Thursday, June 13, 2024

ಸತ್ಯ | ನ್ಯಾಯ |ಧರ್ಮ

2021ರಲ್ಲಿ ಹೆಲ್ಮೆಟ್‌ ಧರಿಸದ ಕಾರಣಕ್ಕೆ ರಸ್ತೆ ಅಪಘಾತದಲ್ಲಿ ತೀರಿಕೊಂಡವರ ಸಂಖ್ಯೆ46,593

ಕಳೆದ ವರ್ಷ (2021) ರಸ್ತೆ ಅಪಘಾತಗಳಲ್ಲಿ ಹೆಲ್ಮೆಟ್ ಧರಿಸದ ಕಾರಣ ರಸ್ತೆ ಅಪಘಾತದಲ್ಲಿ ಮರಣಿಸಿದವರ ಒಟ್ಟು ಸಂಖ್ಯೆ 46,593 ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವರದಿ ತಿಳಿಸಿದೆ. ಇವರಲ್ಲಿ 32,877 ವಾಹನ ಚಾಲಕರು ಮತ್ತು 13,716 ಹಿಂಭಾಗದ ಪ್ರಯಾಣಿಕರು. ಹಾಗೆಯೇ 2021ರಲ್ಲಿ ಸೀಟ್ ಬೆಲ್ಟ್ ಧರಿಸದ 16,397 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ. ಇವರಲ್ಲಿ 8,438 ಚಾಲಕರು ಮತ್ತು ಉಳಿದ 7,959 ಸಹ ಪ್ರಯಾಣಿಕರು.

2021ರಲ್ಲಿ ಒಟ್ಟು 4,12,432 ರಸ್ತೆ ಅಪಘಾತಗಳು ವರದಿಯಾಗಿದ್ದು, ಈ ಪೈಕಿ 1,28,825 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿವೆ. ಈ ದುರ್ಘಟನೆಗಳಲ್ಲಿ 56,007 ಮಂದಿ ಸಾವನ್ನಪ್ಪಿದ್ದು, 1,17,765 ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

2020ಕ್ಕೆ ಹೋಲಿಸಿದರೆ 2021ರಲ್ಲಿ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ 12.6%ರಷ್ಟು ಹೆಚ್ಚಾಗಿದೆ, ಹಾಗೂ ಸತ್ತವರ ಸಂಖ್ಯೆ 16.9%ರಷ್ಟು ಏರಿಕೆಯಾಗಿದೆ ಮತ್ತು ಗಾಯಗೊಂಡವರ ಸಂಖ್ಯೆ 10.4%ರಷ್ಟು ಏರಿಕೆಯಾಗಿದೆ.

ಉತ್ತರ ಪ್ರದೇಶವು ಹೆಚ್ಚು ರಸ್ತೆ ಅಪಘಾತಗಳ ಸಾವಿನ ಸಂಖ್ಯೆ ಹೊಂದಿದ್ದು, ಒಟ್ಟು ಸಾವುನೋವುಗಳಲ್ಲಿ ಈ ರಾಜ್ಯದ ಪಾಲು 15.2%ರಷ್ಟು ಆಗಿದ್ದರೆ, ತಮಿಳುನಾಡು 9.4%, ಮಹಾರಾಷ್ಟ್ರ 7.3% ಮತ್ತು ರಾಜಸ್ಥಾನದ ಪಾಲು 6.8%.


“ಹೆಚ್ಚು ರಸ್ತೆ ಅಪಘಾತಕ್ಕೆ ಈಡಾದವರಲ್ಲಿ 18-45 ವರ್ಷಗ ನಡುವಿನವರಿದ್ದು, ಒಟ್ಟಾರೆ ಸಾವಿನ ಸಂಖ್ಯೆಯಲ್ಲಿ ಈ ವಯಸ್ಸಿನ ಶ್ರೇಣಿಯವರ ಪಾಲು ಸುಮಾರು 67% ರಷ್ಟಿದೆ” ಎಂದು ವರದಿ ಹೇಳಿದೆ.

ಅಪಘಾತಗಳಲ್ಲಿ ದುರ್ಮರಣಗಳನ್ನು ಕಡಿಮೆ ಮಾಡಲು ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಸೂಕ್ಷ್ಮ ವಿಭಾಗಗಳಲ್ಲಿ ಟ್ರಾಫಿಕ್ ಎಚ್ಚರಿಕೆ ಫಲಕಗಳು, ಡೆಲಿನೇಟರ್‌ಗಳು, ರೋಡ್ ಸ್ಟಡ್‌ಗಳು, ಬಾರ್ ಮಾರ್ಕಿಂಗ್‌ಗಳು ಮತ್ತು ಹಂಪ್‌ಗಳನ್ನು ಅಪ್ರೋಚ್ ರಸ್ತೆಗಳಲ್ಲಿ ಅಳವಡಿಸುವುದು ಮುಂತಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ವರದಿಯು ಸೂಚಿಸಿದೆ.

ಸೆಪ್ಟೆಂಬರ್ 4ರಂದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದ ಅಪಘಾತದಲ್ಲಿ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಮತ್ತು ಅವರ ಸಹ-ಪ್ರಯಾಣಿಕರಾದ ಜಹಾಂಗೀರ್ ಪಾಂಡೋಲೆ ಅವರು ಸಾವನ್ನಪ್ಪಿದ ನಂತರ, ಎಲ್ಲಾ ಕಾರು ಪ್ರಯಾಣಿಕರು (ಹಿಂದಿನ ಸೀಟಿನ) ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ ಎಂದು ಕೇಂದ್ರ ಹೇಳಿತ್ತು.


ಈ ವರದಿಯು ಪ್ರತಿ ನೂರು ಅಪಘಾತಗಳಿಗೆ ಜನರ ಸಾವಿನ ಸಂಖ್ಯೆ 2000 ಇಸವಿಯಿಂದ ಹೆಚ್ಚಾಗುತ್ತಿದ್ದು, ಇದು ಅಪಘಾತ ಚಿಕಿತ್ಸೆಯ ಸುಧಾರಿಸುವಿಕೆ ಮತ್ತು ಟ್ರಾಫಿಕ್‌ ವ್ಯವಸ್ಥೆಯನ್ನು ಸುಗಮಗೊಳಿಸುವ ಅಗತ್ಯವನ್ನು ಎತ್ತಿ ತೋರಿಸುತ್ತದೆ ಎಂದು ವರದಿ ಹೇಳಿದೆ.

ಹಿಂದಿನ ಸೀಟುಗಳಲ್ಲಿ ಕುಳಿತು ಪ್ರಯಾಣಿಸುವ ಪ್ರಯಾಣಿಕರು ಸೀಟ್‌ ಬೆಲ್ಟ್‌ ಧರಿಸದಿದ್ದಲ್ಲಿ ಕೇಂದ್ರ ಮೋಟಾರು ವಾಹನ ಕಾಯ್ದೆ ನಿಯಮ 138 (3) ಅಡಿಯಲ್ಲಿ 1,000 ದಂಡ ವಿಧಿಸುವುದಾಗಿ ಇತ್ತೀಚೆಗೆ ಘೋಷಿಸಿದ್ದರು.

ಇತ್ತೀಚೆಗೆ ಬೆಂಗಳೂರಿನ ರಸ್ತೆಗಳು ಹದಗೆಟ್ಟ ಕಾರಣ ರಸ್ತೆಗುಂಡಿಗೆ ಹಲವು ಬೈಕ್‌, ಸ್ಕೂಟರ್‌ ಚಾಲಕರು ಬಲಿಯಾಗಿದ್ದನ್ನು ಈ ಹಿನ್ನೆಲೆಯಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

Related Articles

ಇತ್ತೀಚಿನ ಸುದ್ದಿಗಳು