Sunday, June 16, 2024

ಸತ್ಯ | ನ್ಯಾಯ |ಧರ್ಮ

KEA ಹಗರಣದ: ಆರ್‌ಡಿ ಪಾಟೀಲನನ್ನು 8 ದಿನಗಳ ಸಿಐಡಿ ಕಸ್ಟಡಿಗೆ ಒಪ್ಪಿಸಿದ ಕೋರ್ಟ್

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಹಗರಣದ ಕಿಂಗ್‌ ಪಿನ್ ಆರ್‌ಡಿ ಪಾಟೀಲನನ್ನು ಕಲಬುರಗಿ ನ್ಯಾಯಾಲಯವು ಶನಿವಾರ ಎಂಟು ದಿನಗಳ ಅಪರಾಧ ತನಿಖಾ ಇಲಾಖೆ (ಸಿಐಡಿ) ಕಸ್ಟಡಿಗೆ ಒಪ್ಪಿಸಿದೆ. ಕಲಬುರಗಿ ವಿಶ್ವವಿದ್ಯಾನಿಲಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಸಿಐಡಿ ಆರೋಪಿಯನ್ನು ಕಸ್ಟಡಿಗೆ ಕೋರಿ ಅರ್ಜಿ ಸಲ್ಲಿಸಿತ್ತು.

ಪಾಟೀಲನ ಒಂಬತ್ತು ದಿನಗಳ ಸಿಐಡಿ ಕಸ್ಟಡಿ ಕೊನೆಗೊಂಡ ನಂತರ ಗುರುವಾರ, ನ್ಯಾಯಾಲಯವು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಆದರೆ, ತನಿಖೆ ಅಪೂರ್ಣಗೊಂಡಿದ್ದರಿಂದ ಸಿಐಡಿ ಮತ್ತೆ ವಶಕ್ಕೆ ತೆಗೆದುಕೊಂಡಿದೆ.

ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪ್ರಥಮ ವಿಭಾಗದ ಸಹಾಯಕ ಹುದ್ದೆಗಳಿಗೆ ಅಕ್ಟೋಬರ್ 28ರಂದು ಕೆಇಎ ಪ್ರವೇಶ ಪರೀಕ್ಷೆ ನಡೆಸಿತ್ತು.

ಪರೀಕ್ಷೆ ವೇಳೆ ಕಲಬುರಗಿ ಮತ್ತು ಯಾದಗಿರಿ ಪರೀಕ್ಷಾ ಕೇಂದ್ರಗಳಲ್ಲಿ ಬ್ಲೂಟೂತ್‌ ಬಳಸಿ ನಕಲು ಮಾಡಿದ ಹಲವು ಅಭ್ಯರ್ಥಿಗಳನ್ನು ಬಂಧಿಸಲಾಗಿದೆ. ಪರೀಕ್ಷೆಯಲ್ಲಿ ನಕಲು ಮಾಡಿದ ಅಭ್ಯರ್ಥಿಗಳ ವಿರುದ್ಧ ಪೊಲೀಸರು ಅನೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದರು. ಪ್ರಕರಣದಲ್ಲಿ 40ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಕಳೆದ ಮೂರು ವರ್ಷಗಳಲ್ಲಿ, ಪಾಟೀಲ ಅಕ್ರಮವಾಗಿ ಸರ್ಕಾರಿ ಪರೀಕ್ಷೆಗಳಲ್ಲಿ ಕಾಪಿ ಮಾಡಿಸಲು ಹಣ ಪಡೆದು ಒಪ್ಪಂದ ಮಾಡಿಕೊಳ್ಳುತ್ತಿದ್ದ ಎನ್ನಲಾಗುತ್ತಿದೆ. ಈತನ ವಿರುದ್ಧ 15ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ.

ಕೆಇಎ ಪರೀಕ್ಷೆ ಹಗರಣ ಪ್ರಕರಣದಲ್ಲಿ ಹಲವು ಪ್ರಕರಣಗಳು ದಾಖಲಾದ ಬಳಿಕ ರಾಜ್ಯದಿಂದ ಪರಾರಿಯಾಗಿದ್ದ. ನಂತರ ಈತನನ್ನು ಕಲಬುರಗಿ ಪೊಲೀಸರ ತಂಡ ಮಹಾರಾಷ್ಟ್ರದ ಅಕ್ಕಲಕೋಟದಿಂದ ಬಂಧಿಸಿದೆ. ವರದಿಗಳ ಪ್ರಕಾರ, ಪಾಟೀಲ್ ಆಪ್ತ ಸಹಾಯಕರ ಮೂಲಕ ಅಭ್ಯರ್ಥಿಗಳನ್ನು ಸಂಪರ್ಕಿಸುತ್ತಿದ್ದ ಮತ್ತು ಹಲವಾರು ಸರ್ಕಾರಿ ಪರೀಕ್ಷೆಗಳನ್ನು ಕಾನೂನುಬಾಹಿರವಾಗಿ ಉತ್ತೀರ್ಣರಾಗಲು ಸಹಾಯ ಒದಗಿಸುತ್ತಿದ್ದ.

2022ರ ಜನವರಿಯಲ್ಲಿ ಸ್ಫೋಟಗೊಂಡ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದಲ್ಲಿ ಪಾಟೀಲ್ ಹೆಸರು ಮೊದಲ ಬಾರಿಗೆ ಕೇಳಿಬಂದಿತು. ರಾಜ್ಯ ಸರ್ಕಾರವು 2021ರಲ್ಲಿ 545 ಪಿಎಸ್‌ಐಗಳನ್ನು ನೇಮಿಸಿಕೊಳ್ಳಲು ಪ್ರವೇಶ ಪರೀಕ್ಷೆಯನ್ನು ನಡೆಸಿತ್ತು. ಫಲಿತಾಂಶಗಳು ಪ್ರಕಟವಾದ ನಂತರ, ಅವ್ಯವಹಾರದ ಆರೋಪಗಳು ವರದಿಯಾಗಿ ಹಲವಾರು ಎಫ್‌ಐಆರ್‌ಗಳು ದಾಖಲಾದವು.

ಪ್ರಸ್ತುತ ಸರ್ಕಾರ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿದೆ. ತನಿಖೆ ವೇಳೆ ಸಿಐಡಿ ಆರ್.ಡಿ.ಪಾಟೀಲ್ ಸೇರಿದಂತೆ 100ಕ್ಕೂ ಹೆಚ್ಚು ಜನರನ್ನು ಬಂಧಿಸಿತ್ತು. ಕೆಇಎ ಹಗರಣದಲ್ಲಿ ಹೆಸರು ಕಾಣಿಸಿಕೊಂಡಾಗ ಆತ ಜಾಮೀನಿನ ಮೇಲೆ ಹೊರಗಿದ್ದ.

Related Articles

ಇತ್ತೀಚಿನ ಸುದ್ದಿಗಳು