ದೆಹಲಿ: ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ಈ ವರ್ಷ ಜನವರಿಯಿಂದ ಅಕ್ಟೋಬರ್ ನಡುವೆ 899 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರು ತಿಂಗಳಿನಲ್ಲಿ ಬೆಳೆಗಳಿಗೆ ಆದ ಭಾರೀ ನಷ್ಟದಿಂದಾಗಿ 537 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅಧಿಕೃತ ದತ್ತಾಂಶವು ಸ್ಪಷ್ಟಪಡಿಸುತ್ತದೆ.
ಛತ್ರಪತಿ ಸಂಭಾಜಿನಗರ ವಿಭಾಗೀಯ ಆಯುಕ್ತರ ಕಚೇರಿಯು ನೀಡಿದ ದತ್ತಾಂಶದ ಪ್ರಕಾರ, ಈ ವರ್ಷ ಜನವರಿಯಿಂದ ಅಕ್ಟೋಬರ್ ವರೆಗಿನ 10 ತಿಂಗಳಲ್ಲಿ ಮರಾಠವಾಡದಲ್ಲಿ 899 ರೈತರ ಆತ್ಮಹತ್ಯೆಗಳು ದಾಖಲಾಗಿವೆ. ಇವುಗಳಲ್ಲಿ ಮಳೆ ಮತ್ತು ಪ್ರವಾಹದ ಹಾನಿಯಿಂದ ಆರು ತಿಂಗಳಿನಲ್ಲಿ (ಮೇ 1 ರಿಂದ ಅಕ್ಟೋಬರ್ 31 ರವರೆಗೆ) 537 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೀಡ್ ಮತ್ತು ಛತ್ರಪತಿ ಸಂಭಾಜಿನಗರ ಜಿಲ್ಲೆಗಳಲ್ಲಿ ಅತ್ಯಧಿಕ ಸಂಖ್ಯೆಯ ರೈತರ ಆತ್ಮಹತ್ಯೆಗಳು ದಾಖಲಾಗಿವೆ.
ಜಿಲ್ಲಾ ಮಟ್ಟದ ಅಂಕಿ-ಅಂಶಗಳನ್ನು ನೋಡಿದರೆ, ಈ 6 ಜಿಲ್ಲೆಗಳಲ್ಲಿ ಛತ್ರಪತಿ ಸಂಭಾಜಿನಗರದಲ್ಲಿ 112, ಜಾಲನಾದಲ್ಲಿ 32, ಪರ್ಭಣಿಯಲ್ಲಿ 45, ಹಿಂಗೋಲಿಯಲ್ಲಿ 33, ನಾಂದೇಡ್ನಲ್ಲಿ 90, ಬೀಡ್ನಲ್ಲಿ 108, ಲಾತೂರ್ನಲ್ಲಿ 47 ಮತ್ತು ಧಾರಾಶಿವ್ನಲ್ಲಿ 70 ರೈತರ ಆತ್ಮಹತ್ಯೆಗಳು ಸಂಭವಿಸಿವೆ. ರೈತರ ಆತ್ಮಹತ್ಯೆಗಳ ಬಗ್ಗೆ ರೈತ ಸಂಘಟನೆಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದು, ರೈತರ ನೆರವಿಗೆ ಧಾವಿಸುವಂತೆ ಒತ್ತಾಯಿಸಿವೆ. ಈ ಸಮಸ್ಯೆಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿ, ಸಮಸ್ಯೆ ಪರಿಹಾರಕ್ಕೆ ಶ್ರಮಿಸಲಿದೆ ಎಂದು ಕೃಷಿ ಇಲಾಖೆಯ ರಾಜ್ಯ ಸಚಿವ ಆಶಿಶ್ ಜೈಸ್ವಾಲ್ ತಿಳಿಸಿದರು.
