Friday, June 14, 2024

ಸತ್ಯ | ನ್ಯಾಯ |ಧರ್ಮ

ಸ್ಥಳಾಂತರಕ್ಕೆ ಸೇಡು ತೀರಿಸಿಕೊಂಡ ಆನೆ ; ಸಕಲೇಶಪುರದಲ್ಲಿ ಆಶ್ಚರ್ಯ ಮತ್ತು ಅಪರೂಪದ ಘಟನೆ

ಆನೆಯೊಂದು ತನಗೆ ತೊಂದರೆ ಕೊಟ್ಟವರ ಗುರುತು ಹಿಡಿದು, ಸ್ಥಳಾಂತರಗೊಂಡ 6 ತಿಂಗಳ ನಂತರವೂ ಬಂದು ಮನೆ ಮೇಲೆ ದಾಳಿ ನಡೆಸಿದ ಅಪರೂಪದ ಮತ್ತು ಆಶ್ಚರ್ಯಕರ ಘಟನೆಯೊಂದು ಸಕಲೇಶಪುರದ ಹಳ್ಳಿಯೊಂದರಲ್ಲಿ ನಡೆದಿದೆ. ಈ ಘಟನೆ ಬಗ್ಗೆ ಗ್ರಾಮಸ್ಥರು ಮತ್ತು ಅರಣ್ಯಾಧಿಕಾರಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಲೆನಾಡು ಭಾಗದಲ್ಲಿ ಆನೆಗಳ ಹಾವಳಿ ತೀವ್ರವಾಗಿದೆ. ಕಳೆದ ಒಂದೂವರೆ ವರ್ಷಗಳ ವ್ಯಾಪ್ತಿಯಲ್ಲಿ ಮೂಡಿಗೆರೆ ಭಾಗದಲ್ಲಿ ಆನೆ ದಾಳಿಗೆ ಮೂವರು ಮೃತಪಟ್ಟ ಹಿನ್ನೆಲೆಯಲ್ಲಿ ಕ್ರಮ ತಗೆದುಕೊಳ್ಳದ ಕಾರಣಕ್ಕೆ ಮೂಡಿಗೆರೆ ಶಾಸಕರನ್ನು ಆ ಭಾಗದ ಜನ ಅಟ್ಟಾಡಿಸಿದ್ದು ಸಹ ಇಲ್ಲಿ ನೆನೆಸಿಕೊಳ್ಳಬೇಕು.

ಸಕಲೇಶಪುರದ ಕೆಸಗುಲಿ ಗ್ರಾಮ ಕೂಡಾ ಇಂತಹದ್ದೇ ನಿರಂತರ ಆನೆ ದಾಳಿಗೆ ತುತ್ತಾದ ಊರಾಗಿದೆ. ಕೆಸಗುಲಿ ಗ್ರಾಮದಲ್ಲಿ ಆನೆ ಹಾವಳಿ ವಿಪರೀತವಾಗಿದ್ದು, ಜಮೀನು ಮಾತ್ರವಲ್ಲ ಮನೆಗಳ ಮೇಲೂ ದಾಳಿ ಇಡುವ ಗುಣವನ್ನು ಆನೆಗಳು ಬೆಳೆಸಿಕೊಂಡಿವೆ. ಹಾಗಾಗಿ ನಿರಂತರವಾಗಿ ಇಲ್ಲಿನ ಮನೆಗಳಿಗೆ ಆನೆಯೊಂದು ಪದೇಪದೆ ದಾಳಿ ಮಾಡುತ್ತಿತ್ತು. ಇದರಿಂದ ಬೇಸತ್ತ ಮನೆಯವರು ಅರಣ್ಯಾಧಿಕಾರಿಗಳಿಗೆ ದೂರು ನೀಡಿ ಆನೆ ಸ್ಥಳಾಂತರಕ್ಕೆ ಮನವಿಯನ್ನೂ ಮಾಡಿದ್ದರು.

ನಂತರ ಅರಣ್ಯಾಧಿಕಾರಿಗಳ ಸಹಕಾರದಿಂದ ಈ ರೀತಿ ದಾಳಿ ಇಡುವ ಮಕ್ನ ಎಂಬ ಕಾಡಾನೆಯನ್ನು 6 ತಿಂಗಳ ಹಿಂದೆ ಇಲ್ಲಿಂದ ಸ್ಥಳಾಂತರ ಮಾಡಲಾಗಿತ್ತು. ಸಕಲೇಶಪುರದಿಂದ ನೂರಾರು ಕಿಲೋಮೀಟರ್ ದೂರದ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟಕ್ಕೆ ಆನೆಯನ್ನು ಸ್ಥಳಾಂತರ ಮಾಡಲಾಗಿತ್ತು.

ಆ ನಂತರ ಸ್ವಲ್ಪ ಮಟ್ಟಿಗೆ ಆನೆಗಳ ಹಾವಳಿ ತಗ್ಗಿತ್ತು. ಆದರೆ ಮೊನ್ನೆಯ ದಿನ ಬುಧವಾರ ರಾತ್ರಿ ಕೆಸಗುಲಿ ಗ್ರಾಮದ ಕುಮಾರ್ ಎಂಬುವರ ಮನೆ ಮೇಲೆ ದಾಳಿ ನಡೆಸಿದ ಒಂಟಿ ಸಲಗವೊಂದು ಕಿಟಕಿ ಗಾಜುಗಳನ್ನು ಧ್ವಂಸ ಮಾಡಿದೆ. ಕಳೆದ 6 ತಿಂಗಳ ಹಿಂದೆ ಇದೇ ಮನೆಯ ಪಕ್ಕದಲ್ಲಿರುವ ಅವರ ಅಣ್ಣ ಗಿರೀಶ್ ಎಂಬುವರ ಮನೆಯ ಮೇಳೆ ದಾಳಿ ನಡೆಸಿತ್ತು. ಒಂಟಿ ಸಲಗದ ಆರ್ಭಟಕ್ಕೆ ಮನೆಯ ಬಾಗಿಲು ಕಿಟಕಿಗಳೆಲ್ಲಾ ಪುಡಿ ಪುಡಿಯಾಗಿವೆ.

ಮುಂಜಾನೆ ಎರಡು ಗಂಟೆಯ ಹೊತ್ತಿಗೆ ಆನೆ ಏಕಾಏಕಿಯಾಗಿ ದಾಳಿ ಮಾಡಿದೆ. ಮನೆ ಮಂದಿಯೆಲ್ಲ ನಿದ್ರೆಯಲ್ಲಿದ್ದಾಗ ಬಂದಿದ್ದ ಆನೆ ದಾಳಿ ಮಾಡುತ್ತಿದ್ದಂತೆಯೇ ಮನೆಯವರು ಎಚ್ಚೆತ್ತು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ನಂತರ ತಿಳಿದ ವಿಷಯ ಏನೆಂದರೆ, 6 ತಿಂಗಳ ಹಿಂದೆ ಹಿಡಿದ ಮಕ್ನ ಎಂಬ ಕಾಡಾನೆಯೇ ಈಗ ದಾಳಿ ನಡೆಸಿದ್ದು ಎಂಬುದು ಅದಕ್ಕೆ ಹಾಕಿರುವ ರೇಡಿಯೋ ಕಾಲರ್ ನಿಂದ ಗೊತ್ತಾಗಿದೆ. ಅರಣ್ಯಾಧಿಕಾರಿಗಳು ಗ್ರಾಮಸ್ಥರಿಗೆ ತಾತ್ಕಾಲಿಕ ಕ್ರಮ ತಗೆದುಕೊಳ್ಳುವ ಭರವಸೆ ನೀಡಿದ್ದಾರೆ.

ಅಷ್ಟರ ಮಟ್ಟಿಗೆ ನೂರಾರು ಕಿಲೋಮೀಟರ್ ದೂರದಿಂದ ಮನೆಯನ್ನೂ ಹುಡುಕಿ ಬಂದು ದಾಳಿ ಮಾಡುವಷ್ಟು ಆನೆಗಳು ಸೇಡಿನ ಗುಣವನ್ನು ಹೊಂದಿವೆಯಾ ಎಂಬ ಆಶ್ಚರ್ಯ ಎಲ್ಲರಲ್ಲೂ ಮನೆ ಮಾಡಿದೆ. ಆನೆಗಳು ತನ್ನ ಪಾಡಿಗೆ ತಾನು ಓಡಾಡಿಕೊಂಡಿರುವಾಗ ಅವಕ್ಕೆ ಪಟಾಕಿ ಸಿಡಿಸುವುದು, ಕಲ್ಲು ಹೊಡೆಯುವುದು, ಗುಂಡು ಹಾರಿಸಿಯೋ ಅಥವಾ ವಿಚಿತ್ರವಾಗಿ ಶಬ್ದ ಮಾಡಿ ಹೆದರಿಸುವುದು ಇಂತಹ ಪ್ರಕ್ರಿಯೆಗಳನ್ನು ಮಾಡಿದಾಗ ಅವುಗಳು ರೊಚ್ಚಿಗೆದ್ದು ತಿರುಗಿ ಬೀಳುವುದು ಸರ್ವೇಸಾಮಾನ್ಯ, ಸಾಧ್ಯವಾದಷ್ಟು ಅವುಗಳಿಗೆ ಈ ರೀತಿಯ ತೊಂದರೆಯಾಗದಂತೆ ನೋಡಿಕೊಂಡರೆ ಇಂತಹ ದಾಳಿಯಿಂದ ದೂರ ಇರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು