ನವದೆಹಲಿ: ಲೋಕಸಭೆಯಲ್ಲಿ ಡಿಸೆಂಬರ್ 13 ರಂದು ನಡೆದ ಭದ್ರತಾ ಉಲ್ಲಂಘನೆಯ ಕುರಿತು ಚರ್ಚೆಗೆ ಆಗ್ರಹಿಸಿ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ನಲವತ್ತೊಂಬತ್ತು ಜನ ಪ್ರತಿಪಕ್ಷ ಸಂಸದರನ್ನು ಮಂಗಳವಾರ ಸಂಸತ್ತಿನ ಚಳಿಗಾಲದ ಅಧಿವೇಶನದ ಉಳಿದ ಭಾಗದಿಂದ ಅಮಾನತುಗೊಳಿಸಲಾಗಿದೆ.
ಇದೇ ಕಾರಣಕ್ಕಾಗಿ 78 ಪ್ರತಿಪಕ್ಷ ಸಂಸದರನ್ನು ಅಮಾನತುಗೊಳಿಸಿದ ಮಾರನೇ ದಿನ ಈ ಅಮಾನತು ನಡೆದಿದೆ. ಇದುವರೆಗೆ ಡಿಸೆಂಬರ್ 14 ರಿಂದ ಉಭಯ ಸದನಗಳಿಂದ ಅಮಾನತುಗೊಂಡಿರುವ ಒಟ್ಟು ಸಂಸದರ ಸಂಖ್ಯೆ ಲೋಕಸಭೆಯಲ್ಲಿ 141 – 95 ಮತ್ತು ರಾಜ್ಯಸಭೆಯಲ್ಲಿ 46.
ಕಾಂಗ್ರೆಸ್ ಮುಖ್ಯಸ್ಥ ಮತ್ತು ರಾಜ್ಯಸಭಾ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ – ಪ್ರತಿಪಕ್ಷಗಳದ್ದು ಕೇವಲ ಎರಡು ಸರಳ ಬೇಡಿಕೆಗಳು- ಕೇಂದ್ರ ಗೃಹ ಸಚಿವರು ಭದ್ರತಾ ಲೋಪದ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಹೇಳಿಕೆ ನೀಡಿ ಚರ್ಚೆಗೆ ಬರಬೇಕು ಎಂಬುದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರಾದ ಶಶಿ ತರೂರ್ ಮತ್ತು ಕಾರ್ತಿ ಚಿದಂಬರಂ, ಸಮಾಜವಾದಿ ಪಕ್ಷದ ಡಿಂಪಲ್ ಯಾದವ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಸುಪ್ರಿಯಾ ಸುಳೆ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಮಂಗಳವಾರ ಅಮಾನತುಗೊಳಿಸಿದ್ದಾರೆ.
ಯಾವುದೇ ಅರ್ಥಪೂರ್ಣ ಚರ್ಚೆಯಿಲ್ಲದೆ ಕಠಿಣ ಮಸೂದೆಗಳನ್ನು ಅಂಗೀಕರಿಸಲು ಸರ್ಕಾರ ಈ ರೀತಿ ಮಾಡುತ್ತಿದೆ ಎಂದು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ ಮತ್ತು ಡಿಸೆಂಬರ್ 13 ರಂದು ಲೋಕಸಭೆಗೆ ದಾಳಿಕೋರರ ಪ್ರವೇಶವನ್ನು ಸುಲಭಗೊಳಿಸಿದ ಬಿಜೆಪಿ ಸಂಸದ ಮಾತ್ರ ಯಾವ ಶಿಕ್ಷೆಯಿಲ್ಲದೆ ಸ್ವತಂತ್ರವಾಗಿದ್ದಾರೆ ಎಂದು ಹೇಳಿದ್ದಾರೆ.
“ಹೊಸ ಸಂಸತ್ತಿನಲ್ಲಿ ನ್ಯಾಮೋಕ್ರಸಿಯ ಎಲ್ಲಾ ದಬ್ಬಾಳಿಕೆಗಳು ಕಾಣುತ್ತಿವೆ,” ಎಂದು ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಹೇಳಿದ್ದಾರೆ.
“ಆಂತರಿಕ ಭದ್ರತೆ ಮತ್ತು ಪೊಲೀಸರನ್ನು ಗೃಹ ಸಚಿವಾಲಯ ನಿಯಂತ್ರಿಸುವುದರಿಂದ ಪ್ರತಿಪಕ್ಷಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗಾಗಿ ಒತ್ತಾಯಿಸುತ್ತಿವೆ. ಅವರು [ಶಾ] ಘಟನೆಯ ಬಗ್ಗೆ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರೆ ಏನಾಗುತ್ತಿತ್ತು,” ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಸಂಸತ್ತಿನ ಈ ಪರಿಸ್ಥಿತಿಯನ್ನು ಉತ್ತರ ಕೊರಿಯಾಕ್ಕೆ ಹೋಲಿಸಿದ್ದಾರೆ. “ಇದು ಟೋಕನ್ ಹೌಸ್ ಆಗಲಿದೆ” ಎಂದು ಚಿದಂಬರಂ ಪಿಟಿಐಗೆ ತಿಳಿಸಿದ್ದಾರೆ.