Sunday, June 16, 2024

ಸತ್ಯ | ನ್ಯಾಯ |ಧರ್ಮ

KPSC ಭ್ರಷ್ಟಾಚಾರ: ದಯಾ ಮರಣಕ್ಕೆ ಅಭ್ಯರ್ಥಿಗಳ ಮನವಿ

ಕರ್ನಾಟಕ ಲೋಕಸೇವಾ ಆಯೋಗದ ಅಡಿಯಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಕರೆದ ಕಿರಿಯ ತರಬೇತಿ ಅಧಿಕಾರಿಗಳ ಹುದ್ದೆಗಳ ನೇಮಕಾತಿ ಅಡಿಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ಮತ್ತು ಭ್ರಷ್ಟಾಚಾರ ನಡೆದಿದೆ ಎಂದು ಉದ್ಯೋಗಾಕಾಂಕ್ಷಿಗಳು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉದ್ಯೋಗ ವಂಚಿತ ಅಭ್ಯರ್ಥಿಗಳು ನ್ಯಾಯ ಬೇಕು ಅಥವಾ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

2018 ರ ಅಧಿಸೂಚನೆಯ ಅಡಿಯಲ್ಲಿ ಹೊರಡಿಸಲಾದ ಸಿ & ಆರ್ ನಿಯಮಾವಳಿ ಪ್ರಕಾರ ಒಟ್ಟು 1,520 ಹುದ್ದೆಗಳನ್ನು ಉದ್ಯೋಗ ನೇಮಕಾತಿಗೆ ಆದೇಶ ಹೊರಡಿಸಲಾಗಿತ್ತು. ಅಷ್ಟೂ ಆಯ್ಕೆಯನ್ನು ಅರ್ಹತೆಯ ಆಧಾರದಲ್ಲೇ ನಡೆಸುವ ಬಗ್ಗೆ ಇಲಾಖೆಯ ನಿಯಮಾವಳಿಗಳು ತಿಳಿಸಿವೆ.

ಹಾಗಾಗಿ ಮೀಸಲಾತಿ ಕೆಳಗೆ ಬರುವ ಹುದ್ದೆಗಳನ್ನು ಹೊರತುಪಡಿಸಿ ಉಳಿದ ಆಯ್ಕೆಗಳನ್ನು ತಮಗೆ ಬೇಕಾದ ಅಭ್ಯರ್ಥಿಗಳನ್ನಷ್ಟೇ ಆಯ್ಕೆ ಪ್ರಕ್ರಿಯೆ ಒಳಗೆ ಬಳಸಿಕೊಳ್ಳಲಾಗಿದೆ ಎಂದು ಉದ್ಯೋಗ ವಂಚಿತ ಅಭ್ಯರ್ಥಿಗಳು ಗಂಭೀರವಾಗಿ ಆರೋಪಿಸಿದ್ದಾರೆ. ಈ ಆರೋಪದ ಅಡಿಯಲ್ಲಿ ಈಗಾಗಲೇ 450 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನಿಯಮಾವಳಿಗಳನ್ನು ಗಾಳಿಗೆ ತೂರಿ ಆಯ್ಕೆ ಮಾಡಲಾಗಿದೆ. ಉಳಿದ 350 ಕ್ಕೂ ಹೆಚ್ಚಿನ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ತಡೆ ಹಿಡಿದ ಬಗ್ಗೆಯೂ ಆರೋಪಿಸಿದ್ದಾರೆ.

ಹಾಗಾಗಿ ಕರ್ನಾಟಕ ಲೋಕಸೇವಾ ಆಯೋಗದ ಅಡಿಯಲ್ಲೂ ಸಹ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಕೆಲಸ ಮಾಡಿದೆ ಎಂದು ವಂಚಿತ ಅಭ್ಯರ್ಥಿಗಳು ಆರೋಪಿಸಿದ್ದಾರೆ. ಅರ್ಹತೆ ಅಡಿಯಲ್ಲಿ ನೋಡಿದರೆ ಈಗಾಗಲೇ ಉದ್ಯೋಗ ನೇಮಕಾತಿ ಆದೇಶ ಪಡೆದುಕೊಂಡಿರುವ 450 ಕ್ಕೂ ಹೆಚ್ಚು ಅಭ್ಯರ್ಥಿಗಳಿಗಿಂತ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳು ಈಗಾಗಲೇ ಇದ್ದರೂ ಅವರಿಗೆ ನೇಮಕಾತಿ ಆದೇಶ ಕೊಡದಿರುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ಸ್ಪಷ್ಟ ಚಿತ್ರಣ ಕಾಣಲಾಗುತ್ತಿದೆ ಎಂದು ಉದ್ಯೋಗ ವಂಚಿತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇನ್ನು ತಡೆ ಹಿಡಿದ 350 ಉದ್ಯೋಗಾಕಾಂಕ್ಷಿಗಳ ನೇಮಕಾತಿ ಆದೇಶ ತಡೆ ಹಿಡಿದ ಬಗ್ಗೆ ಅಧಿಕಾರಿಗಳು ಸ್ಪಷ್ಟ ಮಾಹಿತಿಗಳನ್ನು ಅಭ್ಯರ್ಥಿಗಳಿಗೆ ಕೊಟ್ಟಿಲ್ಲ. ಹಾಗೊಂದು ವೇಳೆ ನೇಮಕಾತಿ ತಡೆ ಹಿಡಿಯುವ ಬಗ್ಗೆ ಸರ್ಕಾರವಾಗಲಿ, ನ್ಯಾಯಾಲಯವಾಗಲಿ ಆದೇಶವನ್ನೂ ಹೊರಡಿ‌ಸಿಲ್ಲ‌. ಹಾಗಾದರೆ ಬಾಕಿ ಉಳಿದ 350 ಮಂದಿ ಉದ್ಯೋಗ ನೇಮಕಾತಿಯನ್ನು ಯಾಕೆ ತಡೆ ಹಿಡಿಯಲಾಗಿದೆ ಎಂಬ ಪ್ರಶ್ನೆಯನ್ನು ಉದ್ಯೋಗ ವಂಚಿತ ಅಭ್ಯರ್ಥಿಗಳು ಹಾಕಿದ್ದಾರೆ.

ಇಲ್ಲಿ ನೇಮಕಾತಿ ಆದೇಶವನ್ನೇ ನಂಬಿಕೊಂಡ 350 ಕ್ಕೂ ಹೆಚ್ಚು ಅರ್ಹ ಅಭ್ಯರ್ಥಿಗಳು ತಮ್ಮ ಎಲ್ಲಾ ಮೂಲ ದಾಖಲಾತಿಗಳನ್ನು ಇಲಾಖೆಗೆ ನೀಡಿ ಸುಮಾರು 8 ತಿಂಗಳು ಕಳೆದಿವೆ. ಈ ಬಗ್ಗೆ ಆಯುಕ್ತರು, ಪ್ರಧಾನ ಕಾರ್ಯದರ್ಶಿಗಳು, ಸಂಬಂಧಪಟ್ಟ ಇಲಾಖೆ ಸಚಿವರು, ಮುಖ್ಯಮಂತ್ರಿಗಳಾದಿಯಾಗಿ ಯಾರನ್ನೇ ಸಂಪರ್ಕಿಸಿದರೂ ನಮ್ಮ ಕೆಲಸ ಆಗುತ್ತಿಲ್ಲ. ಈ ಬಗ್ಗೆ ಕಾನೂನು ಮೊರೆ ಹೋಗಲೂ ನಮ್ಮ ಬಳಿ ಹಣವಿಲ್ಲ. ನಮ್ಮ ಕಷ್ಟ ಯಾರಿಗೆ ಕೇಳುವುದು. ಹಾಗಾಗಿ ಕೊನೆಯ ಪಕ್ಷ ನಮಗೆ ದಯಾಮರಣಕ್ಕಾದರೂ ಅನುಮತಿ ನೀಡಿ ಎಂದು ಮನವಿ ಮಾಡಿದ್ದಾರೆ.

ಈ ಸಂಬಂಧ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಆಯುಕ್ತರನ್ನು ಪ್ರಶ್ನಿಸಿದರೆ ಉಡಾಫೆಯ ಉತ್ತರ ನೀಡಿದ್ದಾರೆ. ನಿಮಗೆ ಇದೊಂದೇ ಉದ್ಯೋಗವೇ, ಬೇರೆ ನೋಡಿಕೊಳ್ಳಿ ಎಂಬ ಹಾರಿಕೆಯ ಅಹಂಕಾರದ ಮಾತನ್ನಾಡಿದ್ದಾರೆ ಎಂದು ಅಭ್ಯರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ.

ಸಧ್ಯ ಈ ಎಲ್ಲಾ ಬೆಳವಣಿಗೆ ನೋಡಿದರೆ ಲೋಕಸೇವಾ ಆಯೋಗದ ಅಡಿಯಲ್ಲಿ ಈಗಾಗಲೇ ನೇಮಕವಾಗಿರುವ 450 ಅಭ್ಯರ್ಥಿಗಳ ಆಯ್ಕೆ ಮತ್ತು ತಡೆ ಹಿಡಿದಿರುವ 350 ಹುದ್ದೆಗಳ ಹಿಂದೆ ಅಧಿಕಾರಿಗಳು ಸರಿಯಾದ ಸ್ಪಷ್ಟನೆ ನೀಡದೇ ಹೋದರೆ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟ ಎಂಬಂತಾಗುತ್ತದೆ.

Related Articles

ಇತ್ತೀಚಿನ ಸುದ್ದಿಗಳು