ಮಹಾರಾಷ್ಟ್ರದ ನಾಗಪುರ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ದಂಪತಿ ಮತ್ತು ಅವರ ಇಬ್ಬರು ಪುತ್ರರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮನೆಯಲ್ಲಿ ಪತ್ತೆಯಾದ ಸೂಸೈಡ್ ನೋಟ್ನಲ್ಲಿ ವಂಚನೆ ಪ್ರಕರಣವೊಂದರಲ್ಲಿ ಪುತ್ರನೊಬ್ಬನ ಬಂಧನದಿಂದಾಗಿ ಕುಟುಂಬವು ಒತ್ತಡದಲ್ಲಿದೆ ಎಂದು ಬರೆಯಲಾಗಿದೆ ಎಂದು ನಾಗ್ಪುರ ಗ್ರಾಮಾಂತರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೊವಾಡ್ ಗ್ರಾಮದಲ್ಲಿರುವ ಇವರ ಮನೆಯಲ್ಲಿ ಯಾವುದೇ ಶಬ್ಧಗಳು ಬಾರದೆ ಇದ್ದದ್ದನ್ನು ಗಮನಿಸಿ ಕೆಲವು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದರು.
ಪೊಲೀಸರು ಮನೆಯ ಬಾಗಿಲು ಒಡೆದು ನೋಡಿದಾಗ ಕುಟುಂಬದ ನಾಲ್ವರು ಸೀಲಿಂಗ್ ಕೊಕ್ಕೆಗಳಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮೃತರನ್ನು ನಿವೃತ್ತ ಶಿಕ್ಷಕ ವಿಜಯ್ ಮಧುಕರ್ ಪಚೋರಿ (68), ಅವರ ಪತ್ನಿ ಮಾಲಾ (55) ಮತ್ತು ಅವರ ಮಕ್ಕಳಾದ ಗಣೇಶ್ (38) ಮತ್ತು ದೀಪಕ್ (36) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮಧ್ಯಪ್ರದೇಶದ ಪಾಂಡುರ್ನಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ವಂಚನೆ ಪ್ರಕರಣದಲ್ಲಿ ಈ ವರ್ಷದ ಆರಂಭದಲ್ಲಿ ಗಣೇಶ್ ಬಂಧನದಿಂದಾಗಿ ಕುಟುಂಬವು ಅಪಾರ ಒತ್ತಡದಲ್ಲಿದ್ದುದು ಸೂಸೈಡ್ ನೋಟ್ನಲ್ಲಿ ಕಂಡುಬಂದಿದೆ. ಇದರಲ್ಲಿ ಕುಟುಂಬದ ನಾಲ್ಕು ಸದಸ್ಯರ ಸಹಿಯನ್ನುಇತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
ನಾರ್ಖೇಡ್ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.