ಹೊಸಪೇಟೆ ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್ ಗೇಟ್ ಮುರಿದ ಪರಿಣಾಮ ದುರಸ್ತಿ ಹಿನ್ನೆಲೆಯಲ್ಲಿ ಎಲ್ಲಾ 33 ಗೇಟ್ ಗಳನ್ನು ತೆರೆಯಲಾಗಿದೆ. ಇದರಿಂದ ಸುಮಾರು 1 ಲಕ್ಷ ಕ್ಯುಸೆಕ್ನಷ್ಟು ನೀರು ನದಿ ಪಾಲಾಗಿದೆ.
ತುಂಗಭದ್ರಾ ಜಲಾಶಯದಲ್ಲಿ ನೀರು ಭರ್ತಿಯಾಗಿದ್ದು, 20 ಅಡಿ ನೀರಿನ ಮಟ್ಟ ಇಳಿಸಿದರೆ ಮಾತ್ರ ಗೇಟ್ ದುರಸ್ತಿ ಸಾಧ್ಯ ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ನೀರು ಹೊರಗೆ ಬಿಡುವ ಕಾರ್ಯ ಶುರುವಾಗಿದೆ. ಹೀಗಾಗಿ ಅಂದಾಜು 60 ಟಿಎಂಸಿ ಅಡಿಯಷ್ಟು ಹೊರಹಾಕಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಮಧ್ಯರಾತ್ರಿ 12ರ ಸುಮಾರಿಗೆ ಗೇಟ್ನ ಚೈನ್ ಲಿಂಕ್ ಮುರಿದು, ಕ್ರಸ್ಟ್ ಗೇಟ್ ನೀರಲ್ಲಿ ಕೊಚ್ಚಿ ಹೋಗಿರುವುದರಿಂದ ಈ ಬೆಳವಣಿಗೆ ನಡೆದಿದೆ. ಎಲ್ಲಾ ಗೇಟ್ ತೆರೆದಿರುವ ಹಿನ್ನೆಲೆಯಿಂದ ನದಿ ಪಾತ್ರದ ರೈತರ ಜಮೀನು ಮನೆಗಳ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.
ಕ್ರೆಸ್ಟ್ ಗೇಟ್ ಮುರಿದಿರುವ ಕಾರಣ ಡಿಸಿಎಂ ಡಿ ಕೆ ಶಿವಕುಮಾರ್ ಭಾನುವಾರ ಮಧ್ಯಾಹ್ನ 12.30 ಕ್ಕೆ ಭೇಟಿ ನೀಡಲಿದ್ದಾರೆ. ಬೆಂಗಳೂರಿಂದ ಹೆಲಿಕಾಪ್ಟಾರ್ ನಲ್ಲಿ ವಿಜಯನಗರದ ಹೊಸಪೇಟೆಗೆ ತೆರಳಲಿರುವ ಡಿಸಿಎಂ ರಸ್ತೆ ಮಾರ್ಗದ ಮೂಲಕ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ.