Monday, July 1, 2024

ಸತ್ಯ | ನ್ಯಾಯ |ಧರ್ಮ

ಸಕಲೇಶಪುರ ದುರಂತ: ಕಾಡಾನೆ ಸಮಸ್ಯೆಗೆ ಪ್ರತಿಕ್ರಿಯಿಸಿದ ಸಿಎಮ್‌

ಸಕಲೇಶಪುರ: ನಿನ್ನೆ ಸಕಲೇಶಪುರದ ಹೆಬ್ಬನ ಹಳ್ಳಿಯ ಮನು ಎನ್ನುವ 32 ವರ್ಷದ ಯುವಕ ಹತ್ತಿರ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಪೂಜೆಗೆಂದು ಬೆಳಗಿನ ಜಾವ ತೆರಳಿದ್ದಾಗ ಆನೆ ತುಳಿತಕ್ಕೊಳಗಾಗಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಅಲ್ಲಿನ ಜನರು ಶವವನ್ನು ಎದುರಿಗಿಟ್ಟುಕೊಂಡು ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದರು. ಸಿಎಮ್‌ ಈ ಕುರಿತು ಸ್ಥಳಕ್ಕೆ ಬಂದು ಪ್ರತಿಕ್ರಿಯೆ ನೀಡುವ ತನಕ ತಾವು ಸ್ಥಳದಿಂದ ಕದಲುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದಿದ್ದ ಜನರನ್ನು ಸಮಾಧಾನಗೊಳಿಸುವ ಪ್ರಯತ್ನವಾಗಿ, ಮಾಜಿ ಶಾಸಕ ಎಚ್‌ ಎಮ್‌ ವಿಶ್ವನಾಥ್‌ ಅವರೊಡನೆ ಮುಖ್ಯಮಂತ್ರಿಯವರು ಫೋನ್‌ ಮೂಲಕ ಸಂಪರ್ಕಕ್ಕೆ ಬಂದಿದ್ದರು.

ವಿಶ್ವನಾಥ ಅವರೊಡನೆ ಮಾತನಾಡುತ್ತಾ ಮುಖ್ಯಮಂತ್ರಿ ಬೊಮ್ಮಾಯಿಯವರು, “ನಾನು ಈ ಕುರಿತು [ಕಾಡಾನೆ ಸಮಸ್ಯೆ ಪರಿಹಾರಕ್ಕಾಗಿ] ಬಜೆಟ್ಟಿನಲ್ಲಿ ನೂರು ಕೋಟಿ ಎತ್ತಿಟ್ಟಿದ್ದೇನೆ. ಅಲ್ಲದೆ ಇಂತಹ ಘಟನೆಗಳಲ್ಲಿ ಮೃತಪಟ್ಟವರಿಗೆ ಪರಿಹಾರ ಮೊತ್ತವನ್ನು ಸಹ ಹೆಚ್ಚಿಸಿದ್ದೇನೆ,” ಎಂದ ಅವರು ಹಣವೇ ಮುಖ್ಯವಲ್ಲವೆನ್ನುವುದು ನಿಜವಲ್ಲವಾದರೂ ಇದು ನನಗೆ ಆ ಜನರ ಕುರಿತು ಇರುವ ಕಾಳಜಿಯನ್ನು ತೋರಿಸುತ್ತದೆ ಎಂದು ಹೇಳಿದರು.

ಎಚ್‌ ಎಮ್‌ ವಿಶ್ವನಾಥ ಅವರು ಮುಖ್ಯಮಂತ್ರಿಯವರೊಡನೆ ಹಂಚಿಕೊಂಡ ಮಾಹಿತಿಯ ಪ್ರಕಾರ ಜನರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಿಂದ ಕೇವಲ ಐನೂರು ಮೀಟರ್‌ ದೂರದಲ್ಲಿ 30 ಆನೆಗಳಿದ್ದವು. ಒಟ್ಟಾರೆ ಈ ವಲಯದಲ್ಲಿ ಜನ ವಸತಿ ಪ್ರದೇಶದಲ್ಲೇ ಸುಮಾರು 100-120 ಆನೆಗಳಿರುವುದಾಗಿ ಹೇಳಿದ್ದಾರೆ. ಅಲ್ಲದೆ ಇಲ್ಲಿರುವ ಜನರೆಲ್ಲ ಸಣ್ಣ-ಪುಟ್ಟ ರೈತರಾಗಿದ್ದು ಈ ಪ್ರದೇಶದಲ್ಲಿ ಇದುವರೆಗೆ ಸುಮಾರು 77 ಜನರು ಸತ್ತಿದ್ದು, ವಾರ-ಹದಿನೈದು ದಿನಗಳಿಗೊಮ್ಮೆ ಜನರು ಸಾಯುತ್ತಿದ್ದಾರೆ ಎಂದು ಅತಂಕದಿಂದ ಹೇಳಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು, ಇನ್ನೆರಡು ದಿನಗಳಲ್ಲಿ ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಜನರ ಅಹವಾಲುಗಳನ್ನು ಆಲಿಸಿ ನಂತರ ಅದಕ್ಕೆ ಸಂಬಂಧಿಸಿದಂತೆ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ದೊಡ್ಡ ಪ್ರಮಾಣದಲ್ಲಿ ಬಂದೋಬಸ್ತ್‌ ವ್ಯವಸ್ಥೆ ಮಾಡಿ, ಫೆನ್ಸಿಂಗ್‌ ವ್ಯವಸ್ಥೆ ಮಾಡಿಸುವುದಾಗಿ ಹೇಳಿದರು.

ಸ್ಥಳಕ್ಕೆ ಸಚಿವ ಗೋಪಾಲಯ್ಯ ಅವರನ್ನು ರಾತ್ರಿಯ ಒಳಗೆ ಕಳುಹಿಸುವುದಾಗಿ ತಿಳಿಸಿದರಾದರೂ ಜನರು ಮುಖ್ಯಮಂತ್ರಿಯವರು ಇಲ್ಲಿಗೆ ಬರಬೇಕೆಂದು ಪಟ್ಟುಹಿಡಿದು ಕುಳಿತಿದ್ದರು. ನಂತರ ಜನರೊಡನೆ ಫೋನ್‌ ಮೂಲಕ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿಯವರು, “ನಿಮ್ಮ ಮನೆಯಲ್ಲಿ ಸಂಭವಿಸಿರುವ ನಮ್ಮ ಮನೆಯದೂ ಹೌದು, ಈ ಕುರಿತು ನಾನು ಎಲ್ಲ ಕ್ರಮಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಲಿದ್ದೇವೆ. ನಾವು ನಿಮ್ಮೊಡನಿದ್ದೇವೆ,” ಎಂದು ಭರವಸೆ ನೀಡಿದರು.

ಆದರೆ ಜನರು ಸಚಿವರು ಸ್ಥಳಕ್ಕೆ ಬಾರದೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು. ಸ್ಥಳೀಯ ಶಾಸಕ ಎಚ್‌ ಕೆ ಕುಮಾರಸ್ವಾಮಿ ಮತ್ತು ಮಾಜಿ ಶಾಸಕರು, ಜಿಲ್ಲಾಧಿಕಾರಿ, ಎಸ್ ಪಿ, ಎಲ್ಲಾ ಅಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿದ್ದು ಪ್ರತಿಭಟನಕಾರರ ಮನವೊಲಿಸಲು ಮಾಡಿದ ಪ್ರಯತ್ನಗಳು ಫಲ ನೀಡದೆ ಹೋದವು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಗೋಪಾಲಯ್ಯ

ನಂತರದ ಬೆಳವಣಿಗೆಯಲ್ಲಿ ನಿನ್ನೆ ತಡರಾತ್ರಿ ಸ್ಥಳಕ್ಕೆ ಸಚಿವ ಗೋಪಾಲಯ್ಯ ಅವರು ಭೇಟಿ ನೀಡಿ, ಮೃತ ಪಟ್ಟ ಮನುವಿನ ಮನೆಯವರಿಗೆ 15 ಲಕ್ಷ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಒಂದು ವಾರದಲ್ಲಿ ಆನೆಗಳ ಸ್ಥಳ ಬದಲಾವಣೆಗೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಒಬ್ಬರ ನಂತರ ಒಬ್ಬರಂತೆ ತಮ್ಮ ಊರಿನ ಜನರನ್ನು, ಸಂಬಂಧಿಕರನ್ನು ಕಳೆದುಕೊಳ್ಳುತ್ತಿರುವ ಈ ಪ್ರದೇಶದ ಜನರ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ದೊರೆತು ಆನೆಗಳು ಮತ್ತು ಜನರು ನೆಮ್ಮದಿಯಿಂದ ಬದುಕುವಂತಹ ವಾತಾವರಣ ನಿರ್ಮಾಣವಾಗಲಿಯೆನ್ನುವುದು ಪೀಪಲ್‌ ಮೀಡಿಯಾದ ಕಾಳಜಿಯಾಗಿದೆ.

ಮುಖ್ಯಮಂತ್ರಿಯವರೊಡನೆ ನಡೆದ ಮಾತುಕತೆಯ ಆಡಿಯೋ ಕ್ಲಿಪ್‌ ಕೇಳಲು ಇಲ್ಲಿ ಕ್ಲಿಕ್‌ ಮಾಡಿ.

Related Articles

ಇತ್ತೀಚಿನ ಸುದ್ದಿಗಳು