡು, ಅದನ್ನೊಮ್ಮೆ ಓದಿ ಬೆಂಕಿಗೆ ಹಾಕುತ್ತಿದ್ದರು. ಈ ಕಾರ್ಯಕ್ರಮ ನಡೆಯುತ್ತಿರುವಾಗ ಜನರಲ್ಲಿ ಉತ್ಸಾಹ, ಹುಮ್ಮಸ್ಸು ತುಂಬಿ ತುಳುಕುತ್ತಿತ್ತು.’’</p>
]]></content:encoded>
					
		
		
			</item>
		<item>
		<title>ಎರಡು ವರ್ಷ ಪೂರೈಸಿದ `ಅಂಬೇಡ್ಕರ್ ಓದು’</title>
		<link>https://peepalmedia.com/ambedkar-odu-completes-two-years/</link>
		
		<dc:creator><![CDATA[Arun Jolada Kudligi]]></dc:creator>
		<pubDate>Sat, 15 Oct 2022 12:12:38 +0000</pubDate>
				<category><![CDATA[ವಿಶೇಷ]]></category>
		<category><![CDATA[Ambedkar]]></category>
		<category><![CDATA[Ambedkar odu]]></category>
		<category><![CDATA[Arun Jolada kudligi]]></category>
		<category><![CDATA[Bhimrao Ramji Ambedkar]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Series]]></category>
		<category><![CDATA[state politics]]></category>
		<category><![CDATA[writing]]></category>
		<category><![CDATA[youtube]]></category>
		<guid isPermaLink="false">https://peepalmedia.com/?p=10903</guid>

					<description><![CDATA[ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನು ಅಂತರ್ಜಾಲದ ಮೂಲಕ ಮನೆ ಮನಗಳಿಗೆ ತಲುಪಿಸುವ `ಅಂಬೇಡ್ಕರ್ ಓದು’ ಯೂಟೂಬ್ ಸರಣಿಯು ಇದೀಗ ಎರಡು ವರ್ಷ ಪೂರೈಸಿದೆ. ಅಂಬೇಡ್ಕರ್ ಓದು ಸರಣಿ 525 ನೇ ಸಂಚಿಕೆ ತಲುಪಿದೆ. ಅಂಬೇಡ್ಕರ್ ಬೌದ್ಧ ದಮ್ಮ ಸ್ವೀಕರಿಸಿದ ದಿನದ ಅಕ್ಟೋಬರ್-14 ರ ವಿಶೇಷ ಸಂಚಿಕೆಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಟಿ.ಎಂ.ಭಾಸ್ಕರ್ ಅವರು ಓದಿದ್ದಾರೆ. ಸೆಪ್ಟಂಬರ್ 7, 2020 ರಂದು ಲೇಖಕಿ ಹೆಚ್.ಎಸ್.ಅನುಪಮಾ ಮೊದಲ ಸಂಚಿಕೆ ಓದಿದ್ದರು. ಹೀಗೆ ಆರಂಭವಾದ ಅಂಬೇಡ್ಕರ್ ಓದು ಎರಡು ವರ್ಷ ಪೂರೈಸಿ [&#8230;]]]></description>
										<content:encoded><![CDATA[
<p>ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನು ಅಂತರ್ಜಾಲದ ಮೂಲಕ ಮನೆ ಮನಗಳಿಗೆ ತಲುಪಿಸುವ `ಅಂಬೇಡ್ಕರ್ ಓದು’ ಯೂಟೂಬ್ ಸರಣಿಯು ಇದೀಗ ಎರಡು ವರ್ಷ ಪೂರೈಸಿದೆ. ಅಂಬೇಡ್ಕರ್ ಓದು ಸರಣಿ 525 ನೇ ಸಂಚಿಕೆ ತಲುಪಿದೆ. ಅಂಬೇಡ್ಕರ್ ಬೌದ್ಧ ದಮ್ಮ ಸ್ವೀಕರಿಸಿದ ದಿನದ ಅಕ್ಟೋಬರ್-14 ರ ವಿಶೇಷ ಸಂಚಿಕೆಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಟಿ.ಎಂ.ಭಾಸ್ಕರ್ ಅವರು ಓದಿದ್ದಾರೆ. ಸೆಪ್ಟಂಬರ್ 7, 2020 ರಂದು ಲೇಖಕಿ ಹೆಚ್.ಎಸ್.ಅನುಪಮಾ ಮೊದಲ ಸಂಚಿಕೆ ಓದಿದ್ದರು. ಹೀಗೆ ಆರಂಭವಾದ ಅಂಬೇಡ್ಕರ್ ಓದು ಎರಡು ವರ್ಷ ಪೂರೈಸಿ ಮುನ್ನಡೆದಿದೆ. ಈತನಕ 351 ಜನರಿಂದ 525 ಸರಣಿಗಳನ್ನು ಓದಿಸಲಾಗಿದೆ, ಈಗ ಅಂಬೇಡ್ಕರ್ ಚಿಂತನೆಗಳನ್ನು ಕನ್ನಡದಲ್ಲಿ 120 ಗಂಟೆಗಳ ಕಾಲ ಕೇಳಬಹುದಾಗಿದೆ. ಈತನಕ 167 ಮಹಿಳೆಯರು 300 ಕ್ಕಿಂತ ಹೆಚ್ಚಿನ ಸರಣಿಗಳನ್ನು ಓದಿರುವುದು ವಿಶೇಷವಾಗಿದೆ.</p>



<p>&nbsp;500 ನೇ ಸಂಚಿಕೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಓದಿದ್ದರು. ಈ ಹಿಂದೆ ರಾಜ್ಯಸಭಾ ಸದಸ್ಯರಾದ ಎಲ್.ಹನುಮಂತಯ್ಯ, ಸಂಗೀತ ನಿರ್ದೇಶಕ ಹಂಸಲೇಖ, ನಟರಾದ ರಮೇಶ್ ಅರವಿಂದ, ಕಿಶೋರ್, ರಂಗಾಯಣ ರಘು, ಅಚ್ಯುತ ಕುಮಾರ್, ಸಿನೆಮಾ ನಿರ್ದೇಶಕರಾದ ಬಿ.ಸುರೇಶ್, ಬಿ.ಎಂ ಗಿರಿರಾಜ, ರಾಜಕಾರಣಿ ಶ್ರೀಮತಿ ಮೋಟಮ್ಮ, ಬಿಜಾಪುರದ ಮಹಿಳಾ ವಿವಿಯ ವಿಶ್ರಾಂತ ಕುಲಪತಿಗಳಾದ ಪ್ರೊ.ಸಭಿಹಾ ಲೇಖಕರಾದ ದೇವನೂರು ಮಹಾದೇವ, ಅಮರೇಶ ನುಗಡೋಣಿ, ನಟರಾಜ ಹುಳಿಯಾರ, ಹೆಚ್.ಎಸ್.ರಾಘವೇಂದ್ರರಾವ್, ಜಾನಪದ ಅಕಾಡೆಮಿ ಅಧ್ಯಕ್ಷರಾದ ಪದ್ಮಶ್ರೀ ಮಂಜಮ್ಮ ಜೋಗತಿ ಪತ್ರಕರ್ತರಾದ ದಿನೇಶ ಅಮಿನಮಟ್ಟು, ರವೀಂದ್ರ ಭಟ್, ವೈ.ಗ ಜಗದೀಶ, ರಶ್ಮಿ ಎಸ್. ಹೀಗೆ ಸಾಹಿತಿಗಳು, ಪತ್ರಕರ್ತರು, ನಟ ನಟಿಯರು, ಶಿಕ್ಷಕ ಶಿಕ್ಷಕಿಯರು, ವಿದ್ಯಾರ್ಥಿಗಳು, ರೈತರು ಎಲ್ಲಾ ಹಿನ್ನೆಲೆಯವರೂ ಓದಿನ ಭಾಗವಾಗಿದ್ದಾರೆ.</p>



<p>2019 ರ ಏಪ್ರಿಲ್ 14 ರಂದು ನನ್ನ ಪೇಸ್ ಬುಕ್ ಪೇಜಲ್ಲಿ ಅಂಬೇಡ್ಕರ್ ಓದನ್ನು ಲೈವ್ ಮಾಡಿದ್ದೆ. ಈ ಓದಿಗೆ ಸಿಕ್ಕ ಪ್ರತಿಕ್ರಿಯೆ ಓದನ್ನು ನಿರಂತರವಾಗಿ ನಡೆಸುವ ಕನಸೊಂದನ್ನು ಹುಟ್ಟಿಸಿತ್ತು. ಖಾಸಗಿ ವಾಹಿನಿಯಲ್ಲಿ ಮಹಾನಾಯಕ ದಾರವಾಹಿ ಶುರುವಾದ ನಂತರ ಅಂತರ್ಜಾಲದಲ್ಲಿ ಕನ್ನಡದಲ್ಲಿ ಅಂಬೇಡ್ಕರ್ ಹುಡುಕಾಟ ಹೆಚ್ಚಾಯಿತು. ಆದರೆ ಆಗ ಅಂತರ್ಜಾಲದಲ್ಲಿ ಕನ್ನಡದಲ್ಲಿ ಅಂಬೇಡ್ಕರ್ ಅರಿವು ಹೆಚ್ಚಾಗಿ ಇರಲಿಲ್ಲ, ಆಗ ಅಂತರ್ಜಾಲದಲ್ಲಿ ಅಂಬೇಡ್ಕರ್ ಚಿಂತನೆಗಳು ಸಿಗುವಂತಾಗಬೇಕು ಎಂದು ಅಂಬೇಡ್ಕರ್ ಓದು ಪ್ರಾರಂಭಿಸಲಾಯಿತು. ನಾನು ನೆಪಮಾತ್ರನಾಗಿದ್ದು `ಇದು ಸಹಭಾಗಿತ್ವದ ಯಶಸ್ಸು, `ಎಲ್ಲರ ಅಂಬೇಡ್ಕರ್’ ಎನ್ನುವ ತತ್ವದಡಿ ಎಲ್ಲರೂ ಅಂಬೇಡ್ಕರ್ ಅವರನ್ನು ಓದುವಂತಾಗಬೇಕು, ಎಲ್ಲರೂ ಕೇಳುವಂತಾಗಬೇಕು. ಅಂಬೇಡ್ಕರ್ ಚಿಂತನೆ ಕನ್ನಡದಲ್ಲಿ ಕೇಳಲು ಅಂತರ್ಜಾಲದಲ್ಲಿ ಸಿಗುವಂತಾಗಬೇಕು ಎನ್ನುವ ಕನಸು ಈ ಸರಣಿಯ ಹಿಂದಿದೆ.</p>



<p></p>



<figure class="wp-block-image size-full"><img fetchpriority="high" decoding="async" width="696" height="409" src="https://peepalmedia.com/wp-content/uploads/2022/10/ambedkar-odu-sarani-peepal-media.jpg" alt="" class="wp-image-10904" srcset="https://peepalmedia.com/wp-content/uploads/2022/10/ambedkar-odu-sarani-peepal-media.jpg 696w, https://peepalmedia.com/wp-content/uploads/2022/10/ambedkar-odu-sarani-peepal-media-300x176.jpg 300w, https://peepalmedia.com/wp-content/uploads/2022/10/ambedkar-odu-sarani-peepal-media-150x88.jpg 150w" sizes="(max-width: 696px) 100vw, 696px" /><figcaption>ಡಾ. ಬಿ.ಆರ್‌ ಅಂಬೇಡ್ಕರ್‌ ಮತ್ತು ಅರುಣ್ ಜೋಳದಕೂಡ್ಲಿಗಿ</figcaption></figure>



<p> ಈ ತರಹದ ಅಂಬೇಡ್ಕರ್ ಆಡಿಯೋ ಆರ್ಖೈವ್ ರೂಪುಗೊಂಡಿರುವುದು ಭಾರತದ ದೇಸಿ ಭಾಷೆಗಳಲ್ಲಿ ಇದು ಮೊದಲ ಪ್ರಯತ್ನ. ಇದು ಇತರೆ ಭಾಷಿಕರಿಗೆ ಮಾದರಿಯಾಗಬೇಕು ಎನ್ನುವುದು ನನ್ನ ಕನಸಾಗಿದೆ. ಈ ತನಕ ಯೂಟೂಬ್ ಚಾನಲ್ಲಿನಲ್ಲಿ ಒಂಬತ್ತು ಲಕ್ಷದಷ್ಟು ಕೇಳುವಿಕೆ ಸಾಧ್ಯವಾಗಿದೆ. ಅನೇಕರು ಈ ಓದಿನಿಂದ ಪ್ರೇರಿತರಾಗಿದ್ದಾರೆ. ಇದೀಗ ಅನೇಕರು ಅಂಬೇಡ್ಕರ್ ಓದಿನ ಅವಕಾಶಕ್ಕಾಗಿ ಕೇಳುತ್ತಿದ್ದಾರೆ. ಇದು ಈ ಸರಣಿಯ ರೂಪಾಂತರವಾಗಿದೆ. ಅಂಬೇಡ್ಕರ್ ಅವರ ಸಮಕಾಲೀನವೆನಿಸುವ ಎಲ್ಲಾ ಬರಹಗಳನ್ನು ಓದಿಸುವ ಗುರಿ ಈ ಸರಣಿಗಿದೆ. ಹಾಗಾಗಿ ಅಂಬೇಡ್ಕರ್ ಓದು ಇನ್ನೂ ಮುಂದುವರಿಯಲಿದೆ. ಅಂಬೇಡ್ಕರ್ ಓದಿನ ಸಹಭಾಗಿಗಳಾದ ಎಲ್ಲರಿಗೂ ಮತ್ತೊಮ್ಮೆ ಜೈಭೀಮ್ ನಮನಗಳನ್ನು ಸಲ್ಲಿಸುವೆ.</p>
]]></content:encoded>
					
		
		
			</item>
	</channel>
</rss>
