Sunday, June 16, 2024

ಸತ್ಯ | ನ್ಯಾಯ |ಧರ್ಮ

ಪಂಜುರ್ಲಿ ವೇಷಭೂಷಣ ; ರಿಷಬ್ ಶೆಟ್ಟಿಗೆ ಇಲ್ಲದ ನಿರ್ಬಂಧ ಈ ಯುವತಿಗೇಕೆ?

ತುಳುನಾಡಿನ ಪಂಜುರ್ಲಿ ದೈವ ಮತ್ತು ಸಮಾಜದಲ್ಲಿ ತಳ ಸಮುದಾಯವೆಂದು ಗುರುತಿಸಿಕೊಂಡಿರುವ ದಲಿತರ ಆಚರಣೆಗಳನ್ನು ಕೇಂದ್ರವಾಗಿಟ್ಟುಕೊಂಡು ಚಿತ್ರಿತವಾಗಿರುವ ‘ಕಾಂತಾರ’ ಸಿನಿಮಾ ಮಾಡಿದ ಅಬ್ಬರ ಎಲ್ಲರಿಗೂ ತಿಳಿದಿರುವಂತದ್ದು. ಈ ಸಿನೆಮಾದಲ್ಲಿ ನಟ ನಿರ್ದೇಶಕ ರಿಷಬ್ ಶೆಟ್ಟಿ ಪಂಜುರ್ಲಿ ದೈವದ ವೇಷ ಭೂಷಣಗಳೊಂದಿಗೆ ಮೇಳೈಸಿ ಮೆರೆದ ದೃಶ್ಯಗಳು ಸಧ್ಯಕ್ಕೆ ಯಾರೂ ಮರೆಯುವಂತದ್ದಲ್ಲ. ಹಣದ ಗಳಿಕೆಯಲ್ಲೂ ಸಹ ಕಾಂತಾರ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ.

ಆದರೆ ಇದಕ್ಕೆ ಪರೋಕ್ಷವಾಗಿ ಸಂಬಂಧಿಸಿದಂತಾ ಒಂದು ಘಟನೆ ನಾಡಿನ ಜನ ಇದನ್ನು ದ್ವಂದ್ವದಿಂದ ನೋಡುವಂತಾಗಿದೆ. ಕಾಂತಾರದಲ್ಲಿ ರಿಷಬ್ ಶೆಟ್ಟಿ ಹಾಕಿದ ಪಂಜುರ್ಲಿ ದೈವದ ವೇಷಕ್ಕೆ ಇಲ್ಲದ ಟೀಕೆ, ಆಕ್ರೋಶ, ಅವಮಾನಕರ ಪ್ರತಿಕ್ರಿಯೆಗಳು ಈ ಯುವತಿಯೊಬ್ಬಳ ಮೇಲೆ ಯಾಕೆ ಎಂಬುದು ಪ್ರಶ್ನಾರ್ಹವಾಗಿದೆ. ಅಂದಹಾಗೆ ಏನೀ ಸ್ಟೋರಿ..? ಯಾರೀ ಯುವತಿ ಅಂತೀರಾ.. ಈ ಸ್ಟೋರಿ ಓದಿ.

ಮೇಕಪ್ ಆರ್ಟಿಸ್ಟ್ ಆಗಿರುವ ಶ್ವೇತಾ ರೆಡ್ಡಿ ಎಂಬುವವರು ತಮ್ಮ ಇನಸ್ಟಾಗ್ರಾಂ ಖಾತೆಯಲ್ಲಿ ಪಂಜುರ್ಲಿ ದೈವದ ಗಣಪಾತ್ರಿಗಳಿಗೆ ಮಾಡುವಂತೆ ವೇಷ ಧರಿಸಿ ರೀಲ್ಸ್ ಮಾಡಿ ಶೇರ್ ಮಾಡಿದ್ದರು. ‘ಕಾಂತಾರ’ ಸಿನೆಮಾದ ‘ವರಾಹ ರೂಪಂ’ ಹಾಡಿಗೆ ಸಿನೆಮಾದಲ್ಲಿ ರಿಷಬ್ ಶೆಟ್ಟಿ ಅಭಿನಯವನ್ನೇ ಅನುಕರಿಸಿ ಈ ವಿಡಿಯೋ ಮಾಡಲಾಗಿತ್ತು. ರೀಲ್ಸ್ ಆದರೂ ಸಹ ವಿಡಿಯೋ ಮಾಡಲು ಶ್ವೇತಾ ರೆಡ್ಡಿಯವರು ಸಾಕಷ್ಟು ಶ್ರಮ ವಹಿಸಿದ್ದು ಈ ವಿಡಿಯೋದಲ್ಲಿ ಎದ್ದು ಕಾಣುತ್ತಿತ್ತು. ಆದರೆ ಇದೇ ಈಗ ಇನಸ್ಟಾಗ್ರಾಂ ಜಾಲತಾಣಗಳಲ್ಲಿ ಹೆಚ್ಚು ಆಕ್ರೋಶಕ್ಕೆ ಕಾರಣವಾಗಿದೆ.

ಶ್ವೇತಾ ರೆಡ್ಡಿಯವರು ರೀಲ್ಸ್ ಅಪ್ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ ರೀಲ್ಸ್ ಗೆ ವ್ಯಾಪಕ ಟೀಕೆ, ಆಕ್ರೋಶದ ಜೊತೆಗೆ ‘ಮುಂದಿನ ಪರಿಣಾಮ’ದಂತಹ ಬೆದರಿಕೆಯ ಪ್ರತಿಕ್ರಿಯೆ ಕೂಡಾ ವ್ಯಕ್ತವಾಗಿದೆ. “ದೈವಾರಾಧನೆಯು ತುಳುನಾಡಿನ ಧಾರ್ಮಿಕ ನಂಬಿಕೆಯಾಗಿದೆ. ಈ ರೀಲ್ಸ್ ಮೂಲಕ ನಮ್ಮ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗಿದೆ. ರೀಲ್ಸ್ ನ್ನು ತಕ್ಷಣ ಡಿಲೀಟ್ ಮಾಡುವಂತೆ” ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

“ತುಳುನಾಡಿನ ದೈವ, ದೇವರುಗಳೆಂದರೆ ನಿಮಗೆಲ್ಲಾ ಮನರಂಜನೆಯ ವಸ್ತು ಎಂದುಕೊಂಡ್ರಾ ಅವಿವೇಕಿಗಳೇ? ನಿಮ್ಮ ರೀಲ್ಸ್ ನ ಲೈಕ್ ಕಾಮೆಂಟಿಗೋಸ್ಕರ ನಮ್ಮ ನಂಬಿಕೆ, ಭಾವನೆಗಳ ಜೊತೆಗೆ ಆಟ ಆಡಬೇಡಿ, ಮರ್ಯಾದೆಯಿಂದ ಪೋಸ್ಟ್ ಡಿಲೀಟ್ ಮಾಡಿ. ನಿಮ್ಮ ತೀಟೆಗೆ ನಮ್ಮ ನಂಬಿಕೆ ಬಳಸ್ಕೋಬೇಡಿ” ಎಂದು ಒಬ್ಬರು ತಮ್ಮ ಆಕ್ರೋಶ ಹೊರಹಾಕಿದರೆ, “ನಮ್ಮ ದೈವ, ದೇವರನ್ನು ಅಣಕ ಮಾಡಿದರೆ, ಪರಿಣಾಮ ನೆಟ್ಟಗಿರೋದಿಲ್ಲ. ಮರ್ಯಾದೆಯಿಂದ ಪೋಸ್ಟ್ ಡಿಲೀಟ್ ಮಾಡಿ ಕ್ಷಮೆ ಕೇಳಿದರೆ ಸರಿ.. ಇಲ್ಲವಾದರೆ ಮುಂದಿನ ಪರಿಣಾಮಕ್ಕೆ ನೀವೇ ಹೊಣೆ” ಎಂದು ಮತ್ತೊಬ್ಬರು ಬೆದರಿಕೆ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಸಧ್ಯ ಈ ರೀತಿಯ ಪ್ರತಿಕ್ರಿಯೆಗೆ ಹೆದರಿ ಶ್ವೇತಾ ರೆಡ್ಡಿಯವರು ತಮ್ಮ ಅಕೌಂಟ್ ನಿಂದ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ಈಗ ಎದ್ದಿರುವ ಪ್ರಶ್ನೆ ಎಂದರೆ ಯುವತಿ ಶ್ವೇತಾ ರೆಡ್ಡಿಯವರು ಅದನ್ನೊಂದು ಕಲೆ ಎಂದು ಅಭಿನಯಿಸಿ ಮಾಡಿದ ರೀಲ್ಸ್ ನಿಂದ ನೆಟ್ಟಿಗರ, ಅದರಲ್ಲೂ ತುಳುನಾಡಿಗರ ಭಾವನೆಗೆ ನಿಜಕ್ಕೂ ಧಕ್ಕೆ ಆಗಿದೆಯೇ ಎಂಬುದು. ಅಕಸ್ಮಾತ್ ಆ ವಿಡಿಯೋದಿಂದ ತುಳುನಾಡಿಗರ ಭಾವನೆಗೆ ಧಕ್ಕೆ ಆಗಿರುವುದೇ ಆದರೆ ಆ ಯುವತಿಗೆ ಆದ ನಿರ್ಬಂಧ ರಿಷಬ್ ಶೆಟ್ಟಿಗೆ ಯಾಕೆ ಆಗಿಲ್ಲ ಎಂಬುದು ಇಲ್ಲಿ ಎದ್ದಿರುವ ಪ್ರಮುಖ ಪ್ರಶ್ನೆ.

ರಿಷಬ್ ಶೆಟ್ಟಿ ಕೂಡಾ ಪಂಜುರ್ಲಿ ದೈವದ ವೇಷದಲ್ಲಿ ಅಭಿನಯಿಸಿದವರೇ.. ಅದ್ಭುತವಾಗಿ ನಟಿಸಿದ್ದಾರೆ ಕೂಡಾ. ಇಡೀ ‘ಕಾಂತಾರ’ದ ಹೈಲೈಟ್ ಕೂಡಾ ಅದೇ ಆಗಿದೆ. ‘ಕಾಂತಾರ’ ತೆರೆ ಕಂಡಾಗ ಕಣ್ಮನ ತುಂಬಿಕೊಂಡವರು, ಈ ಯುವತಿಯ ವಿಡಿಯೋಗೆ ಯಾಕೆ ತಮ್ಮ ಆಕ್ರೋಶ ಹೊರಹಾಕಿದ್ದು ಎಂಬುದು ಇಲ್ಲಿ ಪ್ರಶ್ನಾರ್ಹ. ಈ ಬಗ್ಗೆ ಜಾಲತಾಣಗಳಲ್ಲಿ ಪ್ರಶ್ನೆ ಎದ್ದಿದ್ದು, ರಿಷಬ್ ಗೆ ಇಲ್ಲದ ನಿರ್ಬಂಧ ಮೇಕಪ್ ಆರ್ಟಿಸ್ಟ್ ಶ್ವೇತಾ ರೆಡ್ಡಿಗೆ ಯಾಕೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಭಾವನೆಗಳ ಅಡಿಯಲ್ಲಿ ಬೆದರಿಕೆ ಹಾಕೋದರ ಬಗ್ಗೆಯೂ ಟೀಕೆಗಳು ವ್ಯಕ್ತವಾಗಿದ್ದು ಇಲ್ಲಿ ರಿಷಬ್ ಶೆಟ್ಟಿಗೆ ಒಂದು ನ್ಯಾಯ, ಆ ಯುವತಿಗೆ ಒಂದು ನ್ಯಾಯವೇ ಎಂದು ನೆಟ್ಟಿಗರು ಮರುಪ್ರಶ್ನೆ ಹಾಕಿದ್ದಾರೆ. ಇದರ ಜೊತೆಗೆ ‘ವರಾಹ ರೂಪಂ’ ಸಂಗೀತ ಸಂಯೋಜನೆ ಕೂಡಾ ಮಲಯಾಳಂ ನಿಂದ ಕದ್ದ ಸರಕು ಎಂಬ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ನೈಜವಾಗಿ ಚಿತ್ರತಂಡದಿಂದಲೇ ಪಂಜುರ್ಲಿ ದೈವಕ್ಕೆ ಅವಮಾನವಾಗಿದೆ ಎಂಬುದು ಮತ್ತೊಂದು ಆಯಾಮದಲ್ಲಿ ಟೀಕೆ ಶುರುವಾಗಿದೆ.

Related Articles

ಇತ್ತೀಚಿನ ಸುದ್ದಿಗಳು