Friday, June 20, 2025

ಸತ್ಯ | ನ್ಯಾಯ |ಧರ್ಮ

ಚರ್ಮ ರೋಗದಿಂದಾಗಿ ಕರ್ನಾಟಕದಲ್ಲಿ 2000 ಜಾನುವಾರುಗಳು ಸಾವು: ರಾಜ್ಯ ಸರ್ಕಾರ ವರದಿ

ಬೆಂಗಳೂರು: ಕರ್ನಾಟಕದಲ್ಲಿ 2,070 ಜಾನುವಾರುಗಳು ಲಂಪಿ ವೈರಸ್‌ನಿಂದ (ಎಲ್‌ಎಸ್‌ಡಿ) ಸಾವನ್ನಪ್ಪಿದ್ದು, ಸುಮಾರು 19,000 ಜಾನುವಾರುಗಳು ಚರ್ಮರೋಗದಿಂದ ಬಳಲುತ್ತಿವೆ ಎಂದು ರಾಜ್ಯ ಸರ್ಕಾರ ಶುಕ್ರವಾರ ತಿಳಿಸಿದೆ.

ಈ ವೈರಲ್ ಕಾಯಿಲೆಯಿಂದ ಬಳಲುತ್ತಿರುವ ಜಾನುವಾರುಗಳ ಚಿಕಿತ್ಸೆ ಮತ್ತು ಲಸಿಕೆಗಾಗಿ ₹ 13 ಕೋಟಿ ಬಿಡುಗಡೆ ಮಾಡಲು ಮತ್ತು ಇದರಿಂದ ಜಾನುವಾರುಗಳನ್ನು ಕಳೆದುಕೊಂಡವರಿಗೆ ಪರಿಹಾರ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.

ವಿಶೇಷವಾಗಿ ಹಾವೇರಿ ಮತ್ತು ಕೋಲಾರ ಜಿಲ್ಲೆಗಳಲ್ಲಿ ಲಸಿಕೆ ಹಾಕುವ ಕಾರ್ಯವನ್ನು ತೀವ್ರಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಪ್ರಕಟಣೆಯಲ್ಲಿರುವ ಮಾಹಿತಿ ಪ್ರಕಾರ, 28 ಜಿಲ್ಲೆಗಳು, 160 ತಾಲ್ಲೂಕುಗಳ 4,380 ಗ್ರಾಮಗಳಲ್ಲಿ ಈ ರೋಗ ಕಾಣಿಸಿಕೊಂಡಿದೆ. ಈ ರೋಗದಿಂದ ಬಳಲುತ್ತಿರುವ ಒಟ್ಟು 45,645 ಜಾನುವಾರುಗಳಲ್ಲಿ 26,135 ಚೇತರಿಸಿಕೊಂಡಿವೆ ಮತ್ತು 2,070 ಸಾವನ್ನಪ್ಪಿವೆ ಎಂದು ಹೇಳಿಕೆ ತಿಳಿಸಿದೆ.

ಜಾನುವಾರುಗಳನ್ನು ಕಳೆದುಕೊಂಡವರಿಗೆ ಪರಿಹಾರವಾಗಿ ಈಗಾಗಲೇ ರಾಜ್ಯ ಸರ್ಕಾರದಿಂದ ₹2 ಕೋಟಿ ಬಿಡುಗಡೆ ಮಾಡಲಾಗಿದ್ದು, ರೋಗಪೀಡಿತ ಜಾನುವಾರುಗಳ ಚಿಕಿತ್ಸೆಗೆ ಹೆಚ್ಚುವರಿಯಾಗಿ ₹ 5 ಕೋಟಿ ಮತ್ತು ಲಸಿಕೆ ಹಾಕಲು ₹ 8 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ರಾಜ್ಯ ಸರ್ಕಾರದ ಅಂಕಿ ಅಂಶಗಳ ಪ್ರಕಾರ, 657,000 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಕೇಂದ್ರದ ಮಾರ್ಗಸೂಚಿಗಳ ಪ್ರಕಾರ, ಚರ್ಮರೋಗ ಕಂಡುಬಂದಲ್ಲಿ ಐದು ಕಿ.ಮೀ ವ್ಯಾಪ್ತಿಯ ಆರೋಗ್ಯವಂತ ಜಾನುವಾರುಗಳಿಗೂ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ.

ದೀರ್ಘಕಾಲದ ವೈರಸ್‌ ಪೀಡಿತ ಜಿಲ್ಲೆಗಳಲ್ಲಿನ ಜಾನುವಾರಗಳಿಗೆ ಆದ್ಯತೆಗನುಗುಣವಾಗಿ ಲಸಿಕೆ ನೀಡಬೇಕು ಮತ್ತು ಭಾರತ ಸರ್ಕಾರವು ಅನುಮೋದಿಸಿದ ಕಂಪನಿಗಳಿಂದ ತಕ್ಷಣವೇ 15 ಲಕ್ಷ ಡೋಸ್ ಲಸಿಕೆಗಳನ್ನು ಪಡೆಯಲು ಬೊಮ್ಮಾಯಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಲಂಪಿ ವೈರಸ್‌ನಿಂದ ಅನಾರೋಗ್ಯಕ್ಕೀಡಾದ ಹಸುಗಳ ಹಾಲು ಕುಡಿಯುವುದರಿಂದ ಜನರಿಗೆ ಚರ್ಮರೋಗ ಹರಡುವುದಿಲ್ಲ,ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸಬೇಕು ಎಂದು ಬೊಮ್ಮಾಯಿಯವರು ತಿಳಿಸಿದ್ದಾರೆ.

ಹಾವೇರಿ ಮತ್ತು ಕೋಲಾರದಂತಹ ತೀವ್ರ ಲಂಪಿ ವೈರಸ್‌ ಪೀಡಿತ ಜಿಲ್ಲೆಗಳಲ್ಲಿ ರೋಗವನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ಬೇರೆ ಜಿಲ್ಲೆಗಳಿಗೆ ವೈರಸ್‌ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಹಿನ್ನಲೆಯಲ್ಲಿ ಲಸಿಕೆ ಹಾಕುವ ಕಾರ್ಯವನ್ನು ತೀವ್ರಗೊಳಿಸಬೇಕು ಎಂದರು.

ಎಲ್‌ಎಸ್‌ಡಿ ಸಾಂಕ್ರಾಮಿಕ ವೈರಲ್ ಕಾಯಿಲೆಯಾಗಿದ್ದು ಅದು ಜಾನುವಾರುಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ರೋಗವು ಸೊಳ್ಳೆಗಳು, ನೊಣಗಳು, ಕಲುಷಿತ ಆಹಾರ ಮತ್ತು ನೀರಿನಿಂದ ಹರಡುತ್ತದೆ. ಇದರಿಂದ  ಜ್ವರ, ಚರ್ಮದ ಮೇಲೆ ಗಂಟುಗಳು ಹುಟ್ಟಿಕೊಂಡು ಜಾನವಾರುಗಳ ಸಾವಿಗೆ ಕಾರಣವಾಗಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page