Friday, June 20, 2025

ಸತ್ಯ | ನ್ಯಾಯ |ಧರ್ಮ

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ರಿಗೆ 5ನೇ ಸಮನ್ಸ್: ನನ್ನನ್ನು ಬಂಧಿಸುವ ಕುತಂತ್ರ ಎಂದ ಕೇಜ್ರಿವಾಲ್

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED)ವು ಮತ್ತೊಂದು ಸಮನ್ಸ್ ಜಾರಿ ಮಾಡಿದೆ.

ಕೇಜ್ರಿವಾಲ್‌ಗೆ ಸಲ್ಲಿಕೆಯಾಗುತ್ತಿರುವ 5ನೇ ಸಮನ್ಸ್ ಇದಾಗಿದೆ. ಫೆ.18ಕ್ಕೆ ವಿಚಾರಣೆಗೆ ಹಾಜರಾಗಲು ಆದೇಶಿಸಲಾಗಿದೆ. ಜ.18ರಂದು ಅವರು ವಿಚಾರಣೆಗೆ ಹಾಜರಾಗಬೇಕಿತ್ತು. ಅದಕ್ಕೆ ಅವರು ಗೈರಾಗಿದ್ದರು. ಇದಕ್ಕೂ ಮೊದಲು ಜನವರಿ 3, ಡಿಸೆಂಬರ್‌ 22 ಮತ್ತು ನವೆಂಬರ್ 2ರಂದು ಅವರಿಗೆ ಸಮನ್ಸ್ ಜಾರಿಯಾಗಿತ್ತು. ಅಬಕಾರಿ ನೀತಿಯ ವ್ಯವಹಾರದಲ್ಲಿ ಅವರ ಪಾತ್ರ ಕುರಿತು ಹೇಳಿಕೆ ದಾಖಲಿಸುವಂತೆ ಕೇಜ್ರಿವಾಲ್‌ಗೆ ನಿರ್ದೇಶನಾಲಯ ಸೂಚಿಸಿದೆ.

ನನ್ನನ್ನು ಬಂಧಿಸುವ ಉದ್ದೇಶ: ಸಮನ್ಸ್ ಕಳುಹಿಸುತ್ತಿರುವ ಹಿಂದೆ ದುರುದ್ದೇಶ ಅಡಗಿದೆ. ಅಕ್ರಮ ಸಮನ್ಸ್‌ ಇದಾಗಿದೆ ಎಂದಿರುವ ಕೇಜ್ರಿವಾಲ್‌, ‘ಜಾರಿ ನಿರ್ದೇಶನಾಲಯದ ಉದ್ದೇಶ ಸರಿಯಾಗಿದ್ದರೆ ನಾನು ವಿಚಾರಣೆ ಎದುರಿಸಲು ಸಿದ್ಧ. ಆದರೆ ನನ್ನನ್ನು ಬಂಧಿಸುವ ಉದ್ದೇಶ ಇದರ ಹಿಂದೆ ಅಡಗಿದೆ. ಈ ಮೂಲಕ ಲೋಕಸಭಾ ಚುನಾವಣೆಯಿಂದ ದೂರ ಇಡುವ ಕುತಂತ್ರ ಮಾಡುತ್ತಿದ್ದಾರೆ ಎಂದು ಮಾದ್ಯಮಗಳಿಗೆ ಅರವಿಂದ್ ಕೇಜ್ರಿವಾಲ್‌ ಹೇಳಿಕೆ ನೀಡಿದ್ದಾರೆ.

‘ಕಾನೂನು ದೃಷ್ಟಿಯಲ್ಲಿ ಈ ಎಲ್ಲಾ ನೋಟಿಸ್‌ಗಳೂ ಅಕ್ರಮ ಹಾಗೂ ಅಸಿಂಧು. ಈ ಹಿಂದೆ ಇಡಿ ಕಳುಹಿಸಿರುವ ಇಂಥ ನೋಟಿಸ್‌ಗಳನ್ನು ಅಸಿಂಧುಗೊಳಿಸಿ ನ್ಯಾಯಾಲಯಗಳು ಆದೇಶಿಸಿರುವ ಉದಾಹರಣೆಗಳು ಸಾಕಷ್ಟಿವೆ. ರಾಜಕೀಯ ಪ್ರೇರಣೆಯಿಂದ ಇಂಥ ನೋಟಿಸ್‌ಗಳನ್ನು ನನಗೆ ಕಳುಹಿಸಲಾಗುತ್ತಿದೆ’ ಎಂದು 4ನೇ ನೋಟಿಸ್‌ ಸಲ್ಲಿಕೆಯಾದಾಗ ಕೇಜ್ರಿವಾಲ್ ಹೇಳಿದ್ದರು.

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ 2021–22ರಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನೀತಿಯನ್ನು ಹಿಂಪಡೆಯಲಾಗಿತ್ತು. 2023ರ ಡಿ. 2ರಲ್ಲಿ ಸಲ್ಲಿಸಿದ 6ನೇ ಆರೋಪಪಟ್ಟಿಯಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡ ಸಂಜಯ್ ಸಿಂಗ್ ಹಾಗೂ ಅವರ ಆಪ್ತ ಸರ್ವೇಶ್ ಮಿಶ್ರಾ ಅವರ ಹೆಸರನ್ನು ಉಲ್ಲೇಖಿಸಲಾಗಿತ್ತು. ಇಡಿ ಪ್ರಕಾರ 2022ರಲ್ಲಿ ಗೋವಾ ಚುನಾವಣಾ ಪ್ರಚಾರಕ್ಕಾಗಿ ಒಟ್ಟು ₹ 45 ಕೋಟಿ ಲಂಚ ಪಡೆಯಲಾಗಿದೆ ಎಂಬ ದೂರು ಕೇಳಿ ಬಂದಿತ್ತು.

ಪ್ರಕರಣದ ವಿಚಾರಣೆ ನಡೆಸುವಂತೆ ಹಾಗೂ ನೀತಿಯನ್ನು ರದ್ದುಪಡಿಸುವಂತೆ ದೆಹಲಿ ಲೆಫ್ಟಿನೆಂಟ್ ಜನರಲ್ ವಿನಯ್ ಕುಮಾರ್ ಸೆಕ್ಸೇನಾ ಅವರು ಆದೇಶಿಸಿದ್ದರು. ಈವರೆಗೂ ಎಎಪಿ ಮುಖಂಡರಾದ ಉಪಮುಖ್ಯಮಂತ್ರಿ ಮನೀಶ್ ಸಿಸೊಡಿಯಾ (ಫೆ. 26) ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ (ಅ. 5) ಅವರನ್ನು ಬಂಧಿಸಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page