<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>HL Pushpa &#8211; Peepal Media</title>
	<atom:link href="https://peepalmedia.com/tag/hl-pushpa/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 12 Jan 2024 07:23:27 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>HL Pushpa &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಅವಿವೇಕಿಗಳ‌ ಗದ್ದಲದಲ್ಲಿ ವಿವೇಕಿ ವಿವೇಕಾನಂದರನ್ನು ಸ್ಮರಿಸುತ್ತಾ&#8230;..</title>
		<link>https://peepalmedia.com/hl-pushpa-writes-about-swamy-vivekananda/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 12 Jan 2024 07:22:34 +0000</pubDate>
				<category><![CDATA[ವಿಶೇಷ]]></category>
		<category><![CDATA[HL Pushpa]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Swamy Vivekananda]]></category>
		<category><![CDATA[Vivekananda]]></category>
		<category><![CDATA[writing]]></category>
		<guid isPermaLink="false">https://peepalmedia.com/?p=34883</guid>

					<description><![CDATA[&#8220;ಮೊದಲು ನಿಮ್ಮ‌ಮೇಲೆ ನಂಬಿಕೆಯಿರಲಿ. ಅನಂತರ ದೇವರ ಮೇಲೆ. ಬೆರಳೆಣಿಕೆಯಷ್ಟು  ಶಕ್ತಿಶಾಲಿ  ಜನರು ಜಗತ್ತನ್ನೇ ಅಲುಗಾಡಿಸಬಲ್ಲರು. ನಮಗೆ  ಪರಿಭಾವಿಸುವ, ಆಲೋಚಿಸುವ ಜೀವಂತ ಮೆದುಳು ಬೇಕಿದೆ.  ಕೆಲಸ ಮಾಡುವ  ಬಲಿಷ್ಠ ಕೈಗಳು ಬೇಕಾಗಿವೆ&#8221;. &#160;&#160; &#8220;ತ್ಯಾಗ ಮಾಡಿ! ತ್ಯಾಗ ಮಾಡಿ! ನಿಮ್ಮ ದಿವ್ಯ ಸ್ವರೂಪವನ್ನು ತಿಳಿಯಿರಿ! ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ!&#8221; ಈ ಮೇಲಿನ‌&#160;&#160;&#160; ಮಾತುಗಳನ್ನು ವಿವೇಕಾನಂದರ ವಾಣಿ ಎಂದೇ&#160; ಕರೆಯಲಾಗುತ್ತದೆ.&#160; ವಿಶ್ವಮಾನವ ಎಂದೇ&#160; ಕರೆಸಿಕೊಂಡ ವಿವೇಕಾನಂದ&#160; ಭಾರತದ&#160; ಅಧ್ಯಾತ್ಮಿಕತೆ, ಧರ್ಮ,&#160; ಸಂಸ್ಕೃತಿಗಳ&#160; ನಡೆ ನುಡಿಯನ್ನು ಬಲ್ಲವರು. ವಿವೇಕಾನಂದರ&#160; [&#8230;]]]></description>
										<content:encoded><![CDATA[
<p>&#8220;ಮೊದಲು ನಿಮ್ಮ‌ಮೇಲೆ ನಂಬಿಕೆಯಿರಲಿ. ಅನಂತರ ದೇವರ ಮೇಲೆ. ಬೆರಳೆಣಿಕೆಯಷ್ಟು  ಶಕ್ತಿಶಾಲಿ  ಜನರು ಜಗತ್ತನ್ನೇ ಅಲುಗಾಡಿಸಬಲ್ಲರು. ನಮಗೆ  ಪರಿಭಾವಿಸುವ, ಆಲೋಚಿಸುವ ಜೀವಂತ ಮೆದುಳು ಬೇಕಿದೆ.  ಕೆಲಸ ಮಾಡುವ  ಬಲಿಷ್ಠ ಕೈಗಳು ಬೇಕಾಗಿವೆ&#8221;.</p>



<p><strong>&nbsp;&nbsp; &#8220;ತ್ಯಾಗ ಮಾಡಿ! ತ್ಯಾಗ ಮಾಡಿ! ನಿಮ್ಮ ದಿವ್ಯ ಸ್ವರೂಪವನ್ನು ತಿಳಿಯಿರಿ! ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ!&#8221;</strong></p>



<p>ಈ ಮೇಲಿನ‌&nbsp;&nbsp;&nbsp; ಮಾತುಗಳನ್ನು ವಿವೇಕಾನಂದರ ವಾಣಿ ಎಂದೇ&nbsp; ಕರೆಯಲಾಗುತ್ತದೆ.&nbsp; ವಿಶ್ವಮಾನವ ಎಂದೇ&nbsp; ಕರೆಸಿಕೊಂಡ ವಿವೇಕಾನಂದ&nbsp; ಭಾರತದ&nbsp; ಅಧ್ಯಾತ್ಮಿಕತೆ, ಧರ್ಮ,&nbsp; ಸಂಸ್ಕೃತಿಗಳ&nbsp; ನಡೆ ನುಡಿಯನ್ನು ಬಲ್ಲವರು. ವಿವೇಕಾನಂದರ&nbsp; ಚಿಂತನೆಗಳನ್ನು ಕೇವಲ ಭಾರತದ ದಾರ್ಶನಿಕತೆಯಲ್ಲಿ&nbsp; ಮಾತ್ರ ನೋಡುವಂತಿಲ್ಲ. ಅವರು ಪಾಶ್ಚಿಮಾತ್ಯರ ಧರ್ಮ ಹಾಗೂ ಧರ್ಮದ ಕಾಣಿಕೆಗಳನ್ನು ಸಹ ಬಲ್ಲವರಾಗಿದ್ದರು.</p>



<p>ಭಾರತದಲ್ಲಿ  ದೇವರು, ಧರ್ಮ, ಜಾತಿ ವ್ಯವಸ್ಥೆ  ಉಂಟು ಮಾಡಿರುವ  ಗುಲಾಮೀತನವನ್ನು ಕುರಿತು ಅಪಾರವಾದ ಅಧ್ಯಯನದಿಂದ  ಮಾತನಾಡಬಲ್ಲ ನಮ್ಮ ದೇಶದ ಇಬ್ಬರೇ ಇಬ್ಬರು ವಿದ್ವಾಂಸರೆಂದರೆ  ವೀವೇಕಾನಂದ  ಮತ್ತು  ಡಾ. ಬಿ. ಆರ್. ಅಂಬೇಡ್ಕರ್ ಮಾತ್ರ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.</p>



<p>ವಿವೇಕಾನಂದ ಜನ್ಮ‌ತಳೆಯುವ ಸಂದರ್ಭದಲ್ಲಿ ಬಂಗಾಳ ಸತತವಾಗಿ&nbsp; ಹಲವು ಅವಸ್ಥಾಂತರಗಳಿಗೆ ಒಳಗಾಗುತ್ತಿತ್ತು. ಮೊಗಲ್&nbsp; ಸಾಮ್ರಾಜ್ಯ ಅವನತಿಗೊಂಡು ಬ್ರಿಟಿಷ್ ಆಳ್ವಿಕೆಯ&nbsp;&nbsp; ಕಾಲಘಟ್ಟದಲ್ಲಿ&nbsp; ಬಿಡುಗಡೆ ಹಾಗೂ ಸರ್ವಾಂಗೀಣ ಪ್ರಗತಿಗಾಗಿ&nbsp; ಬಯಸುತ್ತಿದ್ದ ಕಾಲಘಟ್ಟವದು. ಈ ಬಿಡುಗಡೆಯ,&nbsp; ಪುನರುತ್ಥಾನದ&nbsp;&nbsp; ಹೊಸಭಾವಗಳು ಮೊದಲು ಕಾಣಿಸಿಕೊಂಡಿದ್ದು ಬಂಗಾಳದಲ್ಲಿ. ಈ ಕಾಲಘಟ್ಟವನ್ನು &#8216;ಬಂಗಾಳದ ಪುನರುತ್ಥಾನ&#8217;&nbsp; ಕಾಲ ಎಂದು ಕರೆಯಲಾಗಿದೆ.</p>



<p>ಇದೇ&nbsp;&nbsp; ಸಂದರ್ಭದಲ್ಲಿ ಆರಂಭವಾದ&nbsp; &#8216;ಏಷ್ಯಾಟಿಕ್ ಸೊಸೈಟಿ&#8217; ಭಾರತದ&nbsp; ಪ್ರಾಚೀನತೆ&nbsp; ಹಾಗೂ ಅದರ ಭವ್ಯ ಸಂಸ್ಕ್ರತಿಯ ಬಗ್ಗೆ ಸಂಶೋಧನೆ ಹಾಗೂ ಪ್ರಕಟಣೆಗಳನ್ನು ಆರಂಭಿಸಿತು.&nbsp; ಜನರ ಬದುಕನ್ನು ಅಧೋಗತಿಗಿಳಿಸಿದ್ದ&nbsp; ಸಾಮಾಜಿಕ, ಧಾರ್ಮಿಕ&nbsp; ಆಚರಣೆಗಳು&nbsp; ಹಾಗೂ ಬ್ರಿಟಿಷರ&nbsp; ಜೊತೆಯಲ್ಲಿಯೇ&nbsp; ಕಾಲಿಟ್ಟ&nbsp; ಕ್ರೈಸ್ತ ಮಿಷನರಿಗಳ ದರ್ಮಪ್ರಚಾರಕ್ಕೆ ಪರಿಹಾರವೆಂಬಂತೆ ರಾಜಾರಾಮಮೋಹನರಾಯರಿಂದ&nbsp;&nbsp; ಬ್ರಹ್ಮಸಮಾಜ ಹುಟ್ಟಿತು. ಬಂಗಾಳದ&nbsp;&nbsp; ಸನಾತನವಾದಿಗಳು&nbsp; ಕ್ರೈಸ್ತ ಮಿಷನರಿಗಳು, ಹಾಗೂ ಬ್ರಹ್ಮಸಮಾಜದ ವಿರುದ್ಧ ಸಿಡಿದೆದ್ದು ತೀವ್ರಗಾಮಿಗಳಾಗಿ&nbsp; &#8216;ಯುವ ಬಂಗಾಳ&#8217;ದವರೆಂದು ಪ್ರಸಿದ್ಧರಾದರು.</p>



<p>ರಾಜಾರಾಮ್ ಮೋಹನರಾಯ್ ಅವರ&nbsp; ಮರಣದ ನಂತರ ದೇವೇಂದ್ರನಾಥ್ ಟಾಗೋರರು ಬ್ರಹ್ಮ ಸಮಾಜದ ನೇತೃತ್ವ ವಹಿಸಿದರು.&nbsp;&nbsp; ದೇವೇಂದ್ರನಾಥರ&nbsp; ವಿಚಾರಗಳು ಒಪ್ಪಿಗೆಯಾಗದಿದ್ದಾಗ&nbsp; ಕೇಶವಚಂದ್ರಸೇನ್ ನೇತೃತ್ವದಲ್ಲಿ &#8216;ಬ್ರಹ್ಮಸಮಾಜ- ಇಂಡಿಯಾ&#8217;&nbsp; ಎಂಬ ಸಂಸ್ಥೆ ಹುಟ್ಟಿಕೊಂಡಿತು. ಜಾತಿ&nbsp; ಮತ್ತು ಸಾಮಾಜಿಕ&nbsp; ಸಮಸ್ಯೆಗಳ ಬಗೆಗಿನ ಇವರ ಅಭಿಪ್ರಾಯಗಳನ್ನು ಇಷ್ಟಪಡದ&nbsp; ಯುವಕರ ಗುಂಪು ಇವರ ನಾಯಕತ್ವವನ್ನು ಪ್ರಶ್ನಿಸಿ ಹೊರಬಂದು &#8216;ಸಾಧಾರಣ ಬ್ರಹ್ಮ ಸಮಾಜ&#8217;ವನ್ನು&nbsp; ಸ್ಥಾಪಿಸಿದರು. ಇದೇ ಸಂದರ್ಭದಲ್ಲಿ&nbsp;&nbsp; ಕೇಶವಚಂದ್ರಸೇನ್ ಅವರಿಂದ&nbsp; ಪ್ರಾರ್ಥನಾ ಸಮಾಜ ಸ್ಥಾಪಿಸಲ್ಪಟ್ಟಿತು.&nbsp;&nbsp; ಈ ಸಮಾಜ ಜನರಲ್ಲಿ&nbsp; ನವಪ್ರಜ್ಞೆಯೊಂದು ಉದಯಿಸುವ ಹಿನ್ನೆಲೆಯಲ್ಲಿ ಕೆಲಸ ಮಾಡಿತು.&nbsp; ಪಾಶ್ಚಿಮಾತ್ಯ ವಿಚಾರವಾದವನ್ನು&nbsp; ಗಮನವಿಟ್ಟು&nbsp; ನೋಡುತ್ತಲೇ ವಿದ್ಯಾಪ್ರಸಾರಕ್ಕೆ ಹೆಚ್ಚು ಒತ್ತು ಕೊಟ್ಟಿತು.&nbsp; ಈ ಹಿನ್ನೆಲೆಯಲ್ಲಿಯೇ&nbsp;&nbsp; ಮಹಾದೇವ ಗೋವಿಂದ ರಾನಡೆ, ಸ್ವಾಮಿ ದಯಾನಂದ ಸರಸ್ವತಿ ಮುಂತಾದವರು ಸೇರಿ ಆರ್ಯಸಮಾಜವನ್ನು ಸ್ಥಾಪಿಸಿದರು.</p>



<p>&nbsp; 1875 ರಲ್ಲಿ ಸ್ಥಾಪಿಸಿದ&nbsp;&nbsp; ಥಿಯಾಸಾಫಿಕಲ್ ಸೊಸೈಟಿ&nbsp; ಪೂರ್ವ ದೇಶಗಳ&nbsp; ಸಮಾನ&nbsp; ಧಾರ್ಮಿಕ ಸಿದ್ಧಾಂತಗಳನ್ನು ಹೊರದೇಶದಲ್ಲಿ&nbsp; ಪ್ರಚಾರ ಮಾಡುವ ಉದ್ದೇಶ ಹೊಂದಿತ್ತು. ಈ ಚಳವಳಿಯ&nbsp; ಮುಂಚೂಣಿಯಲ್ಲಿ&nbsp;&nbsp; ಶ್ರೀಮತಿ ಅನಿಬೆಸೆಂಟ್&nbsp; ಹಾಗೂ&nbsp; ಬಾರತ&nbsp; ಹಾಗೂ&nbsp; ಅಖಿಲ ಭಾರತ ರಾಷ್ಟ್ರೀಯ ಚಳವಳಿಗಾರರು ಇದ್ದರು. ಈ&nbsp; ತತ್ವಜ್ಞಾನಿಗಳು&nbsp; ಸಮಸ್ಯೆಗಳನ್ನು ಹಿಂದೂ ಧಾರ್ಮಿಕ ಸಿದ್ಧಾಂತ ಹಾಗೂ ಧಾರ್ಮಿಕ ಸಂಸ್ಥೆಗಳ ಪುನರುತ್ಥಾನದಿಂದ&nbsp; ಚರ್ಚಿಸಬಹುದೆಂದು&nbsp; ನಂಬಿದ್ದರು. ಈ ಸೊಸೈಟಿ&nbsp; ವಿದ್ಯಾಭ್ಯಾಸ ಮತ್ತು ಮಹಿಳೆಯರ ಬಗ್ಗೆ ಹೆಚ್ಚು ಗಮನ ವಹಿಸಿತು.ಸಾಹಿತ್ಯದಲ್ಲೂ&nbsp; ಕೂಡ ಈ ರೀತಿಯ ಜಾಗೃತಿ ಮತ್ತು&nbsp;&nbsp; ಪುನರುತ್ಥಾನದ&nbsp; ಚಿಂತನೆಗಳು&nbsp; ತಲೆಯೆತ್ತಿದವು. ಪಾಶ್ಚಿಮಾತ್ಯ&nbsp; ವಿದ್ಯಾಭ್ಯಾಸ&nbsp; ಕ್ರಮದಿಂದ ಹುಟ್ಟಿದ ಹೊಸ ಆಲೋಚನೆಗಳ ಯುವಜನಾಂಗವೊಂದು&nbsp; ಈ&nbsp; ಸಂಘರ್ಷ ಹಾಗೂ ವೈಚಾರಿಕಾ ದ್ವಂದ್ವವನ್ನು ಸಮರ್ಥವಾಗಿ ಎದುರಿಸಬಲ್ಲಂತೆ&nbsp; ಮೂಡಿತು. ಇಂತಹ&nbsp; ಕಾಲಘಟ್ಟದಲ್ಲಿಯೇ ನಾವು ವಿವೇಕಾನಂದರು ವಿಶ್ವಮಾನವರಾಗಿ ಗುರುತಿಸಿಕೊಂಡ ಚಾರಿತ್ರಿಕ ಅಗತ್ಯವನ್ನು ಗುರುತಿಸಬೇಕಾಗುತ್ತದೆ.</p>



<p>ಜನವರಿ 12, 1863 ರಂದು ಭುವನೇಶ್ವರಿ ಮತ್ತು ವಿಶ್ವನಾಥದತ್ತರ ಮಗನಾಗಿ ನರೇಂದ್ರನಾಥ ಜನಿಸಿದರು. ನರೇಂದ್ರನಾಥರ&nbsp; ತಂದೆ&nbsp;&nbsp; ಹೈಕೋಟ್೯ ವಕೀಲರಾಗಿದ್ದು ಬೈಬಲ್,ಇಸ್ಮಾಮಿಕ್, ಪರ್ಷಿಯನ್ ಹಾಗೂ ಇಂಗ್ಲೀಷ್ ಸಾಹಿತ್ಯದ&nbsp; ಬಗ್ಗೆ&nbsp; ಪಾಂಡಿತ್ಯವುಳ್ಳವರಾಗಿದ್ದರು. ನಾಸ್ತಿಕರಾಗಿದ್ದ&nbsp; ಇವರು ಹಿಂದಿನ&nbsp; ಮೂಢನಂಬಿಕೆಯ&nbsp;&nbsp; ವಿಚಾರಗಳನ್ನು&nbsp; ಖಂಡಿಸುವವರಾಗಿದ್ದರು. ನರೇಂದ್ರರ. ತಾತ ದುರ್ಗಾಚರಣರು&nbsp; ಪ್ರಾಪಂಚಿಕ ವ್ಯಾಮೋಹಗಳನ್ನು ತ್ಯಜಿಸಿ ಸಂನ್ಯಾಸಿಯಾಗಿ ಜೀವಿಸಲಾರಂಭಿಸಿದ್ದರು.&nbsp; ಇವರ&nbsp; ತಾಯಿ ತಮ್ಮ ಮಗನಿಗೆ ಹೇಳುತ್ತಿದ್ದ&nbsp; ರಾಮಾಯಣ,&nbsp; ಮಹಾಭಾರತ, ಪುರಾಣ ಪ್ರಪಂಚದ ಕಥೆಗಳು ಪರಂಪರೆಯ ಬಗ್ಗೆ ಕುತೂಹಲ&nbsp; ಹುಟ್ಟಿಸಿದ್ದವು.&nbsp; ಹಿಂದೂ ದೇವತೆಗಳ, ಸಂನ್ಯಾಸಿಗಳ ಬಗ್ಗೆ ಆಕರ್ಷಣೆ&nbsp; ಹುಟ್ಟಿದ್ದು ಈ ಕಾಲಘಟ್ಟದಲ್ಲಿಯೇ.</p>



<p>ಪಾರಮಾರ್ಥಿಕ&nbsp; ಅನುಭವವನ್ನು ಪಡೆಯಲು&nbsp; ತವಕಿಸುತ್ತಿದ್ದ ಅವರ ಮನಸ್ಸು&nbsp; ಮತಧರ್ಮಗಳ&nbsp; ಅಂತಿಮ ಗುರಿಯೇನು ಎಂದು ಪ್ರಶ್ನಿಸುತ್ತಿತ್ತು. ಉತ್ತರ&nbsp; ನೀಡುವ ವ್ಯಕ್ತಿಗಳಿಗಾಗಿ ತವಕಿಸುತ್ತಿದ್ದ&nbsp; ಅವರು&nbsp; ಬ್ರಹ್ಮಸಮಾಜದ ಹಿರಿಯರಾದ&nbsp; ದೇವೇಂದ್ರನಾಥ ಟಾಗೋರರನ್ನು ಕಂಡು &#8220;ಸರ್, ನೀವು ದೇವರನ್ನು ಕಂಡಿದ್ದೀರಾ&#8221; ಎಂದು ಪ್ರಶ್ನಿಸಿದರು.&nbsp; ಗಲಿಬಿಲಿಗೊಂಡ&nbsp; ದೇವೇಂದ್ರನಾಥ್ ಅವರು &#8220;ಪ್ರೀತಿಯ ತರುಣನೇ&nbsp; ನಿನ್ನಲ್ಲಿ ಯೋಗಿಯ ಕಣ್ಣುಗಳಿವೆ, ನೀನು&nbsp; ಯೋಗವನ್ನು ಅಭ್ಯಾಸ ಮಾಡು &#8220;ಎನ್ನುತ್ತಾರೆ.</p>



<p>ನರೇಂದ್ರರಿಗೆ&nbsp; ಹಿರಿಯರೊಬ್ಬರಿಂದ ಹಾಗೂ ಗುರುಗಳಾದ ಹಾಸ್ಟ್ ಅವರಿಂದ&nbsp; ಇಂತಹ&nbsp; ಪ್ರಶ್ನೆಗಳಿಗೆ ಉತ್ತರ ಸಿಗುವುದು&nbsp; ಕಾಳಿ&nbsp; ದೇವಾಲಯದ ಪೂಜಾರಿ&nbsp; ರಾಮಕೃಷ್ಣ ಪರಮಹಂಸರಿಂದ ಮಾತ್ರ ಎಂಬ ಸಲಹೆ ಸಿಗುತ್ತದೆ.</p>



<p>ಅವರ ಯುವ ಮನಸ್ಸು ರಾಮಕೃಷ್ಣರನ್ನು&nbsp; ಕೇವಲ ಒಬ್ಬ ಪೂಜಾರಿಯಾಗಿ ಕಂಡಿತ್ತು. ಆಕಸ್ಮಿಕವಾಗಿ ಮಿತ್ರರೊಬ್ಬರ&nbsp; ಮನೆಯಲ್ಲಿ&nbsp; ರಾಮಕೃಷ್ಣರ&nbsp; ಸಮ್ಮುಖದಲ್ಲಿ&nbsp; ದೇವರನಾಮವನ್ನು&nbsp;&nbsp; ನರೇಂದ್ರ&nbsp; ಹಾಡಬೇಕಾಗುತ್ತದೆ.&nbsp; ಈ&nbsp;&nbsp; ಭೇಟಿ&nbsp; ಅವರಿಗೆ&nbsp; ವಿಶೇಷವೆನಿಸದಿದ್ದರೂ&nbsp; ರಾಮಕೃಷ್ಣರಿಗೆ ಮಾತ್ರ ತಾವು ಬಹುಕಾಲದಿಂದ&nbsp; ಹುಡುಕುತ್ತಿದ್ದ&nbsp; ವ್ಯಕ್ತಿ&nbsp; ಈತನೇ ಎಂಬ ಅರಿವಾಗುತ್ತದೆ. ತಮ್ಮ&nbsp; ಸಿದ್ದಾಂತಗಳನ್ನು ಈತ&nbsp; ಮಾತ್ರ ಹೊರಜಗತ್ತಿಗೆ&nbsp; ತಲುಪಿಸಬಲ್ಲ ಎಂಬ&nbsp; ವಿಶ್ವಾಸ ಮೂಡುತ್ತದೆ. ಅವರು ಸರ್ವಸಂಗ&nbsp; ಪರಿತ್ಯಾಗಿಯಾದ,&nbsp; ವಿಷಯಾಸಕ್ತಿಗಳಿಂದ&nbsp; ದೂರವಾದ, ದೇವರನ್ನು ಅರಿಯುವ ಕುತೂಹಲವಿರುವ,&nbsp; ದೀನದಲಿತರ&nbsp; ಬಗ್ಗೆ&nbsp; ಕಾಳಜಿಯುಳ್ಳ&nbsp; ಶಿಷ್ಯನೊಬ್ಬನನ್ನು&nbsp; ಕಂಡುಕೊಳ್ಳುವ&nbsp; ನಿರೀಕ್ಷೆಯಲ್ಲಿದ್ದರು.</p>



<p>ಆಗ ರಾಮಕೃಷ್ಣ&nbsp; ಪರಮಹಂಸರು ಕಲ್ಕತ್ತಾದ ರಾಣಿ ರಾಸಮಣಿ&nbsp; ನಿರ್ಮಿಸಿದ&nbsp; ಕಾಳಿ ದೇಗುಲದಲ್ಲಿ ಕಾಳಿಯನ್ನು &#8216;ಭವತಾರಿಣಿ&#8217;&nbsp; ರೂಪದಲ್ಲಿ ಆರಾಧಿಸುತ್ತಿದ್ದರು. ರಾಮಕೃಷ್ಣರ&nbsp; ಆಹ್ವಾನಕ್ಕೆ&nbsp; ಅಷ್ಟಾಗಿ ಸ್ಪಂದಿಸಿದೇ ಇದ್ದರೂ ಮುಂದೊಂದು ದಿನ&nbsp; ಅವರನ್ನು ಕಾಳಿಮಂದಿರದಲ್ಲಿ ಭೇಟಿಯಾಗುತ್ತಾರೆ. ತಕ್ಷಣದ&nbsp; ಅವರ&nbsp; ಪ್ರಶ್ನೆಯೆಂದರೆ&nbsp; &#8220;ಸರ್,&nbsp; ನೀವು ದೇವರನ್ನು ಕಂಡಿದ್ದೀರಾ&#8221; ಎಂಬುದಾಗಿತ್ತು.&nbsp; &#8220;ಹೌದು, ನಿನ್ನನ್ನು ಕಂಡಿರುವಂತೆಯೇ ದೇವರನ್ನೂ ಕಂಡಿದ್ದೇನೆ. ಉತ್ಕಟವಾದ&nbsp; ಅಂತಃ ಶಕ್ತಿ ಬೆಳೆದಾಗ&nbsp; ಮಾತ್ರ ಇದು ಅನುಭವ&nbsp; ಸಾಧ್ಯ.&nbsp; ಆಗ ಯಾರು ಬೇಕಾದರೂ ಅವನೊಂದಿಗೆ&nbsp; ನಾನು, ನೀನು ಮಾತನಾಡುತ್ತಿರುವಂತೆ ಮಾತನಾಡಬಹುದು&#8221; ಎನ್ನುತ್ತಾರೆ.&nbsp; ಈ&nbsp; ಗೊಂದಲಗಳಿಲ್ಲದ ಉತ್ತರ&nbsp;&nbsp; ಪರಸ್ಪರ ಪರೀಕ್ಷಕರಾದ&nbsp; ಈ ಗುರು&nbsp; ಶಿಷ್ಯರ&nbsp; ಸಂಬಂಧ&nbsp; ಬದುಕನ್ನು ಬದಲಿಸುತ್ತದೆ.</p>



<p>ಸರ್ವರನ್ನು ಪ್ರೀತಿಸುವ , ವಿರೋಧಿಗಳನ್ನು,&nbsp; ತನ್ನನ್ನು ವಿಮರ್ಶಿಸುವರನ್ನು&nbsp; ಸಹ&nbsp;&nbsp; ದ್ವೇಷಿಸದ&nbsp; ರಾಮಕೃಷ್ಣರು&nbsp; ಒಂದೆಡೆಯಾದರೆ ಅನ್ಯಾಯದ&nbsp; ವಿರುದ್ದ ಸಿಡಿಯುವ, ವಿಮರ್ಶೆ&nbsp; ಸಣ್ಣತನಗಳನ್ನು&nbsp; ಸಹಿಸದ ಮೊಂಡು, ದುಡುಕುತನದ&nbsp;&nbsp; ನರೇಂದ್ರನಾಥರದು&nbsp; ಇನ್ನೊಂದೆಡೆ ಇದ್ದು ಇದು&nbsp; ಪರಸ್ಪರ ವಿರುದ್ದ&nbsp; ಸ್ವಭಾವಗಳ&nbsp; ಸಾಂಗತ್ಯವಾಗಿತ್ತು. ಐದು ವರ್ಷಗಳ ಶಿಷ್ಯತ್ವದಲ್ಲಿ ರಾಮಕೃಷ್ಣರು ಏನನ್ನೂ&nbsp; ಹೇಳದೆ,&nbsp; ಪ್ರಶ್ನಿಸದೆ, ವಿಮರ್ಶಿಸದೆ&nbsp; ತಮ್ಮ ಪಡಿಯಚ್ಚಾಗಿ&nbsp; ಮಾರ್ಪಡಿಸಲು ಯತ್ನಿಸದೆ&nbsp; ಉಕ್ಕನ್ನು ನಿಧಾನವಾಗಿ&nbsp; ಹದಗೊಳಿಸುವಂತೆ ತಮ್ಮ ಶಿಷ್ಯನನ್ನು ರೂಪಿಸಿದರು.</p>



<p>ರಾಮಕೃಷ್ಣ ಪರಮಹಂಸರು ನಿರ್ವಾಣ ಹೊಂದುವ ಗಳಿಗೆಯಲ್ಲಿ&nbsp; ತಮ್ಮ ಬಳಿ ನರೇಂದ್ರರನ್ನು ಕರೆದು ಧ್ಯಾನಾಸಕ್ತರಾಗುತ್ತಾರೆ. ನರೇಂದ್ರರಿಗೆ ತಮ್ಮ ಮೈಯೊಳಗೆ ಸೂಕ್ಷ್ಮವಾದ ವಿದ್ಯುತ್ ಪ್ರವಾಹದ&nbsp; ಶಕ್ತಿಯೊಂದು&nbsp; ಹೊಕ್ಕಂತೆ&nbsp; ಮೈ ಜುಂ ಎನಿಸಿತು. &#8220;ನನ್ನಲ್ಲಿ ಇದ್ದುದ್ದನೆಲ್ಲಾ&nbsp; ಇಂದು ನಿನಗೆ ನೀಡಿದ್ದೇನೆ. ಈಗ ನಾನೊಬ್ಬ ಫಕೀರ, ಭಿಕ್ಷುಕ. ನಾನು ಹರಿಸಿದ&nbsp; ಶಕ್ತಿಯಿಂದ ನೀನು ಅದ್ಬುತ&nbsp; ಕೆಲಸಗಳನ್ನು ಮಾಡಲು ಶಕ್ತನಾಗುತ್ತಿ. ಆದರೆ ನಾನು&nbsp; ಬದುಕಿರುವವರೆಗೂ&nbsp; ನೀನು&nbsp; ಎಲ್ಲಿಂದ&nbsp; ಬಂದೆಯೋ&nbsp; ಅಲ್ಲಿಗೆ&nbsp; ಹೋಗಿರು&#8221; ಎಂಬುದು ಅವರ ಕೊನೆಯ&nbsp; ಮಾತುಗಳಾಗಿದ್ದವು.&nbsp; ವಿಶ್ವಸಂಚಾರ&nbsp; ಹಾಗೂ&nbsp; ಭಾರತದರ್ಶನದಲ್ಲಿ&nbsp; ತಮ್ಮನ್ನು ತೊಡಗಿಸಿ ಕೊಂಡು ಮತಧರ್ಮಗಳ&nbsp;&nbsp; ಮೌಡ್ಯತೆಯಲ್ಲಿ&nbsp; ಮುಳುಗಿದವರನ್ನು ಎಚ್ಚರಿಸುವ&nbsp; ಕೆಲಸವನ್ನು&nbsp; ಸಮರ್ಥವಾಗಿ ನಿರ್ವಹಿಸಿದರು.</p>



<p>1893 ರಲ್ಲಿ&nbsp; ಚಿಕಾಗೋದಲ್ಲಿ&nbsp; ನಡೆದ&nbsp; ಸರ್ವಧರ್ಮ ಸಮ್ಮೇಳನದಲ್ಲಿನ&nbsp;&nbsp; ಭಾಗವಹಿಸುವಿಕೆ&nbsp; ಮತ್ತು ಅದರಲ್ಲಿ ಅವರು ಭಾರಿಸಿದ&nbsp; ಜಯಭೇರಿ ಕೇವಲ ಭಾರತೀಯನನ್ನಾಗಿಸದೆ&nbsp; ವಿಶ್ವಮಾನವನನ್ನಾಗಿ&nbsp;&nbsp; ರೂಪಿಸಿತು. ಜಗತ್ತಿನ&nbsp; ಎಲ್ಲಾ&nbsp; ದೇವರು, ಧರ್ಮಕ್ಕಿಂತಲೂ ಮಿಗಿಲಾದದ್ದು&nbsp; ಮಾನವಧರ್ಮ ಎಂದು ವಿಶ್ವದಾದ್ಯಂತ&nbsp; ಸಾರಿದ&nbsp; ಕೀರ್ತಿ&nbsp; ಬಂಗಾಳದ ವಿವೇಕಶಾಲಿ&nbsp;&nbsp;&nbsp; ವಿವೇಕಾನಂದ ಅವರಿಗೆ ಮಾತ್ರ&nbsp; ಸಲ್ಲುತ್ತದೆ. ಹೀಗಾಗಿಯೇ ವಿವೇಕಾನಂದರ&nbsp; ವಿಚಾರಧಾರೆಗಳು&nbsp; ಜಡಗೊಂಡ ಸನಾತನವಾದಿಗಳ&nbsp; ಕೈಗೆ ನಿಲುಕದೆ&nbsp; ಜಾತಿ, ಮತಪಂಥಗಳಿಂದಾಚೆ&nbsp; ನಿಂತ&nbsp; ವಿಶ್ವಮಾನವನ ಅನ್ವೇಷಣೆಗೆ ತೊಡಗುತ್ತವೆ.</p>
]]></content:encoded>
					
		
		
			</item>
	</channel>
</rss>
