Friday, June 14, 2024

ಸತ್ಯ | ನ್ಯಾಯ |ಧರ್ಮ

ದೈವಗಳ ವೈದಿಕೀಕರಣದ ಮಜಲುಗಳು

ಜುಮಾದಿ, ಲೆಕ್ಕೆಸಿರಿಯಂತಹ ಅನೇಕ ದೈವಗಳು ಸಂಸ್ಕೃತೀಕರಣಗೊಂಡು ಧೂಮಾವತಿ, ರಕ್ತೇಶ್ವರಿಗಳಾಗಿ ಬದಲಾಗಿವೆ. ತುಳುವರ ಪಂಜುರ್ಲಿಯೂ ಕೂಡ ಸಂಸ್ಕೃತದ ವರಾಹ ಮೂರ್ತಿಯಾಗಿದ್ದಾನೆ. ಲಾಭಕ್ಕೆ ತಕ್ಕಂತೆ ಅನ್ಯರ ಆಚರಣೆಗಳನ್ನು ತಮ್ಮದಾಗಿಸಿಕೊಳ್ಳುವುದು ವೈದಿಕರಿಗೆ ಹೊಸತೇನಲ್ಲ ಎನ್ನುವ ಲೇಖಕ ಶಂಕರ್‌ ಸೂರ್ನಳ್ಳಿ ಅವರ ಈ ಲೇಖನವು  ವೈದಿಕ ಪ್ರಭಾವವು ದೈವಾರಾಧನೆಯ ಮೂಲ ನೆಲೆಗಟ್ಟನ್ನು ಅಲುಗಾಡಿಸಿದೆ ಎಂಬ ಸತ್ಯವನ್ನು ತೆರೆದಿಡುತ್ತದೆ.

ರಿಷಭ್ ಶೆಟ್ಟಿಯವರ ಸೂಪರ್ ಹಿಟ್ ’ಕಾಂತಾರ’ ಸಿನಿಮಾ ಭರ್ಜರಿ ಯಶಸ್ಸಿನ ಜೊತೆಗೆ ಅನೇಕ ಚರ್ಚೆಗಳನ್ನು ಹುಟ್ಟು ಹಾಕಿದೆ. ಅವುಗಳಲ್ಲೊಂದು ಕರಾವಳಿಯ ದೈವಗಳ ವೈದಿಕೀಕರಣದ ಕುರಿತಾದದ್ದು. ಕಾಂತಾರ ಸಿನಿಮಾ ಟೈಟಲ್ ನಲ್ಲಿ ಕಾಣಿಸುವ ಓಂ ಚಿಹ್ನೆ, ಸಿನಿಮಾದಲ್ಲಿ ಬರುವಂತಹ ವರಾಹ ಮೂರ್ತಿಯ ಸಂಸ್ಕೃತ ಹಾಡುಗಳಲ್ಲದೇ ಕನ್ನಡದ ನಟ ಚೇತನ್ ರವರು ಇದೇ ಹಿನ್ನೆಲೆಯಲ್ಲಿ ಕರಾವಳಿಯ ದೈವಗಳ ಕುರಿತಂತೆ ಹಿಂದೂ ಧರ್ಮವನ್ನುಲ್ಲೇಖಿಸಿ ಆಡಿದಂತಹ ಮಾತುಗಳು ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ.

ಹೌದು, ಕರಾವಳಿಯ ದೈವಗಳ ಕುರಿತಾಗಿ ಇದೇನು ಹೊಸದಾಗಿ ಹುಟ್ಟಿದಂತಹ ವಿಚಾರವೇನಲ್ಲ. ಹಿಂದಿನಿಂದಲೂ ದೈವಾರಾಧನೆಯ ಕುರಿತಂತೆ ಸಂಶೋಧನೆ ಕೈಗೊಂಡ ವಿದ್ವಾಂಸರುಗಳು ಈ ಕುರಿತಂತೆ ಸಾಕಷ್ಟು ಬರೆದಿದ್ದಾರೆ. ವೈದಿಕ ಸಂಪ್ರದಾಯಗಳಿಗೆ ಹೊರತಾದ ಕರಾವಳಿಯ ದೈವಾರಾಧನೆಯ ಪದ್ಧತಿಯ ವಿಭಿನ್ನತೆಯನ್ನು ಈಗಾಗಲೇ ದಾಖಲಿಸಲಾಗಿದೆ. ಹೀಗಿದ್ದೂ ಕೂಡ ತಳ ಸಮುದಾಯದವರ ಈ ದೈವಾರಾಧನೆ ಯಾವುದೋ ಒಂದು ಬಗೆಯಲ್ಲಿ ಮುಖ್ಯವಾಗಿ ಇತ್ತೀಚೆಗಿನ ದಿನಗಳಲ್ಲಿ ವೈದಿಕ ಸಂಪ್ರದಾಯದೊಂದಿಗೆ ಕಳೆದು ಹೋಗುತ್ತಿರುವುದಕ್ಕೆ ಕಾರಣವಾದರೂ ಏನಿರಬಹುದು?

ದೈವ ಭೂತಗಳೆಲ್ಲ ಎಂದೋ ಪರಶಿವನ ಗಣ ಸೇರಿದುವು!

ಕಾಂತಾರ ಸಿನಿಮಾದಲ್ಲಿ ಪ್ರಮುಖವಾಗಿ ತೋರಿಸಲಾದ ದೈವಗಳೆಂದರೆ ತುಳುನಾಡಿನಲ್ಲಿ ಅದರದ್ದೇ ಆದ ಮಹತ್ವವನ್ನು ಹೊಂದಿರುವ ಗುಳಿಗ ಹಾಗು ಪಂಜುರ್ಲಿ ದೈವಗಳು. ತುಳುನಾಡಿನ ಪಂಜುರ್ಲಿ ದೈವದ ಕಥೆಯಲ್ಲಿ ಶಿವ ಪಾರ್ವತಿಯರು ಪ್ರಮುಖವಾಗಿ ಕಾಣಿಸಿಕೊಂಡರೆ ಗುಳಿಗನ ಕಥೆಯಲ್ಲೂ ಹಿಂದೂ ಪುರಾಣದ ತ್ರಿಮೂರ್ತಿಗಳು ಬರುತ್ತಾರೆ. ಇದೀಗ ಬಲು ಖ್ಯಾತನಾಗಿರುವ ಕೊರಗಜ್ಜನನ್ನು ಸ್ತುತಿಸುವ ಹಾಡುಗಳಲ್ಲೂ ಕೂಡ ಕೊರಗಜ್ಜನನ್ನು ಶಿವನ ಅಂಶ ಎಂದೇ ಸ್ತುತಿಸಲಾಗುತ್ತಿದೆ. ಕರಾವಳಿಯಲ್ಲಿ ಕಂಡುಬರುವ ದೈವ ಭೂತಗಳನ್ನೆಲ್ಲ ಸಾರಾಸಗಟಾಗಿ ಪರಶಿವನ ಗಣಗಳಿಗೆ ಸೇರಿಸಿ ಯಾವುದೋ ಕಾಲವಾಗಿದೆ. ಹಾಗೆಂದು ಹದಿನೆಂಟು ಪುರಾಣಗಳಲ್ಲಾಗಲೀ, ಮತ್ಯಾವುದೋ ಹಿಂದೂ ಗ್ರಂಥಗಳಲ್ಲಾಗಲೀ ಈ ಪಂಜುರ್ಲಿ, ಗುಳಿಗ, ಕೊರಗಜ್ಜನಂತವರ ಪಾತ್ರಗಳ ಯಾವ ಉಲ್ಲೇಖವೂ ಎಲ್ಲೂ ಕಾಣಸಿಗದು. ಅಂದರೆ ಇವುಗಳೆಲ್ಲ ಕಾಲಮಾನದ ಸ್ಥಳೀಯ ಮಾರ್ಪಾಟುಗಳೇ ವಿನಹ ವಿಶೇಷವಾದುದೇನೂ ಇಲ್ಲ.
ಕರಾವಳಿ ಕರ್ನಾಟಕದ ಪರಿಸರ ಪ್ರಾಚೀನ ಕಾಲದಿಂದಲೂ ವಿದೇಶದೊಂದಿಗೆ ಸಂಪರ್ಕವಿಟ್ಟುಕೊಂಡಂತಹ ಭಾಗವಾಗಿತ್ತೆನ್ನುವುದಕ್ಕೆ ಅನೇಕ ಐತಿಹಾಸಿಕ ಪುರಾವೆಗಳಿವೆ. ಹಾಗಾಗಿ ಈ ಪರಿಸರಕ್ಕೆ ಹಿಂದಿನಿಂದಲೂ ಅದರದ್ದೇ ಆದ ಸಂಸ್ಕೃತಿ ಪರಂಪರೆಗಳೂ ಇದ್ದಿದ್ದವೇ ಹೊರತು ಹೊರಗಿನಿಂದ ಬಂದಂತವರಿಂದಾಗಿ ಇಲ್ಲಿನ ನಾಗರೀಕತೆ ಹೊಸತಾಗಿ ರೂಪುಗೊಂಡದ್ದೇನಲ್ಲ. ಕೆಲ ರಾಜಕೀಯ ಹಾಗು ಸಾಮಾಜಿಕ ಪಲ್ಲಟಗಳಿಂದಾಗಿ ವೈದಿಕರ ಆಗಮನದ ಬಳಿಕ ಇಲ್ಲಿನ ಸಂಸ್ಕೃತಿಯಲ್ಲಿ ಅವರ ಪ್ರಭಾವ ಹೆಚ್ಚ ತೊಡಗಿತಾದರೂ ಇಲ್ಲಿನ ಕೆಲ ಮೂಲನಂಬಿಕೆಗಳನ್ನು ಮರೆಯಾಗಿಸಲು ಪ್ರಭುತ್ವದ ಬಲವಿದ್ದ ಅವರಿಂದಲೂ ಕೂಡ ಸಾಧ್ಯವಾಗದೇ ಹೋಯಿತು. ಅಂತಾದ್ದರಲ್ಲಿ ಇಲ್ಲಿನ ಮೂಲನಿವಾಸಿಗಳು ತಮ್ಮ ಗತಿಸಿದ ಪ್ರಮುಖ ಹಿರಿಯರನ್ನು ನೆನಪಿಸಿ ಆಹ್ವಾಹಿಸಿಕೊಂಡು ಆರಾಧಿಸುವ ದೈವಾರಾಧನೆಯ ಆಚರಣೆಯೂ ಒಂದು.
ದೈವಗಳ ಚರಿತ್ರೆಗಳಲ್ಲಿ ಹೋರಾಟದ ಉಲ್ಲೇಖಗಳು

ಕರಾವಳಿಯ ದೈವಾರಾಧನೆಗೆ ಸಂಬಂಧಿಸಿದಂತೆ ಇಲ್ಲಿ ಸರಿ ಸುಮಾರು ಸಾವಿರದಷ್ಟು ದೈವಗಳನ್ನು ಗುರುತಿಸಲಾಗಿದೆ. ಪಂಜುರ್ಲಿ, ಕಲ್ಲುರ್ಟಿ, ಸಿರಿ, ಕೊರಗಜ್ಜ, ಬಬ್ಬುಸ್ವಾಮಿ, ಕೋಟಿ ಚೆನ್ನಯರಂತಹ ತುಳುನಾಡಿನ ಅನೇಕ ಪ್ರಮುಖ ದೈವಗಳ ಚರಿತ್ರೆಗಳಲ್ಲಿ ಹೋರಾಟದ, ದಬ್ಬಾಳಿಕೆಯನ್ನು ಎದುರಿಸಿ ನಿಂತಂತಹ ಅಥವ ನಿಂತು ಮರಣಿಸಿ (ಮಾಯವಾ)ದಂತಹ ನೇರ ಅಥವಾ ಸೂಚ್ಯ ಉಲ್ಲೇಖಗಳನ್ನು ಗುರುತಿಸಬಹುದು. ಪಂಜುರ್ಲಿಯ ಕಥೆ ಪ್ರಾಣಿ ಸಂಬಂಧಿ ಚರಿತ್ರೆಯಂತೆ ತೋರಿದರೂ ಇಲ್ಲಿ ಬರುವ ಪ್ರವೇಶ ನಿರಾಕರಣೆ, ಕುಟುಂಬ, ಮಕ್ಕಳು ಮೊದಲಾದ ಸಾಮಾಜಿಕ ಅಂಶಗಳನ್ನು ನೋಡಿದರೆ ಹಂದಿ ಕೇವಲ ರೂಪಕದಂತಷ್ಟೆ ತೋರುತ್ತದೆ. ತುಳುವಿನ ಪಂಜಿ (ಹಂದಿ) ಮೂಲದ ಪಂಜುರ್ಲಿಯ ಮತ್ತೊಂದು ಹೆಸರು ಅಣ್ಣಪ್ಪನೆಂದು ಪಂಜುರ್ಲಿ ಕುರಿತ ಪಾಡ್ದನ ಕತೆಗಳಲ್ಲೇ ಬರುತ್ತದೆ. ಮೇಲ್ವರ್ಗದವರು, ಜಮೀನುದಾರರು ತಮ್ಮ ಪಾಳೇಗಾರಿಕೆಯ ದರ್ಪವನ್ನು ತೋರಲು ತಳಸಮುದಾಯದ ಮಕ್ಕಳನ್ನು ಹಂದಿ, ನಾಯಿ, ಹೆಣ್ಣು ನಾಯಿಯಂತಹ ತುಚ್ಛ ಭಾವದ ಹೆಸರಿಟ್ಟು ಕರೆಯುವುದು ಹೊಸತೇನಲ್ಲ. (ನಾನೇ 92 -93ರ ಆಸುಪಾಸಿನಲ್ಲಿ ಓಟರ್ಸ್ ಕಾರ್ಡಿನ ಕೆಲಸ ಮಾಡುತ್ತಿರುವಾಗ ಅವಿಭಜಿತ ದ.ಕ ಜಿಲ್ಲೆಯ ಓಟರ್ಸ್ ಲಿಸ್ಟ್ ನಲ್ಲಿ ಇಂತಹ ಬೊಗ್ಗಿ, ಬೊಗ್ರ, ಪಂಜಿ, ಪಿಜಿನ, ಮರ್ಲೆ ದಂತಹ ಕೀಳುಭಾವದ ದಲಿತ ಹೆಸರುಗಳನ್ನ ಸಾಕಷ್ಟು ನೋಡಿದ್ದೇನೆ) ಪಂಜುರ್ಲಿ ಕಥೆಯಲ್ಲಿ ಬರುವ ಹೆಗ್ಗಡೆ, ವಾದಿರಾಜ ಸ್ವಾಮಿಯ ಉಲ್ಲೇಖಗಳು, ತುಳುನಾಡಿನ ವಿವಿಧ ಊರುಗಳಲ್ಲಿನ ಪಂಜುರ್ಲಿಯ ಕಾರ್ಯಸಾಧನೆಯ ಪಾಡ್ದನ ದಾಖಲೆಯನ್ನು ನೋಡಿದರೆ ಇದು ಪ್ರಾಣಿಗಿಂತ ವ್ಯಕ್ತಿಯೊಬ್ಬನಿಗೆ ಸಂಬಂಧಿಸಿದ ಚರಿತ್ರೆಯಂತೆ ಕಂಡುಬರುತ್ತದೆ.

ದೈವಾರಾಧನೆಯು ಕೇವಲ ತುಳುನಾಡಿಗಷ್ಟೇ ಸೀಮಿತವೇ?

ವಿಶೇಷವಾಗಿ ಈ ದೈವಾರಾಧನೆ ಎನ್ನುವುದು ಕೇವಲ ತುಳುನಾಡಿಗಷ್ಟೇ ಸೀಮಿತವಾದುದೇನಲ್ಲ. ಜಪಾನ್, ಚೀನಾ, ಅಮೆರಿಕಾ, ಫಿನ್ಲೆಂಡ್ ಸೇರಿದಂತೆ ವಿಶ್ವದಾದ್ಯಂತ ಅನೇಕ ಮೂಲನಿವಾಸಿಗಳ ಆಚರಣೆಗಳಲ್ಲಿ ಮರಣಿಸಿದ ಹಿರಿಯರ ಅಥವ ನಂಬಿದ ಅಗೋಚರ ಶಕ್ತಿಗಳ ಹೆಸರಲ್ಲಿ ಆಯಾಯ ಸಂಸ್ಕೃತಿಗಳಿಗೆ ತಕ್ಕಂತಹ ದೈವಾರಾಧನೆಯ ಸಂಪ್ರದಾಯವನ್ನು ಅಲ್ಲಲ್ಲಿ ಕಾಣಬಹುದು. ಅದೇ ರೀತಿ ಈಗಿನ ಉತ್ತರ ಕೇರಳದಿಂದ ಹಿಡಿದು ಕುಂದಾಪುರದವರೆಗಿನ ಇಲ್ಲಿನ ಮೂಲನಿವಾಸಿಗಳು ಆಚರಿಸಿಕೊಂಡು ಬರುತ್ತಿದ್ದ ಈ ದೈವಾರಾಧನೆ ಮತ್ತು ನಾಗಾರಾಧನೆಯ ಆಚರಣೆಗಳು ಗಟ್ಟಿನೆಲೆಯಲ್ಲಿ ನಿಂತಿದ್ದ ಕಾರಣ (ಅಥವ ರೂಢಿ ಮಾತಿನಲ್ಲಿ ಹೇಳುವುದಾದರೆ ದೈವಗಳ ಕಾರಣಿಕದ ಕಾರಣಕ್ಕಾಗಿ) ಯಾವುದೇ ಹೊರಗಿನ ಸಾಂಸ್ಕೃತಿಕ ದಾಳಿಗಳಿಗೂ ಅದನ್ನು ಅಳಿಸಿ ಹಾಕಲು ಸಾಧ್ಯವಾಗಲಿಲ್ಲ. ಈ ಪ್ರದೇಶದಲ್ಲಿ ಇಂದಿಗೂ ಕೂಡ ದೇವರಿಗೂ ಭಯಪಡದ ಮಂದಿ ದೈವಗಳಿಗೆ ಹೆದರುತ್ತಾರೆ. “ದೈವಕ್ಕೆ ಹೇಳಿಕೊಳ್ಳುತ್ತೇನೆ…” ಅಂದ್ರೆ ಆಯಿತು. ಅಲ್ಲಿ ನ್ಯಾಯಾಲಯದಲ್ಲಿ ವಕೀಲರು ನಡೆಸುವಂತ ಜಾಣತನದ ತಂತ್ರ ಹಾಗು ಮಾತುಗಾರಿಕೆ ಅಂತವಕ್ಕೆಲ್ಲ ಇಲ್ಲಿ ಬೆಲೆಯೇ ಇಲ್ಲ. ತಪ್ಪಿತಸ್ಥ ದೈವದೆದುರು ಹೋಗೋ ಮೊದಲೇ ಅರ್ಧ ಸೋತು ಶರಣಾಗಿರುತ್ತಾನೆ. ದೈವಗಳಿಗೆ ತೊಂದರೆ ಮಾಡಿದವ, ನುಡಿ ತಪ್ಪಿದರೂ ಪರಿಣಾಮವನ್ನೆದುರಿಸಿದಂತ ಅನೇಕ ಉದಾಹರಣೆಗಳು ಇವೆ. ಕೆಲ ವರ್ಷಗಳ ಹಿಂದೆ ಗೊತ್ತಿಲ್ಲದೇ ದೈವ ಸನ್ನಿಧಿಗೆ ಸೇರಿದ ಜಾಗದಲ್ಲಿ ಮರಕಡಿಯಲು ಹೋದ ಮುಸಲ್ಮಾನನ ಮೇಲೆಯೇ ದೈವ ಆವೇಶಗೊಂಡು ಎಚ್ಚರಿಸಿದ ಸಂಗತಿ ಪ್ರತಿಕೆಗಳಲ್ಲಿ ವರದಿಯಾಗಿತ್ತು.

ದೈವಗಳು ಸ್ಥಳೀಯವಾಗಿ ಹೊಂದಿರುವ ಪ್ರಭಾವ…

ದಲಿತ ಸಮುದಾಯಕ್ಕೆ ಸೇರಿದ ಅನೇಕ ದೈವಸ್ಥಾನಗಳಲ್ಲಿ ನಡೆಯುವ ಕೋಲ ನೇಮಗಳಿಗೆ ಯಥೇಚ್ಛವಾಗಿ ಭಕ್ತಿಯಿಂದ ಧನಸಹಾಯ ಮಡುವವರು ಬಂಟ ಸಮುದಾಯದಂತಹ ಮೇಲ್ವರ್ಗದವರು. ಮುಂಬಯಿ ಮೊದಲಾದೆಡೆ ದುಡಿಯುವ ಇವರುಗಳು ಈ ದೈವಗಳನ್ನು ತಮ್ಮ ರಕ್ಷಕರೆಂದೇ ಭಾವಿಸಿ ನಂಬುತ್ತಾರೆ. ಕೋಲದ ಸಮಯದಲ್ಲಿ ಪರವ, ಪಂಬದ, ನಲಿಕೆಯವರಂತಹ ದಲಿತ ಸಮುದಾಯದ ಪಾತ್ರಿಗಳಿಂದ ನುಡಿ ಅಭಯ ಪಡೆದುಕೊಳ್ಳಲು ಈ ದಲಿತೇತರ ಮೇಲ್ಜಾತಿಗಳಿಗೆ ಯಾವ ಸಾಮಾಜಿಕ ಅಂತಸ್ತಿನ ಭಾವವೂ ಅಡ್ಡಿಬಾರದು. ಇದು ಆ ದೈವಗಳು ಸ್ಥಳೀಯವಾಗಿ ಹೊಂದಿರುವ ಪ್ರಭಾವವನ್ನು ತೋರುತ್ತದೆ. ಇಲ್ಲಿನ ದೈವಗಳ ಮಹತ್ವವನ್ನು ಮನಗಂಡೇ ತುಳುನಾಡನ್ನು ಆಳುತ್ತಿದ್ದ ಇಲ್ಲಿನ ಜೈನ ಅರಸರುಗಳೂ ಕೂಡ ಇದನ್ನು ಕಡೆಗಣಿಸಹೋಗದೇ ರಕ್ಷಕ ದೈವಗಳೆಂದು ಪರಿಗಣಿಸಿ ಪ್ರೋತ್ಸಾಹಿಸಿದ್ದರಲ್ಲದೇ ಇದೇ ಬಗೆಯಲ್ಲಿ ತಮ್ಮದೇ ಆದ ದೈವಗಳನ್ನು (ರಾಜನ್ ದೈವಗಳು) ಪ್ರತಿಷ್ಠಾಪಿಸಿ ನಂಬಿಕೆಯಿಂದ ನಡೆದು ಕೊಂಡಿದ್ದರು.

ವೈದಿಕ ದೇವತಾರಾಧನೆಯ ಬೆಳವಣಿಗೆ

ಕದಂಬರ ಲೋಕಾದಿತ್ಯ ಕರೆತಂದ ಉತ್ತರದ ಬ್ರಾಹ್ಮಣ ಕುಟುಂಬಗಳಿಗೆ ಪಶ್ಚಿಮ ಷೋಡಶ (16) (ಕಾರೆವೂರು, ವೊರ್ಕಾಡಿ, ಮರಣಿ, ಕೊಳನಾಡು, ಪಾಡಿ, ಕೂಡಲು, ಮೊಗೆಬೈಲು, ಮಿತ್ತನಾಡು, ನಿರ್ಮಾರ್ಗ, ಸಿಮಂತೂರು, ತೆನೆಕಳ, ಬ್ರಹ್ಮಾವರ, ನೀಲಾವರ, ಕೋಟ, ಕಂದಾವರ ಮತ್ತು ಶಿವಳ್ಳಿ) ಮತ್ತು ಪೂರ್ವ ಷೋಡಶ (16) (ಶ್ರಿಪಾಡಿ, ಓಡಿಲ, ನಾಳ, ಕಾರಂದೂರು, ಉಜಿರೆ, ಕುನ್ಯಮಾರ್ಗ, ಕೊಕ್ಕಡ, ರಾಮಿಂಜ, ಪುದೆ, ಬಳ್ಪ, ಐವರ್ನಾಡು, ಇಡ್ಕಿದು, ಕೆಮ್ಮಿಂಜ, ಪಾಡಿಂಜ, ಸಿರಿಯಾಡಿ ಮತ್ತು ಕೊಡಿಪಾಡಿ) ವೆಂಬ ದ್ವಾತ್ರಿಂಶತ್ (32) ಗ್ರಾಮಗಳನ್ನು ಉಂಬಳಿ ಕೊಟ್ಟು ಕರಾವಳಿ ಜಿಲ್ಲೆಗಳಲ್ಲಿ ನೆಲೆ ನಿಲ್ಲಿಸಿದ ಮೇಲೆ ಪ್ರಭುತ್ವದ ಪ್ರಭಾವಳಿಯಡಿಯಲ್ಲಿ ಇವರ ವೈದಿಕ ಸಾಂಸ್ಕೃತಿಕತೆಯ ವ್ಯಾಪಿಸುವಿಕೆ ಇಲ್ಲಿ ಹೆಚ್ಚತೊಡಗಿತು. ಹೊಸ ಹೊಸ ದೇಗುಲಗಳು ಇಲ್ಲಿ ಹುಟ್ಟಿಕೊಂಡವು. ಕೆಲ ಭೂತಸ್ಥಾನ, ಬಸದಿಗಳು ದೇವಾಲಯಗಳಾಗಿ ಮಾರ್ಪಟ್ಟವು. (ಉಡುಪಿಯ ಅನಂತೇಶ್ವರ ಚಂದ್ರಮೌಳೀಶ್ವರ ದೇಗುಲಗಳು ಇಂತವಕ್ಕೊಂದು ಉದಾಹರಣೆ. ಅದೇ ರೀತಿ ಅನೇಕ ಉಳ್ಳಾಲ್ತಿ ದೈವಸ್ಥಾನಗಳು ದುರ್ಗಾ ಪರಮೇಶ್ವರಿ ದೇವಾಲಯಗಳಾಗಿ ಬದಲಾಗುತ್ತಿರುವುದನ್ನು ಇಂದಿಗೂ ಕಾಣುತ್ತಿದ್ದೇವೆ). ದೈವಾರಾಧನೆಯನ್ನು ಅಳಿಸಿ ಹಾಕಲಾಗದಿದ್ದರೂ ವೈದಿಕ ದೇವತಾರಾಧನೆ ಪ್ರತ್ಯೇಕವಾಗಿ ಇಲ್ಲಿ ಬೆಳೆಯುತ್ತಾ ಹೋಯಿತು.

ಇನ್ನು, ಅವೈದಿಕತೆಯ ಪಂಜುರ್ಲಿ, ಗುಳಿಗ, ಕೊರಗಜ್ಜನಂತವರ ಕಥೆ ಪಾಡ್ದನಗಳಲ್ಲಿ ವೈದಿಕ ದೇವ ದೇವತೆಯ ಪಾತ್ರಗಳು ಬರುವುದಾದರೂ ಹೇಗೆ ಎನ್ನುವುದನ್ನು ಗಮನಿಸಿದರೆ, ಇದರಲ್ಲಿ ವಿಶೇಷವೇನೂ ಇಲ್ಲ. ಇದೊಂದು ಸಾಮಾಜಿಕ ಸಾಂಸ್ಕೃತಿಕ ಅನಿವಾರ್ಯತೆ ಅಷ್ಟೆ. ಪ್ರಸಕ್ತ ಕಾಲಮಾನಕ್ಕೆ ತಕ್ಕಂತೆ ಸರ್ವೈವಲ್ ಆಗಲು ಇರುವ ಅವಕಾಶ ಬಳಕೆಯ ಒಂದು ಸಹಜ ಪ್ರಕ್ರಿಯೆ ಇದೆನ್ನಬಹುದು. ಸಂಪೂರ್ಣವಾಗಿ ಕಳೆದು ಹೋಗುವ ಬದಲು ಕೆಲ ಹೊಂದಾಣಿಕೆಗಳ ಮೂಲಕ ಅಸ್ತಿತ್ವವನ್ನು ಉಳಿಸಿಕೊಳ್ಳುವ ವಿಧಾನ ಇದು. ಸಾಮಾಜಿಕವಾಗಿ ಕಡೆಗಣಿಸಲ್ಪಟ್ಟು ಯಾವುದೇ ಸಾಮಾಜಿಕ ಪ್ರಭಾವವನ್ನಿಟ್ಟುಕೊಳ್ಳದ ವರ್ಗವೊಂದು ಆಗಿನ ಪ್ರಭಾವೀ ವರ್ಗವೊಂದರ ಜೊತೆಗೆ ಯಾವುದೋ ಒಂದು ಬಗೆಯಲ್ಲಿ ಗುರುತಿಸಿಕೊಳ್ಳುವುದರ ಮೂಲಕ ಸಾಂದರ್ಭಿಕವಾಗಿ ತನ್ನತನವನ್ನು ತಕ್ಕಮಟ್ಟಿಗೆ ಕಾಪಿಟ್ಟು ಕೊಂಡಂತಹ ಪ್ರಕ್ರಿಯೆ ಇದು.

ದೈವ ಪಾಡ್ದನಗಳು

ತಳ ಸಮುದಾಯದವರ ಈ ದೈವಾರಾಧನೆಯನ್ನು ಅಭ್ಯಸಿಸುವವರಿಗೆ ಈ ಕುರಿತ ಒಂದು ಪ್ರಮುಖವಾದ ಆಕರವೆಂದರೆ ಅದು ದೈವಕ್ಕೆ ಸಂಬಂಧಿಸಿದ ಪಾಡ್ದನಗಳು. ಈ ಪಾಡ್ದನದಲ್ಲಿ ನಿರ್ದಿಷ್ಟ ದೈವಗಳಿಗೆ ಸಂಬಂಧಿಸಿದ ಕಥೆಯ ವಿವರಣೆ ದೊರೆಯುತ್ತದೆ. ದೈವ ನರ್ತಕರ ಪರಂಪರೆಯಲ್ಲಿ ಸಾಗಿಬರುವ ಈ ಪಾಡ್ದನ ಕೇವಲ ಒಂದು ಮೌಖಿಕ ದಾಖಲಾತಿ. ಕೆಲ ದಶಕಗಳಿಂದ ಪ್ರೊ. ಲಾರಿ ಹೊಂಕೊ, ಮಾರ್ಥ ಅಶ್ಚನ್ ರಂತಹ ವಿದೇಶಿಗರಿಂದ ಹಿಡಿದು ಅಮೃತ ಸೋಮೇಶ್ವರ, ಡಾ. ವಿವೇಕ ರೈ, ಡಾ. ಪುರುಷೋತ್ತಮ ಬಿಳಿಮಲೆ, ಡಾ. ಚಿನ್ನಪ್ಪ ಗೌಡ, ರಘುನಾಥ ವರ್ಕಾಡಿ, ನಾವಡ ದಂಪತಿ, ಮೊದಲಾದ ಅನೇಕ ಮಹನೀಯರು ಈ ಬಗ್ಗೆ ಅನೇಕ ವಿಚಾರಗಳನ್ನು ಅಭ್ಯಸಿಸಿ ದಾಖಲಿಸಿದ್ದಾರೆ. ಈ ಹಿಂದೆ ಕೇವಲ ಮೌಖಿಕವಾಗಿಯಷ್ಟೆ ಚಾಲ್ತಿಯಲ್ಲಿದ್ದ ಈ ದೈವ ಪಾಡ್ದನಗಳಲ್ಲಿ ಶ್ರೇಷ್ಠತೆಯ ಹೆಸರಲ್ಲಿ ಗುರುತಿಸಿಕೊಂಡಿದ್ದ ವೈದಿಕ ದೇವರುಗಳ ಸೇರಿಸುವಿಕೆಗೆ ಯಾವ ವಿಶೇಷ ರಬ್ಬರು ಪೆನ್ನುಗಳ ಅವಶ್ಯಕತೆಯೇನೂ ಬೇಕಿದ್ದಿರಲಿಲ್ಲ. ಆದರೆ ಯಾವ ಕಾಲ ಘಟ್ಟದಲ್ಲಿ ಈ ಈಶ್ವರ ಪಾರ್ವತಿ ಬ್ರಹ್ಮ ವಿಷ್ಣು ತುಳುನಾಡಿನ ದೈವ ಸಾಹಿತ್ಯದೊಳಗೆ ಸೇರಿಕೊಂಡರೆನ್ನುವುದನ್ನ ನಿಖರವಾಗಿ ಹೆಳಲಾಗದಿದ್ದರೂ ವೈದಿಕತೆಯ ಉಚ್ಛ್ರಾಯ ಕಾಲದಲ್ಲಂತೂ ಹೌದು ಎಂದು ನಂಬಲಡ್ಡಿಯಿಲ್ಲ.

ತುಳುನಾಡಲ್ಲಿ ಎಲ್ಲವೂ ಬ್ರಹ್ಮಮಯಂ!

ತಮಿಳುನಾಡಿನಲ್ಲಿನ ಯಾವುದೋ ಒಂದು ಸೇತುವೆಗೆ ಬ್ರಿಟಿಷ್ ಅಧಿಕಾರಿಯ ನೆನಪಲ್ಲಿ ಹ್ಯಾಮಿಲ್ಟನ್ ಬ್ರಿಡ್ಜ್ ಎಂದು ಹೆಸರಿಡಲಾಗಿತ್ತಂತೆ. ಅಲ್ಲಿನ ತಮಿಳಿಗರು ನಾಲಗೆಗೆ ತ್ರಾಸ ಕೊಡುವ ಈ ಹ್ಯಾಮಿಲ್ಟನ್ ಹೆಸರನ್ನು ತಮ್ಮದೇ ತಮಿಳು ಶೈಲಿಯಲ್ಲಿ ’ಅಂಬಟನ್ ಬ್ರಿಜ್’ ಮಾಡಿಕೊಂಡಿದ್ದರು. ಜನ ಬಳಕೆಯಲ್ಲಿ ಈ ಹೆಸರೇ ರೂಢಿಗೆ ಬಂದು ಎಷ್ಟೊ ವರ್ಷದ ಬಳಿಕ ಈ ಹ್ಯಾಮಿಲ್ಟನ್ ನ ವಿಚಾರ ತಿಳಿಯದ ವ್ಯಕ್ತಿ ಈ ಬ್ರಿಡ್ಜನ್ನು ಇಂಗ್ಲಿಷ್ ನಲ್ಲಿ ಬಾರ್ಬರ್ ಬ್ರಿಡ್ಜ್ ಎಂದು ಪುನ: ಬದಲಿಸಿದನಂತೆ. ಅಂದರೆ, ತಮಿಳಿನಲ್ಲಿ ’ಅಂಬಟನ್’ ಎಂದರೆ ಕ್ಷೌರಿಕ ಎಂದರ್ಥ. ಇದು ಹ್ಯಾಮಿಲ್ಟನ್ ಬಾರ್ಬರ್ ಆದಂತಹ ಕತೆ. ತುಳುನಾಡಿನ ದೈವಗಳ ವಿಚಾರದಲ್ಲೂ ಕೆಲವೆಡೆ ಇಂತದ್ದೇ ನಡೆದಿದೆ. ಪೆರ್ಮೆರ್ ಎನ್ನುವುದು ’ಹಿರೀಕರು’ ಎನ್ನುವ ಅರ್ಥದ ಪದ. ಇದು ಕ್ರಮೇಣ ಬೆರ್ಮೆರ್ ಆಗಿ ಸಂಸ್ಕೃತೀಕರಣದ ಪ್ರಭಾವದಿಂದ ಇದೀಗ ಬ್ರಹ್ಮ ಎಂದಾಗಿ ಹೆಚ್ಚು ಬಳಕೆಯಲ್ಲಿದೆ. ಹಳೆಗನ್ನಡ ಮತ್ತು ತುಳುಗಳಲ್ಲಿ ಪ ಮತ್ತು ಬ ಪದಗಳು ಒಂದಕ್ಕೊಂದು ಪರ್ಯಾಯ ಶಬ್ದಗಳಾಗಿ ಬಳಕೆಯಾಗುವುದು ಸಾಮಾನ್ಯ. ತುಳುವರನ್ನು ಬೇರೆ ಕಡೆಯ ಕನ್ನಡಿಗರು ಅಪ್ಪನಿಗೆ ಅಮ್ಮ, ಅಮ್ಮನಿಗೆ ಅಪ್ಪ ಅನ್ನುವವರು.. ಅಂತ ತಮಾಷೆ ಮಾಡುವುದುಂಟು. ಆದರೆ ಹಳೆಗನ್ನಡದಲ್ಲಿ ಬಳಕೆಯಲ್ಲಿರುವ ಅಬ್ಬೆಯೇ ಇಲ್ಲಿ ಅಪ್ಪೆಯಾಗಿದೆಯಷ್ಟೆ. ಕುಂದಾಪುರ ಭಾಷೆಯಲ್ಲಿ ಕೆಲ ದಶಕಗಳ ಹಿಂದೆ ಅಮ್ಮನಿಗೆ ಅಬ್ಬಿ ಅಥವಾ ಅಬಾ ಎಂದು ಕರೆಯುವುದು ತುಂಬಾ ಸಾಮಾನ್ಯವಿತ್ತು. ಆದ್ರೆ ಈಗ ಅಲ್ಲಿ ಈ ’ಅಬ್ಬಿ’ ಬಹುತೇಕ ಮಾಯವಾಗಿದೆ. ಬ್ರಹ್ಮಸ್ಥಾನ, ಬ್ರಹ್ಮಲಿಂಗೇಶ್ವರ, ನಾಗಬ್ರಹ್ಮೆರ್, ಬ್ರಹ್ಮಬೈದೆರ್ ಮೊದಲಾದ ದೈವ ಸಂಬಂಧಿ ಹೆಸರುಗಳು. ಬ್ರಹ್ಮಾವರ, ಬ್ರಹ್ಮರ ಕೂಟ್ಲು, ಬ್ರಹ್ಮನಗರದಂತಹ ಊರ ಹೆಸರುಗಳನ್ನೂ ಕೂಡ ಕರಾವಳಿಯಲ್ಲಿ ಕಾಣಬಹುದು. ವೈದಿಕ ಪುರಾಣಗಳ ಪ್ರಕಾರ ಶಾಪಗ್ರಸ್ತ ಬ್ರಹ್ಮನಿಗೆ ಪೂಜೆಯಿಲ್ಲ ದೇಗುಲವೂ ಕೂಡ ಇಲ್ಲ. (ರಾಜಸ್ಥಾನದ ಪುಷ್ಕರ ಬಿಟ್ಟರೆ ಮತ್ತೆ ಕೆಲ ನಾಲ್ಕೈದಷ್ಟೇ ಬ್ರಹ್ಮ ದೇಗುಲ ದೇಶದಲ್ಲಿದೆಯಂತೆ) ಆದರೆ ತುಳುನಾಡಲ್ಲಿ ಮಾತ್ರ ಎಲ್ಲವೂ ಬ್ರಹ್ಮಮಯಂ. ಕಾರಣ ಮಾತ್ರ ಬೇರೆ. ಕರಾವಳಿಯ ದೈವಾರಾಧನೆ ಜಾತಿ ಧರ್ಮವನ್ನೂ ಮೀರಿದ್ದು. ಬಬ್ಬರ್ಯ, ಅಲಿಭೂತಗಳಂತಹ ಮುಸ್ಲಿಮ್ ದೈವಗಳಷ್ಟು ಪ್ರಸಿದ್ಧವಲ್ಲದಿದ್ದರೂ ಕಾಲಘಟ್ಟದಲ್ಲಿ ಸೇರ್ಪಡೆಗೊಂಡ ಕೆಲ ಬ್ರಾಹ್ಮಣ ದೈವಗಳೂ ಇವೆ. (ಅಷ್ಟೇ ಯಾಕೆ, ಇಂತಹ ಹೊಸ ಸೇರ್ಪಡೆಗೆ ಹೊಂದುವಂತೆ ಕಾಪು ಬಳಿ ಪೊಲೀಸ್ ಭೂತ ಎನ್ನುವ ದೈವವೂ ಇದೆಯಂತೆ) ಸಾರ್ವತ್ರಿಕವಲ್ಲದಿದ್ದರೂ ಎಲ್ಲೋ ಕೆಲವೆಡೆ ಶೂದ್ರ ಪರಂಪರೆಯ ಈ ದೈವಗಳನ್ನು ಬ್ರಾಹ್ಮಣರು ನಂಬಿ ಆರಾಧಿಸಿರುವುದೂ ಇದೆ. ಆದರೆ ಈ ವಿಚಾರದ ಆಧಾರದಲ್ಲಿ ತುಳುನಾಡಿನ ತಳ ಸಮುದಾಯದವರು ಆರಾಧಿಸಿಕೊಂಡು ಬರುತ್ತಿದ್ದ ದೈವಾರಾಧನೆಯನ್ನು ಸಾರಾಸಗಟಾಗಿ ವೈದಿಕತೆಯೊಂದಿಗೆ ತಳಕು ಹಾಕಲಾಗದು. ಮೂಲ್ಕಿ ಸಮೀಪದ ಕವತ್ತಾರು ಎಂಬಲ್ಲಿ ಕೇರಳ ಮೂಲದ ಮುಸಲ್ಮಾನರೊಬ್ಬರು ಎರಡು ದಶಕಗಳಿಂದ ಕೊರಗಜ್ಜ, ಕೊರತಿ, ಗುಳಿಗನ ದೈವಸ್ಥಾನ ಕಟ್ಟಿಕೊಂಡು ಕೋಲ ದೈವಾರಾಧನೆಯನ್ನು ನಡೆಸುತ್ತಿರುವ ಉದಾಹರಣೆಯೂ ತುಳುನಾಡಿನಲ್ಲಿದೆ. ಊರಿನವರೂ ಕೂಡ ಈ ಖಾಸಿಮ್ ಸಾಹೇಬರ ದೈವಸ್ಥಾನಕ್ಕೆ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದಾರೆ. ಅವರಿಗೇನೋ ದೈವದಿಂದ ಒಳಿತಾಗಿರಬಹುದು ಅಥವ ಪ್ರೇರಣೆಯಾಗಿದ್ದಿರಲೂ ಬಹುದು ಅಷ್ಟೆ.

ಶೂದ್ರ ದೈವಗಳೆಂದರೆ ವೈದಿಕರಿಗೆ ಒಲವಿಲ್ಲ!

ಆವತ್ತಿನ ಕಾಲದಲ್ಲಷ್ಟೆ ಅಲ್ಲ ಇವತ್ತಿಗೂ ಕೂಡ ಶೂದ್ರ ದೈವಗಳೆಂದರೆ ವೈದಿಕರಿಗೆ ಅಂಥಾ ಒಲವೇನಿಲ್ಲ. ಮನೆಯಲ್ಲಿರುವ ದನಗಳಿಗೋ ಮಕ್ಕಳಿಗೋ ಹುಷಾರಿಲ್ಲದಿದ್ದರೆ ಅಲ್ಲೆಲ್ಲೋ ಬಯಲಲ್ಲಿರುವ ಕಲ್ಲಿಗೆ ಕೈಮುಗಿದು ಬರುವ ಸಂಪ್ರದಾಯವಿತ್ತು. ಆ ಕಲ್ಲಿಗೆ ’ಕೀಳುಕಲ್ಲು’ ಎಂದು ಕರೆಯುವುದು ವಾಡಿಕೆ. ತಾವು ನಂಬುವ ನಮ್ಮನ್ನು ಕಾಯುವ ಯಾವುದೋ ಅತೀತ ಶಕ್ತಿಯನ್ನು ನಾವೇ ಕೀಳು (ಕನಿಷ್ಠ) ಎಂದು ಕರೆಯುವ ಸಂಪ್ರದಾಯವಿಲ್ಲ. ನಂಬಿಕೆಗೆ ಸಂಬಂಧಿಸಿ ಈ ’ಕೀಳು’ ಎನ್ನುವ ಪದವನ್ನು ಬಳಕೆಗೆ ತಂದವರು ಯಾರು? ಕೋಲ ನೇಮಗಳಲ್ಲಿ ಊರಿನ ಹಿರಿತನದ ಮರ್ಯಾದೆಗಿರುವ ಆಹ್ವಾನದಂತೆ ವೈದಿಕ ಮನೆತನದವರು ಬಂದರೂ ದೈವಕ್ಕೆ ವೈದಿಕೇತರರು ಕೊಡುವಂತಹ ಮರ್ಯಾದೆಯನ್ನು ಇವರು ಕೊಡುವುದು ತೀರಾ ಕಡಿಮೆ. ವಿದ್ಯೆ, ಉದ್ಯೋಗ ಇತ್ಯಾದಿಗಳ ಕಾರಣಕ್ಕೆ ತಳ ಸಮುದಾಯದವರಲ್ಲೂ ಇದೀಗ ಹಣಕಾಸಿಗೇನು ಕೊರತೆಯಿಲ್ಲ. ಕೋಲ, ನೇಮ ನಡೆಸುವ ಬ್ರಾಹ್ಮಣೇತರರ ಆಹ್ವಾನಕ್ಕೆ ದೈವದ ಮೇಲಿನ ನಂಬಿಕೆಗಿಂತ ಶೂದ್ರವರ್ಗದ ಬದಲಾದ ಆರ್ಥಿಕ ಅನುಕೂಲತೆಯ ಆಕರ್ಷಣೆಗೊಳಗಾಗಿ ಭೂಸುರ ಮಂದಿ ನಾಗ ಹಾಗು ಭೂತಾರಾಧನೆಯಲ್ಲಿ ಇದೀಗ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಇದರಲ್ಲಿ ಅವರದ್ದೇನೂ ದೋಷ ಖಂಡಿತಾ ಇಲ್ಲ. ರತ್ನಗಂಬಳಿ ಹಾಸಿ ನಾವೇ ದುಡ್ಡು ಕೊಟ್ಟು ಇನ್ನಿಲ್ಲದ ಮರ್ಯಾದೆಯಿಂದ ಕರೆಯುವಾಗ ಈ ಶೂದ್ರಾಚರಣೆಯಲ್ಲೂ ವೈದಿಕರ ಉಪಸ್ಥಿತಿ ಮತ್ತು ಹಿಡಿತವೆಲ್ಲ ಸ್ವಾಭಾವಿಕ ತಾನೇ (ಅವರ ಭೂತಾರಾಧನೆ ಪೂರ್ವ ಸ್ಥಳಶುದ್ಧಿ, ಕಲಶ ಪೂಜೆಯೇ ಮೊದಲಾದ ಪೂಜಾ ಸಮಯದಲ್ಲಿ ಕರೆಸಿದವರೂ ಕೂಡ ಸಮೀಪ ಹೋಗುವಂತಿಲ್ಲ; ಸಾಮಗ್ರಿಗಳನ್ನು ಮುಟ್ಟುವಂತಿಲ್ಲ; ಅವರ ಮಡಿಮೈಲಿಗೆಯ ಕಾರಣಕ್ಕೆ).


ವೈದಿಕ ಆಚರಣೆಗಳಿಗೆ ಇನ್ನಿಲ್ಲದ ಮಹತ್ತ್ವ..

ಈ ಬಗೆಯಲ್ಲಿ ಇಂದು ಶೂದ್ರ ವರ್ಗದ ಭೂತಸ್ಥಾನಗಳಲ್ಲಿ ವೈದಿಕತೆಯ ಆಚರಣೆಗಳಿಗೆ ಇನ್ನಿಲ್ಲದ ಮಹತ್ತ್ವ ನೀಡಲಾಗುತ್ತಿದ್ದು, ದೊಡ್ಡ ದೊಡ್ಡ ಕೋಲ ನೇಮಗಳಷ್ಟೆ ಅಲ್ಲದೇ ಮನೆಯಲ್ಲಿ ನಡೆಸುವಂತಹ ಕುಟುಂಬದ ದೈವ ಕಾರ್ಯಗಳಿಗೂ ಕೂಡ ಸಂಬಂಧವೇ ಇರದ ಹೇಳಲು ಬಾರದಂತಹ ರಾಕ್ಷೋಘ್ನ ಹೋಮ, ಸ್ಥಳ ಶುದ್ಧಿ, ಗಣಪತಿ ಹವನ ಇನ್ನೇನೋ ಎಂದು ಇಲ್ಲಸಲ್ಲದ ಸಂಪ್ರದಾಯಗಳೆಲ್ಲ ಜತೆಯಾಗುತ್ತಿವೆ. ಇನ್ನೂ ಮುಂದುವರೆದು ಪ್ರತಿ ಮನೆಯಲ್ಲೂ ತಂತ್ರಿಗಳನ್ನು ಕರೆಸಿ ಅಷ್ಟಮಂಗಲ ಪ್ರಶ್ನೆ ಮಾಡಿಸುವ ಹೊಸತರದ ’ಪ್ರತಿಷ್ಠೆ’ ಬೇರೆ ಶೂದ್ರವರ್ಗಗಳಲ್ಲಿ ಇದೀಗ ಸುರುವಾಗಿದೆ. ಇನ್ನು ಏನೇನೆಲ್ಲ ಈ ದೈವಾರಾಧನೆಯಲ್ಲಿ ನೋಡಬೇಕೋ.. ಮೂಲ ದೈವಗಳು ಮಾತ್ರ ಗೊತ್ತೇ ಇರದ ಈ ಹೋಮ ಹವನಗಳ ಹೊಗೆಯಿಂದ ಚಡಪಡಿಸಿ ಕಣ್ ಕಣ್ ಬಿಡುತ್ತಿರಬೇಕು ಅಷ್ಟೆ.

ದೈವಗಳು ಸಂಸ್ಕೃತೀಕರಣಗೊಂಡಿವೆ!

ಮಾಮೂಲಿ ದೇವರುಗಳಿಗಿಂತ ಅವೈದಿಕತೆಯ ಈ ಭೂತಾರಾಧನೆಯಂತವುಗಳಿಗೆ ಜನರು ಮುಗಿಬೀಳುತ್ತಿರುವುದು ಮತ್ತು ದುಡ್ಡು ಸುರಿದು ಮೆರೆಸುತ್ತಿರುವುದನ್ನ ನೋಡಿ ಒಳಗೊಳಗೇ ಸಾಕಷ್ಟು ಕುರುಬುತ್ತಿರುವ ಕೆಲ ಭೂಸುರ ಮಂದಿ (ಈ ಬಗ್ಗೆ ಸಾಕಷ್ಟು ನೋಡಿದ್ದೇನೆ) ಸ್ಥಳೀಯ ಜನರಿಂದ ಪ್ರತ್ಯೇಕಿಸಲಾಗದ ಈ ದೈವಾಚರಣೆಯನ್ನು ವೈದಿಕತೆಯ ವ್ಯಾಪ್ತಿಯೊಳಗೆ ತರುವಂತ ಹುಮ್ಮಸ್ಸಿನಲ್ಲಿ ಇದ್ದಾರೆ. (ಬಹುತೇಕ ಯಶಸ್ವಿಯೂ ಆಗಿದ್ದಾರೆ) ಈ ಕಾರಣಕ್ಕೇ ಜುಮಾದಿ, ಲೆಕ್ಕೆಸಿರಿಯಂತಹ ಅನೇಕ ದೈವಗಳು ಸಂಸ್ಕೃತೀಕರಣಗೊಂಡು ಧೂಮಾವತಿ, ರಕ್ತೇಶ್ವರಿಗಳಾಗಿ ಬದಲಾಗಿವೆ. ತುಳುವರ ಪಂಜುರ್ಲಿಯೂ ಕೂಡ ಸಂಸ್ಕೃತದ ವರಾಹ ಮೂರ್ತಿಯಾಗಿದ್ದಾನೆ. ಲಾಭಕ್ಕೆ ತಕ್ಕಂತೆ ಅನ್ಯರ ಆಚರಣೆಗಳನ್ನು ತಮ್ಮದಾಗಿಸಿಕೊಳ್ಳುವುದು ವೈದಿಕರಿಗೆ ಹೊಸತೇನಲ್ಲ, ಬೌದ್ಧರ ಗೌತಮ ಬುದ್ಧ, ಜೈನರ ಯಕ್ಷಿಗಳನ್ನು ಮಾತ್ರವಲ್ಲದೇ ಅವರ ಪೌರಾಣಿಕ ಕತೆಗಳನ್ನೂ ಕೂಡ ತಮ್ಮ ಗ್ರಂಥಗಳಲ್ಲಿ ಸೇರಿಸಿ ಕೊಂಡಂತವರಿಗೆ ಈ ಭೂತಗಳೇನು ಮಹಾ..

ಶಂಕರ್ ಸೂರ್ನಳ್ಳಿ

ಲೇಖಕರು.

Related Articles

ಇತ್ತೀಚಿನ ಸುದ್ದಿಗಳು