Friday, June 14, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿ ಬಾಡಿಗೆ ಭಾಷಣಕಾರರಿಗೆ ಸಿಎಂ ಕಛೇರಿಯಿಂದ ಸಂಬಳ : ಸುಧೀರ್ ಮುರೊಳ್ಳಿ ದಾಖಲೆ ಬಿಡುಗಡೆ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಅವರು ತಮ್ಮ ಸರ್ಕಾರಿ ಕಛೇರಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಪಕ್ಷದ ಕಾರ್ಯಕರ್ತರಿಗೆಲ್ಲಾ ಮುಖ್ಯಮಂತ್ರಿಗಳ ಕಛೇರಿಯಿಂದ ಸಂಬಳ ಕೊಡಲಾಗುತ್ತಿದೆ ಎಂದು ಡಿ.ಎನ್.ಜೀವರಾಜ್ ಮೇಲೆ ಕಾಂಗ್ರೆಸ್ ವಕ್ತಾರರಾದ ಸುಧೀರ್ ಕುಮಾರ್ ಮುರೊಳ್ಳಿಯವರು ಗಂಭೀರ ಆರೋಪ ಮಾಡಿದ್ದಾರೆ.

ಇತ್ತೀಚೆಗೆ ಶೃಂಗೇರಿ ಶಾಸಕರಾದ ಟಿ.ಡಿ.ರಾಜೇಗೌಡರ ಮೇಲೆ ಲೋಕಾಯುಕ್ತಕ್ಕೆ ದೂರು ನೀಡಿದ ವಿಜಯಾನಂದ ವ್ಯಕ್ತಿ ಡಿ.ಎನ್. ಜೀವರಾಜ್ ಅವರ ಕಛೇರಿ ಸಿಬ್ಬಂದಿ, ಸರ್ಕಾರಿ ಸಂಬಳ ತಗೆದುಕೊಂಡಿದ್ದರು. ಮೇಲಾಗಿ ಈ ವ್ಯಕ್ತಿ ಕೊಪ್ಪ ತಾಲ್ಲೂಕು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲೂ ಇದ್ದಾರೆ. ಇಂತಹ ವ್ಯಕ್ತಿಯನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿಎನ್ ಜೀವರಾಜ್ ಸರ್ಕಾರಿ ಹುದ್ದೆ ಕೊಟ್ಟು ಮುಖ್ಯಮಂತ್ರಿಗಳ ಕಛೇರಿಯಿಂದ ಸಂಬಳವನ್ನೂ ಕೊಡಿಸಿದ್ದು ದಾಖಲೆಗಳಲ್ಲಿದೆ. ಆ ಮೂಲಕ ತಮ್ಮ ಕಛೇರಿ ಸಿಬ್ಬಂದಿಯನ್ನು ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಂಡ ಬಗ್ಗೆ ಜೀವರಾಜ್ ಮೇಲೆ ಆರೋಪ ಮಾಡಿದ್ದಾರೆ.

ಕೇವಲ ವಿಜಯಾನಂದ ಮಾತ್ರವಲ್ಲದೆ ಗ್ರಾಮ ಪಂಚಾಯಿತಿ ಸದಸ್ಯರನ್ನೂ ಸಹ ತಮ್ಮ ಕಛೇರಿ ಸಿಬ್ಬಂದಿ ಎಂಬಂತೆ ತೋರಿಸಿ ಅವರಿಗೂ ಸಹ ಮುಖ್ಯಮಂತ್ರಿ ಕಛೇರಿಯಿಂದ ಸಂಬಳ ಸಿಗುವಂತೆ ಮಾಡಿದ್ದಾರೆ ಮಾನ್ಯ ಡಿಎನ್ ಜೀವರಾಜ್ ಅವರು. ಶಾಸಕಾಂಗ ಮತ್ತು ಕಾರ್ಯಾಂಗ ಮತ್ತು ಬಿಜೆಪಿ ಪಕ್ಷ ಈ ಮೂರನ್ನೂ ಒಂದೇ ತಕ್ಕಡಿಯಲ್ಲಿ ಇಟ್ಟು ತೂಗುವಂತೆ ಮಾಡಿದ ಅಪರೂಪದ ವ್ಯಕ್ತಿ ಜೀವರಾಜ್ ಎಂಬಂತೆ ಸುಧೀರ್ ಕುಮಾರ್ ವಾಗ್ದಾಳಿ ಮಾಡಿದ್ದಾರೆ.

ಈ ಬಗ್ಗೆ ಮಾಧ್ರಮಗಳ ಎದುರು ಅಧಿಕೃತ ದಾಖಲೆಗಳನ್ನೂ ಬಿಡುಗಡೆ ಮಾಡಿದ ಸುಧೀರ್ ಕುಮಾರ್ ಅವರು, ಪುಣ್ಯಪಾಲ್ ಎಂಜೆ ಎನ್ನುವ ಬಿಜೆಪಿ ಬಾಡಿಗೆ ಭಾಷಣಕಾರರಿಗೆ ಮಾಜಿ ಶಾಸಕ ಜೀವರಾಜ್ 31,500 ರೂಪಾಯಿಗಳ ಮಾಸಿಕ ಸಂಬಳ ನಿಗದಿ ಮಾಡಿದ ಬಗ್ಗೆಯೂ ದಾಖಲೆ ಮೂಲಕ ಬಿಡುಗಡೆ ಮಾಡಿದ್ದಾರೆ‌.

ಇದರ ಜೊತೆಗೆ ಕೊಪ್ಪ ಗ್ರಾಮಾಂತರ ವಿಭಾಗದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯೆ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯೆ, ಬಿಜೆಪಿ ಯುವ ಮೋರ್ಚಾ ಸದಸ್ಯೆ ಶೃತಿ ರೋಹಿತ್ ಎಂಬುವವರಿಗೂ ಕೂಡ ತಮ್ಮ ಆಪ್ತ ಸಹಾಯಕಿ ಎಂದು 31,500 ರೂಪಾಯಿಗಳ ಮಾಸಿಕ ಸಂಬಳ ನೀಡಲು ಜೀವರಾಜ್ ಸಹಕರಿಸಿದ್ದಾರೆ.

ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ತಾಲ್ಲೂಕು ಬಿಜೆಪಿ ಮಹಿಳಾ ಮೋರ್ಚಾ ಮುಖಂಡರಾದ ವಾಣಿ ಸತೀಶ್ ಎಂಬುವವರಿಗೂ ಮಾಜಿ ಶಾಸಕ ಜೀವರಾಜ್ 17,500 ರೂಪಾಯಿಗಳ ಮಾಸಿಕ ಸರ್ಕಾರಿ ಸಂಬಳ ನಿಗದಿ ಮಾಡಿದ್ದಾರೆ ಎಂದು ಸುಧೀರ್ ಕುಮಾರ್ ಮುರೊಳ್ಳಿ ಎಲ್ಲಾ ದಾಖಲೆಗಳ ಮೂಲಕ ಬಿಡುಗಡೆ ಮಾಡಿ ವಾಗ್ದಾಳಿ ನಡೆಸಿದ್ದಾರೆ.

ಇಷ್ಟೆಲ್ಲಾ ದಾಖಲೆಗಳನ್ನು ಮಾಧ್ಯಮಗಳ ಮೂಲಕ ಬಿಡುಗಡೆ ಮಾಡುತ್ತಿದ್ದೇನೆ. ಮಾನ್ಯ ಮುಖ್ಯಮಂತ್ರಿಗಳಿಗೆ ತಾಕತ್ತು, ದಮ್ಮು ಇದ್ದರೆ ನಿಮ್ಮ ಆಪ್ತ ಕಾರ್ಯದರ್ಶಿ ಜೀವರಾಜ್ ಮೇಲೆ ಕ್ರಮ ತಗೆದುಕೊಳ್ಳಿ ಎಂದು ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು