Friday, June 14, 2024

ಸತ್ಯ | ನ್ಯಾಯ |ಧರ್ಮ

ಅಸ್ಪೃಶ್ಯತೆ ಆಚರಣೆ ; ಆಡಳಿತ ಮಂಡಳಿ ನಿರ್ದೇಶಕನ ವಜಾಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ

ಕೇರಳ : ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕರ ಮನೆಯಲ್ಲಿ ಕಾಲೇಜಿನ ಕಸ ಗುಡಿಸುವವರಿಂದ ಕೆಲಸ ಮಾಡಿಸಲಾಗುತ್ತಿದೆ ಮತ್ತು ಈ ಸಂದರ್ಭದಲ್ಲಿ ನಿರ್ದೇಶಕರು ಕೆಲಸ ಮಾಡುವವರ ಬಳಿ ಅಸ್ಪೃಶ್ಯರಂತೆ ವ್ಯವಹರಿಸುತ್ತಿದ್ದಾರೆ ಎಂದು ಆರೋಪಿಸಿ ಕೇರಳದ ಕೆ.ಆರ್.ನಾರಾಯಣನ್ ಇನ್ಸ್ಟಿಟ್ಯೂಟ್ ಆಫ್ ವಿಷುಯಲ್ ಸೈನ್ಸ್  ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. 

ಈ ಹಿನ್ನೆಲೆಯಲ್ಲಿ ಸಂಸ್ಥೆಯ ನಿರ್ದೇಶಕರ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿಗಳು ಡಿಸೆಂಬರ್ 5ರ ಬೆಳಗ್ಗೆಯಿಂದ ತರಗತಿ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ಧರಣಿಯಲ್ಲಿ KRNNIVSA ಸಂಸ್ಥೆಯ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ಮುಷ್ಕರದ ಭಾಗವಾಗಿದ್ದಾರೆ. ಆಡಳಿತ ಮಂಡಳಿ ಸೂಕ್ತ ನಿರ್ಧಾರ ಕೈಗೊಳ್ಳುವವರೆಗೆ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಯಲಿದೆ ಎಂದು ವಿಧ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.

ಸಂಸ್ಥೆಯಲ್ಲಿ ಕೆಲಸ ಮುಗಿಸಿ ಮನೆಗೆ ಬಾರದಿದ್ದಲ್ಲಿ ಸ್ವಚ್ಛತೆ ಕೆಲಸ ಮಾಡುವ ಕೆಲಸಗಾರರನ್ನು ಕೆಲಸದಿಂದ ವಜಾ ಮಾಡಲಾಗುವುದು ಎಂದು ನಿರ್ದೇಶಕರು ಭಯ ಹುಟ್ಟಿಸಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಮನೆಯ ಹೊರಗಿನ ಬಾತ್ ರೂಮ್ ನಲ್ಲಿ ಸ್ನಾನ ಮಾಡಿದ ನಂತರವೇ ನಿರ್ದೇಶಕರ ಮನೆಗೆ ಪ್ರವೇಶಿಸಲು ಅವರಿಗೆ ಸೂಚಿಸಿರುವುದು ಸ್ಪಷ್ಟವಾಗಿ ಅಸ್ಪೃಶ್ಯತೆಯನ್ನು ನಿರ್ದೇಶಕರು ಪಾಲಿಸಿದ ಬಗ್ಗೆಯೂ ವಿಧ್ಯಾರ್ಥಿ ಮುಖಂಡರು ಆಕ್ಷೇಪಿಸಿದ್ದಾರೆ. 

ಕಳೆದ ಫೆಬ್ರವರಿಯಿಂದ 32 ವರ್ಷದ ದೂರುದಾರ ಸೇರಿದಂತೆ ಮೂವರು ಕೆಆರ್ ನಾರಾಯಣನ್ ಇನ್ಸ್ಟಿಟ್ಯೂಟ್ ಆಫ್ ವಿಷುಯಲ್ ಸೈನ್ಸ್‌ನಲ್ಲಿ ದಿನಗೂಲಿ ವೇತನದಲ್ಲಿ ಸ್ವೀಪರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಆ ಕೆಲಸಗಾರರನ್ನು ನಿರ್ದೇಶಕರು ಹಲವು ದಿನಗಳಿಂದ ಈ ರೀತಿ ನಡೆಸಿಕೊಂಡಿದ್ದಾರೆ ಎಂದು ಆಪಾದನೆ ಮಾಡಿದ್ದಾರೆ.

ಇದರ ಜೊತೆಗೆ 2022ರ ಬ್ಯಾಚ್‌ನಲ್ಲಿ ಸಂಸ್ಥೆಯ ಯಾವುದೇ ಕೋರ್ಸ್ ಗಳಲ್ಲಿ ಯಾವುದೇ ಸೀಟುಗಳು ಖಾಲಿ ಇರಬಾರದು ಎಂದು ಸರ್ಕಾರ ಆದೇಶ ಹೊರಡಿಸಿದ್ದರೂ, ಆಡಳಿತ ಮಂಡಳಿ ಸರ್ಕಾರದ ಈ ಆದೇಶವನ್ನು ಉಲ್ಲಂಘಿಸಿದೆ. ಅದರಂತೆ ಸಂಸ್ಥೆಯ ಕೋರ್ಸ್‌ಗಳಲ್ಲಿ ನಾಲ್ಕು ಸೀಟುಗಳು ಖಾಲಿ ಇದ್ದರೂ ಅರ್ಹತೆ ಇರುವ ದಲಿತ ವಿದ್ಯಾರ್ಥಿ ಶರತ್‌ಗೆ ಎಂಬುವವರಿಗೂ ಸೀಟು ನಿರಾಕರಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಹಾಗೆಯೇ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿಗಳು ನಿಗದಿತ ಸಮಯಕ್ಕೆ ಲಭ್ಯವಾಗದ ಕಾರಣ ಕೆಲವು ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮಧ್ಯದಲ್ಲಿಯೇ ಕೈಬಿಡುವಂತಾಯಿತು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಡೀನ್, ಪ್ರೊಡಕ್ಷನ್ ಕಂಟ್ರೋಲರ್, ಆರ್ಟ್ ಡೈರೆಕ್ಟರ್ ಹುದ್ದೆಗಳಿಗೆ ಸೂಕ್ತ ಅಧಿಸೂಚನೆ ಇಲ್ಲದೇ ಅನಧಿಕೃತವಾಗಿ ನೇಮಕಾತಿ ಮಾಡಲಾಗಿದೆ. ಬೋಧನಾ ಅನುಭವ ಇಲ್ಲದವರನ್ನು ನೇಮಕ ಮಾಡಲಾಗಿದೆ. ಹೊಸ ಬ್ಯಾಚ್ ಆಗಿ ಸುಮಾರು ಒಂದು ತಿಂಗಳು ಕಳೆದರೂ ಸರಿಯಾದ ಪಠ್ಯಕ್ರಮವಾಗಲಿ, ಶೈಕ್ಷಣಿಕ ಕ್ಯಾಲೆಂಡರ್ ಆಗಲಿ ಕೊಡಲು ನಿರ್ದೇಶಕರಿಗೆ ಸಾಧ್ಯವಾಗಿಲ್ಲ.

ಈ ನಡುವೆ ಮೂರು ವರ್ಷದ ಪಿಜಿ ಕೋರ್ಸ್ ಅನ್ನು ಎರಡು ವರ್ಷಕ್ಕೆ ಮೊಟಕುಗೊಳಿಸಲಾಗಿದೆ. ಪ್ರವೇಶದ ಸಮಯದಲ್ಲಿ ವಿದ್ಯಾರ್ಥಿಗಳಿಂದ ನಷ್ಟ ಪರಿಹಾರ ಬಾಂಡ್ ಅನ್ನು ಕಡ್ಡಾಯವಾಗಿ ಬರೆಸಲಾಗುತ್ತದೆ ಮತ್ತು ಸಂಗ್ರಹಿಸಲಾಗುತ್ತದೆ. ನಿರ್ದೇಶಕರ ಸೂಚನೆಗಳನ್ನು ಪಾಲಿಸಲು ವಿದ್ಯಾರ್ಥಿಗಳು ಬದ್ಧರಾಗಿರಬೇಕು, ಇಲ್ಲದಿದ್ದರೆ ಅವರನ್ನು ಹೊರಹಾಕುವ ಅಧಿಕಾರ ನಿರ್ದೇಶಕರಿಗೆ ಇದೆ ಎಂದು ಬಾಂಡ್‌ನಲ್ಲಿ ತಿಳಿಸಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಒಟ್ಟಾರೆಯಾಗಿ ಕೆ.ಆರ್.ನಾರಾಯಣನ್ ಇನ್ಸ್ಟಿಟ್ಯೂಟ್ ಆಫ್ ವಿಷುಯಲ್ ಸೈನ್ಸ್ ಕಾಲೇಜಿನ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಆಡಳಿತ ಮಂಡಳಿ ಸರಿಯಾದ ಕ್ರಮ ತಗೆದುಕೊಂಡು, ನಿರ್ದೇಶಕರ ವಿಚಾರದಲ್ಲಿ ಸ್ಪಷ್ಟ ನಿಲುವು ತಗೆದುಕೊಳ್ಳದಿದ್ದರೆ ಮುಂದಿನ ಹೋರಾಟದ ರೂಪುರೇಷೆ ಸಿದ್ದಪಡಿಸಲಾಗುವುದು ಎಂದು ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು