Thursday, June 13, 2024

ಸತ್ಯ | ನ್ಯಾಯ |ಧರ್ಮ

ಸ್ವಾತಂತ್ರ್ಯ ಹೋರಾಟದಲ್ಲಿ ಬಿಲ್ಲವರು: ಜೈಲಿನ ಕಡತಗಳು ಹೇಳುವ ಸಾಕ್ಷಿ

ಭಾರತದ ಸ್ವಾತಂತ್ರ್ಯ ಚಳುವಳಿಯು ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕು, ಪ್ರಾಣವನ್ನು ಮುಡಿಪಾಗಿಟ್ಟ ಜನರ  ನಿಸ್ವಾರ್ಥ ಹೋರಾಟದ ಸುದೀರ್ಘ ಇತಿಹಾಸದ ಜನ ಸಂಗ್ರಾಮ. ಬ್ರಿಟಿಷ್‌ ಸಾಮ್ರಾಜ್ಯಶಾಹಿಯ ವಿರುದ್ಧ ಶಸ್ತ್ರ ಹಿಡಿದು ಹೋರಾಟ ಮಾಡದೇ ಹೋದರೂ ತಮ್ಮ ಸರ್ವಸ್ವವನ್ನೂ ದೇಶಕ್ಕಾಗಿ ಧಾರೆ ಎರೆದ ಹಲವರ ತ್ಯಾಗ ಬಲಿದಾನ ಹೋರಾಟದ ಸುದೀರ್ಘ ಇತಿಹಾಸವು ಈ ನಾಡಿನ ಮೂಲೆ ಮೂಲೆಗಳಲ್ಲಿ ಪಿಸುಗುಡುತ್ತಿದ್ದು ಈ ಹೋರಾಟಗಾರರ ಬಗ್ಗೆ ಇತಿಹಾಸದ ಪುಟಗಳು ತೆರೆ ಮರೆಯಲ್ಲಿ ಉಳಿದು ಮೌನವಾಗಿವೆ. ಆ ತೆರೆ ಸರಿಸಿ ಮರೆಯಲ್ಲಿ ಉಳಿದ, ಹೆಚ್ಚು ಪ್ರಚಾರ ಪಡೆಯದ ಸಾಮಾನ್ಯರ ಹೋರಾಟದ ಚರಿತ್ರೆಯನ್ನು ಸ್ಮರಿಸುವ ಪ್ರಯತ್ನ ಮಾಡುವುದು ಮತ್ತು  ಸ್ವಾತಂತ್ರ್ಯ-75ರ ಈ ಸಂದರ್ಭಕ್ಕೆ ಪೀಪಲ್‌ ಮೀಡಿಯಾ ಸಲ್ಲಿಸುವ ಗೌರವವೆಂದು ನಾವು ಭಾವಿಸುತ್ತೇವೆ.

ದಕ್ಷಿಣ ಕನ್ನಡದ ಬಿಲ್ಲವ ಸಮುದಾಯದವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಶಿಕ್ಷೆಗೆ ಒಳಗಾಗಿದ್ದಾರೆ ಎಂದು  ತಿಳಿಯುತ್ತದೆ. ಬಿಲ್ಲವರ ಮನಸ್ಥಿತಿಯ ದರ್ಶನವಾಗುತ್ತದೆ ಮಾತ್ರವಲ್ಲ ಬಿಲ್ಲವರ  ದೌರ್ಬಲ್ಯಗಳೇನೆಂಬುದನ್ನು ಜೈಲಿನ ಕಡತಗಳು ನಮಗೆ ಮನವರಿಕೆ ಮಾಡಿಕೊಡುತ್ತವೆ ಎಂದು ನಿವೃತ್ತ ಶಿಕ್ಷಕಿ, ಸಾಮಾಜಿಕ ಚಿಂತಕಿ ಬಿ.ಎಂ ರೋಹಿಣಿ ಹೇಳುತ್ತಾರೆ. ʼಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸಿದ   ದಕ್ಷಿಣ ಕನ್ನಡದ ಮಹಿಳೆಯರು ಮತ್ತು ಪುರುಷರುʼ ಎಂಬ ಅಧ್ಯಯನ ನಡೆಸುವ ಸಂದರ್ಭದಲ್ಲಿ  ಈ ಮಾಹಿತಿಗಳನ್ನು ಅವರು ಜೈಲಿನ ಕಡತಗಳ ಒಳ ಹೊಕ್ಕು  ಕಲೆ ಹಾಕಿದ್ದಾರೆ.

ಜೈಲುಗಳು ನಾಗರಿಕ ಸಮಾಜದ ಕೊಡುಗೆ. ನಮ್ಮ ದೇಶದಲ್ಲಿ ಸಾವಿರಾರು ಜೈಲುಗಳಿವೆ. ನಮ್ಮ ಕರ್ನಾಟಕದಲ್ಲಿಯೇ ಬೇರೆ ಬೇರೆ ಕೆಟಗರಿಯ ನೂರು ಜೈಲುಗಳಿವೆ. ಮಂಗಳೂರಿನ ಜಿಲ್ಲಾ ಕಾರಾಗ್ರಹವು 1850 ರಲ್ಲಿ ಸ್ಥಾಪಿತವಾಗಿದೆ. ಅಂದಿನಿಂದ ಇಂದಿನ ವರೆಗೂ ಲಕ್ಷಾಂತರ ಮಂದಿ ಅಪರಾಧಿಗಳು ಈ ಬಂದೀಖಾನೆಯಲ್ಲಿ ಶಿಕ್ಷೆ ಅನುಭವಿಸಿದ್ದಾರೆ. ಈಗಲೂ ಸುಮಾರು 250 ರಷ್ಟು ಮಂದಿ ಸ್ತ್ರೀ ಪುರುಷ ಕೈದಿಗಳು ವಿಚಾರಣಾಧೀನರಾಗಿಯೋ, ಕಾನೂನಿನ ರೀತಿಯಲ್ಲಿ ಶಿಕ್ಷೆಯನ್ನು ಸ್ವೀಕರಿಸಿಯೋ ಇಲ್ಲಿ ಕ್ಷಣಗಣನೆಯನ್ನು ಮಾಡುತ್ತಿದ್ದಾರೆ.

ಸ್ವಾತಂತ್ರ್ಯ ಪೂರ್ವದ ಕಾಲದ ಜೈಲಿನ ನಿರ್ವಹಣೆ ಬ್ರಿಟಿಷರ ಕೈಯಲ್ಲಿತ್ತು. ಜೈಲಿನ ಕಡತಗಳಲ್ಲಿ ದಾಖಲಾದ ಅಪರಾಧ ದಾಖಲೆಗಳು, ಆಧುನಿಕ ಕಾಲದ ಜೈಲಿನ ದಾಖಲೆಗಳಿಗೆ ವಿಶೇಷ ವ್ಯತ್ಯಾಸವೇನೂ ಕಾಣದು. ಒಂದೇ ಒಂದು ವ್ಯತ್ಯಾಸವೆಂದರೆ, ಸ್ವಾತಂತ್ರ್ಯ ಹೋರಾಟಗಾರರು ಜೈಲು ಶಿಕ್ಷೆಗೆ ಒಳಗಾದದ್ದು. ಬ್ರಿಟಿಷರ ವಿರುದ್ಧ ಹೋರಾಡಿ ಡಿಫೆನ್ಸಿವ್ ಆಫ್ ಇಂಡಿಯಾ ಆಕ್ಟ್ ಸೆಕ್ಷನಿನ ಮೂಲಕ ಜೈಲು ಶಿಕ್ಷೆ ಅನುಭವಿಸಿದ್ದು. ಇವರಲ್ಲಿ ಹೆಚ್ಚಿನವರು ಬಳ್ಳಾರಿಯ ಆಲಿಪುರಂ ಜೈಲಿಗೆ ರವಾನಿಸಲ್ಪಟ್ಟವರು. ಕೆಲವರು ಇಲ್ಲಿಯೇ ಒಂದು ತಿಂಗಳೋ, ಮೂರು ತಿಂಗಳೋ ಜೈಲು ಶಿಕ್ಷೆ ಪಡೆದವರು.

ಅನಾಮಿಕರಾಗಿ ಉಳಿದ ಹಿಂದುಳಿದ ವರ್ಗದ ಸ್ವಾತಂತ್ರ್ಯಹೋರಾಟಗಾರರು

ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ಬರೆದ ಲೇಖಕರು ನಾಯಕರುಗಳ ಜತೆಯಲ್ಲಿ ನೂರಾರು ಮಂದಿ ಹಿಂದುಳಿದ ವರ್ಗದ ಮೊಗವೀರರು, ಬಿಲ್ಲವರು, ದೇವಾಡಿಗರು, ದಲಿತರು, ಸೆರೆಮನೆಗೆ ತಳ್ಳಲ್ಪಟ್ಟರು ಎಂದು ದಾಖಲಿಸಿದ್ದಾರೆ. ಆದರೆ, ಈ ನೂರಾರು ಮಂದಿ ಹಿಂದುಳಿದ ವರ್ಗದವರು ಅನಾಮಿಕರಾಗಿಯೇ ಉಳಿದಿದ್ದಾರೆ. ಜೈಲು ಸೇರಿದ ಕೈದಿಗಳ ಹೆಸರುಗಳ ಮುಂದೆ ಭಟ್, ಶೆಣೈ, ಕಾಮತ್, ಪ್ರಭು, ಶೆಟ್ಟಿ ಮುಂತಾದ ಉಪನಾಮಗಳಿರುವುದರಿಂದ ಅವರು ಯಾವ ಸಮುದಾಯಕ್ಕೆ ಸೇರಿದವರೆಂಬುದನ್ನು ಗುರುತಿಸಲು ಸಾಧ್ಯವಿದೆ. ಸೇಸ, ದೂಮ, ಲಿಂಗಪ್ಪ, ತುಕ್ರ, ಮುಂತಾದ ಹೆಸರುಗಳುಳ್ಳ ದಾಖಲೆಗಳು ಹಿಂದುಳಿದ ಮತ್ತು ದಲಿತ ವರ್ಗವೆಂದು ಖ್ಯಾತಿಯಾಗುತ್ತದಾದರೂ, ಯಾವ ಸಮುದಾಯಕ್ಕೆ ಸೇರಿದವರೆಂಬುದು ನಮೂದಿಸಲ್ಪಟ್ಟಿಲ್ಲ. ಇಲ್ಲಿ ನಾಯಕರ ಅನುಯಾಯಿಗಳಾಗಿ ಬಂದುದು ಒಂದು ಕಾರಣವಾದರೆ, ತಮ್ಮ ಹೆಸರನ್ನು ಕಡತದಲ್ಲಿ ಸರಿಯಾಗಿ ನಮೂದಿಸಲಾಗದ ಅವರ ಅನಕ್ಷರತೆಯೂ ಕಾರಣವಾಗಿದೆ.  ಅಲ್ಲದೆ, ಈ ಅನುಯಾಯಿಗಳನ್ನು ಕೇವಲವಾಗಿ ಕಂಡ ಜೈಲು ಸಿಬ್ಬಂದಿಗಳ ನಿರ್ಲಕ್ಷ್ಯವೂ ಕಾರಣವಾಗಿದೆ.

ಇವರು ಮಾಸಾಶನ ಪಡೆದ ದಾಖಲೆಗಳಿಲ್ಲ

ಈ ಸೇಸ, ತುಕ್ರನವರು ಸ್ವಾತಂತ್ರ್ಯ ಯೋಧರಿಗೆ ಸಲ್ಲುವ ಯಾವ ಮಾಸಾಶನವನ್ನು ಪಡೆದ ದಾಖಲೆಗಳಿಲ್ಲ. ಉಳಿದವರ ಹೆಸರುಗಳಲ್ಲಿ ಅವರು ಸರಕಾರದ ಮಾಸಾಶನ ಪಡೆದ ದಾಖಲೆಗಳಿವೆ. ಇನ್ನೂ ಒಂದು ವಿಶೇಷ ದಾಖಲೆಯೆಂದರೆ, 143 ನೇ ಸೆಕ್ಷನ್ ಅಡಿಯಲ್ಲಿ ಜೈಲು ಸೇರಿದ ಮೇಲ್ವರ್ಗದವರು ಸ್ವಾತಂತ್ರ್ಯ ಹೋರಾಟಗಾರರು ಪಡೆಯುವ ಕೀರ್ತಿ ಮತ್ತು ಸೌಲಭ್ಯಗಳನ್ನು ಪಡೆದಿದ್ದಾರೆ. ಆದರೆ, ಅದೇ ಸೆಕ್ಷನ್ ಅಡಿಯಲ್ಲಿ ಜೈಲು ಸೇರಿದ ರಾಮ ಪೂಜಾರಿ, ತಿಮ್ಮಪ್ಪ ಪೂಜಾರಿ, ಪಿ ನಾರಾಯಣ ಪೂಜಾರಿಯವರಿಗೆ 143 ಸೆಕ್ಷನ್ ಜತೆಗೆ 379 ಸೆಕ್ಷನ್ ಅನ್ನು ಲಗತ್ತಿಸಲಾಗಿದೆ. 379 ಸೆಕ್ಷನ್ ಕಳವು ಅಪರಾಧಕ್ಕೆ ಸಂಬಂಧಿಸಿದ್ದು. ಈ ಬಿಲ್ಲವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರೂ ಕಳವು ಕೇಸೊಂದು ಅವರನ್ನು ಸುತ್ತಿಕೊಂಡದ್ದು ಹೇಗೆ? ಎಂಬುದು ನಿಗೂಢವಾಗಿದೆ. ಇವರಲ್ಲಿ ಇಬ್ಬರು ಅನಕ್ಷರಸ್ಥರಾಗಿದ್ದು, ಒಬ್ಬ ಅಕ್ಷರಸ್ಥನಾಗಿದ್ದ. ಇದು 1942 ನೇ ಇಸವಿಯ ಕಾಲದ ಸ್ವಾತಂತ್ರ್ಯ ಚಳುವಳಿಯ ಜೈಲಿನ ಕಡತಗಳಲ್ಲಿರುವ ದಾಖಲೆಗಳು.

ನಾಯಕರ ಅನುಯಾಯಿಗಳಾಗಿಯೇ ತೃಪ್ತಿಪಟ್ಟವರು

ಸ್ವಾತಂತ್ರ್ಯ ಹೋರಾಟಗಾರರು ಜೈಲು ಸೇರಿದ ದಿನದಂದೇ ಗೋವಿಂದ ಪೂಜಾರಿ, ಕಾಳು ಪೂಜಾರಿ ಮುಂತಾದವರು ಒಂದೇ ಸೆಕ್ಷನ್ ಅಡಿಯಲ್ಲಿ ಬಂಧಿತರಾಗಿದ್ದಾರೆ. ಆದರೆ, ಅವರು ಸ್ವಾತಂತ್ರ್ಯ ಹೋರಾಟಗಾರರೆಂಬ ಸರ್ಟಿಫಿಕೇಟ್ ಪಡೆದ ದಾಖಲೆಗಳಿಲ್ಲ. ಹಿಂದುಳಿದ ಸಮುದಾಯ ಅಕ್ಷರ ಸಂಸ್ಕೃತಿಗೆ ಆಗ ತಾನೇ ಪ್ರವೇಶ ಪಡೆದ ಕಾಲವಾಗಿತ್ತದು. ಆರ್ಥಿಕವಾಗಿ ಸಬಲರಾಗಿದ್ದರೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವುದು ಗೌರವದ ಕೆಲಸ ಎಂದಾಗಲೀ, ದೇಶಭಕ್ತಿಯ ದ್ಯೋತಕವೆಂದಾಗಲೀ ಈ ಸಮುದಾಯ ಅರಿತಿರಲಿಲ್ಲ. ಅದೊಂದು ಮನೆ ಹಾಳು ಮಂದಿಯ ತಲೆತಿರುಕ ಕೆಲಸವೆಂಬ ಭಾವನೆಯೇ ಈ ಮಂದಿಯಲ್ಲಿ ವ್ಯಾಪಕವಾಗಿತ್ತು. ಹಾಗೆಂದು, ಬಿಲ್ಲವರು ಮೊಗವೀರರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲೇ ಇಲ್ಲವೆಂದು ಹೇಳುವಂತಿಲ್ಲ. ಇಲ್ಲಿಯ ಜನಸಂಖ್ಯೆಗೆ ಹೋಲಿಸಿದರೆ, ಅವರ ಸಂಖ್ಯೆ ತೀರಾ ಕಡಿಮೆಯೆಂದೇ ಹೇಳಬೇಕು. ನಾಯಕರಾಗಿ ಮುಂದುವರಿಯಲು ಬೇಕಾದ ಧೀಶಕ್ತಿ ಕೊರತೆಯೂ ಇದಕ್ಕೆ ಕಾರಣ ಇದ್ದಿರಬಹುದು. ಸಂಘಟನಾ ಚಾತುರ್ಯವು ಉಳಿದ ವರ್ಗದಲ್ಲಿದ್ದಂತೆ ಇವರಲ್ಲಿ ಇರಲಿಲ್ಲವೆಂದೇ ಹೇಳಬೇಕು. ಮುನ್ನುಗ್ಗುವ ಛಾತಿ ಇತ್ತು,ಕೆಚ್ಚು ಇತ್ತು. ನಾಯಕರ ಅನುಯಾಯಿಗಳಾಗಿ ಮುಂದುವರಿಯುವುದರಲ್ಲಿಯೇ ಯಶಸ್ಸು ಕಂಡ ಸಮುದಾಯವಿದು.

ಬಿಲ್ಲವರಿಗೆ ತಟ್ಟಿದ ಮದ್ಯಪಾನದ ಶಾಪ

ಗಾಂಧೀಜಿಯ ಮದ್ಯಪಾನ ನಿಷೇಧದ ಕರೆಯೂ ಈ ವರ್ಗವನ್ನು ಚಳುವಳಿಯಲ್ಲಿ ನಿರಂತರವಾಗಿ ದುಡಿಸಿಕೊಳ್ಳುವುದರಲ್ಲಿ ಸೋತಿರಬಹುದು. ಯಾಕೆಂದರೆ, ಆ ಕಾಲದ ದಾಖಲೆಗಳು ಹೇಳುವ ಸತ್ಯಗಳೇ ಇದಕ್ಕೆ ಸಾಕ್ಷಿಯಾಗಿದೆ. ಪಾನ ನಿಷೇಧದಿಂದ ಬ್ರಿಟಿಷರ ಕಾಲದಲ್ಲೂ ಅಕ್ರಮ ಸಾರಾಯಿ ದಂಧೆ ಮಾಡಿ ಜೈಲು ವಾಸ ಕಂಡವರಲ್ಲಿ 70% ಮಂದಿ ಬಿಲ್ಲವರು. ಮದ್ಯಪಾನ ಆಗಲೂ ಈಗಲೂ ಬಿಲ್ಲವರಿಗೆ ಶಾಪವಾಗಿ ಕಾಡುತ್ತಿದೆ. ಈ ಶಾಪದಿಂದ ಬಿಡುಗಡೆ ಹೊಂದಿದ ಕೆಲವರು ಮಾತ್ರ ಸ್ವಾತಂತ್ರ್ಯ ಹೋರಾಟಗಾರರಾಗಿ ಗುರುತಿಸಿಕೊಂಡದ್ದು ಕಾಣುತ್ತದೆ.

ಲ್ಯಾಂಡ್‌ ಲಾರ್ಡ್‌ ಸೋಮಪ್ಪ ಪೂಜಾರಿ

ಜೈಲಿನ ಕಡತಗಳಲ್ಲಿರುವ ಇನ್ನೂ ಒಂದು ಮಹತ್ತ್ವದ ಸಂಗತಿ ಎಂದರೆ ಸೋಮಪ್ಪ ಪೂಜಾರಿ ಎಂಬವರು 302 ಸೆಕ್ಷನ್ ಅಡಿಯಲ್ಲಿ ಬಂಧಿತರಾಗಿದ್ದ ದಾಖಲೆಯಲ್ಲಿ ಆತ ‘ಲ್ಯಾಂಡ್ ಲಾರ್ಡ್’ ಎಂದು ನಮೂದಿತನಾಗಿದ್ದಾನೆ. ಹೀಗೆ ನಮೂದಿಸಲ್ಪಡಬೇಕಾದರೆ ಆತನಿಗೆ ಎಷ್ಟು ಜಮೀನಿತ್ತೆಂಬುದು ತಿಳಿಯುತ್ತದೆ. ಬಿಲ್ಲವರು ಸ್ಥಳೀಯ ರಾಜರಿಂದ ಉಂಬಳಿ ಜಮೀನು ಪಡೆದ ದಾಖಲೆಗಳಿವೆ ಎಂದು ನಮ್ಮ  ಕ್ಷೇತ್ರ ಕಾರ್ಯಗಳು ತಿಳಿಸುತ್ತವೆ. ಅಂತಹ ಸಾವಿರಾರು ಎಕರೆ ಜಮೀನನ್ನು  ಅಪಾತ್ರರಿಗೆ ದಾನ ಮಾಡಿಯೋ, ಧರ್ಮ ನೇಮ ಮಾಡಿ ಸಾಲಕ್ಕಾಗಿ ಮಾರಿಯೋ  ಐಷಾರಾಮೀ ಬದುಕಿಗೆ ದಾಸರಾಗಿ ಮೂರು ಕಾಸಿಗೆ ಜಮೀನನ್ನು ಮಾರಾಟ ಮಾಡಿಯೋ ಕಳಕೊಂಡವರು ಬಹಳಷ್ಟು ಮಂದಿ ಇದ್ದಾರೆ. ಜಮೀನಿನ ವ್ಯಾಜ್ಯಕ್ಕಾಗಿ ಕೊಲೆ, ಮನಸ್ತಾಪಗಳು ಸರ್ವೇ ಸಾಮಾನ್ಯ ಎಂದು ಜೈಲಿನ ಕಡತಗಳು ಹೇಳುತ್ತವೆ.

 ಶತಮಾನಗಳ ಹಿಂದೆ ಬಿಲ್ಲವರು ಹೀಗಿದ್ದರು

ಜೈಲಿನ ಕಡತಗಳಲ್ಲಿ ಕೈದಿಯ ವೇಷಭೂಷಣಗಳ ಉಲ್ಲೇಖಗಳೂ ಇವೆ.  ತಲೆಗೊಂದು ಮುಂಡಾಸು, ಕಿವಿಯಲ್ಲಿ ಮೇಲೆ  ಮತ್ತು ಕೆಳಗೆ ಚಿನ್ನದ ಆಭರಣ, ಕಾಲಿಗೆ ಕಡಗ ಧರಿಸಿದ ವಿವರಗಳು ಇವೆ. ಶತಮಾನಗಳ ಹಿಂದಿನ ಕಾಲದಲ್ಲಿ ಬಿಲ್ಲವರು ಹೇಗಿದ್ದರು ಎಂಬುದನ್ನು ಈ ದಾಖಲೆಗಳು ಸಾಕ್ಷೀಕರಿಸುತ್ತವೆ. 1868 ನೇ ಇಸವಿಯ ದಾಖಲೆಗಳಲ್ಲಿ ಹೆಚ್ಚಾಗಿ ಕಳ್ಳತನ ಮತ್ತು ಕೊಲೆ ಕೇಸುಗಳೇ ದಾಖಲಾಗಿವೆ. ಅವುಗಳಲ್ಲಿ ಜೈಲು ಶಿಕ್ಷೆ ಅನುಭವಿಸಿದವರಲ್ಲೂ ಬಿಲ್ಲವರ ಸಂಖ್ಯೆಯೇ ಗಣನೀಯವಾಗಿದೆ. ಈ ಸಮುದಾಯ ಯಾಕೆ ಹಿಂದುಳಿದಿದೆ ಎಂಬುದಕ್ಕೆ ಜೈಲು, ಕೋರ್ಟುಗಳ ಸುತ್ತಾಟವೇ ಕಾರಣವಾಗಿರಬಹುದಲ್ಲವೇ? ಬಹುಷಃ ಈಗಲೂ ಕೂಡಾ ಜೈಲಿನಲ್ಲಿರುವ ಅಪರಾಧಿಗಳಲ್ಲಿ ಬಿಲ್ಲವರ ಸಂಖ್ಯೆಯೂ ಗಣನೀಯವಾಗಿದೆ.

ಈ ಕಡತಗಳು ಒಂದರ್ಥದಲ್ಲಿ ಅಮೂಲ್ಯ ನಿಧಿಗಳು. ಆದರೆ, ಅವುಗಳು ಈಗ ಇರುವ ಸ್ಥಿತಿಯಲ್ಲಿಯೇ ಇದ್ದರೆ ಆ ದಾಖಲೆಗಳು ಪೂರ್ಣ ನಾಶವಾಗುವ ಸಂಭವವಿದೆ. ಅವುಗಳನ್ನು ಆರ್ಕೈವ್ಸ್ ಗಳಲ್ಲಿ ಇಟ್ಟು ಸಂರಕ್ಷಿಸುವ ಪ್ರಯತ್ನ ನಮ್ಮ ಆಡಳಿತ ವ್ಯವಸ್ಥೆಗಿರುವಂತೆ ಕಾಣುತ್ತಿಲ್ಲ. ಅವುಗಳ ಮಹತ್ತ್ವಗಳ ಅರಿವೂ ಅವರಿಗೆ ಇದ್ದಂತಿಲ್ಲ. ಅವುಗಳನ್ನು ದೀರ್ಘ ಕಾಲದವರೆಗೆ ಸಂರಕ್ಷಿಸುವ ಮುಂಜಾಗ್ರತೆಗಳನ್ನು ಸರಕಾರ ಆದಷ್ಟು ಶೀಘ್ರದಲ್ಲಿ ಮಾಡಬೇಕಾಗಿದೆ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಬಿ.ಎಂ ರೋಹಿಣಿ
ಲೇಖಕಿ, ಸಾಮಾಜಿಕ ಚಿಂತಕಿ

Related Articles

ಇತ್ತೀಚಿನ ಸುದ್ದಿಗಳು