Sunday, June 16, 2024

ಸತ್ಯ | ನ್ಯಾಯ |ಧರ್ಮ

ಬೊಗಸೆಗೆ ದಕ್ಕಿದ್ದು – 23 : 1924ರ “ಸರ್ಫರೋಶಿ ಕೀ ತಮನ್ನಾ”ಮತ್ತು 2024ರ ಚುನಾವಣೆ

ನಾವು ಈ 2024ರಲ್ಲಿ ಭಾರತದ ಇತಿಹಾಸಕ್ಕೇ ತಿರುವು ನೀಡಬಲ್ಲ ಮಹಾಚುನಾವಣೆಯನ್ನು ಎದುರಿಸುತ್ತಿರುವಾಗ, ಸರಿಯಾಗಿ ನೂರು ವರ್ಷಗಳ ಹಿಂದೆ 1924ರಲ್ಲಿ ಮೊದಲ ಬಾರಿಗೆ ಬ್ರಿಟಿಷರ ವಿರುದ್ಧ ಸಾಮಾನ್ಯ ಭಾರತೀಯರನ್ನು ಒಳಗೊಂಡ ಆಧುನಿಕ ಕಾಲದ ಕ್ರಾಂತಿಯ ಕಹಳೆ ಮೊಳಗಿತ್ತು ಎಂಬುದೊಂದು ವಿಶೇಷ. 1857ರಲ್ಲಿ ನಡೆದ “ಪ್ರಥಮ” ಸ್ವಾತಂತ್ರ್ಯ ಸಂಗ್ರಾಮ ಅಥವಾ ಸಿಪಾಯಿ ದಂಗೆಯು ಮೂಲತಃ ಬ್ರಿಟಿಷ್ ಸೇನೆಯಲ್ಲಿ ಚಾಕರಿ ಮಾಡುತ್ತಿದ್ದು, ಅಸಮಾಧಾನಗೊಂಡ ಭಾರತೀಯ ಸೈನಿಕರು, ಬ್ರಿಟಿಷರಿಂದ ಅವಮಾನಕ್ಕೀಡಾದ ಚಿಕ್ಕ ಸಂಸ್ಥಾನಗಳ ಅರಸರು, ಪಾಳೆಯಗಾರರು ಮತ್ತು ಜಮೀನ್ದಾರರು ನಡೆಸಿದ ಹೋರಾಟವಾಗಿತ್ತೇ ಹೊರತು, ಅದಕ್ಕೆ ಪ್ರಜಾಪ್ರಭುತ್ವದ ವಾಸನೆಯೇ ಇರಲಿಲ್ಲ. ಆದರೆ, ಇದರಿಂದ ಭಾರತವು ಈಸ್ಟ್ ಇಂಡಿಯಾ ಕಂಪನಿಯ ದಮನಕಾರಿ ಆಡಳಿತದದಿಂದ ಬ್ರಿಟಿಷ್ ರಾಣಿಯ ಸ್ವಲ್ಪ ಮಟ್ಟಿನ ತೋರಿಕೆಗಾದರೂ ಕಾನೂನಿನ ಆಡಳಿತ ಇದ್ದ ರಾಣಿಸತ್ತೆಯ ತೆಕ್ಕೆಗೆ ಬಂತೆಂಬುದು ನಿಜ. ಆದರೆ, ಇದಕ್ಕೆ ಮೊದಲೇ ಟಿಪ್ಪು ಸುಲ್ತಾನನ ಹೋರಾಟ, ಬಿಲ್, ಸಂತಾಲ್, ಗೊಂಡ್ ಮುಂತಾದ ಬುಡಕಟ್ಟು ಜನರ ದಂಗೆಗಳು ನಡೆದಿದ್ದವು. ನಮ್ಮ ದಕ್ಷಿಣ ಕನ್ನಡದಲ್ಲೇ ಕಲ್ಯಾಣಪ್ಪನ ನೇತೃತ್ವದಲ್ಲಿ ಅಮರ ಸುಳ್ಯ ದಂಗೆ ನಡೆದಿತ್ತು. ಇವೂ ಕೂಡಾ ಪ್ರಜಾಪ್ರಭುತ್ವಕ್ಕಾಗಿ ನಡೆದವುಗಳಲ್ಲ. ಆದುದರಿಂದಲೇ 1924ರ ಕ್ರಾಂತಿಯ ಆರಂಭ ಮಹತ್ವ ಪಡೆದಿದೆ.

ಅಂದಿನ ಹೋರಾಟವು ದಮನಕಾರಿ ರಾಣಿಸತ್ತೆಯ ವಿರುದ್ಧ ನಡೆದಿದ್ದರೆ, 2024ರ ಚುನಾವಣೆ ಎಂಬ ಪ್ರಜಾಪ್ರಭುತ್ವವಾದಿ ಹೋರಾಟವು, ಸಂವಿಧಾನವನ್ನೇ ಬದಲಿಸಿ, ಮತ್ತೆ “ಮೇಲ್ಜಾತಿ”ಗಳು ದಣಿಗಳಾಗಿರುವ, ಪ್ರಜಾಪ್ರಭುತ್ವದ ಸೋಗಿನ ಸರ್ವಾಧಿಕಾರಿ ಖ್ವಾಸಿ ರಾಜಸತ್ತೆಗೆ ಮರಳಿ ಕೊಂಡೊಯ್ಯುವ ಬಲಪಂಥೀಯ ಕೋಮುವಾದಿಗಳ ಪ್ರಯತ್ನದ ವಿರುದ್ಧ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ, ನಾವು ನಮ್ಮ ಹಿರಿಯರು ಮಹಾನ್ ತ್ಯಾಗಗಳನ್ನು ಮಾಡಿ ದೊರಕಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕೆಂದರೆ, ಹಿಂದಿನ ಹೋರಾಟಗಳಿಂದ ಸ್ವಲ್ಪವಾದರೂ ಸ್ಫೂರ್ತಿ ಪಡೆಯಬೇಕು. ಇಲ್ಲಿ ಹೇಳಿದುದರಲ್ಲಿ ನನ್ನದು ಏನೂ ಇಲ್ಲ. ಇತಿಹಾಸದ ದಾಖಲೆಗಳಲ್ಲಿ ಹೇಳಿರುವುದನ್ನೇ ಇಲ್ಲಿ ಸಂಗ್ರಹಿಸಿ ನೀಡಲಾಗಿದೆ ಅಷ್ಟೇ. (ಅವುಗಳನ್ನು ಬರೆದು ದಾಖಲಿಸಿದವರಿಗೆ ಧನ್ಯವಾದ ಹೇಳಬೇಕು.)

1924ರಲ್ಲಿ ಇಂತದ್ದೇ, ಅಥವಾ ಹೆಚ್ಚು ಆತಂಕಕಾರಿ ಸನ್ನಿವೇಶದಲ್ಲಿ ಪೂರ್ವ ಬಂಗಾಳದ ಹಳ್ಳಿಯೊಂದರಲ್ಲಿ ಹಿಂದೂಸ್ತಾನ್ ರಿಪಬ್ಲಿಕನ್ ಎಸೋಸಿಯೇಷನ್ ಅಥವಾ ಆರ್ಮಿ(ಎಚ್‌ಆರ್‌ಎ)ಯ ಸ್ಥಾಪನೆಯಾಯಿತು. ಅದರ ಗುರಿಯೆಂದರೆ, ಬ್ರಿಟಿಷ್ ಆಡಳಿತಕ್ಕೆ ಸಶಸ್ತ್ರ ಪ್ರತಿರೋಧ ಒಡ್ಡುವುದು. ಅದರ ಸ್ಥಾಪಕ ಸದಸ್ಯರಲ್ಲಿ ಒಬ್ಬರೆಂದರೆ, “ಸರ್ಫರೋಶಿ ಕೀ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ/ ದೇಖ್ ನಾ ಹೈ ಜೋರ್ ಕಿತ್‌ನಾ ಬಾಜು-ಎ-ಖಾತಿಲ್‌ ಮೇ ಹೈ” (ಕ್ರಾಂತಿಯ ಹಂಬಲ ಈಗ ನಮ್ಮ ಎದೆಯಲ್ಲಿದೆ/ ಹಂತಕನ ತೋಳುಗಳಲ್ಲಿ ಬಲವೆಷ್ಟಿದೆ ನೋಡಲಿದೆ) ಎಂಬ ಪ್ರಸಿದ್ಧ ಕ್ರಾಂತಿಕಾರಿ ಗೀತೆ ಬರೆದ ರಾಮಪ್ರಸಾದ್ ಬಿಸ್ಮಿಲ್. ಇನ್ನೊಬ್ಬ ಸ್ಥಾಪಕ ಸದಸ್ಯ ಎಂದರೆ, ಸಚೀಂದ್ರನಾಥ್ ಸನ್ಯಾಲ್. ಅವರ ಪ್ರಭಾವದಿಂದಲೇ ಮುಂದೆ 1924ರಲ್ಲಿ ಲಾಹೋರ್ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಕ್ರಾಂತಿಕಾರಿ ಭಗತ್ ಸಿಂಗ್, ಅವರ ಶಿಷ್ಯನಾದದ್ದು. ಸನ್ಯಾಲ್ ಅವರು ಆಗಲೇ, ಮುಂದೆ ಕ್ರಾಂತಿಕಾರಿಗಳ ಮಾರ್ಗದರ್ಶಕ ಗ್ರಂಥವಾಗಿಯೇ ಹೋದ “ಬಂಡಿ ಜೀವನಿ” (ಬಂಡಾಯ ಜೀವನ)ಯನ್ನು ಬರೆದಿದ್ದರು. ಎಚ್‌ಆರ್‌ಎಯ ಸ್ಪಷ್ಟ ಉದ್ದೇಶವು ಸಾರ್ವತ್ರಿಕ ವಯಸ್ಕ ಚುನಾವಣೆಯ ಮೂಲಕ ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ ಎಂಬ ಒಕ್ಕೂಟ ಗಣರಾಜ್ಯದ ಸ್ಥಾಪನೆಯಾಗಿದ್ದು, ಇದು ಕಾರ್ಯರೂಪಕ್ಕೆ ಬಂದಿದ್ದರೆ, ಮುಂದೆ 1947ರಲ್ಲಿ ಭಾರತದ ವಿಭಜನೆಯು ತಪ್ಪುತ್ತಿತ್ತು ಎನ್ನಲಾಗುತ್ತದೆ.

ಸಶಸ್ತ್ರ ಹೋರಾಟವನ್ನು ಹಣವಿಲ್ಲದೇ ನಡೆಸಲು ಸಾಧ್ಯವಿರಲಿಲ್ಲ. ಜನರನ್ನು ನೇಮಕಾತಿ ಮಾಡಿ ಅವರಿಗೆ ತರಬೇತಿ ನೀಡುವುರು, ಶಸ್ತ್ರಾಸ್ತ್ರಗಳ ಖರೀದಿ, ರಾಷ್ಟ್ರೀಯ ಮಟ್ಟದಲ್ಲಿ ಒಂದು ಬಲವಾದ ಪ್ರಚಾರಾಭಿಯಾನದ ಸಂಘಟನೆ ಇತ್ಯಾದಿಗಳಿಗೆಲ್ಲ ಹಣಕಾಸು ಒದಗಿಸಬೇಕಾಗಿತ್ತು.

ಉತ್ತರ ಭಾರತದ ಕ್ರಾಂತಿಕಾರಿಗಳು ಸಂಘಟಿತರಾಗಿ ಮೂಡಿಬಂದವರಲ್ಲಿ ಮೊದಲಿಗರಾಗಿದ್ದು, ರಾಮಪ್ರಸಾದ್ ಬಿಸ್ಮಿಲ್, ಸಚೀಂದ್ರನಾಥ ಸನ್ಯಾಲ್, ಸಚೀಂದ್ರನಾಥ ಭಕ್ಷಿ, ಮತ್ತು ಜಗದೀಶ್ ಚಂದ್ರ ಚಟರ್ಜಿ 1924ರಲ್ಲಿ ಹಿಂದೂಸ್ತಾನ್ ರಿಪಬ್ಲಿಕನ್ ಎಸೋಸಿಯೇಷನ್ ಅಥವಾ ಆರ್ಮಿ (ಎಚ್‌ಆರ್‌ಎ)ಯನ್ನು ಸ್ಥಾಪಿಸಿದರು. 1924ರ ಅಕ್ಟೋಬರ್ ತಿಂಗಳಲ್ಲಿ ಕಾನ್ಪುರದಲ್ಲಿ ಭೇಟಿಯಾದ ಅವರು, ವಸಾಹತುಶಾಹಿ ಆಡಳಿತವನ್ನು ಕಿತ್ತೆಸೆದು ಒಂದು ಪ್ರಜಾಸತ್ತಾತ್ಮಕ ಒಕ್ಕೂಟ ಭಾರತವನ್ನು ಸ್ಥಾಪಿಸುವ ಪ್ರತಿಜ್ಞೆ ಮಾಡಿದರು.

1925ರ ಆಗಸ್ಟ್ 9ರಂದು ಹತ್ತು ಜನರು ಲಕ್ನೋ ಸಮೀಪದ ಕಾಕೋರಿ ಎಂಬ ಒಂದು ಅಜ್ಞಾತ ಹಳ್ಳಿಯ ಬಳಿ ನಂಬರ್ 8 ಡೌನ್ ರೈಲನ್ನು ನಿಲ್ಲಿಸಿ ರೈಲ್ವೇಯ ಅಧಿಕೃತ ಖಜಾನೆಯನ್ನು ದೋಚಿದರು. ಆದರೆ, ಅವರೆಲ್ಲರನ್ನು ಬೇಗನೇ ಬಂಧಿಸಲಾಯಿತು. ಸರಕಾರದ ಪ್ರತೀಕಾರ ತ್ವರಿತ ಮತ್ತು ಕಟುವಾಗಿತ್ತು. ಅಶ್ಫಾಕುಲ್ಲಾ ಖಾನ್, ರಾಮಪ್ರಸಾದ್ ಬಿಸ್ಮಿಲ್, ರೋಷನ್ ಸಿಂಗ್ ಮತ್ತು ರಾಜೇಂದ್ರ ಲಾಹಿರಿ ಸೇರಿದಂತೆ ಐವರನ್ನು ಗಲ್ಲಿಗೇರಿಸಲಾಯಿತು. ನಾಲ್ವರನ್ನು ಅಂಡಮಾನಿನಲ್ಲಿ ಕ್ರೂರ ಜೈಲಿನಲ್ಲಿ ಜೀವನಪರ್ಯಂತ ಶಿಕ್ಷೆ ಅನುಭವಿಸಲು ಕಳುಹಿಸಲಾಯಿತು. ಅವರಲ್ಲಿ ಒಬ್ಬರಾದ ಮಹಾವೀರ್ ಸಿಂಗ್ ನಂತರ ಜೀವಂತವಾಗಿ ಹೊರಬಂದರು. ಉಳಿದ ಹದಿನೇಳು ಮಂದಿಗೆ ದೀರ್ಘಕಾಲದ ಜೈಲುವಾಸ ಕಾದಿತ್ತು. ಅವರಲ್ಲಿ ಒಬ್ಬರಾದ ಚಂದ್ರಶೇಖರ ಅಜಾದ್ ಅಚ್ಚರಿಕಾರಕ ರೀತಿಯಲ್ಲಿ ತಪ್ಪಿಸಿಕೊಂಡರು.

ಕಾರ್ಯವ್ಯೂಹಾತ್ಮಕ ಚಾತುರ್ಯ ಇದ್ದ ಭಗತ್ ಸಿಂಗ್ ಕ್ರಾಂತಿಕಾರಿ ಚಳವಳಿಯನ್ನು ಮತ್ತೆ ಸಕ್ರಿಯಗೊಳಿಸುವ ಅವಕಾಶವನ್ನು ಕಂಡರು. ಹಾಗಾಗಿ 1926ರಲ್ಲಿ ನವ್‌ಜವಾನ್ ಭಾರತ್ ಸಭಾ ಪ್ರಸಿದ್ಧಿಗೆ ಬಂತು. ಅದು ಯುವಜನರನ್ನು ಸಮಾಜವಾದಿ, ಧರ್ಮಾತೀತ ವೇದಿಕೆಯಡಿ- ಕೋಮುವಾದಿ ರಾಜಕೀಯದ ವಿರುದ್ಧ ಒಟ್ಟಿಗೆ‌ ತರುವ ಉದ್ದೇಶ‌ ಹೊಂದಿತ್ತು. ಭಗತ್ ಸಿಂಗ್ ಇಂತಾ ತೀವ್ರ ಕ್ರಮ ಕೈಗೊಳ್ಳಲೇಬೇಕಾಗಿತ್ತು. 1925ರ ಕಾಕೋರಿ ಸಂಚು ಪ್ರಕರಣದ ಯೋಜಕರ ಸೋಲು ಭಾರತದಲ್ಲಿ ಕ್ರಾಂತಿಕಾರಿ ಹೋರಾಟದ ನಾಯಕತ್ವವನ್ನೇ ನಿರ್ಮೂಲನ ಮಾಡಿತ್ತು. ರಾಮಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಕುಲ್ಲಾ ಖಾನ್ ಆಗಿನ ಅಲ್ಪಕಾಲದ ಚಳವಳಿಯ ಉಜ್ವಲ ನಾಯಕರಾಗಿದ್ದವರು ಇನ್ನಿಲ್ಲವಾಗಿದ್ದರು. ಒಂದೇ ಏಟಿನಲ್ಲಿ ಭಾರತೀಯ ಕ್ರಾಂತಿಕಾರಿ ಚಳವಳಿಯ ನಾಯಕತ್ವವನ್ನು ತೊಡೆದುಹಾಕಲಾಗಿತ್ತು ಮತ್ತು ಹೊಸ ಪೀಳಿಗೆಯ ಕ್ರಾಂತಿಕಾರಿ ನಾಯಕರ ಅಗತ್ಯವಿತ್ತು. ಎಚ್‌ಆರ್‌ಎಯ ಬೂದಿಯಿಂದ ಕ್ರಾಂತಿಕಾರಿ ಚಳವಳಿಗೆ ಮರುಹುಟ್ಟು ನೀಡಿ ಅದನ್ನು ಮುನ್ನಡೆಸುವ ನಾಯಕರ ಅಗತ್ಯವಿತ್ತು.

ಆರ್ಯಸಮಾಜವಾದಿ ಮತ್ತು ಗದ್ದರ್‌ವಾದಿ ಪ್ರಬಲ ಕ್ರಾಂತಿಕಾರಿ ಹಿನ್ನೆಲೆ ಮತ್ತು ಪರಂಪರೆಯ ಕುಟುಂಬದಿಂದ ಬಂದ ಭಗತ್ ಸಿಂಗ್ ಅವರಿಗೆ ಈ ಗುಣಗಳ ಬಳುವಳಿಯಿತ್ತು. 1919ರಲ್ಲಿ ಹನ್ನೆರಡು ವರ್ಷಗಳ ಹುಡುಗನಾಗಿದ್ದಾಗಲೇ ಅವರು ಅಮೃತಸರದ ಜಲಿಯನ್‌ವಾಲಾ ಬಾಗ್‌ನಲ್ಲಿ ಜನರಲ್ ಡಾಯರ್ ನೂರಾರು ಅಮಾಯಕ ಜನರನ್ನು ಕೊಲ್ಲಿಸಿದ ಹತ್ಯಾಕಾಂಡದಿಂದ ರೋಸಿಹೋಗಿದ್ದರು. ಅನೇಕ ಇತರರಂತೆಯೇ ಅವರು ಗಾಂಧಿಯವರ ಅಸಹಕಾರ ಚಳವಳಿಯ ಜೊತೆ ಸೇರಿದ್ದರು. ಆದರೆ ಗಾಂಧಿಯವರು ಬೇಗನೇ ಈ ಚಳವಳಿಯನ್ನು ಹಿಂತೆಗೆದುಕೊಂಡಿದ್ದರು. ಉಳಿದ ಅನೇಕರಂತೆ ಭಗತ್ ಸಿಂಗ್ ಕೂಡಾ ಅವರ ವಿಷಯದಲ್ಲಿ ಭ್ರಮನಿರಸನಗೊಂಡಿದ್ದರು. 1926ರಲ್ಲಿ ಅವರು ಸ್ಥಾಪಿಸಿದ ನವ್‌ಜವಾನ್ ಭಾರತ್ ಸಭಾ ಮುಂದೆ 1928ರಲ್ಲಿ ಹಿಂದೂಸ್ತಾನ್ ರಿಪಬ್ಲಿಕನ್ ಎಸೋಸಿಯೇಷನ ಅಸ್ಥಿಯಿಂದ ಅಸ್ತಿತ್ವಕ್ಕೆ ಬಂದ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಎಸೋಸಿಯೇಷನ್‌ಗೆ ಒಂದು ಅಸ್ಪಷ್ಟ ಮುನ್ನುಡಿಯಂತಿತ್ತು. ಹಿಂದೂಸ್ತಾನ್ ರಿಪಬ್ಲಿಕನ್ ಎಸೋಸಿಯೇಷನ್‌ನ ಕ್ಷಣಿಕ ಇತಿಹಾಸವು ನಿಧಿ ಸಂಗ್ರಹ ಮತ್ತು ಕಾಕೋರಿ ಘಟನೆಯನ್ನು ಮೀರಿ ಬೆಳೆಯಲು ಸಾಧ್ಯವಾಗಿರಲಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ನವ್‌ಜವಾನ್ ಭಾರತ್ ಸಭಾದ ಚಳವಳಿಯು ಜಾತಿ, ಧರ್ಮಗಳನ್ನು ಮೀರಿ ಒಂದು ರೀತಿಯ ಅತಿಕ್ರಮಣಕಾರಿ‌ ಸಾಮಾಜಿಕತೆಯನ್ನು ಉತ್ತೇಜಿಸುವ ವ್ಯಕ್ತಿಗಳನ್ನು ಜೊತೆಗೆ ತರಲು ಯಶಸ್ವಿಯಾಗಿತ್ತು.

ಆದುದರಿಂದ 1925ರ ಕಾಕೋರಿ ಸಂಚು ಪ್ರಕರಣವು ಸ್ವಾತಂತ್ರ್ಯ ಚಳವಳಿಗೆ ಒಂದು ನಿರ್ಣಾಯಕ ಕ್ಷಣವಾಗಿತ್ತು. ಇದು ಬಹಳಷ್ಟು ಕಡೆಗಣಿಸಲಾದ ಘಟನೆಯಾಗಿದ್ದರೂ, ಅದಕ್ಕೆ ಅತ್ಯಂತ ಐತಿಹಾಸಿಕ ಮಹತ್ವವಿದೆ. ಏಕೆಂದರೆ, ಅದರ ಕಾರಣದಿಂದ ಎಚ್‌ಆರ್‌ಎಯ ಎಳೆಯ ನಾಯಕರು ಮೃತರಾಗಿದ್ದುದರಿಂದ ಭಗತ್ ಸಿಂಗ್, ಸ್ವಾತಂತ್ರ್ಯ ಹೋರಾಟದ ಉರಿಯುತ್ತಿರುವ ಕುಲುಮೆಗೆ ಧುಮುಕಿದರು.

ಈ ಸಂಘರ್ಷವು ಗಾಂಧಿಯವರ ಸಂಘರ್ಷಕ್ಕಿಂತ ಬೇರೆಯಾಗಿತ್ತು. ಅದು ಕೋಮುವಾದವನ್ನು ಎದುರಿಸಿ ನಿಂತಿತ್ತು. ಜನಾಂಗ, ವರ್ಗ, ಜಾತಿಗಳ ಹಂಗಿಲ್ಲದೆ ಒಂದು ಬಲವಾದ ರಾಷ್ಟ್ರೀಯ ಏಕತೆಯನ್ನು ರೂಪಿಸುವುದಕ್ಕಿಂತಲೂ ತುರ್ತಾದ ಕೆಲಸ ಬೇರೊಂದಿರಲಿಲ್ಲ. ವಸಾಹತುವಾದವು ಒಬ್ಬರನ್ನು ಒಬ್ಬರ ವಿರುದ್ಧ ಎತ್ತಿಕಟ್ಟುವುದರ ಮೂಲಕ ಭಾರತದಂತ ವೈವಿಧ್ಯಮಯ ದೇಶದ ಏಕತೆಗೆ ಅಪಾಯವಾಗಿತ್ತು. ಭಾರತವು ಸ್ವಾತಂತ್ರ್ಯದ ಕಡೆಗೆ ಯಶಸ್ವಿಯಾಗಿ ಮುನ್ನಡೆಯಬೇಕಾದರೆ, ಇದು ಈಗಿನ ಮೊದಲ ಆದ್ಯತೆಯಾಗಿತ್ತು. ಬ್ರಿಟಿಷರು ಆಗ ಮಾಡಿದುದನ್ನೇ ಈಗಿನ ಪ್ರಭುಗಳು ಈಗ ಮಾಡುತ್ತಿದ್ದಾರೆ ಎಂಬುದನ್ನು ನಾವು ನೆನಪಿಡಬೇಕು. ಆಗಿನ ಕ್ರಾಂತಿಕಾರಿಗಳು ಅಗತ್ಯವೆಂದು ಕಂಡುಕೊಂಡ ಜಾತ್ಯತೀತ ಏಕತೆಯೇ ಇಂದಿನ ಅಗತ್ಯ ಕೂಡಾ.

1927ರಲ್ಲಿ ತನ್ನನ್ನು ಗಲ್ಲಿಗೇರಿಸುವುದಕ್ಕೆ ಕೇವಲ ಮೂರು ದಿನಗಳಿಗೆ ಮೊದಲು ಅಶ್ಫಾಕುಲ್ಲಾ ಖಾನ್ ಭಾರತದಲ್ಲಿ ಕೋಮುವಾದದ ಬೆಳವಣಿಗೆಯ ಕುರಿತು ಎಚ್ಚರಿಸುತ್ತಾ, ತನ್ನ ದೇಶವಾಸಿಗಳನ್ನುದ್ದೇಶಿಸಿ ಬರೆದ ಬಹಿರಂಗ ಪತ್ರಕ್ಕಿಂತ ಚೆನ್ನಾಗಿ ಬೇರೇನೂ ಇದನ್ನು ತೋರಿಸಿಕೊಡಲಾರದು. ಅವರು ತಬ್ಲೀಗ್ ಮತ್ತು ಶುದ್ಧಿ ಚಳವಳಿಗಳನ್ನು ಖಂಡಿಸಿದರು. “ಹಿಂದೂಗಳು ಮತ್ತು ಮುಸ್ಲಿಮರು ಜೊತೆಯಾಗಿ ಬದುಕಲು ಕಲಿಯಬೇಕು; ಇಲ್ಲದಿದ್ದರೆ, ಚಾಕರಿಯ ಗುಲಾಮಗಿರಿಯ ಸಂಕೋಲೆಯಿಂದ ಕಳಚಿಕೊಳ್ಳಲು ಅವರು ವಿಫಲವಾಗುವರು. ಅವರು ಇದರಲ್ಲಿ ವಿಫಲರಾದರೆ, ಪರಿಣಾಮವು ಋಣಾತ್ಮಕವಾಗಿ ಕಟುವಾಗಿರುವುದು: ಏಳು ಕೋಟಿ ಮುಸ್ಲಿಮರನ್ನು ಶುದ್ಧೀಕರಿಸುವುದು ಅಸಾಧ್ಯ‌. ಅದೇ ರೀತಿಯಲ್ಲಿ ಇದು ಸ್ವಾತಂತ್ರ್ಯಕ್ಕಾಗಿನ ಹೋರಾಟದ ಮೇಲೆ ಪರಿಣಾಮ ಬೀರುವುದು. ಇಪ್ಪತ್ತೈದು ಕೋಟಿ ಹಿಂದೂಗಳನ್ನು ಇಸ್ಲಾಮಿಗೆ ಮತಾಂತರ ಮಾಡಬಹುದು ಎಂದು ಯೋಚಿಸುವುದೇ ಅಸಂಬದ್ಧ. ಆದರೆ, ಹೌದು. ನಾವೆಲ್ಲರೂ ಗುಲಾಮಗಿರಿಯ ಸಂಕೋಲೆಯನ್ನು ನಮ್ಮ ಕೊರಳ ಸುತ್ತ ಹಾಕಿಕೊಳ್ಳುವುದು ಸುಲಭ” ಎಂಬುದವರ ಸುಸ್ಪಷ್ಟ ಮಾತುಗಳಾಗಿದ್ದವು.

ಇದೇ ಮಾತುಗಳನ್ನು ಮಹಾವೀರ್ ಸಿಂಗ್ ಅವರು ಕೂಡಾ ಅಂಡಮಾನಿನ ಜೈಲಿನಲ್ಲಿ ಜೀವನ ಪರ್ಯಂತದ ಸಜೆಯನ್ನು ಎದುರು ನೋಡುತ್ತಿದ್ದಾಗ ತನ್ನ ತಂದೆಯವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ:

“ಸಮಾಜ ಎಂದರೆ ಆರ್ಯ ಸಮಾಜ ಅಥವಾ ಇನ್ಯಾವುದೇ ಸಂಕುಚಿತ ಸಮಾಜವೆಂದು ನನ್ನ ಅರ್ಥವಲ್ಲ. ಸಮಾಜ ಎಂದರೆ, ಸಾಮಾನ್ಯ ಜನರ ಸಮಾಜ. ಯಾಕೆಂದರೆ, ಈ ಧಾರ್ಮಿಕ ಸಮಾಜಗಳು, ತಮ್ಮ ಸಮೀಪದೃಷ್ಟಿಯ ಕಾರಣದಿಂದಾಗಿ ನನಗೆ ಅರ್ಥಹೀನ. ಮೇಲಾಗಿ, ನಾನು ಎಲ್ಲಾ ಧರ್ಮಗಳಿಂದ ದೂರ ಉಳಿಯಲು ಬಯಸುತ್ತೇನೆ; ಏಕೆಂದರೆ, ಅವು ಸಂಕುಚಿತ, ಸ್ವಯಂಕೇಂದ್ರಿಯವಾಗಿವೆ ಮತ್ತು ಅನ್ಯಾಯವನ್ನು ಆಧರಿಸಿವೆ ಹಾಗೂ ತಮ್ಮ ಹಾಗೆಯೇ ಇತರರೂ ಮಾಡಬೇಕೆಂದು ಬಯಸುತ್ತವೆ. ಮಾನವ ಮತ್ತು ಸಮಾಜಕ್ಕೆ ಆತ್ಯಂತ ಹೆಚ್ಚು ಅನುಕೂಲ ತಂದುಕೊಡುವ ತತ್ವವೆಂದು ನಾನು ನಂಬಿರುವುದೆಂದರೆ: ಮಾನವ ಸಂಬಂಧಗಳು- ಯಾವುದೇ ಜಾತಿ, ಧರ್ಮ, ಬಣ್ಣ ಮತ್ತು ಹಣದ ತಾರತಮ್ಯದ ಮೇಲೆ ಆಧರಿಸಿರಬಾರದು.”

ಭಾರತವು ಸ್ವಾತಂತ್ರ್ಯವನ್ನು ಪಡೆಯುವುದರ ಮೂಲಕ, ಒಂದು ಸ್ವರೂಪದ ದಮನಕಾರಿ ಆಡಳಿತದ ಬದಲು ಇನ್ನೊಂದು ಸ್ವರೂಪದ ದಮನಕಾರಿ ಆಡಳಿತವನ್ನು ತರಬಾರದು ಎಂದು ಅಶ್ಫಾಕುಲ್ಲಾ ಖಾನ್ ಸಾಕಷ್ಟು ಸ್ಪಷ್ಟಪಡಿಸಿದ್ದಾರೆ. ಇದೇ ಅಪಾಯ ಇಂದಿನ ಸಂದರ್ಭದಲ್ಲಿ ನಮಗೆ ಎದುರಾಗಿರುವುದು.

“ಪರಕೀಯರ ಆಡಳಿತವು ದುಷ್ಟತನ ಎಂದು ನಾನು ಪರಿಗಣಿಸುತ್ತೇನೆ. ಅದೇ ಹೊತ್ತಿಗೆ ದುರ್ಬಲರಿಗೆ ಹಕ್ಕುಗಳನ್ನು ನಿರಾಕರಿಸಲಾಗುವ ಯಾವುದೇ ಪ್ರಜಾಸತ್ತಾತ್ಮಕ ಭಾರತೀಯ ಆಡಳಿತವನ್ನು ನಾನು ದ್ವೇಷಿಸುತ್ತೇನೆ: ಅದು ಶ್ರೀಮಂತರು ಮತ್ತು ಜಮೀನುದಾರರ ರಚನೆಯಾಗಿದ್ದರೆ ಅಥವಾ ಅದರಲ್ಲಿ ರೈತರು ಮತ್ತು ಕಾರ್ಮಿಕರ ಭಾಗವಹಿಸುವಿಕೆ ಇಲ್ಲದಿದ್ದರೆ ಅಥವಾ ಸರಕಾರಿ ಕಾನೂನುಗಳು ಅಸಮಾನತೆ ಮತ್ತು ಅಸಮಾನ ವ್ಯವಹಾರದ ಮೇಲೆ ಆಧರಿಸಿದ್ದರೆ…” ಇದುವೇ ಇಂದಿನ ಸಂದರ್ಭದಲ್ಲಿ ನಮ್ಮ ಮಾತೂ ಆಗಬೇಕು ಅಲ್ಲವೇ?!

(ಕ್ರಾಂತಿಕಾರಿಗಳು 1925ರ ಸುತ್ತಮುತ್ತ ಕೋಮುವಾದ ವಿರೋಧಿ ಸಂಘಟನೆಯನ್ನು ರೂಪಿಸಿಕೊಳ್ಳುತ್ತಿರುವಾಗಲೇ ಹಿಂದೂ ಕೋಮುವಾದಿಗಳು ಆರೆಸ್ಸೆಸ್ಸನ್ನು ಸ್ಥಾಪಿಸಿದರು. ಈ ಕುರಿತು ಇನ್ನಷ್ಟು ಮುಂದಿನ ಅಂಕಣದಲ್ಲಿ)

Related Articles

ಇತ್ತೀಚಿನ ಸುದ್ದಿಗಳು