Tuesday, June 18, 2024

ಸತ್ಯ | ನ್ಯಾಯ |ಧರ್ಮ

ಕನ್ನಡ ಓದಿನ ಸಂಭ್ರಮ ಕಳೆದು ಹೋಗದಿರಲಿ

ಸ್ಪರ್ಧಾತ್ಮಕ ಆರ್ಥಿಕತೆಯ ಹಿಂದೆ ಬಿದ್ದಿರುವ ಇಂದಿನ ಜನರಿಗೆ ಭಾಷೆ ಮತ್ತು ಸಾಹಿತ್ಯ ಬೇಡವಾಗಿದೆ. ಇಂಥ ಸಂದರ್ಭದಲ್ಲಿ ಕನ್ನಡ ಕವಿ ಪರಂಪರೆಗೆ ನಾವು ಉತ್ತರಾಧಿಕಾರಿಗಳಾಗಲು ಕೆಲವು ಯೋಜನೆಗಳನ್ನು ರೂಪಿಸಲು ಇದು ಸಕಾಲ ಎನ್ನುತ್ತಾರೆ ಕನ್ನಡದ ಸಾಕ್ಷಿ ಪ್ರಜ್ಞೆಯಾಗಿರುವ ಪುರುಷೋತ್ತಮ ಬಿಳಿಮಲೆ. ಪೀಪಲ್‌ ಮೀಡಿಯಾ ಬಳಗದಿಂದ ತಮಗೆಲ್ಲರಿಗೂ ೬೭ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಮುಂದಿನ ವರ್ಷಕ್ಕೆ ಬಿ ಎಂ ಶ್ರೀಕಂಠಯ್ಯನವರ ಇಂಗ್ಲಿಷ್‌ ಗೀತೆಗಳು ಪ್ರಕಟವಾಗಿ ೧೦೦ ವರ್ಷ ತುಂಬುತ್ತದೆ. ೧೯೨೩ರಲ್ಲಿ ಅದರ ಮೊದಲ ಆವೃತ್ತಿ ಪ್ರಕಟವಾದಾಗ ಒಂದು ಸಾವಿರ ಪ್ರತಿಗಳನ್ನು ಅಚ್ಚು ಹಾಕಲಾಗಿತ್ತಂತೆ. ಆಗಿನ ಕರ್ನಾಟಕ ಜನಸಂಖ್ಯೆ ಸುಮಾರು ಎರಡೂವರೆ ಕೋಟಿ. ಈಗ ಒಂದು ಶತಮಾನ ಕಳೆದ ಮೇಲೆ ಕರ್ನಾಟಕದ ಜನಸಂಖ್ಯೆ ಆರು ಕೋಟಿಯ ಮೂವತ್ತು ಲಕ್ಷ, ಆದರೆ ನಾವು ಮುದ್ರಿಸುವ ಪುಸ್ತಕದ ಪ್ರತಿಗಳು ಇನ್ನೂ ಒಂದು ಸಾವಿರವನ್ನು ಮೀರಿಲ್ಲ. ಅದರಲ್ಲೂ ಕವನ ಸಂಕಲನಗಳಾದರೆ ೫೦೦ಕ್ಕೂ ಕಡಿಮೆ. ಅಂದರೆ ಕನ್ನಡದ ಓದುಗರ ಸಂಖ್ಯೆ ಅಪಾಯದ ಮಟ್ಟಕ್ಕೆ ಇಳಿದಿದೆ ಎಂದರ್ಥ. ಇದಕ್ಕೆ ಪೂರಕವಾಗಿ ಈಚಿನ ದಿನಗಳಲ್ಲಿ ಭಾಷಾ ಅಧ್ಯಯನವನ್ನು ‘ಅನುತ್ಪಾದಕ’ ಎಂದು ಅನಧಿಕೃತವಾಗಿ ಘೋಷಿಸಲಾಗಿದೆ. ಸ್ಪರ್ಧಾತ್ಮಕ ಆರ್ಥಿಕತೆಯ ಹಿಂದೆ ಬಿದ್ದಿರುವ ಜನರಿಗೆ ಭಾಷೆ ಮತ್ತು ಸಾಹಿತ್ಯ ಬೇಡವಾಗಿದೆ. ಇಂಥ ಸಂದರ್ಭದಲ್ಲಿ ನಾವು ಕನ್ನಡವನ್ನು ಉಳಿಸಿ ಬೆಳೆಸಲು ಕೆಲವು ಯೋಜನೆಗಳನ್ನು ರೂಪಿಸುವುದು ಅಗತ್ಯ.

ಕನ್ನಡವು ಹುಟ್ಟಿನಿಂದಲೇ ಒಂದು ಮುಕ್ತ ಭಾಷೆ. ಎಲ್ಲವನ್ನೂ ಒಳಗೊಳ್ಳುತ್ತಾ ಬೆಳೆಯುವುದು ಅದರ ಮೂಲ ಗುಣ.  ಬರೆದಂತೆ ಓದುವುದು, ಓದಿದಂತೆ ಬರೆಯುವುದು ಕನ್ನಡದ ವೈಶಿಷ್ಟ್ಯವಾಗಿದೆ. ಆದ್ದರಿಂದಲೇ ಅದು  ʼಪರಿಪೂರ್ಣ ಲಿಪಿಯುಳ್ಳ ಭಾಷೆʼ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಷ್ಟೊಂದು ಅರ್ಥಪೂರ್ಣವಾದ ಲಿಪಿಯನ್ನು ಪಡೆದ ಭಾಷೆಯನ್ನು ಕನ್ನಡದ ಕವಿಗಳು ಅದರ ಮೂಲ ಗುಣ ನಷ್ಟವಾಗದಂತೆ ಸೊಗಸಾಗಿ ಬೆಳೆಸಿದ್ದಾರೆ. ಅರಸರ ಆಜ್ಞೆಯ ಮೇರೆಗೆ  ಪ್ರಭುಸಮ್ಮಿತವಾದ ಶಾಸನಗಳನ್ನು ಬರೆಯಬೇಕಾಗಿದ್ದ ಶಾಸನಕಾರರು ಕಲ್ಲಿನಲ್ಲಿ ಕಾವ್ಯ ಬರೆದರು. ಕ್ರಿಸ್ತ ಶಕ ಏಳನೇ ಶತಮಾನದಲ್ಲಿ ರಚಿತವಾದ ಕಪ್ಪೆ ಅರಭಟ್ಟನ  ಬಾದಾಮಿ ಶಾಸನವು ಕನ್ನಡ ಜನಪದ ಹಾಡುಗಳ ಜೀವ ಕೇಂದ್ರವಾದ ತ್ರಿಪದಿಯಲ್ಲಿಯೇ ರಚಿತವಾಯಿತು-

ಸಾಧುಗೆ ಸಾಧು ಮಾಧುರ್ಯನ್ಗೆ ಮಾಧುರ್ಯಂ

ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್‌

ಮಾಧವನ್‌ ಈತನ್‌ ಪೆರನಲ್ಲ। (ಇವನು ಸಾಧುಗಳಿಗೆ ಸಾಧು, ಮಧುರವಾದ ನಡತೆಯುಳ್ಳವರಿಗೆ  ಮಧುರವಾದ ಮನುಷ್ಯ; ಬಾಧಿಸುವ ಕಲಿಗೆ ಇವನು ವಿಪರೀತನಾದ ಕಲಿಯುಗ. ಇವನು ವಿಷ್ಣುವೇ ಹೊರತು ಬೇರೆಯಲ್ಲ ).

ಕಪ್ಪೆ ಅರೆಭಟ್ಟನ ಶಾಸನ (ಚಿತ್ರಕೃಪೆ: ಶಾಸನ‌, ಫೇಸ್‌ಬುಕ್‌ ಪೇಜ್)

ಒಂಬತ್ತನೇ ಶತಮಾನದ ಹೊತ್ತಿಗೆ ಕನ್ನಡ ಭಾಷೆಯು ಪ್ರೌಢವಾಗಿ ಬೆಳೆದಿತ್ತು ಎಂಬುದಕ್ಕೆ ಶ್ರೀವಿಜಯನ ಕವಿರಾಜ ಮಾರ್ಗ ಮತ್ತು ಶಿವಕೋಟ್ಯಾಚಾರ್ಯನ ವಡ್ಡಾರಾಧನೆ ಒಳ್ಳೆಯ ಉದಾಹರಣೆಗಳು. ಕವಿರಾಜ ಮಾರ್ಗಕಾರ ಕನ್ನಡಿಗರನ್ನು ಬಣ್ಣಿಸುವ ಈ ಕೆಳಗಿನ ಪದ್ಯ ಸುಂದರವಾಗಿದೆ-  

ಪದನರಿದು ನುಡಿಯಲುಂ ನುಡಿ
ದುದನರಿದಾರಯಲುಮಾರ್ಪರಾ ನಾಡವರ್ಗಳ್
ಚದುರರ್ ನಿಜದಿಂ ಕುರಿತೋ
ದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್

(ಕನ್ನಡನಾಡಿನ ಜನರು ಪದದ ಅರ್ಥವನ್ನು ಅರಿತು ಮಾತನಾಡುವ ಸಾಮರ್ಥ್ಯವುಳ್ಳವರು. ತಾವು ಆಡುವ ಮಾತನ್ನು ಅರ್ಥಮಾಡಿಕೊಂಡು ನಡೆಯುವವರು. ಆ ಜನರು ನಿಜವಾಗಿಯೂ ಚತುರರು, ಅವರು ಶಿಕ್ಷಣವನ್ನು ಪಡೆಯದಿದ್ದರು ಕಾವ್ಯವನ್ನು ರಚಿಸುವಷ್ಟು ಪರಿಣತಿ ಹೊಂದಿದ ಬುದ್ಧಿಯುಳ್ಳವರು.

ಮುಂದೆ ಕನ್ನಡದ ಘನತೆಯನ್ನು ಹೆಚ್ಚಿಸಿದ ಕವಿಯೆಂದರೆ ಪಂಪನೇ. ಅವನು ಕನ್ನಡದ ಆದಿ ಕವಿಯೂ ಹೌದು, ಮಹಾಕವಿಯೂ ಹೌದು. ವ್ಯಾಸನ ಸಂಸ್ಕೃತ ಭಾರತವನ್ನು ಭಾರತದ ದೇಸೀ ಭಾಷೆಯೊಂದರಲ್ಲಿ ಮೊದಲು ಬರೆದ ಶ್ರೇಯಸ್ಸು ಇವನಿಗೆ. ಭಾರತದ ಇತರ ಅಭಿಜಾತ ಭಾಷೆಗಳಾದ ಒಡಿಯಾ, ತಮಿಳು, ತೆಲುಗು, ಮಲೆಯಾಳಂಗಳಲ್ಲಿ ಮಹಾಭಾರತ ಕಾಣಿಸಿಕೊಂಡದ್ದು ಆಮೇಲೆ. ಅಸಾಮಾನ್ಯ  ಪ್ರತಿಭೆಯ ಪಂಪನು ಸಂಸ್ಕೃತ ಭಾರತವನ್ನು ಕನ್ನಡವಾಗಿಸುವಾಗ ಕೃಷ್ಣನನ್ನೂ ಗೌಣವಾಗಿಸಿದ, ಭಗವದ್ಗೀತೆಯನ್ನೂ ಬದಿಗೆ ಸರಿಸಿದ. ಅರ್ಜುನನನ್ನು ಬನವಾಸಿಯಲ್ಲಿ ಓಡಾಡಿಸಿ, ಮತ್ತೆ ಹುಟ್ಟುವುದಾದರೆ ಹಸ್ತಿನಾವತಿಯಲ್ಲಿ ಅಲ್ಲ, ಬನವಾಸಿಯಲ್ಲಿ ಎಂದು ಹೇಳಿಸಿದ. ಜಾತಿಯಲ್ಲಿ ಹೀನನೆಂಬ ಅಭಿದಾನಕ್ಕೆ ಪಾತ್ರನಾದ ಕರ್ಣನ ಪರವಾಗಿ ನಿಲ್ಲುವ ಪಂಪನು ʼನೆನೆಯದಿರಣ್ಣ ಭಾರತದೊಳು ಪೆರಾರುಮನ್‌, ಒಂದೆ ಚಿತ್ತದಿ ನೆನೆವೊಡೆ ಕರ್ಣನಂ ನೆನೆಯʼ ಎಂದು ಕರ್ಣನ ಪಾತ್ರ ಕಲ್ಪನೆಯನ್ನೇ ಬದಲಾಯಿಸಿ ಕನ್ನಡಕ್ಕೊಂದು ವೈಚಾರಿಕ ನೆಲೆಗಟ್ಟನ್ನೂ ಒದಗಿಸಿಕೊಟ್ಟ. ಇವನಾನಂತರ ಬಂದ ರನ್ನನು ಕನ್ನಡಿಗರ ಕಣ್ಮಣಿ. ಅವನ ಗದಾಯುದ್ಧವನ್ನು ಮೆಚ್ಚದ ಕನ್ನಡಿಗರೇ ಇರಲಾರರು. ರನ್ನನು ದುರ್ಯೋಧನನ ಪಾತ್ರವನ್ನು ಉದಾತ್ತೀಕರಿಸಿ, ʼನೆಲಕ್ಕಿರಿವೆನೆಂದು ಬಗೆದೊಡೆ ಚಲಕ್ಕಿರಿವೆಂʼ ಎಂದು ಅವನ ಬಾಯಲ್ಲಿ ಹೇಳಿಸಿದ. ರನ್ನನ ಭಾಷೆ, ಉತ್ಸಾಹ, ಕೆಚ್ಚು, ಸ್ವಾಭಿಮಾನವು ಕನ್ನಡವನ್ನು ಬೆಳೆಸಿದೆ.

ರನ್ನನ ಸಮಕಾಲೀನನಾದ ನಾಗಚಂದ್ರನು ಕನ್ನಡ ಭಾಷೆಯ ಚೆಲುವನ್ನು ಅತ್ಯದ್ಭುತವಾಗಿ ಹೂವಿನಂತೆ ಅರಳಿಸಿದ ಅಪೂರ್ವ ಕವಿ. ಈತನು ತನ್ನ ʼರಾಮಚಂದ್ರ ಚರಿತ ಪುರಾಣಂʼ ಎಂಬ ಕಾವ್ಯದ ಮೂಲಕ ಕನ್ನಡಕ್ಕೆ ಮೊದಲ ರಾಮಾಯಣವನ್ನು ಕೊಟ್ಟ. ಇದು ಕನ್ನಡಕ್ಕೆ ದುರಂತ ರಾವಣನ ಕಲ್ಪನೆಯನ್ನು ಒದಗಿಸಿಕೊಟ್ಟಿತು. ಇದರಲ್ಲಿ ರಾವಣನು ದುಷ್ಟನಲ್ಲ, ಮಹಾನುಭಾವ.  ಆದರೂ ಕೂಡಾ ʼಕಡಲು ಕಾಲವಶದಿಂದ ಯಾವತ್ತೋ ಒಮ್ಮೆ ಮರ್ಯಾದೆಯನ್ನು ದಾಟುವ ಹಾಗೆʼ, ರಾವಣನು  ಸೀತೆಯ ಮೋಹಕ್ಕೊಳಗಾಗುತ್ತಾನೆ. ಅಪಹರಿಸಿ ತಂದ ಮೇಲೆ ಅವನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ನಾಗಚಂದ್ರ ತಂದಿತ್ತ ದುರಂತ ರಾವಣನ ಕಲ್ಪನೆಯು ಕನ್ನಡ ಪ್ರಜ್ಞೆಯಲ್ಲಿ ಗಾಢವಾಗಿ  ಬೇರೂರಿದ್ದು, ಯಕ್ಷಗಾನ, ಹರಿಕತೆ, ನಾಟಕಗಳಲ್ಲಿ ಈಗಲೂ  ಕಾಣಿಸಿಕೊಳ್ಳುವುದುಂಟು.

೧೧೭೦ರಲ್ಲಿದ್ದ ನೇಮಿಚಂದ್ರನು ಕನ್ನಡ ವಿಮರ್ಶೆಗೆ ನಾಂದಿ ಹಾಡಿದ ಪ್ರಮುಖ ಕವಿ. ಆತನು ತನ್ನ ʼಲೀಲಾವತಿ ಮಹಾಪ್ರಬಂಧಂʼನಲ್ಲಿ ಕವಿಗಳ ಸೃಷ್ಟಿಕ್ರಿಯೆಯ ಬಗ್ಗೆ ಎಲ್ಲ ಕಾಲಕ್ಕೂ ಸಲ್ಲುವ ಮಹತ್ವದ ಮಾತೊಂದನ್ನು ಹೇಳುತ್ತಾನೆ-

ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ ವಾಮನಕ್ರಮಂ|
ಮುಟ್ಟುಗೆ ಮುಟ್ಟದಿರ್ಕೆ ಮುಗಿಲಂ ಹರನಂ ನರನೊತ್ತಿ ಗಂಟಲಂ|
ಮೆಟ್ಟುಗೆ ಮೆಟ್ಟದಿರ್ಕೆ ಕವಿಗಳ್ ಕೃತಿಬಂಧದೊಳಲ್ತೆ ಕಟ್ಟಿದರ್|
ಮುಟ್ಟಿದರೊತ್ತಿ ಮೆಟ್ಟಿದರದೇನಳವಗ್ಗಳಮೋಕವೀಂದ್ರರಾ||

(ವಾನರ ಸೈನ್ಯವು ಸಮುದ್ರಕ್ಕೆ ಸೇತುವೆಯನ್ನು ಕಟ್ಟಲಿ ಕಟ್ಟದಿರಲಿ. ವಾಮನಾವತಾರದಲ್ಲಿ ವಾಮನನು ಆಕಾಶವನ್ನು ತನ್ನ ಕಾಲಿನಿಂದ ಮುಟ್ಟಲಿ ಮುಟ್ಟದಿರಲಿ. ಅರ್ಜುನನು ಶಿವನ ಗಂಟಲನ್ನು ಒತ್ತಿ ಮೆಟ್ಟಲಿ ಮೆಟ್ಟದಿರಲಿ. ಆದರೆ ಕವಿಗಳು ತಮ್ಮ ಕೃತಿಗಳಲ್ಲಿ ವಾನರ ಸೈನ್ಯದಿಂದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದರು; ವಾಮನನ ಕಾಲಿನಿಂದ ಆಕಾಶವನ್ನು ಮುಟ್ಟಿದರು; ಅರ್ಜುನನ ಕಾಲಿನಿಂದ ಶಿವನ ಗಂಟಲನ್ನು ಒತ್ತಿ ಮೆಟ್ಟಿದರು; ಇದು ಕವಿಗಳ ಅಗ್ಗಳಿಕೆ)

ಇವತ್ತು ನಮ್ಮಲ್ಲಿ ಹಲವರಿಗೆ ಕಾವ್ಯ, ಪುರಾಣ, ಐತಿಹ್ಯ, ಚರಿತ್ರೆಗಳ ನಡುವಣ ವ್ಯತ್ಯಾಸಗಳೇ ತಿಳಿದಿಲ್ಲ. ಅವರು ಕವಿಕೃತಿಗಳನ್ನು ಒಂದು ಕಾಲದಲ್ಲಿ ನಡೆದ ಸತ್ಯ ಘಟನೆಗಳೆಂದೇ ನಂಬುತ್ತಾರೆ. ಅಂತವರಿಗೆ ಕಿವಿಮಾತು ಹೇಳಿದ ನೇಮಿಚಂದ್ರನು ಈ ವಿಷಯದಲ್ಲಿ ಕನ್ನಡಿಗರು ಹಾದಿ ತಪ್ಪಬಾರದೆಂದು ಬಹಳ ಹಿಂದೆಯೇ ಎಚ್ಚರಿಸಿದ್ದಾನೆ. ನೇಮಿಚಂದ್ರನ ಕಾಲದವನೇ ಆದ ನಯಸೇನನ ಕಾಲಕ್ಕೆ ಪುರೋಹಿತಶಾಹಿಯು ಕನ್ನಡದ ಮೇಲೆ ಸಂಸ್ಕೃತವನ್ನು ಹೇರುವ ಪ್ರಯತ್ನ ಮಾಡುತ್ತಿದ್ದಿರಬೇಕು. ಅದನ್ನು ಗಮನಿಸಿದ ಆತನು ತನ್ನ ಧರ್ಮಾಮೃತ ಕಾವ್ಯದಲ್ಲಿ –

ಸಕ್ಕದಮಂ ಪೇೞ್ವೊಡೆ ನೆಱೆ
ಸಕ್ಕದಮಂ ಪೇೞ್ಗೆ ಶುದ್ಧ ಕನ್ನಡದೊಳ್ ತಂ|
ದಿಕ್ಕುವುದೇ ಸಕ್ಕದಮಂ
ತಕ್ಕುದೆ ಬೆರೆಸಲ್ಕೆ ಘೃತಮುಮಂ ತೈಲಮುಮಂ (ಸಂಸ್ಕೃತವನ್ನು ಹೇಳುವುದಾದರೆ, ಸಂಸ್ಕೃತದಲ್ಲಿಯೇ ಪೂರ್ತಿಯಾಗಿ ಹೇಳಿ. ಶುದ್ಧವಾದ ಕನ್ನಡದಲ್ಲಿ ಸಂಸ್ಕೃತವನ್ನು ತಂದು ತುರುಕುವುದು ಸರಿಯೇ? ಇವೆರಡನ್ನು ಬೆರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ-ತುಪ್ಪಗಳ ಮಿಶ್ರಣವಾಗದೇ?) ಎಂದು ಗದರಿಸುತ್ತಾನೆ.

ಹೀಗೆ ಬೇರೆ ಭಾಷೆಗಳೊಡನೆ ಗುದ್ದಾಡುತ್ತಾ ಕನ್ನಡವನ್ನು ಬೆಳೆಸುತ್ತಿದ್ದ ಕವಿಗಳ ನಡುವೆ ಜನಭಾಷೆಗೆ ಮಹತ್ವ ತಂದುಕೊಟ್ಟವರು ನಿರ್ವಿವಾದವಾಗಿ ವಚನಕಾರರು. ಅವರು ದೇವರಿಗೇ ಕನ್ನಡ ಕಲಿಸಿದ ಕ್ರಾಂತಿಕಾರಿಗಳು. ವಚನಕಾರರು ಮೊದಲ ಬಾರಿಗೆ ಭಾಷೆಯಲ್ಲಿ ಕಂಡು ಬರುವ ಶ್ರೇಣೀಕರಣ ಮತ್ತು ಮಡಿ ಮೈಲಿಗೆಯನ್ನು ನಿರಾಕರಿಸಿ ವಿಪ್ರ ಮತ್ತು ಅಂತ್ಯಜರನ್ನು ಒಂದೇ ನೆಲೆಗಟ್ಟಿನಲ್ಲಿ ನಿಲ್ಲಿಸಿ ಮಾತಾಡಿದರು. ವಚನಕಾರರ ಹಸನಾದ ಭಕ್ತಿಗೆ  ಉತ್ಸಾಹದ ಲಯವನ್ನು ಸೇರಿಸಿದವ ಹರಿಹರ.  ಆತ ಕನ್ನಡ ಓದಬಲ್ಲ ಯಾರನ್ನಾದರೂ ಕುಣಿಯುವ ಹಾಗೆ ಮಾಡಬಲ್ಲ ಉನ್ಮತ್ತ ಕವಿ. ಆತ ಮೊದಲ ಬಾರಿಗೆ ಸಂಸ್ಕೃತ ಮತ್ತು ಪ್ರಾಕೃತ ಮೂಲಗಳ ಕಡೆಗೆ ಮುಖ ಮಾಡದೆ ಪಕ್ಕದ ತಮಿಳಿನ ಕಡೆಗೆ ನೋಡಿ, ಅಲ್ಲಿಂದ ಪ್ರೇರಣೆ ಪಡೆದು ಕನ್ನಡವನ್ನು ಬೆಳೆಸಿದ.

ಹರಿಹರನ ಉತ್ಸಾಹವನ್ನು ನಡುಗನ್ನಡದ ಮಹಾನ್‌ ಕವಿಗಳಾದ ರಾಘವಾಂಕ, ಕುಮಾರವ್ಯಾಸ, ಚಾಮರಸ, ಕನಕದಾಸ, ಲಕ್ಷ್ಮೀಶ, ತೊರವೆಯ ನರಹರಿ ಮೊದಲಾದವರು ಇನ್ನಷ್ಟು ವಿಸ್ತರಿಸಿದರು. ಕುಮಾರವ್ಯಾಸನಂತೂ ಕನ್ನಡವನ್ನು ಬೆರಳ ತುದಿಯಲ್ಲಿ ಕುಣಿಸಬಲ್ಲ ಜಾದೂಗಾರ, ಯಾವ ಭಾಷೆಯಿಂದ ಏನು ತಂದು ಹಾಕಿದರೂ ಅದನ್ನು ಕನ್ನಡವಾಗಿಸಬಲ್ಲ ಮಾಟಗಾರ. ಲಕ್ಷ್ಮೀಶನು ನುರಿತ ವೈಣಿಕನೊಬ್ಬ ವೀಣೆಯನ್ನು ನುಡಿಸಿದಂತೆ ಕನ್ನಡವನ್ನು ನುಡಿಸಿದ ಕಲಾಕಾರ. ೧೬ನೇ ಶತಮಾನದಲ್ಲಿದ್ದ ರತ್ನಾಕರವರ್ಣಿಯು ಕರ್ನಾಟಕದಲ್ಲಿದ್ದ ತುಳು, ತೆಲುಗು ಭಾಷೆಗಳಿಗೂ ಮನ್ನಣೆ ನೀಡಿದ ಉದಾರವಾದಿ.

ಕ್ರಿ ಶ ೧೬೭೫ರಲ್ಲಿದ್ದ ಮಹಲಿಂಗರಂಗ ಕವಿ ಬರೆದ ಅನುಭವಾಮೃತ ಎಂಬ ಗ್ರಂಥವು ಅವನ ಕನ್ನಡ ಪ್ರೇಮದಿಂದಾಗಿ ಇವತ್ತಿನವರೆಗೂ ಉಳಿದಿದೆ. ಅವನು ಬರೆದ ಕೆಳಗಿನ ಸಾಲುಗಳು ಗೊತ್ತಿಲ್ಲದ ಕನ್ನಡಿಗರಿದ್ದಾರೆಯೇ?

ಸುಲಿದ ಬಾಳೆಯ ಹಣ್ಣಿನಂದದಿ

ಕಳಿದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ
ಗಳಿಸಿಕೊಂಡರೆ ಸಾಲದೇ ಸಂಸ್ಕೃತದಲಿನ್ನೇನು?

ಪುರಂದರ ದಾಸರು (ಚಿತ್ರಕೃಪೆ: ಇಂಟರ್ನೆಟ್)

ಕನ್ನಡದ ಕವಿಗಳು ತಮ್ಮ ಸೃಜನಶೀಲತೆಯನ್ನು ಆಳರಸರಿಗೆ ಒತ್ತೆಯಿಡದ ವೈಚಾರಿಕತೆಯನ್ನು ಕಾಯ್ದುಕೊಂಡದ್ದನ್ನು ನಾವು ಮರೆಯಬಾರದು. ವಿಜಯನಗರ ಸಾಮ್ರಾಜ್ಯವನ್ನು ಎಲ್ಲರೂ ಮೈಮರೆತು ಹಾಡಿ ಹೊಗಳುತ್ತಿರುವಾಗ ಪುರಂದರದಾಸರು  ಧೈರ್ಯವಾಗಿ ಅದರ ವೈಭವವನ್ನು ನಿರಾಕರಿಸಿ , ಅವೆಲ್ಲವೂ

ʼಲೊಳಲೊಟ್ಟೆ ಎಲ್ಲ ಲೊಳಲೊಟ್ಟೆ ʼ
ಆನೆ ಕುದುರೆ ಒಂಟೆ ಲೊಳಲೊಟ್ಟೆ ಬಹು 
ಸೇನೆ ಭಂಡಾರವು ಲೊಳಲೊಟ್ಟೆ 
ಮುತ್ತು ಮಾಣಿಕ್ಯ ಲೊಳಲೊಟ್ಟೆʼ

ಎಂದು ಧೈರ್ಯವಾಗಿ ಬರೆದರು.

ಕನ್ನಡವು ಮಡಿವಂತರ ಭಾಷೆಯಲ್ಲ ಎಂಬುದಕ್ಕೆ ಆಂಡಯ್ಯ ಒಳ್ಳೆಯ ಉದಾಹರಣೆ. ಅವನು ಬಹಳ ನಿಷ್ಠೆಯಿಂದ ಸಂಸ್ಕೃತ ಪದಗಳನ್ನು ಬಳಸದೆಯೇ ʼಕಬ್ಬಿಗರ ಕಾವʼ ಎಂಬ ಕಾವ್ಯವನ್ನು ಬರೆದರೂ ಅವನ ಕಾವ್ಯವೇನೂ ಅಂತ ಮನ್ನಣೆಗೆ ಒಳಗಾಗಲಿಲ್ಲ.

ಇಂಥ ಉಜ್ವಲ ಪರಂಪರೆಗೆ ನಾವು ಉತ್ತರಾಧಿಕಾರಿಗಳಾಗುವುದು ಹೇಗೆ ಎಂದು ಯೋಚಿಸಲು ಇದು ಸಕಾಲ.

ಪುರುಷೋತ್ತಮ ಬಿಳಿಮಲೆ

ಜಾನಪದ, ಯಕ್ಷಗಾನ, ಸಾಂಸ್ಕೃತಿಕ ಸಂಶೋಧನೆ ಮತ್ತು ಅಧ್ಯಯನಗಳಲ್ಲಿ ಇವರದು ಬಹು ಮುಖ್ಯ ಹೆಸರು.

Related Articles

ಇತ್ತೀಚಿನ ಸುದ್ದಿಗಳು