<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>je Vaccination campaign &#8211; Peepal Media</title>
	<atom:link href="https://peepalmedia.com/tag/je-vaccination-campaign/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 06 Dec 2022 12:04:44 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>je Vaccination campaign &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಮಕ್ಕಳಲ್ಲಿ ಜಪಾನೀಸ್ ಬಿ ಎನ್ಸೆಫಲೈಟಿಸ್</title>
		<link>https://peepalmedia.com/japanese-b-encephalitis-in-children/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 06 Dec 2022 06:15:23 +0000</pubDate>
				<category><![CDATA[ಆರೋಗ್ಯ]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[je Vaccination campaign]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[virus]]></category>
		<category><![CDATA[writing]]></category>
		<guid isPermaLink="false">https://peepalmedia.com/?p=17675</guid>

					<description><![CDATA[ಡಾ. ಕೆ.ಬಿ. ರಂಗಸ್ವಾಮಿ ಇತ್ತೀಚೆಗೆ ನಮ್ಮ ರಾಜ್ಯದ ಕೆಲವು ಪ್ರದೇಶಗಳಲ್ಲಿ ಜಪಾನೀಸ್ ಬಿ ಎನ್ಸೆಫಲೈಟಿಸ್ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 5ನೇ ತಾರೀಖಿನಿಂದ, ಒಂದರಿಂದ ಹದಿನೈದು ವರ್ಷಗಳ ನಡುವಿನ ಎಲ್ಲಾ ಮಕ್ಕಳಿಗೆ ಜೆ ಇ ಲಸಿಕಾ ಅಭಿಯಾನವನ್ನು‌ ಸರ್ಕಾರ ಹಮ್ಮಿಕೊಂಡಿದೆ. ಈ ಲಸಿಕೆಯನ್ನು ಯಾವ ಕಾರಣಕ್ಕಾಗಿ ನೀಡಲಾಗುತ್ತದೆ? ಇದನ್ನು&#160; ಕಡ್ಡಾಯವಾಗಿ ನೀಡಲೇಬೇಕೆ? ಎಂಬಿತ್ಯಾದಿ ಪ್ರಶ್ನೆಗಳು ಅನೇಕ ಪೋಷಕರನ್ನು ಕಾಡುತ್ತಿವೆ. ಈ ದಿಸೆಯಲ್ಲಿ ಒಂದಿಷ್ಟು ಬೆಳಕು ಚೆಲ್ಲುವ ಸಲುವಾಗಿ ಈ ಲೇಖನ. ಏನಿದು ಜಪಾನೀಸ್ ಬಿ ಎನ್ಸೆಫಲೈಟಿಸ್? ವಿವಿಧ [&#8230;]]]></description>
										<content:encoded><![CDATA[
<p><strong>ಡಾ. ಕೆ.ಬಿ. ರಂಗಸ್ವಾಮಿ</strong></p>



<p>ಇತ್ತೀಚೆಗೆ ನಮ್ಮ ರಾಜ್ಯದ ಕೆಲವು ಪ್ರದೇಶಗಳಲ್ಲಿ ಜಪಾನೀಸ್ ಬಿ ಎನ್ಸೆಫಲೈಟಿಸ್ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 5ನೇ ತಾರೀಖಿನಿಂದ, ಒಂದರಿಂದ ಹದಿನೈದು ವರ್ಷಗಳ ನಡುವಿನ ಎಲ್ಲಾ ಮಕ್ಕಳಿಗೆ ಜೆ ಇ ಲಸಿಕಾ ಅಭಿಯಾನವನ್ನು‌ ಸರ್ಕಾರ ಹಮ್ಮಿಕೊಂಡಿದೆ. ಈ ಲಸಿಕೆಯನ್ನು ಯಾವ ಕಾರಣಕ್ಕಾಗಿ ನೀಡಲಾಗುತ್ತದೆ? ಇದನ್ನು&nbsp; ಕಡ್ಡಾಯವಾಗಿ ನೀಡಲೇಬೇಕೆ? ಎಂಬಿತ್ಯಾದಿ ಪ್ರಶ್ನೆಗಳು ಅನೇಕ ಪೋಷಕರನ್ನು ಕಾಡುತ್ತಿವೆ. ಈ ದಿಸೆಯಲ್ಲಿ ಒಂದಿಷ್ಟು ಬೆಳಕು ಚೆಲ್ಲುವ ಸಲುವಾಗಿ ಈ ಲೇಖನ.</p>



<p><strong>ಏನಿದು ಜಪಾನೀಸ್ ಬಿ ಎನ್ಸೆಫಲೈಟಿಸ್?</strong></p>



<p>ವಿವಿಧ ಕಾರಣಗಳಿಂದ ಮಿದುಳಿನ ಅಂಗಾಂಶಗಳು ಉರಿಯೂತಕ್ಕೊಳಗಾಗುವುದನ್ನು &#8216;ಮಿದುಳಿನ ಉರಿಯೂತ&#8217; ಎನ್ನಲಾಗುತ್ತದೆ. ಜನಸಾಮಾನ್ಯರು ಇದನ್ನು &#8216;ಮಿದುಳು ಜ್ವರ&#8217; ಎಂತಲೂ ಕರೆಯುತ್ತಾರೆ. ಉರಿಯೂತಕ್ಕೊಳಗಾದ ಮಿದುಳಿನ ಅಂಗಾಂಶಗಳಲ್ಲಿ ನೀರು ತುಂಬಿಕೊಂಡು ತಲೆಬುರುಡೆಯೊಳಗೆ ಏರೊತ್ತಡ ಉಂಟಾಗುತ್ತದೆ. ಶರೀರದ ಎಲ್ಲಾ ಅಂಗಕ್ರಿಯೆಗಳು ಮಿದುಳಿನಿಂದಲೇ ನಿಯಂತ್ರಿಸಲ್ಪಡುವುದರಿಂದ ಮಿದುಳು ಉರಿಯೂತಕ್ಕೊಳಗಾದಾಗ ಗಂಭೀರ ಸ್ವರೂಪದ ದೈಹಿಕ ಸಮಸ್ಯೆಗಳುಂಟಾಗಿ, ಉಸಿರಾಟದ ವೈಫಲ್ಯದಿಂದ ಸಾವು ಸಂಭವಿಸಬಹುದು ಮತ್ತು ಬದುಕುಳಿದ ವ್ಯಕ್ತಿಗಳಲ್ಲಿ ಬುದ್ಧಿಮಾಂದ್ಯತೆ, ಅಂಧತ್ವ, ಕಿವುಡುತನ, ಪಾರ್ಶ್ವವಾಯು ಮುಂತಾದ ಅಂಗವೈಕಲ್ಯಗಳುಂಟಾಗಬಹುದು.</p>



<p>ಮಿದುಳಿನ ಉರಿಯೂತದ ಸರ್ವೇಸಾಮಾನ್ಯ ಕಾರಣವೆಂದರೆ ವೈರಾಣುವಿನ ಸೋಂಕು. ಆದರೆ ಅಪರೂಪಕ್ಕೊಮ್ಮೆ ಬ್ಯಾಕ್ಟೀರಿಯಾ, ಶಿಲೀಂದ್ರ, ಅಮೀಬಾ ಮುಂತಾದ ಇತರೆ ಸೂಕ್ಷ್ಮಾಣುಗಳ ಸೋಂಕೂ ಸಹ ಕಾರಣವಾಗಬಲ್ಲದು. ಮಿದುಳಿನ ಉರಿಯೂತ ಉಂಟುಮಾಡಬಲ್ಲ ವೈರಾಣುಗಳೆಂದರೆ ಜಪಾನೀಸ್ ಬಿ ಎನ್ಸೆಫಲೈಟಿಸ್, ಹರ್ಪಿಸ್, ದಡಾರ, ಗದ್ದಬಾವು(ಮಂಪ್ಸ್), ಎಚ್ ಐ ವಿ ಇತ್ಯಾದಿ.</p>



<p>ಜಪಾನೀಸ್ ಬಿ ಎನ್ಸೆಫಲೈಟಿಸ್ ಎಂಬುದೊಂದು ಪ್ರಾಣಿಜನ್ಯ ಕಾಯಿಲೆಯಾಗಿದ್ದು, ಭತ್ತದ ಗದ್ದೆ ಮತ್ತು ಕೆರೆಕುಂಟೆಗಳಲ್ಲಿ ಕಾಣಸಿಗುವ ಬೆಳ್ಳಕ್ಕಿ(ಆ್ಯಡ್ರಿಡ್ ಹಕ್ಕಿ)ಗಳು ಈ ವೈರಾಣುವಿನ ಮೂಲಗಳಾಗಿರುತ್ತವೆ. ನೀರು ನಿಂತಿರುವ ಸ್ಥಳಗಳಲ್ಲಿ ಸಂತಾನೋತ್ಪತ್ತಿ ಹೊಂದುವ ಕ್ಯೂಲೆಕ್ಸ್ ಗುಂಪಿಗೆ ಸೇರಿದ ಸೊಳ್ಳೆಯ ಕೆಲವು ಪ್ರಭೇದಗಳ ಮುಖಾಂತರ ವೈರಾಣುಗಳು ಬೆಳ್ಳಕ್ಕಿಗಳಿಂದ ಹಂದಿಗಳಿಗೆ ರವಾನಿಸಲ್ಪಡುತ್ತವೆ. ಹಂದಿಗಳ ಶರೀರದಲ್ಲಿ ವಂಶಾಭಿವೃದ್ಧಿ ಹೊಂದುವ ವೈರಾಣು, ಪುನಃ ಅದೇ ಸೊಳ್ಳೆಯ ಮುಖಾಂತರ ಆಕಸ್ಮಿಕವಾಗಿ ಮನುಷ್ಯನ ಶರೀರವನ್ನು ಪ್ರವೇಶಿಸಿ ಮಿದುಳಿನ ಹಾನಿಗೆ ಕಾರಣವಾಗುತ್ತದೆ. ಹಾಗಾಗಿ ಭತ್ತ ಬೆಳೆಯುವ ಪ್ರದೇಶಗಳಲ್ಲಿ ಇದರ ಹಾವಳಿ ಹೆಚ್ಚು. ಎಲ್ಲಾ ವಯೋಮಾನದವರು ಇದಕ್ಕೆ ತುತ್ತಾಗಬಹುದಾದ ಸಾಧ್ಯತೆಯಿದ್ದರೂ ಹದಿನೈದು ವರ್ಷದೊಳಗಿನ ಮಕ್ಕಳನ್ನು ಹೆಚ್ಚಾಗಿ ಕಾಡುತ್ತದೆ. ಮೂರರಿಂದ ಐದು ದಿನಗಳ ಅದಿಶಯನ ಕಾಲದ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳತೊಡಗುತ್ತವೆ.</p>



<p><strong>ರೋಗಲಕ್ಷಣಗಳು</strong></p>



<p>ಮಿದುಳಿನ ಉರಿಯೂತದಲ್ಲಿ ಕಂಡುಬರುವ ರೋಗಲಕ್ಷಣಗಳೆಂದರೆ-</p>



<p>* ತೀವ್ರ ಸ್ವರೂಪದ ಜ್ವರ&nbsp;&nbsp;</p>



<p>* ಅತೀವ ತಲೆನೋವು</p>



<p>* ವಾಂತಿ</p>



<p>* ಫಿಟ್ಸ್</p>



<p>* ಮಂಕಾಗುವುದು</p>



<p>* ಪ್ರಜ್ಞಾಹೀನತೆ</p>



<p>* ಪಾರ್ಶ್ವವಾಯು</p>



<p>* ದೃಷ್ಟಿ ಮಂಜಾಗುವುದು</p>



<p>* ಅನೈಚ್ಛಿಕ ಚಲನೆಗಳು</p>



<p>* ಅನಿಯಂತ್ರಿತ ಮಲಮೂತ್ರ ವಿಸರ್ಜನೆ ಇತ್ಯಾದಿ.</p>



<p><strong>ರೋಗನಿದಾನ</strong></p>



<p>ಮಿದುಳಿನ ಉರಿಯೂತಕ್ಕೆ ಕೆಲವು ಪ್ರಯೋಗಶಾಲಾ ಪರೀಕ್ಷೆಗಳ ಅಗತ್ಯವಿರುತ್ತದೆ.</p>



<p>* ಮಿದುಳು ದ್ರವದ ಪರೀಕ್ಷೆ&nbsp;</p>



<p>* ಮಿದುಳಿನ ಎಮ್ ಆರ್ ಐ</p>



<p>* ವೈರಾಣುಗಳ ಸೋಂಕನ್ನು ದೃಢೀಕರಿಸಲು ಕೆಲವು ರಕ್ತ ಪರೀಕ್ಷೆಗಳು ಇತ್ಯಾದಿ.</p>



<p><strong>ಚಿಕಿತ್ಸಾಕ್ರಮ&nbsp;</strong></p>



<p>ಮಿದುಳಿನ ಉರಿಯೂತಕ್ಕೆ ಸಾಮಾನ್ಯವಾಗಿ ವೈರಾಣುಗಳು ಕಾರಣವಾಗಿರುವುದರಿಂದ ಯಾವುದೇ ನಿಗದಿತ ಚಿಕಿತ್ಸೆಗಳಿರುವುದಿಲ್ಲ. ಹರ್ಪಿಸ್ ವೈರಾಣು ದೃಢಪಟ್ಟರೆ ಮಾತ್ರ ವೈರಾಣು ನಿಯಂತ್ರಕ(ಆ್ಯಂಟಿವೈರಲ್)ಔಷಧಗಳನ್ನು ಬಳಸಬೇಕಾಗುತ್ತದೆ. ಹಾಗೆಯೇ ಎಚ್ ಐ ವಿ ಯಿಂದುಂಟಾಗುವ ಉರಿಯೂತಕ್ಕೂ ಸಹ ಔಷಧಗಳ ಅಗತ್ಯವಿರುತ್ತದೆ. ಉರಿಯೂತದಂಥ ಕಾಯಿಲೆಯಲ್ಲಿ ಅದಕ್ಕೆ ಕಾರಣವಾದ ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು.</p>



<p><strong>ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗುವಿಗೆ ಅಗತ್ಯವಿರುವ ಎಲ್ಲಾ ಚಿಕಿತ್ಸೆಗಳನ್ನು ನೀಡಬೇಕು.</strong></p>



<p>* ಜ್ವರದ ತಾಪವನ್ನು ತಗ್ಗಿಸುವುದು</p>



<p>* ತಲೆಬುರುಡೆಯೊಳಗಿನ ಏರೊತ್ತಡವನ್ನು ತಗ್ಗಿಸುವ ಔಷಧಗಳ ಬಳಕೆ&nbsp;</p>



<p>* ಫಿಟ್ಸ್ ನಿಯಂತ್ರಣದ ಔಷಧಗಳ ಬಳಕೆ</p>



<p>* ಆಮ್ಲಜನಕದ ಪೂರೈಕೆ</p>



<p>* ರಕ್ತನಾಳಗಳ ಮುಖಾಂತರ ದ್ರಾವಣ ಮತ್ತು ಮೂಗಿನ ಮುಖಾಂತರ ಆಹಾರ ಪೂರೈಕೆ</p>



<p>* ಕಣ್ಣಿನ ಆರೈಕೆ</p>



<p>* ಮಲಮೂತ್ರಗಳ ಕಾಳಜಿ</p>



<p>* ಚರ್ಮದ ವ್ರಣಗಳಾಗದಂತೆ ಎಚ್ವರವಹಿಸುವುದು ಇತ್ಯಾದಿ.</p>



<p><strong>ನಿವಾರಣೋಪಾಯಗಳು</strong></p>



<p>* ಸೊಳ್ಳೆಗಳಿಂದ ರಕ್ಷಣೆ ಮತ್ತು ಸೊಳ್ಳೆಗಳ ನಿಯಂತ್ರಣ.</p>



<p>* ಹಂದಿಗಳ ನಿಯಂತ್ರಣ.</p>



<p>* ಜಪಾನೀಸ್ ಬಿ ಎನ್ಸೆಫಲೈಟಿಸ್ (ಜೆ ಇ) ವಿರುದ್ಧದ ಲಸಿಕೆ ನೀಡುವುದು‌. ಈ ಕಾಯಿಲೆಯ ಹಾವಳಿ ಹೆಚ್ಚಾಗಿರುವ ಜಿಲ್ಲೆಗಳಲ್ಲಿ, ಮಗುವಿಗೆ ಒಂಬತ್ತು ತಿಂಗಳುಗಳು ತುಂಬಿದ ನಂತರ ಸರ್ಕಾರದಿಂದ ಉಚಿತವಾಗಿ ಲಸಿಕೆ ನೀಡಲಾಗುತ್ತದೆ.</p>



<p>ಒಟ್ಟಿನಲ್ಲಿ ಮಾರಣಾಂತಿಕವಾದ ಮಿದುಳಿನ ಉರಿಯೂತವನ್ನು ಆರಂಭದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡುವುದರಿಂದ ಸಾವುನೋವಿನ ಪ್ರಮಾಣವನ್ನು ತಗ್ಗಿಸಬಹುದು.</p>



<p><strong>ಜೆ ಇ ಲಸಿಕಾ ಅಭಿಯಾನದ ಕುರಿತು</strong></p>



<p>ಬಾಗಲಕೋಟೆ, ಕಲಬುರ್ಗಿ, ಯಾದಗಿರಿ, ಗದಗ, ಹಾವೇರಿ, ಉಡುಪಿ, ದಕ್ಷಿಣ ಕನ್ನಡ, ಹಾಸನ, ರಾಮನಗರ, ತುಮಕೂರು ಈ ಹತ್ತು ಜಿಲ್ಲೆಗಳಲ್ಲಿ ಒಂದರಿಂದ ಹದಿನೈದು ವರ್ಷಗಳ ನಡುವಿನ ಎಲ್ಲಾ ಮಕ್ಕಳಿಗೆ ಜೆ ಇ ವಿರುದ್ಧದ ಲಸಿಕೆ ನೀಡುವ ಅಭಿಯಾನವನ್ನು ಸರ್ಕಾರ ಹಮ್ಮಿಕೊಂಡಿದೆ. ಎಲ್ಲಾ ಶಾಲೆಗಳು, ಅಂಗನವಾಡಿಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ. ಮಕ್ಕಳು ಶೀತ, ಕೆಮ್ಮು, ಜ್ವರಗಳಂಥ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಅವುಗಳಿಂದ ಗುಣಮುಖರಾದ ನಂತರ ಲಸಿಕೆ ನೀಡಲಾಗುವುದು. ಯಾವುದೇ ಮಗು ಲಸಿಕೆಯಿಂದ ವಂಚಿತವಾಗಿದ್ದರೆ, ಆರೋಗ್ಯ ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ಅಂಥ ಮಕ್ಕಳನ್ನು ಗುರುತಿಸಿ ಲಸಿಕೆ ನೀಡುತ್ತಾರೆ. ಇತರೆ ಲಸಿಕೆಗಳಂತೆ ಈ ಲಸಿಕೆಯಿಂದಲೂ ಕೆಲ ಮಕ್ಕಳಲ್ಲಿ ಜ್ವರ, ಮೈ ಕೈ ನೋವು ಮುಂತಾದ ಕೆಲವು ಚಿಕ್ಕ ಪುಟ್ಟ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳಬಹುದಾದ ಸಾಧ್ಯತೆಯಿರುತ್ತದೆ. ಗಂಭೀರ ಸ್ವರೂಪದ ಅಡ್ಡ ಪರಿಣಾಮಗಳು ಅತಿ ವಿರಳ.</p>



<p>&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;-&nbsp;&nbsp;</p>



<p></p>



<p></p>
]]></content:encoded>
					
		
		
			</item>
		<item>
		<title>ಇಂದಿನಿಂದ 48 ಲಕ್ಷ ಮಕ್ಕಳಿಗೆ ಜೆಇ ಲಸಿಕೆ: ಸಚಿವ ಡಾ.ಕೆ.ಸುಧಾಕರ್</title>
		<link>https://peepalmedia.com/je-vaccine-for-48-lakh-children-from-today-k-sudhakar/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 05 Dec 2022 05:23:16 +0000</pubDate>
				<category><![CDATA[ಆರೋಗ್ಯ]]></category>
		<category><![CDATA[ರಾಜ್ಯ]]></category>
		<category><![CDATA[bengalure]]></category>
		<category><![CDATA[dr .k. sudhakar]]></category>
		<category><![CDATA[india]]></category>
		<category><![CDATA[je Vaccination campaign]]></category>
		<category><![CDATA[JE vaccine]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[karnataka govt]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=17545</guid>

					<description><![CDATA[ಬೆಂಗಳೂರು: ಮಕ್ಕಳಲ್ಲಿ ನರ ದೌರ್ಬಲ್ಯ, ಬುದ್ಧಿ ಮಾಂದ್ಯತೆ ಸೇರಿದಂತೆ ಶಾಶ್ವತ ಅಂಗವಿಕಲತೆ ಉಂಟು ಮಾಡುವ ಜಪಾನಿನ ಎನ್ಸೆಫಾಲಿಟಿಸ್ (ಜೆಇ) ವಿರುದ್ಧ 1 ರಿಂದ 15 ವರ್ಷದೊಳಗಿನ ಅಂದಾಜು 48 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ವಿಶೇಷ ಲಸಿಕಾ ಅಭಿಯಾನವು ಸೋಮವಾರದಿಂದ ಮೂರು ವಾರಗಳ ಕಾಲ ರಾಜ್ಯದಲ್ಲಿ ನಡೆಯಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಈ ಅಭಿಯಾನದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಡಿಸೆಂಬರ್ ಮೊದಲ ವಾರದಲ್ಲಿ ಲಸಿಕೆಗಳನ್ನು ಪ್ರಾಥಮಿಕವಾಗಿ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಮೇಲೆ [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಮಕ್ಕಳಲ್ಲಿ ನರ ದೌರ್ಬಲ್ಯ, ಬುದ್ಧಿ ಮಾಂದ್ಯತೆ ಸೇರಿದಂತೆ ಶಾಶ್ವತ ಅಂಗವಿಕಲತೆ ಉಂಟು ಮಾಡುವ ಜಪಾನಿನ ಎನ್ಸೆಫಾಲಿಟಿಸ್ (ಜೆಇ) ವಿರುದ್ಧ 1 ರಿಂದ 15 ವರ್ಷದೊಳಗಿನ ಅಂದಾಜು 48 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ವಿಶೇಷ ಲಸಿಕಾ ಅಭಿಯಾನವು ಸೋಮವಾರದಿಂದ ಮೂರು ವಾರಗಳ ಕಾಲ ರಾಜ್ಯದಲ್ಲಿ ನಡೆಯಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.</p>



<p>ಈ ಅಭಿಯಾನದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಡಿಸೆಂಬರ್ ಮೊದಲ ವಾರದಲ್ಲಿ ಲಸಿಕೆಗಳನ್ನು ಪ್ರಾಥಮಿಕವಾಗಿ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಮೇಲೆ ಕೇಂದ್ರೀಕರಿಸಲಾಗುವುದು. ಇದನ್ನು ಅನುಸರಿಸಿ, ಮುಂದಿನ ಎರಡು ವಾರಗಳಲ್ಲಿ, ನಾವು ಆರೋಗ್ಯ ಸಂಸ್ಥೆಗಳು, ಅಂಗನವಾಡಿ ಕೇಂದ್ರಗಳು ಮತ್ತು ಸಮುದಾಯಗಳಲ್ಲಿ ವ್ಯಾಕ್ಸಿನೇಷನ್ ಡ್ರೈವ್‌ಗಳ ಮೇಲೆ ಗಮನ ಹರಿಸಲಿದ್ದೇವೆ. ಡ್ರೈವ್ ನಡೆಸಲು ಕೇಂದ್ರ ಆರೋಗ್ಯ ಸಚಿವಾಲಯವು ನಮಗೆ ಜೆನ್ವ್ಯಾಕ್ ಲಸಿಕೆಯನ್ನು ಪೂರೈಸಲಿದೆʼ ಎಂದರು.</p>



<p>ಪ್ರಪಂಚದಾದ್ಯಂತ 24 ರಾಷ್ಟ್ರಗಳಲ್ಲಿ ಜಪಾನೀಸ್‌ ಎನ್‌ಸೆಫಲೈಟಿಸ್‌ (ಜೆಇ) ಪಿಡುಗನ್ನು ಗುರುತಿಸಲಾಗಿದೆ. ಇದರಲ್ಲಿ ಭಾರತವು ಸೇರಿದಂತೆ ಏಷ್ಯಾದ 11 ರಾಷ್ಟ್ರಗಳು ಸಹ ಪಟ್ಟಿಯಲ್ಲಿವೆ. ಪ್ರತಿ ವರ್ಷ ಸರಾಸರಿ 68,000 ಪ್ರಕರಣಗಳು ವರದಿಯಾಗುತ್ತಿದ್ದು, ಮರಣ ಪ್ರಮಾಣ ಶೇ,20 ರಿಂದ ಶೇ,30 ರಷ್ಟಿದೆ. ಗುಣಮುಖರಾದ ಶೇ, 30 ರಿಂದ ಶೇ, 50 ರಷ್ಟು ಪ್ರಕರಣಗಳಲ್ಲಿ ನರದೌರ್ಬಲ್ಯ, ಬುದ್ಧಿ ಮಾಂದ್ಯತೆ ಸೇರಿದಂತೆ ಶಾಶ್ವತ ಆಂಗವಿಕಲತೆ ಉಂಟಾಗಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ.</p>



<p>ಜೆಇ ಮೆದುಳು ಜ್ವರದ ಮೊದಲ ಪ್ರಕರಣ 1955 ರಲ್ಲಿ ತಮಿಳುನಾಡಿನ ವೆಲ್ಲೂರ್ ನಲ್ಲಿ ವರದಿಯಾಗಿತ್ತು. ಕರ್ನಾಟಕದಲ್ಲಿ 1978 ರಲ್ಲಿ ಕೋಲಾರ ಜಿಲ್ಲೆಯಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಹೆಚ್ಚಿನ ಪ್ರಕರಣಗಳು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತಿದೆ. 2016 ರಲ್ಲಿ 11 ಪ್ರಕರಣಗಳು, 2017 ರಲ್ಲಿ 23 ಪ್ರಕರಣಗಳು, 2018 ರಲ್ಲಿ 35 ಪ್ರಕರಣಗಳು, 2019 ರಲ್ಲಿ 33 ಪ್ರಕರಣಗಳು, 2020 ರಲ್ಲಿ 19 ಪ್ರಕರಣಗಳು, 2021 ರಲ್ಲಿ 25 ಪ್ರಕರಣಗಳು, 2022 ರಲ್ಲಿ 21 ಪ್ರಕರಣಗಳು ಪತ್ತೆಯಾಗಿವೆ ಎಂದು ಸುಧಾಕರ್‌ ಮಾಹಿತಿ ನೀಡಿದ್ದಾರೆ.</p>



<p>ರೋಗ ಪತ್ತೆ ಮಾಡಲು ರಾಜ್ಯದಲ್ಲಿ ಸೆಂಟಿನಲ್ ಸರ್ವೆಲೆನ್ಸ್ ಲ್ಯಾಬೊರೇಟರಿ (ಎಸ್‍ಎಸ್‍ಎಲ್‍) ಗಳನ್ನು ಸಜ್ಜುಗೊಳಿಸಲಾಗಿದೆ. ನಿಮ್ಹಾನ್ಸ್ -ಸ್ಟೇಟ್ ಅಪೆಕ್ಸ್ ಲ್ಯಾಬೊರೇಟರಿ, ವಿಮ್ಸ್-ಬಳ್ಳಾರಿ, ಕಿಮ್ಸ್-ಹುಬ್ಬಳ್ಳಿ, ಡಿಪಿಎಚ್‍ಎಲ್-ಕೋಲಾರ, ಮಣಿಪಾಲ್ ಸೆಂಟರ್ ಫಾರ್ ವೈರಸ್ ರಿಸರ್ಚ್-ಉಡುಪಿ, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್‍ಐವಿ)-ಬೆಂಗಳೂರು ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಸುಧಾಕರ್‌ ತಿಳಿಸಿದ್ದಾರೆ.</p>



<p>ಈ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯಪುರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಧಾರವಾಡ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳನ್ನು 10 ಜೆಇ ಎಂಡೆಮಿಕ್ ಜಿಲ್ಲೆಗಳು ಎಂದು ಗುರುತಿಸಲಾಗಿದೆ. ಈ ಜಿಲ್ಲೆಗಳಲ್ಲಿ ಮಕ್ಕಳಿಗೆ 9 ತಿಂಗಳು ತುಂಬಿದ ನಂತರ ಮೊದಲನೇ ಡೋಸ್ ಮತ್ತು 1.5 ವರ್ಷದ ವಯಸ್ಸಿನಲ್ಲಿ 2ನೇ ಡೋಸ್ ಲಸಿಕೆ ನೀಡಲಾಗುತ್ತಿದೆ ಎಂದರು.</p>
]]></content:encoded>
					
		
		
			</item>
	</channel>
</rss>
