Friday, June 14, 2024

ಸತ್ಯ | ನ್ಯಾಯ |ಧರ್ಮ

ಆಕ್ರೋಶ ಹುಟ್ಟಿಸಿದ ಪ್ರಜಾವಾಣಿ ಅಂಕಣ: ಗಣಪತಿ ಸಚ್ಚಿದಾನಂದ ಕ್ಷಮೆಗೆ ಆಗ್ರಹ


ಬೆಂಗಳೂರು: ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ಮೈಸೂರಿನ ಗಣಪತಿ ಸಚ್ಚಿದಾನಂದ ಅವರ ಅಂಕಣ ಬರೆಹವೊಂದು ತೀವ್ರ ಸ್ವರೂಪದ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಚರ್ಚೆ ನಡೆದಿದೆ.
ʻಪತಿಯ ಆಜ್ಞೆ ಪಾಲಿಸಬೇಕುʼ ಎಂಬ ತಲೆಬರೆಹದ ಅಂಕಣದಲ್ಲಿ ಗಣಪತಿ ಸಚ್ಚಿದಾನಂದ ಅವರು, ವೇದವ್ಯಾಸದ ಶಿವಪುರಾಣವನ್ನು ಉಲ್ಲೇಖಿಸಿ ಬರೆದಿರುವ ಮಾಹಿತಿಗಳು ಸಂವಿಧಾನಬಾಹಿರವಾಗಿದ್ದು, ಹೆಣ್ಣುಮಕ್ಕಳ ಘನತೆಯನ್ನು ಕುಗ್ಗಿಸುವ ಕೀಳುಗುಣಮಟ್ಟದ ಬರೆಹವಾಗಿದೆ ಎಂಬ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಪತಿಯ ಆಜ್ಞೆ ಪಾಲಿಸಬೇಕು ಎಂಬ ಲೇಖನದಲ್ಲಿ ತನ್ನ ಪತಿಯು ನಪುಂಸಕನಾಗಲೀ ದರಿದ್ರನಾಗಲೀ ರೋಗಿಯಾಗಲೀ ವೃದ್ಧನಾಗಲೀ ಸುಖಿಯಾಗಲೀ ದುಃಖಿಯಾಗಲೀ, ಹೇಗಿದ್ದರೂ ಅಂತಹವನನ್ನು ತಿರಸ್ಕರಿಸಬಾರದು. ಪತಿವ್ರತೆಯಾದವಳು ಅರಿಶಿನ, ಕುಂಕುಮ, ಚಂದನ, ಕಪ್ಪುರವಿಕೆ, ತಾಂಬೂಲ, ಮಂಗಳದ್ರವ್ಯಗಳು, ತಲೆಯನ್ನು ಬಾಚಿ ಗಂಟುಹಾಕಿಕೊಳ್ಳುವುದು, ಬಳೆಗಳು, ಓಲೆ ಮುಂತಾದ ಮುತ್ತೈದೆ ಅಲಂಕಾರವನ್ನು ಮಾಡಿಕೊಳ್ಳಬೇಕು. ಹಾಗಿಲ್ಲದಿದ್ದರೆ, ಪತಿಯ ಆಯುಸ್ಸು ಕ್ಷೀಣವಾಗುವುದು. ಪತಿಯನ್ನು ದ್ವೇಷಿಸುವ ಹೆಂಗಸನ್ನು ಯಾವತ್ತೂ ಮಾತನಾಡಿಸಬಾರದು ಇತ್ಯಾದಿ ಸ್ತ್ರೀವಿರೋಧಿ ಅಂಶಗಳನ್ನು ಬರೆಯಲಾಗಿದೆ.
ಇಷ್ಟೇ ಅಲ್ಲದೆ, ಗಂಡನ ಮಾತು ಮೀರಿ ನಡೆವ ಸತಿಯು ಸತ್ತ ನಂತರ ನರಕಕ್ಕೆ ಹೋಗುವಳು. ಯಾವ ಸ್ತ್ರೀಯು ಕೋಪಗೊಂಡು ಪತಿಯನ್ನು ಎದುರು ವಾದಿಸುವಳೋ, ಅವಳು ಮರುಜನ್ಮದಲ್ಲಿ ಹೆಣ್ಣುನಾಯಿಯಾಗಿಯೋ, ಹೆಣ್ಣುನರಿಯಾಗಿಯೋ ಹುಟ್ಟುವಳು ಎಂದು ತೀರಾ ಕೊಳಕು ಬಗೆಯ ನಿಲುವನ್ನು ಲೇಖನದಲ್ಲಿ ಪ್ರತಿಪಾದಿಸಲಾಗಿದೆ.

ಈ ಅಂಕಣದ ಕುರಿತು ತೀವ್ರ ಆಕ್ರೊಶ ವ್ಯಕ್ತಪಡಿಸಿರುವ ಲೇಖಕಿ-ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ, ʻʻಪಾರ್ವತಿ ರೂಪದ ಲೋಕದ ತಾಯಂದಿರು ಇಂದು ಹೇಳ್ತಾ ಇದಾರೆ ಇದೆಲ್ಲ ಪುರಸೊತ್ತಿರೋ ಪುರುಷಲೋಕದ ಸೂಕ್ತಿಗಳು ಸಾರಗಳು…ನಮ್ಮ ಪಾಲಿಗವು ನಿಸ್ಸಾರಗಳು. ನೀವು ಉಂಡುತಿಂದು ಆರಾಮಿರಿ ಹೆಣ್ಣುಮಕ್ಕಳೇ… ನೀವು ಉಂಡರೆ ಬೇರೆಯವರ ಹೊಟ್ಟೆಗೆ ಮಾಡಿಹಾಕಬಲ್ಲಿರಿ…ನೀವು ಉಪವಾಸವಿದ್ದು ಬೇರೆಯವರ ಹೊಟ್ಟೆಗೆ ಮಾಡಿ ಹಾಕೋದು ಬೇಡ…ಪತೀವ್ರತೆ, ಜಾರಿಣಿ ಎಲ್ಲ ಪುರುಷಲೋಕದ ಕಟ್ಟೋಣಗಳು..ನಾವು ಹೆಣ್ಣುಮಕ್ಕಳು ಅಷ್ಟೇ. ಪತೀವ್ರತೆಯರು ಅಲ್ಲ, ಜಾರಿಣಿಯರು ಅಲ್ಲ…ಇಷ್ಟೆಲ್ಲ ಆಗಿ ನಾವು ಹೇಗಿರಬೇಕು? ನಮ್ಮ ಬದುಕು ಹೇಗಿರಬೇಕು? ನಮ್ಮ ಕನಸು ಏನು ಎಂದು ಈ ಲೋಕದ ,ಈ ಹೊತ್ತಿನ ಪಾರ್ವತಿ, ಪಾರೋತಿಯರ ಕೈಲಿ ಬರೆಸುವುದು ಬಿಟ್ಟು… ಶಿವಪುರಾಣ ಹುಡುಕಿಸಿ ಸಚ್ಚಿದಾನಂದರ ಕೈಲಿ ಬರೆಸುವ ಅಗತ್ಯವಿತ್ತೇ ʼʼಎಂದು ನುಡಿದಿದ್ದಾರೆ.

ರಂಗಕರ್ಮಿ ರೇವತಿ ರಾಂ ಕುಂದನಾಡು ಈ ಕುರಿತು ಫೇಸ್‌ ಬುಕ್‌ ನಲ್ಲಿ ಬರೆದಿದ್ದು,
“ಪ್ರಜೆ”ಗಳ ನಂಬಿಕೆಯ “ವಾಣಿ”..ಧರ್ಮದ್ದಾಯ್ತು… ಜಾತಿಯದ್ದಾಯ್ತು…. ಈಗ…
ಲಿಂಗಗಳ ನಡುವೆ ತಂದಿಡುವ ಬುದ್ದಿ ನಿಮಗ್ಯಾಕೆ ಸ್ವಾಮೀಗಳೇ… ನಿಮಗೆ ಹೀಗೆ ಹೇಳಿದ್ದೆಲ್ಲ ಕೇಳುವ ಹೆಂಡತಿ ಸಿಗಲಿಲ್ಲವೋ…?? ಹೊಟ್ಟೆಯಲ್ಲಿ ಒಂದು ಕೂಸಿದ್ದರೂ ಪರ್ವಾಗಿಲ್ಲ.. ಕೂಸನ್ನ ಹಡೆದ ಬಾಣಂತಿಯಾದರೂ ಪರ್ವಾಗಿಲ್ಲ ….ಮುಟ್ಟಿನ ನೋವಿನಿಂದ ಒದ್ದಾಡಿದರೂ ಪರ್ವಾಗಿಲ್ಲ… ಗಂಡ ಕುಡಿದು ಹನ್ನೆರಡು ಗಂಟೆಗೆ ಬಂದರೂ ನೀನು ಉಪವಾಸವಿರಬೇಕು ಓ ಹೆಣ್ಣೇ.. ಹೆಣ್ಣು ಪ್ರೀತಿಗಾಗಿ ಸೋಲುತ್ತಾಳೆ ನಿಜ. ಹಾಗಂತ ಸ್ವಾಭಿಮಾನ ಬಿಡಬಾರದು. ಪರಸ್ಪರ ಗೌರವದ ಜೊತೆ ಹೊಂದಾಣಿಕೆ ಇರಲಿ. ದಬ್ಬಾಳಿಕೆಗಲ್ಲ! ನಾವು ಸಂವಿಧಾನದ ನೆಲೆಯೊಳಗೆ ಇದ್ದೀವಿ ಅನ್ನೋದನ್ನ ಮರಿಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೇಖಕಿ, ಪತ್ರಕರ್ತೆ ಪ್ರತಿಭಾ ನಂದಕುಮಾರ್‌, ಪ್ರಜಾವಾಣಿಯಂತಹ ಪ್ರಗತಿಪರ ಪತ್ರಿಕೆಯಲ್ಲಿ ಪೌರಾಣಿಕ ವಿಷಯವೊಂದನ್ನು ಹಿಂದೆ ಮುಂದೆ ಯೋಚಿಸದೇ ಪ್ರಕಟ ಮಾಡುವುದು ಅಕ್ಷಮ್ಯ. ಪುರಾಣ ಕಾಲದಲ್ಲಿ ಇಂತಹ ಸಾವಿರಾರು ನಂಬಿಕೆಗಳು ಇದ್ದವು. ಅದನ್ನು ಯಥಾವತ್ತಾಗಿ ಇಪ್ಪತ್ತೆರಡನೆ ಶತಮಾನಕ್ಕೆ ಬೀಸಿ ಬಿಸಾಡುವುದು ಯಾವುದೇ ಪತ್ರಿಕೆಗೆ ಶೋಭೆಯಲ್ಲ. ಪ್ರಜಾವಾಣಿಯ ಘನತೆಗೆ ಮಸಿ ಬಳೆದಂತಹ ಇದಕ್ಕಾಗಿ ಪತ್ರಿಕೆಯು ಎಲ್ಲ ಮಹಿಳೆಯರ ಕ್ಷಮೆ ಕೇಳಬೇಕು ಮತ್ತು ಅದನ್ನು ಬರೆದ ಗಣಪತಿ ಸಚ್ಚಿದಾನಂದ ಸ್ವಾಮಿ ಅವರ ಅಂಕಣವನ್ನು ತಕ್ಷಣವೇ ರದ್ದು ಮಾಡಬೇಕು. ಈ ಕುರಿತು ಎಲ್ಲರೂ ಪತ್ರಿಕೆಗೆ ಪತ್ರ ಬರೆಯಬೇಕು ಎಂದು ಕೋರಿದ್ದಾರೆ.

ಇಂಥ ಅಂಕಣ ಪ್ರಕಟಿಸಿರುವ ಪ್ರಜಾವಾಣಿ ಕುರಿತು ದಯಾನಂದ್‌ (ಆಥರ್) ಖಾರವಾಘಿ ಪ್ರತಿಕ್ರಿಯಿಸಿದ್ದು, ಯಾವುದೇ ಬರಹ ಪೇಜ್‌ಗೆ ಹೋಗುವ ಮೊದಲು ಕನಿಷ್ಟ ಎರಡು ಸಲ ಓದುವುದು ಸಬ್-ಎಡಿಟರ್‌ ಕೆಲಸ, ಪೇಜ್‌ಗೆ ಬಂದ ಮೇಲೆ ಕನಿಷ್ಟ ಒಂದು ಸಲ ಓದುವುದು ಪೇಜ್ ಇನ್‌ಚಾರ್ಜ್ / ಚೀಫ್ ಸಬ್-ಎಡಿಟರ್ ಕೆಲಸ, ಪೇಜ್ ಒಕೆ ಮಾಡುವ ಮೊದಲು ಕನಿಷ್ಟ ಹೆಡ್ಡಿಂಗ್ ನೋಡಿ, ಕಂಟೆಂಟ್ ಮೇಲೆ ಕಣ್ಣಾಡಿಸುವುದು ನ್ಯೂಸ್ ಎಡಿಟರ್ ಕೆಲಸ. ಕನಿಷ್ಟ ಇಷ್ಟು ಪ್ರೊಸೆಸ್ ಇಲ್ಲದೆ ನಡೆಯುವ ಜರ್ನಲಿಸಮ್, ಜರ್ನಲಿಸಮೇ ಅಲ್ಲ. ಈ ನಾನ್‌ಸೆನ್ಸ್ ಪೇಜ್‌ನಲ್ಲಿ ಅಪಿಯರ್ ಆಗಿ, ಪ್ರಿಂಟ್ ಆಗಿಯೂ ಬಂದಿದೆ ಎಂದರೆ ಈ ಪ್ರೊಸೆಸ್‌ನಲ್ಲಿ ಇದ್ದವರಿಗೆ ಜರ್ನಲಿಸಮ್ ಬಗ್ಗೆ ಇರುವ ಬದ್ಧತೆ ಎಂಥದ್ದು ಎಂಬುದು ಗೊತ್ತಾಗುತ್ತದೆ. ಇದು ಮ್ಯಾನೇಜ್‌ಮೆಂಟ್ ಕಾಲಮ್ಮೋ, ಅಡ್ವಟೋರಿಯಲ್ ಕಾಲಮ್ಮೋ, ಓಲೈಕೆ ಕಾಲಮ್ಮೋ ಆಗಿದ್ದರೆ ಈ ಪ್ರೊಸೆಸ್‌ನಲ್ಲಿ ಇದ್ದವರಷ್ಟೇ ಅಲ್ಲ, ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರೂ ಇಂಥ ಸಂದರ್ಭಗಳಲ್ಲಿ ಅಸಹಾಯಕರು. ಪ್ರಜಾವಾಣಿ Prajavani ‘ಪತ್ರಿಕೆ’ಯಾಗಿ ಉಳಿಯಬೇಕಿದ್ದರೆ ಈ ನಾನ್‌ಸೆನ್ಸ್ ಪ್ರಕಟಿಸಿದ್ದಕ್ಕಾಗಿ ಕೂಡಲೇ ಓದುಗರಲ್ಲಿ ಕ್ಷಮೆ ಕೇಳಬೇಕು ಮತ್ತು ಎಂಥದ್ದೇ ಒತ್ತಡ ಇದ್ದರೂ ಈ ನಾನ್‌ಸೆನ್ಸ್ ಕಾಲಮ್ ಅನ್ನು ನಿಲ್ಲಿಸಬೇಕು ಎಂದು ಬರೆದಿದ್ದಾರೆ.

ಈ ಕುರಿತು ಬರೆದಿರುವ ಲೇಖಕಿ ಚರಿತಾ ಮೈಸೂರು, ಪತಿವ್ರತೆಯರಿಗೆ ಪತಿಸೇವೆ ಮಾಡೋದಕ್ಕೇ ಟೈಮ್ ಸಾಲ್ತಿರಲ್ಲ, ಇನ್ನು ಪತಿಯ ಪರ್ಮಿಶನ್ ತಕೊಂಡು ಈ ಪುರಾಣ ಪ್ರವಚನ ಎಲ್ಲ ಕೂತು ಓದಿಕೊಳ್ಳುವಷ್ಟು ಪುರುಸೊತ್ತು ಇರುತ್ತಾ? ಇದರಿಂದ ಪತಿಸೇವೆಗೆ ಅಡಚಣೆ ಆಗೋದಿಲ್ಲವೆ? ಅಂತಾದ್ರೂ ಯೋಚಿಸಬೇಕಿತ್ತು ‘ಪ್ರಜಾವಾಣಿ’ ಸಂಪಾದಕರು ಎಂದು ಸಿಟ್ಟು ತೋಡಿಕೊಂಡಿದ್ದಾರೆ.

ಚಿಂತಕ ಸುರೇಶ್‌ ಕಂಜರ್ಪಣೆ, ಗಣಪತಿ ಸಚ್ಚಿದಾನಂದರಂಥವರಿಂದ ಅಂಕಣ ಬರೆಯಿಸುವ ಔಚಿತ್ಯದ ಬಗ್ಗೆ ಪ್ರಶ್ನಿಸಿದ್ದು, ಅವರ ಅಭಿಪ್ರಾಯ ಹೀಗಿದೆ: ʻʻಈ ಬರಹ ನೋಡಿ ಬಹುತೇಕ ಓದುಗರು ಕ್ಯಾಕರಿಸಿ ಉಗಿಯುತ್ತಿದ್ದಾರೆ. ಇಂಥಾ ಕಾಲಂಗಳ deeper malady ಬಗ್ಗೆ ಹೆಚ್ಚಿನವರು ಗಮನ ಹರಿಸಿಲ್ಲ. ಈ ಪ್ರಜಾವಾಣಿ ಸಹಿತ ಬಹುತೇಕ ಪತ್ರಿಕೆಗಳಲ್ಲಿ ರಾರಾಜಿಸುವಕಾವಿ ಮಂದಿಯನ್ನು ನೋಡಿ. ಮೂಲತಃ ಇವರು ಸ್ಥಾವರ ನಿರ್ಮಾಣದ ಮೋಹ ತುಂಬಿರುವ ಕಂಟ್ರಾಕ್ಟರುಗಳು. ಕಾಸು ಸಂಗ್ರಹಿಸಿ ಚಿತ್ರವಿಚಿತ್ರ ಕಟ್ಟಡ, ಮೂರ್ತಿ, ಮಂದಿರ ನಿರ್ಮಾಣ ಮಾಡಿ ಇನ್ನಷ್ಟು ಧನಾರ್ಜನೆಯ ಚಪಲಗಾರರು. ಆಧ್ಯಾತ್ಮದ ಎಳೆ ಇವರಲ್ಲಿ ನಾನಂತೂ ಕಂಡಿಲ್ಲ. ಆಧ್ಯಾತ್ಮದ ಅರೆಬರೆ ನುಡಿಗಟ್ಟು ರೂಢಿಸಿಕೊಂಡು ಮಾತಿನ ಜಾಲ ಎಳೆಯುವವರು. ಈ ಹಿಂದೆ ಸುಧಾದಲ್ಲಿ ಇಂಥಾ ಕಾವಿ ಗಡ್ಡದಾರಿಗಳ ಬೋಧೆಯ ಸರಣಿ ಬಂದಿತ್ತು.ಈ ಪಡಪೋಷಿಗಳೆಲ್ಲಾ ಮುಖ್ಯ ಅಂತ ಪ್ರಜಾವಾಣಿಗೂ ಅನ್ನಿಸಿದ ಕಾರಣ ಈ ಸಚ್ಚಿದಾನಂದನ ಕಾಲಂ ಪ್ರಕಟವಾಗುತ್ತಿದೆ.
ಇವತ್ತು ಪರಮ ಪ್ರತಿಗಾಮಿ ಪೀಸು ಬರೆದಾಗ ಕಣ್ಣಿಗೆ ಬಿದ್ದಿದ್ದು! ದಿನಾ ಪುಂಗುತಿದ್ದದ್ದು ಇದನ್ನೇ ಅಲ್ಲವೇ?

ಪತ್ರಿಕೆಗಳಿಗೆ ಇವರೆಲ್ಲಾ ನಕಲಿಗಳು ಅಂತ ಅನ್ನಿಸದಿದ್ದರೆ ಏನು‌ಮಾಡೋಣ? Deeper philosophical ವಿಷಯಗಳ ಬಗ್ಗೆ ಜೆಕೆ, ವಿವೇಕಾನಂದರಿಂದ ಹಿಡಿದು ನೂರಾರು ದಾರ್ಶನಿಕರ ಬರವಣಿಗೆಗಳಿವೆ. ಅವುಗಳನ್ನು ಪ್ರಕಟಿಸಬಹುದು. ಈ ನಡೆದಾಡುವ ನಕಲಿಗಳ ಅಪದ್ಧ ಪ್ರಕಟಿಸಿ ಅವರಿಗೆ ಮತ್ತಷ್ಟು ಪ್ರಚಾರ ಕೊಡುವುದೆಂದರೆ ಅವರ ಖದೀಮ ಆಧ್ಯಾತ್ಮ ವ್ಯವಹಾರಕ್ಕೆ ಸಾಥ್ ನೀಡಿದಂತೆ. ಈ ನೈತಿಕ ನಿರ್ಲಕ್ಷ್ಯ ಆಘಾತಕಾರಿ ಈ ಒಂದು ತುಣುಕು ನಮ್ಮನ್ನು ಎಚ್ಚರಿಸಬೇಕು. ಮಾಧ್ಯಮಗಳನ್ನೂ ಎಚ್ಚರಿಸಬೇಕು ಎಂದು ಹೇಳಿದ್ದಾರೆ.

ಫೇಸ್‌ ಬುಕ್‌ ನಲ್ಲಿ ಕಾಣಿಸಿಕೊಂಡ ಇನ್ನಷ್ಟು ಆಕ್ರೋಶದ ನುಡಿಗಳನ್ನು ಈ ಕೆಳಗಿನ ಕೊಂಡಿಗಳಲ್ಲಿ ನೀವು ಗಮನಿಸಬಹುದು.

Related Articles

ಇತ್ತೀಚಿನ ಸುದ್ದಿಗಳು