Tuesday, June 18, 2024

ಸತ್ಯ | ನ್ಯಾಯ |ಧರ್ಮ

ಗಂಗೆಯ ನೋಡಲು ಬಂದಾ…

ತೇಲುಗಣ್ಣು ಮೇಲುಗಣ್ಣಾಗಿ ಅಮಲಿನ ಆನಂದ ಅನುಭವಿಸುತ್ತಿದ್ದ ಚಂದ್ರಹಾಸ “ನನಗೂ ನೀವು ಬಾಳನೇ ಇಷ್ಟ ಆಗ್ಬುಟ್ರಿ ಭಾವ. ನೋಡಕು ಟಾಕು ಟೀಕಾಗಿದ್ದೀರಿ. ಒಂದು ಕುಡಿಯದಿಲ್ಲ ಸೇದದಿಲ್ಲ. ಇದಕಿಂತ ಇನ್ನೇನ್ ಬೇಕ್ ನನ್ನ ತಂಗಿಗೆ ಎಂದ. ಚಂದ್ರಹಾಸ ಹೀಗೇಕೆ ಹೇಳಿದ? ಓದಿ.. ರಂಗಭೂಮಿ ಕಲಾವಿದೆ ವಾಣಿ ಸತೀಶ್‌ ಬರೆಯುತ್ತಿರುವ ಅಂಕಣ ʼತಂತಿ ಮೇಲಣ ಹೆಜ್ಜೆʼ ಯ ಹೆಜ್ಜೆ- ೧

ಬಿಟ್ಟರು ಕಣ್ಕಟ್ಟಿ ಶುರುವಿಟ್ಟಿತು ಆಟ
ಹಿಡಿದವರ ನಂಬು ಎಂದರು ಪಾಪ ಪುಣ್ಯಗಳ ಪಾತಳಿಯಲ್ಲಿ
ಆಸರೆಯ ಹೊರತು ಬದುಕ ಊಹಿಸಲುಂಟೆ ?!
ಹೊತ್ತ ಭಾರವ ಇಳಿಸಿ ಕಟ್ಟಿದರು ಸೂತ್ರ…

ಆಗಷ್ಟೇ ಮಟ ಮಟ ಮಧ್ಯಾಹ್ನದ ಉರಿ ಬಿಸಿಲಿನ ತಾಪ ಇಳಿಯ ತೊಡಗಿತ್ತು. ಇತ್ತ ಅಪ್ಪ ಹೊಟ್ಟೆಗೆ ಬೆಂಕಿ ಬಿದ್ದವನಂತೆ ಚಡಪಡಿಸುತ್ತಾ ಮುನಿದು ಪಡಸಾಲೆಯ ಒಂದು ಮೂಲೆಯಲ್ಲಿ ಕುಳಿತಿದ್ದ. ಅವ್ವ ಮಾತ್ರ ಒಳಗಿನಿಂದ ಒಂದೇ ಸಮನೇ “ ಏ ಸುಮ್ನೇ ಕೂತ್ಕೊಳಪ್ಪ  ಕಂಡಿದ್ದೀನಿ. ಬೆಳೆದ ಗಂಡು ಮಕ್ಕಳು ಹೆಂಗೋ ತಂಗಿ ಜವಾಬ್ದಾರಿ ತಕ್ಕೊಂಡು ಗಂಡು ಕರ್ಕೊಂಡು ಬತ್ತಾವ್ರಲ್ಲ ಅನ್ನೋದು ಬುಟ್ಟು, ಅವರ್ನೆಲ್ಲಾ ಕೇಡುಗ್ರು ಅಂತಿದ್ದೀಯಲ್ಲ ಸರಿಯಾ” ಎಂದು ಏನೇನೋ ಬಡ ಬಡಿಸುತ್ತಿದ್ದಳು. ಸಹನಾ ಮೂರ್ತಿಯಂತಿದ್ದ ಅಪ್ಪ, ಆ ದಿನ ಅವ್ವನೆದುರು ಸಿಡಿದು ಏರು ದನಿಯಲ್ಲಿ ಕೂಗಿದ. “ಮುತ್ತಿನಂತ ಮಗಿನ ಬೀದಿಲೋಗೋ ಮಾರಿಗೆ ಕಟ್ಬೇಕು ಅಂತ ಹೊರಟಿದ್ದೀರಲ್ಲ.. ಬಿಲ್ ಕುಲ್ ನನಗಿದು ಒಪ್ಪಿಗೆ ಇಲ್ಲ” ಎಂದ. ಆ ಮಾತಿಗೆ ಅವ್ವ “ಈಗೇನು ಎದೆ ತನ್ಕಾ ಬೆಳೆದಿರೋ ಈ ಗಂಡ್ ಮಕ್ಕಳನ್ನ  ಎದ್ರಾಕ್ಕೊಂಡು ಕೂತ್ಕೊತಿಯಾ ಹೇಳು. ಅವರು ಅಷ್ಟೋ ಇಷ್ಟೋ  ಓದಿರೋರು. ಅವರ್ಗೇನು ಗೊತ್ತಾಗದಿಲ್ಲ ಅಂದ್ಕೊಂಡಿದಿಯಾ. ನೋಡನ ಮೊದ್ಲು ಹುಡುಗ ಮನೆಗೆ ಬಂದೋಗ್ಲಿ ಇರು” ಎಂದಳು.

ಪಡಸಾಲೆಯ ಮಂಚದ ಮೇಲೆ ಅಂಗಾತ ಮಲಗಿ ಸೂರಿಗೆ ದೃಷ್ಟಿ ನೆಟ್ಟು ಇದನ್ನೆಲ್ಲಾ ಕೇಳಿಸಿ ಕೊಳ್ಳುತ್ತಿದ್ದಳು ಗಂಗೆ. ಸಣ್ಣ ಪುಟ್ಟ ಕಾರಣಗಳನ್ನು ಹಿಡಿದು ಸದಾ ಕೈ ಎತ್ತಲು ಮುಂದಾಗುತ್ತಿದ್ದ ದೊಡ್ಡ ಅಣ್ಣ ಚಂದ್ರಹಾಸನೊಡನೆ ಮಾತು ನಿಲ್ಲಿಸಿ ಅದಾಗಲೇ ಏಳು ವರ್ಷಗಳೇ ಕಳೆದಿತ್ತು. ಇಂದು ತಲೆಯ ಬಳಿ ಬಂದು ನಿಂತ ಅಣ್ಣ, “ಹುಡುಗ ಬಂದು ಆಚೆ ಜಗ್ಲಿ ಮೇಲೆ ಕೂತವ್ನೆ ಎದ್ದು ಒಂದು ಲೋಟ ಹಾಲ್ ತಕ್ಕೊಂಡು ಬಾ” ಎಂದ. ಅವಳಿಗೆ ಅಣ್ಣನನ್ನು ತಲೆ ಎತ್ತಿಯು ನೋಡ ಬೇಕೆನಿಸಲಿಲ್ಲ, “ನಿಮಗೆ ಕರ್ಕೊಂಡು ಬನ್ನಿ ಅಂದವರ್ಯಾರು? ನಾನ್  ಬರೋದಿಲ್ಲ ಹೋಗು” ಎಂದು ಮಕಾಡೆ ಮಗುಚಿ ಮಲಗಿದಳು. “ಹೂಂ…ಮನೆಲಿ ಮಡಿಕ್ಕೊಂಡು ಉಪ್ಪಿನಕಾಯಿ ಹಾಕಿ ನೆಕ್ತಿವಿ ನಿನ್ನ. ಎದ್ದೋಗಿ ಹೇಳಿದ್ದ್ ಮಾಡೆ” ಎಂದು ನೊರ ನೊರ ಹಲ್ಲು ಕಡಿದ. ಜಡ್ಡು ಗಟ್ಟಿದ್ದ ಅವನೊಡನೆ ಜಗಳಕ್ಕೆ ನಿಂತು ರಂಪಾಟ ಮಾಡಿದರೆ ಅಪ್ಪ ಎಲ್ಲಿ ಇನ್ನಷ್ಟು ನೊಂದು ಬಿಡುವರೋ ಎನ್ನುವ ಆತಂಕದಲ್ಲಿ ಗಂಗೆ ಗೊಣಗುತ್ತಲೇ ಎದ್ದು ಅಡಿಗೆ ಕೋಣೆಗೆ ನಡೆದಳು. ಅವಳ ಕೆದರಿದ ಕೂದಲನ್ನು ಸರಿ ಪಡಿಸಲು ಬಂದ ಅವ್ವನ ಕೈ ಕೊಸರಿ, ತಟ್ಟೆಯಲ್ಲಿಟ್ಟಿದ್ದ ಹಾಲಿನ ಲೋಟ ಹಿಡಿದು ಜಗುಲಿಗೆ ಬಂದಳು. ಹುಡುಗನ ಎದುರು ತಟ್ಟೆ ಹಿಡಿದು ಮುಖ ತಿರುಗಿಸಿ ನಿಂತಳು. ಹುಡುಗ ಮುಗುಳು ನಗುತ್ತಾ “ಅಯ್ಯೋ ನನಗೆ ಕಾಫಿ, ಟೀ ಎಲ್ಲಾ ರೂಢಿ ಇಲ್ಲ ಬೇಡ” ಅಂದ. ಇದು ಕಾಫಿ ಅಲ್ಲ ಹಾರ್ಲಿಕ್ಸು ಎಂದು ಹೇಳಿ ಅವನೆದುರು ಅದನ್ನು ಇಟ್ಟು ಬಂದಳು. ತಿಂಗಳಿಂದ ಹೊಟ್ಟೆ ನೋವೆಂದು ಬಳಲಿ ಬೆಂಡಾಗಿದ್ದ ಗಂಗೆ ಮನೆ ಮದ್ದು, ಆಸ್ಪತ್ರೆ ಎಂದೆಲ್ಲಾ ತಿರುಗಿ ಆಗಷ್ಟೇ ಸುಧಾರಿಸ ತೊಡಗಿದ್ದಳು. ಅಷ್ಟೂ ದಿನದ ಬಳಲಿಕೆಯಿಂದಾಗಿ ಅವಳ ಕಣ್ಣುಗಳು ತುಸು ಗುಳಿ ಬಿದ್ದಂತಾಗಿತ್ತು. ಜೊತೆಗೆ ಕೆದರಿದ್ದ ಕೂದಲು, ಅಲ್ಲಲ್ಲಿ ತೇಪೆ ಹಾಕಿಕೊಂಡು ಸುಕ್ಕು ಗಟ್ಟಿದ್ದ ಲಂಗ ರವಿಕೆ. ಹೀಗೆ ಈ ಎಲ್ಲಾ ಅಸ್ತವ್ಯಸ್ತದ ನಡುವೆಯೂ ನೋಡಲು ಬಂದ ಆ ಹುಡುಗನ ಕಣ್ಣಿಗೆ ಗಂಗೆ ಹಬ್ಬವಾಗಿಯೇ ಕಂಡಳು.

ಪಡಸಾಲೆಯಿಂದ ಹೊರ ಬಂದ ಅಪ್ಪ ಹುಡುಗನ ಮೂಲ ಮುಖಿಯ ವಿಚಾರಣೆಗಿಳಿದ. ತನ್ನ ಹೆಸರು ಮೋಹನನೆಂದು ಪರಿಚಯಿಸಿಕೊಂಡ ಹುಡುಗ, ತಾನೊಬ್ಬ ಅನಾಥ ಬಹಳ ಬೇಗ ತಂದೆ ತಾಯಿಯನ್ನು ಕಳೆದು ಕೊಂಡು ಬಿಟ್ಟೆ ಎಂದು ಹನಿಗಣ್ಣಾದ. ಊರಿನಲ್ಲಿ ತನ್ನ ಹೆಸರಿನಲ್ಲಿ ಸಾಕಷ್ಟು ಆಸ್ತಿ ಇರುವುದಾಗಿಯೂ, ಸದ್ಯಕ್ಕೆ ಅಪ್ಪನ ಎರಡನೆಯ ಹೆಂಡತಿ ಚಿಕ್ಕಮ್ಮ ಎಲ್ಲವನ್ನೂ ನೋಡಿ ಕೊಳ್ಳುತ್ತಿದ್ದಾಳೆ ಎಂದು ಹೇಳಿದ. ಈ ತಿಂಗಳಲ್ಲಿ ತನ್ನ ಡಿಪ್ಲೊಮಾ ಕೋರ್ಸ್ ಮುಗಿಯುತ್ತಿದ್ದು, ಪೂನದಲ್ಲಿ ಕೆಲಸ ಸಿಕ್ಕಿರುವುದರಿಂದ ಆದಷ್ಟು ಬೇಗ ಹೋಗಿ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳ ಬೇಕಾಗಿದೆ. ಹಾಗಾಗಿ ಬೇಗ ಮದುವೆ ಮಾಡಿಕೊಟ್ಟಷ್ಟು ಅನುಕೂಲವಾಗುತ್ತದೆ ಎಂದ ತುಸು ಗೋಗರೆಯುವ ದನಿಯಲ್ಲಿ. ಅಪ್ಪನಿಗ್ಯಾಕೋ ಸಮಧಾನವಿಲ್ಲ. ಒಂದು ರೀತಿಯ ತಳ ಮಳ. “ಇಲ್ಲಪ್ಪ ನಿನ್ನ ಮನೆ ಮಠ, ಕುಟುಂಬ ಎಲ್ಲವನ್ನೂ ನೋಡದೆ ಹೆಂಗಪ್ಪ ಮದುವೆ ಮಾತಾಡಕಾಗ್ತದೆ” ಎಂದ. ಕಸಿವಿಸಿಗೊಂಡ ಮೋಹನ ʼಆಗ್ಲಿ ಎಲ್ಲವನ್ನೂ ನಿಮ್ಮ ಮಗನೊಂದಿಗೆ ಮಾತಾಡಿ ನೀವು ನಮ್ಮ ಮನೆಗೆ ಬರಲು ದಿನ ತಿಳಿಸುವೆʼ ಎಂದು ಹೇಳಿ ಚಂದ್ರಹಾಸನೊಂದಿಗೆ ಹೊರನಡೆದೇ ಬಿಟ್ಟ.

ಈ ಮನೆಗೆ ಮೋಹನನ ಆಗಮನವೇನು ಮೊದಲನೆಯದಾಗಿರಲಿಲ್ಲ. ಒಂದಷ್ಟು ತಿಂಗಳಿನಿಂದಲೂ ಕೆಲವು ಆಪ್ತರಲ್ಲಿ ತಾನು ಮದುವೆಯಾಗಬೇಕು  ಎಲ್ಲಿಯಾದರು ಹೆಣ್ಣುಗಳಿದ್ದರೆ ತಿಳಿಸಿ ಎಂದು ಹೇಳಿಕೊಂಡಿದ್ದ. ಹಾಗೆ ಹತ್ತಿರದವನಾಗಿದ್ದ ಕಾರ್ ಡ್ರೈವರ್ ಪುಂಡರೀಕ ಒಮ್ಮೆ ತನಗೆ ಗೊತ್ತಿರುವ ಹೆಣ್ಣೊಬ್ಬಳನ್ನು ತೋರಿಸುವುದಾಗಿ ಹೇಳಿ, ನಾರಿಪುರದ ಸರ್ಕಲ್ ನಲ್ಲಿ ಕಾಫಿ ವರ್ಕ್ಸ್ ನ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ತನ್ನ ಪರಿಚಯದ ಹುಡುಗಿಯನ್ನು ತೋರಿಸಿದ. ಕುಂಬಳ ಕಾಯಿಯಂತೆ ಗುಂಡು ಗುಂಡಾಗಿದ್ದ ಆ ಹುಡುಗಿ ನಡೆದು ಬರುತ್ತಿದ್ದಾಳೋ ಅಥವಾ ಬುಡು ಬುಡನೇ ಉರುಳಾಡಿ ಕೊಂಡು ಬರುತ್ತಿದ್ದಾಳೋ ಎಂದು ಮೋಹನ ಗಲಿಬಿಲಿಗೊಂಡ. ಕಟ್ಟು ಮಸ್ತಾಗಿ ಸುಂದರವಾಗಿದ್ದ ಮೋಹನನಿಗೆ  ತನಗೆ ಎತ್ತಲಿಂದಲೂ ಹೊಂದಾಣಿಕೆಯಾಗದ ಆ ಹುಡುಗಿಯನ್ನು ಕಂಡು ಕೋಪ ನೆತ್ತಿಗೇರಿತು. ತನ್ನ ಸುತ್ತ ಜನರಿದ್ದಾರೆ ಎಂಬುದನ್ನು ಮರೆತು “ನನ್ನ ಮಗನೇ ಇಂತ ಹುಡುಗೀನ  ತೋರುಸ್ತಿಯೇನೋ” ಎಂದು ಪುಂಡರೀಕನನ್ನು ಹೊಡೆಯಲು ಮುಂದಾದ. “ಅಯ್ಯೋ, ನಿನ್ನ ದಮ್ಮಯ್ಯ ಹೊಡಿ ಬೇಡಣ್ಣೋ. ನನಗೆ ಒಬ್ಳು  ಅಕ್ಕ ಅವ್ಳೆ ಅಂತ ಹೇಳ್ತಿರ್ತಿನಲ್ಲ ಅವಳನ್ನ ಒಂದ್ಸರಿ ನೋಡ್ತಿಯ ಹೇಳು. ನನಗೆ ಬಾಳ ಹತ್ರದ ಪರಿಚಯ ಒಂತರ ಸ್ವಂತ ಅಕ್ಕುನ್ಗಿಂತ ಹೆಚ್ಚು. ತುಂಬಾ ಒಳ್ಳೆಯೋಳಣ್ಣ ನಿಂಗೆ ಒಳ್ಳೆ ಜೋಡಿ ಆಯ್ತಾಳೆ. ಆದ್ರೆ ಆ ಅಕ್ಕನ ಆರು ಜನ ಅಣ್ಣ ತಮ್ಮಂದಿರನ್ನ ಹೆಂಗ್ ಒಪ್ಪುಸ್ತಿಯ ಅನ್ನದು ಮಾತ್ರ ನಿನಗೆ ಬುಟ್ಟಿದ್ದು ಎಂದ. ತುಸು ಗೆಲುವಾದ ಮೋಹನ ನಿಂತ ಕಾಲಿನ ಮೇಲೆ ಹೊರಟೇ ಬಿಟ್ಟ. ಪುಂಡರೀಕ “ಅಕ್ಕನ್ಗೆ ಹುಷಾರಿಲ್ಲ. ಹಂಗಾಗಿ ಅವಳಿಗೆ ಮಾತ್ರೆ ತಗೊಂಡು ಬಾ ಅಂತ ಅವರಪ್ಪ ದುಡ್ಡ್ಕೊಟ್ಟು ಕಳಿಸೈತೆ. ನೀನು ನನ್ನ ಜೊತೆ ಬರಕೆ ಇದು ಸರಿಯಾದ ಟೈಮು ಕಣಣ್ಣೊ ಅಂದ. ಆದ್ರೆ ನೀನು ಹುಡುಗಿ ನೋಡಕೆ ಬಂದಿದ್ಯ ಅನ್ನದು ಮಾತ್ರ ಯಾರಿಗೂ ಗೊತ್ತಾಗ್ಬಾರದು” ಎಂದು ಹೇಳಿ ಕರೆದುಕೊಂಡು ಹೊರಟ.

ಲಿವರ್ಗೆ ಸೋಂಕು ತಗುಲಿ ಬಳಲುತ್ತಿದ್ದ ಗಂಗೆ ಹೆಚ್ಚು ಕಮ್ಮಿ ತಿಂಗಳಿಂದಲು ಮಂಚದಿಂದ ಎದ್ದಿರಲಿಲ್ಲ. ಮಾತ್ರೆ ಕೊಡುವ ನೆಪದಲ್ಲಿ ಪುಂಡರೀಕನೊಂದಿಗೆ ಮೋಹನನು ಒಳ ಹೋದ. ಗಂಗೆ ನಿದ್ದೆಯಲ್ಲಿದ್ದಳು ಸದ್ದು ಮಾಡದೇ ಅವಳ ತಲೆಯ ಬಳಿ ಮಾತ್ರೆಯನ್ನಿಟ್ಟು ಹೊರ ಬಂದರು. ಬಾಗಿಲ ಎದುರಿದ್ದ ದೊಡ್ಡ ಹಾಸು ಗಲ್ಲಿನ ಮೇಲೆ ಬಿಸಿಲು ಕಾಯಿಸುತ್ತಾ ಪರ ಪರ ಮೈ ಕೆರೆದು ಕೊಳ್ಳುತ್ತಾ ಕುಳಿತಿದ್ದ ವ್ಯಕ್ತಿಯನ್ನು ತೋರಿಸಿ, “ಇವರು ಗಂಗಕ್ಕನ ದೊಡ್ಡಣ್ಣ ಚಂದ್ರಹಾಸಣ್ಣ” ಎಂದು ಪರಿಚಯಿಸಿದ. ಕಜ್ಜಿಯಾಗಿದ್ದ ಮೈನಿಂದ ಜಿನುಗುತ್ತಿದ್ದ ರಕ್ತ ಕೀವನ್ನು ಒರೆಸಿ ಕೊಳ್ಳುತ್ತಾ ಮೋಹನನನ್ನು ಮಾತಾಡಿಸಿದ ಚಂದ್ರಹಾಸ. ಶರವೇಗದಲ್ಲಿ  ತನ್ನ ಕಾರ್ಯ ಸಿದ್ಧಿಯ ಲೆಕ್ಕಾಚಾರ ಹಾಕಿದ ಚಾಣಾಕ್ಷ ಮೋಹನ. ಹಳೆಯ ಪರಿಚಯದವನೇನೋ ಎಂಬಂತೆ ಆತ್ಮಿಯವಾಗಿ ಮಾತಾಡಿದ. ತುಸುವೂ ತಡ ಮಾಡದೆ ಚಂದ್ರಹಾಸನನ್ನು  ಒಪ್ಪಿಸಿ ಆಸ್ಪತ್ರೆಗೆ ಕರೆದು ಕೊಂಡು ಹೊರಟೇ ಬಿಟ್ಟ. ಆಸ್ಪತ್ರೆಯಲ್ಲಿ ಡಾಕ್ಟರ್  ಬರೆದು ಕೊಟ್ಟ ಮದ್ದನ್ನೆಲ್ಲಾ ಕೊಡಿಸಿದ. ಸಾಲದೆಂಬಂತೆ ಗಡಂಗಿಗೂ ಕರೆದು ಕೊಂಡು ಹೋಗಿ ಕಂಠ ಪೂರ್ತಿ ಕುಡಿಸಿ, ನಿಮ್ಮ ತಂಗಿಯನ್ನು ನನಗೆ ಮದುವೆ ಮಾಡಿ ಕೊಡಿ ಎಂದು ಧೈರ್ಯ ಮಾಡಿ ಕೇಳಿಯೇ ಬಿಟ್ಟ. ಕೈಯಲ್ಲಿ ಕೆಲಸವಾಗಲಿ, ಹಣವಾಗಲಿ ಇಲ್ಲದೆ ಮೈ ತುಂಬಾ ಕಜ್ಜಿ ಹತ್ತಿಸಿಕೊಂಡು ಪರದಾಡುತ್ತಿದ್ದ ಚಂದ್ರಹಾಸನಿಗೆ, ಇಂದು ದೇವರೇ ಬಂದು ಅಮೃತ ಕುಡಿಸಿದಂತಾಗಿತ್ತು. ತೇಲುಗಣ್ಣು ಮೇಲುಗಣ್ಣಾಗಿ ಅಮಲಿನ ಆನಂದ ಅನುಭವಿಸುತ್ತಿದ್ದ ಚಂದ್ರಹಾಸ “ನನಗೂ ನೀವು ಬಾಳನೇ ಇಷ್ಟ ಆಗ್ಬುಟ್ರಿ ಭಾವ. ನೋಡಕು ಟಾಕು ಟೀಕಾಗಿದ್ದೀರಿ. ಒಂದು ಕುಡಿಯದಿಲ್ಲ ಸೇದದಿಲ್ಲ. ಇದಕಿಂತ ಇನ್ನೇನ್ ಬೇಕ್ ನನ್ನ ತಂಗಿಗೆ. ಒಂದು ವಾರ ಬುಟ್ಕೊಂಡು ಬನ್ನಿ. ಅಷ್ಟೊತ್ತಿಗೆ ನಾನು ಮನೆಯವರನ್ನೆಲ್ಲ ಒಪ್ಸಿರ್ತಿನಿ ಎಂದು ತೊದಲುತ್ತಲೇ ನುಡಿದು ಭಾವಿ ಭಾವನನ್ನು ಬಿಟ್ಕೊಟ್ಟು ರಸ್ತೆಯ ತುಂಬಾ ಜೋಲಿ ಹೊಡೆಯುತ್ತಾ ಮನೆ ಸೇರಿದ್ದ. 

(ಮುಂದುವರಿಯುವುದು…)

ವಾಣಿ ಸತೀಶ್
ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು