Saturday, June 15, 2024

ಸತ್ಯ | ನ್ಯಾಯ |ಧರ್ಮ

ಪೊಲೀಸರೇ ಕಳ್ಳರಾದ ಕಥೆ : ಚಿಕ್ಕಮಗಳೂರಿನ ಅಜ್ಜಂಪುರದಲ್ಲಿ ಹೀಗೊಂದು ಕಳ್ಳ ಪೊಲೀಸ್ ಆಟ

ಚಿಕ್ಕಮಗಳೂರು: ಸಾಮಾನ್ಯವಾಗಿ ಕಳ್ಳತನ, ದರೋಡೆ ಸುಲಿಗೆಯಂತಹ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ತಟ್ಟನೆ ನೆನಪಾಗೋದು, ನೆರವಿಗೆ ಬರೋದು ಪೊಲೀಸರು. ಹೇಗಾದರೂ ಮಾಡಿ ಸಹಾಯಕ್ಕೆ ನಿಲ್ಲಬಹುದೆಂದು ಮುಕ್ತವಾಗಿ ಅವರ ಮೇಲೆ ಅವಲಂಬಿತರಾಗ್ತಾರೆ ಸಾಮಾನ್ಯ ಜನ. ಆದರೆ ಇಲ್ಲೊಂದು ಪ್ರಕರಣದಲ್ಲಿ ಪೊಲೀಸರೇ ಪ್ರೊಫೆಷನಲ್ ಕಳ್ಳರಂತೆ ಹಗಲು ದರೋಡೆ ನಡೆಸಿದ ಅಪರೂಪದ ಘಟನೆ ನಡೆದಿದೆ.

ಪ್ರಕರಣದ ಸಾರಾಂಶ : ಶ್ರೀ ಭಗವಾನ್ ಸಾಂಕ್ಲ ಎಂಬ ದಾವಣಗೆರೆ ಮೂಲದ ಬಂಗಾರದ ವ್ಯಾಪಾರಿ ತನ್ನ ವ್ಯಾಪಾರ, ವ್ಯವಹಾರದ ನಿಮಿತ್ತ ಬೇಲೂರಿಗೆ ಹೋಗಬೇಕಾಗಿ ಬರುತ್ತದೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಕಾವೇರಿ ಜ್ಯುವೆಲ್ಲರಿ ಮಾಲೀಕರಾದ ಭಗವಾನ್ ಸಾಂಕ್ಲ ಅವರ ಮಗನಾದ ರೋಹಿತ್ ಸಾಂಕ್ಲಾ ಅವರನ್ನು ಸಂತೆಬೆನ್ನೂರು, ಚನ್ನಗಿರಿ, ಅಜ್ಜಂಪುರ ಮಾರ್ಗವಾಗಿ ಬೇಲೂರಿಗೆ ಕಳುಹಿಸುತ್ತಾರೆ.

ಮಾರ್ಗಮಧ್ಯೆ ಅಜ್ಜಂಪುರ ತಾಲೂಕು ಬುಕ್ಕಾಬಂದಿ ಟೋಲ್ ಹತ್ತಿರ ಟೋಲ್ ಕಟ್ಟಲು ಕಾರು ನಿಧಾನಿಸಿದಾಗ 100 ಮೀಟರ್ ಅಂತರದಲ್ಲಿ ಇಬ್ಬರು ಸಿವಿಲ್ ಬಟ್ಟೆ ತೊಟ್ಟಿದ್ದ ವ್ಯಕ್ತಿಗಳು ಕಾರ್ ನಿಲ್ಲಿಸಲು ಸನ್ನೆ ಮಾಡುತ್ತಾರೆ. ನಂತರ ಅವರ ಬಳಿ ಕಾರು ನಿಲ್ಲಿಸಿದಾಗ ಇಬ್ಬರು ಹಿಂಬದಿಯಲ್ಲಿ ಬಂದು ಕುಳಿತುಕೊಳ್ಳುತ್ತಾರೆ. ಯಾರು ನೀವು ಎಂದು ಪ್ರಶ್ನಿಸಿದ ನಂತರ ಅನತಿ ದೂರದಲ್ಲಿ ನಿಂತಿದ್ದ ಪೊಲೀಸ್ ಜೀಪನ್ನು ತೋರಿಸಿ ನಮ್ಮ ಇನಿಸ್ಪೆಕ್ಟರ್ ಅಲ್ಲಿ ಇದ್ದಾರೆ. ಅಲ್ಲಿ ಹೋಗು ಎಂಬಂತೆ ಗದರಿಸುತ್ತಾರೆ. ಪೊಲೀಸ್ ಜೀಪಿನ ಬಳಿ ಹೋದ ನಂತರ ಲಿಂಗರಾಜು ಎಂಬ ಹೆಸರಿನ ಇನಿಸ್ಪೆಕ್ಟರ್ ಅಜ್ಜಂಪುರ ಕಡಗೆ ತನ್ನ ಕಾರನ್ನು ತಿರುಗಿಸಲು ಹೇಳುತ್ತಾರೆ.

ನಂತರ ಏನು ನಡೆಯುತ್ತಿದೆ ಎಂಬುದು ಅರಿಯುವ ಮುನ್ನವೇ ಪೊಲೀಸರು ಕಾರಿನ ಹಿಂಬದಿಯಲ್ಲಿದ್ದ ಆಭರಣದ ತೋರಿಸಿ ಬಂಗಾರ ಅಕ್ರಮ ಸಾಗಾಟ ನಡೆಸುತ್ತಿರುವೆಯಾ ಎಂದು ಗದರಿಸುತ್ತಾರೆ. ಇದರಿಂದ ಗಲಿಬಿಲಿಗೊಂಡ ರೋಹಿತ್ ಸಾಂಕ್ಲ ತನ್ನ ಬಳಿ ಇದ್ದ ಎಲ್ಲಾ ಅಗತ್ಯ ದಾಖಲೆಗಳನ್ನು ತೋರಿಸುತ್ತಾರೆ. ಆದರೆ ಇದ್ಯಾವುದರ ಪರಿಶೀಲನೆಯೂ ನಡೆಸದ ಪೊಲೀಸರು ರೋಹಿತ್ ಸಾಂಕ್ಲ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಬಂಗಾರ ನಮಗೆ ಕೊಡಬೇಕು ಅಥವಾ 10 ಲಕ್ಷದ ಹಣದ ಒತ್ತಾಯದ ಬೇಡಿಕೆ ಇಡುತ್ತಾರೆ. ಇಲ್ಲವಾದರೆ ಶಾಶ್ವತವಾಗಿ ನೀನು ಬಂಗಾರದ ವ್ಯಾಪಾರ ಮಾಡದಂತೆ ಮಾಡುವುದಾಗಿ ಹೆದರಿಸುತ್ತಾರೆ.

ಇದಕ್ಕೆ ಒಪ್ಪದ ರೋಹಿತ್ ಸಾಂಕ್ಲ ಮೇಲೆ ಸುಮಾರು ಒಂದೂವರೆ ಗಂಟೆಗಳ ಕಾಲ ಕಾಟ ಕೊಟ್ಟು ಕೊನೆಯದಾಗಿ 5 ಲಕ್ಷಕ್ಕೆ ಕೊಡುವುದಾಗಿ ಒಪ್ಪಿಸಿ, ಅಜ್ಜಂಪುರದಲ್ಲಿ ಇರುವ ಸ್ನೇಹಿತರೊಬ್ಬರ ಕಡೆಯಿಂದ 5 ಲಕ್ಷ ತಗೆದುಕೊಂಡು ಪೊಲೀಸರಿಗೆ ಕೊಟ್ಟಿರುತ್ತಾರೆ. ಇಡೀ ಪ್ರಕರಣ ಕೆಲವೇ ಕೆಲವು ಪೊಲೀಸ್ ಸಿಬ್ಬಂದಿಗಳ ಅಡಿಯಲ್ಲಿ ನಡೆದಿದೆ.

ಇಷ್ಟೂ ಕಥೆ ಸಂಪೂರ್ಣವಾಗಿ ವೆಬ್ ಸೀರೀಸ್ ಮಾದರಿಯಲ್ಲಿ ನಡೆದಿದೆ. ಆರೋಪಿಗಳಾದ ಪೊಲೀಸರು ಸಂತ್ರಸ್ತ ರೋಹಿತ್ ಸಾಂಕ್ಲನನ್ನು ಇನ್ನಿಲ್ಲದಂತೆ ಕಾಟ ಕೊಟ್ಟ ಬಗ್ಗೆಯೂ ದೂರಿನಲ್ಲಿ ದಾಖಲಾಗಿದೆ.

ಈ ಸಂಬಂಧ ರೋಹಿತ್ ಸಾಂಕ್ಲ ಅವರ ತಂದೆ ಭಗವಾನ್ ಸಾಂಕ್ಲ ಅವರು ಚಿಕ್ಕಮಗಳೂರು ಪೊಲೀಸ್ ಅಧೀಕ್ಷಕರ ಬಳಿ ದೂರು ಸಲ್ಲಿಸಿದ್ದಾರೆ. ಪ್ರಕರಣದ ಅಡಿಯಲ್ಲಿ FIR ಕೂಡಾ ದಾಖಲಾಗಿದೆ.

ಅಂದಹಾಗೆ ಪ್ರಕರಣ ನಡೆದದ್ದು ಕಳೆದ ಮೇ ತಿಂಗಳಿನಲ್ಲಿ. ಕುಟುಂಬ ಸಂಬಂಧ ಅಗತ್ಯ ತುರ್ತು ಕೆಲಸಗಳ ಕಾರಣಕ್ಕೆ ತಮ್ಮ ಮೂಲ ಊರಾದ ರಾಜಸ್ಥಾನಕ್ಕೆ ಹೋಗಬೇಕಾಗಿ ಬಂದದ್ದರಿಂದ ಸ್ವಲ್ಪ ತಡವಾಗಿ ದೂರು ದಾಖಲಿಸಿದ್ದಾಗಿ ತನ್ನ ದೂರಿನಲ್ಲಿ ಭಗವಾನ್ ಸಾಂಕ್ಲ ತಿಳಿಸಿದ್ದಾರೆ.

ಇನ್ನು ಘಟನೆ ಸಂಬಂಧ ಪೊಲೀಸ್ ಅಧಿಕಾರಿಗಳಾದ ಲಿಂಗರಾಜು, ಧನಪಾಲ್ ನಾಯ್ಕ್, ಓಂಕಾರ ಮೂರ್ತಿ, ಶರತ್ ರಾಜ್ ಎಂಬ ಪೊಲೀಸರನ್ನು ಬಂಧಿಸಲಾಗಿದ್ದು ವಿಚಾರಣೆ ತೀವ್ರವಾಗಿ ನಡೆದಿದೆ. ಮಾಹಿತಿಯಂತೆ ಆರೋಪ ಸ್ಪಷ್ಟವಾಗಿ ಸಾಭೀತಾದರೆ ಇಷ್ಟೂ ಮಂದಿ ಅಧಿಕಾರಿಗಳು ಕೆಲಸದಿಂದ ವಜಾಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು