Thursday, June 20, 2024

ಸತ್ಯ | ನ್ಯಾಯ |ಧರ್ಮ

ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕಾ ಕಾರ್ಯಕ್ರಮ: ಸಚಿವ ಡಾ.ಕೆ.ಸುಧಾಕರ್‌

ಬೆಂಗಳೂರು: ಜಿಲ್ಲಾಡಳಿತ ವತಿಯಿಂದ ನಡೆದ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಜ್ಯದ ಎಲ್ಲಾ ವೈದ್ಯಕೀಯ, ಅರೆ ವೈದ್ಯಕೀಯ, ನರ್ಸಿಂಗ್ ಕಾಲೇಜುಗಳ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನು ಕಲಿಸುವ ಕಾರ್ಯಕ್ರಮವನ್ನು ಇದೇ ವರ್ಷದಿಂದ ಜಾರಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಘೋಷಣೆ ಮಾಡಿದ್ದಾರೆ.

ಸಮಾರಂಭದಲ್ಲಿ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್‌, ʼಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿ ಮಾಡಿದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ, ಮಾತೃಭಾಷಾ ಕಲಿಕೆಗೆ ಆದ್ಯತೆ ನೀಡಲಾಗಿದೆ. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕೆಲ ರಾಜ್ಯಗಳಲ್ಲಿ ಈಗಾಗಲೇ ಮಾತೃಭಾಷೆಯಲ್ಲಿ ಕಲಿಯಲು ಅವಕಾಶ ನೀಡಲಾಗಿದೆ. ಇದೇ ನವ ಭಾರತದ ಪರಿಕಲ್ಪನೆಯಾಗಿದೆ. ಅದೇ ರೀತಿ, ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದ ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳಿಗೆ ಇದೇ ವರ್ಷದಿಂದ ಕನ್ನಡ ಭಾಷೆಯನ್ನು ಕಲಿಸುವ ಕಾರ್ಯಕ್ರಮವನ್ನು ಜಾರಿ ಮಾಡಲಾಗುವುದು. ಕರ್ನಾಟಕದಲ್ಲಿ ನಾವು ಇರುವುದಲ್ಲ, ನಮ್ಮೊಳಗೆ ಕರ್ನಾಟಕ ಇರಬೇಕು. ಅದಕ್ಕಾಗಿ ʼಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ 2022ʼ ತರುವ ಚಿಂತನೆ ಸರ್ಕಾರಕ್ಕಿದೆʼ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಹೋದರೆ ವಿಭಿನ್ನವಾದ ಸೊಗಸಾದ ಭಾಷೆ ಕೇಳಬಹುದು. ಹಳೇ ಮೈಸೂರಿಗೆ ಹೋದರೆ ಬೇರೆ ರೀತಿಯ ಕನ್ನಡ ಕೇಳಬಹುದು. ಉತ್ತರ ಕನ್ನಡ ಜಿಲ್ಲೆಗೆ ಹೋದರೆ ಹವ್ಯಕ ಕನ್ನಡ, ದಕ್ಷಿಣ ಕನ್ನಡಕ್ಕೆ ಹೋದರೆ ಬೇರೆ ಶೈಲಿಯ ಕನ್ನಡ, ಕುಂದಾಪುರಕ್ಕೆ ಹೋದರೆ ಕುಂದ ಕನ್ನಡ ಕೇಳಬಹುದು. ಹಾಗೆಯೇ ಆಚಾರ, ವಿಚಾರ, ತಿಂಡಿಗಳು ಬದಲಾಗುತ್ತವೆ. ಯಕ್ಷಗಾನ, ಬಯಲಾಟ, ವೀರಗಾಸೆ, ದೈವಾರಾಧನೆ, ಜೋಗಪ್ಪ ಮೊದಲಾದ ಕಲೆಗಳು ನಮ್ಮಲ್ಲಿವೆ ಎಂದು ಮಾತನಾಡಿದರು.

ಕನ್ನಡಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ಜಗತ್ತಿನಲ್ಲಿ ಆರೂವರೆ ಸಾವಿರ ಭಾಷೆಗಳಲ್ಲಿ ಕನ್ನಡ 27ನೇ ಸ್ಥಾನದಲ್ಲಿದೆ ಎನ್ನಲಾಗುತ್ತದೆ. ವಿಶ್ವ ಲಿಪಿಗಳ ರಾಣಿ ಎಂದು ಕನ್ನಡದ ಲಿಪಿಯನ್ನು ಬಣ್ಣಿಸಲಾಗಿದೆ. ಭಾರತವನ್ನು ಹಲವಾರು ದಶಕ ಆಳಿದ ಬ್ರಿಟಿಷರ ದೇಶದ ಪ್ರಧಾನಿಯಾಗಿ ಕರ್ನಾಟಕದ ಅಳಿಯ ರಿಷಿ ಸುನಕ್‌ ಆಯ್ಕೆಯಾಗಿದ್ದಾರೆ ಎಂಬುದು ಹೆಮ್ಮೆಯ ವಿಚಾರ ಎಂದರು.

ನಾಡಪ್ರಭು ಕೆಂಪೇಗೌಡರು ಆಗಿನ ಕಾಲದಲ್ಲೇ ಸರ್ವಜನಾಂಗದ ಶಾಂತಿ ತೋಟ ಸ್ಥಾಪಿಸಿದ್ದರು. ಸಮಾನತೆಗೆ ಒತ್ತು ಕೊಟ್ಟಿದ್ದ ಅವರು, ಜಾತಿ ಸಮುದಾಯಗಳಿಗೆ ಪೂರಕವಾಗಿ ಪೇಟೆಗಳನ್ನು ನಿರ್ಮಾಣ ಮಾಡಿದ್ದರು. ಅಂತಹ ಪುಣ್ಯಾತ್ಮನನ್ನು ನಮ್ಮ ಸರ್ಕಾರ ಸ್ಮರಣೆ ಮಾಡುತ್ತಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 108ಅಡಿ ಎತ್ತರದ ಪ್ರತಿಮೆ ನಿರ್ಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್‌ 11ರಂದು ಈ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಇದು ಬೆಂಗಳೂರು ಗ್ರಾಮಾಂತರದ ಜನರಿಗೆ ವಿಶೇಷ ಕ್ಷಣವಾಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.

100 ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. 438 ನಮ್ಮ ಕ್ಲಿನಿಕ್‌ಗಳನ್ನು ಇದೇ ನವೆಂಬರ್‌ನಲ್ಲಿ ಆರಂಭಿಸಲಾಗುವುದು. ಬಡತನ ರೇಖೆಗಿಂತ ಕೆಳಗಿರುವವರಿಗೆ ಗುಣಮಟ್ಟದ ಶಿಕ್ಷಣ, ಆರೋಗ್ಯ ನೀಡುವ ಕೆಲಸವಾಗುತ್ತಿದೆ ಎಂದು ಮಾತನಾಡಿದರು.

ರಾಜ್ಯದ ಯುವಜನರು ಕನ್ನಡ ಭಾಷೆ, ಸಾಹಿತ್ಯವನ್ನು ಹೆಚ್ಚು ಅಧ್ಯಯನ ಮಾಡಬೇಕು. ಕನ್ನಡಿಗರು ವಿಶ್ವಮಾನವರಾಗಬೇಕು ಎಂದು ಕವಿ ಕುವೆಂಪು ಹೇಳಿದ್ದರು. ಅದರ ಜೊತೆಗೆ ಕನ್ನಡ ಭಾಷೆ ಎಲ್ಲರಲ್ಲೂ ಗಟ್ಟಿಯಾಗಿ ಬೇರೂರಬೇಕು ಎಂದರು.

ತನು ಕನ್ನಡ, ಮನ ಕನ್ನಡ ಎಂಬಂತೆ ನಮ್ಮೆಲ್ಲರ ಮನಸ್ಸು, ಹೃದಯ ಎಲ್ಲವೂ ಕನ್ನಡವಾಗಲಿ ಎಂದು ಹಾರೈಸುತ್ತೇನೆ. ರಾಷ್ಟ್ರಕವಿ ಕುವೆಂಪು ಅವರು ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದು ಹೇಳಿದ್ದರು. ಅದು ನಮಗೆ ಸ್ಪೂರ್ತಿಯಾಗಬೇಕು ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು