Saturday, June 15, 2024

ಸತ್ಯ | ನ್ಯಾಯ |ಧರ್ಮ

ಒಳಮೀಸಲಾತಿ ಹೋರಾಟಕ್ಕೆ ದೇವೇಗೌಡರ ಸಾತ್

ಬೆಂಗಳೂರಿನಲ್ಲಿ ಒಳಮೀಸಲಾತಿ ಹೋರಾಟ ದಿನ ಕಳೆದಂತೆ ಗಂಭೀರವಾಗುತ್ತ ಸಾಗಿದೆ. ಕಳೆದ ಎರಡು ದಿನಗಳ ಹಿಂದೆ ಒಳಮೀಸಲಾತಿ ಹೋರಾಟಗಾರರನ್ನು ಪೊಲೀಸರು ಬಂಧಿಸಿದ ನಂತರ ರಾಜಕೀಯ ವಲಯದಲ್ಲೂ ಇದು ಚರ್ಚೆಗೆ ಕಾರಣವಾಗಿದೆ.

ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಜೆಡಿಎಸ್ ಪಕ್ಷದ MLC ತಿಪ್ಪೇಸ್ವಾಮಿಯವರು ಫೋನ್ ಮೂಲಕ ಒಳಮೀಸಲಾತಿ ಹೋರಾಟಗಾರರನ್ನು ಸಂಪರ್ಕಿಸಿ ಶಾಸಕರ ಭವನಕ್ಕೆ ಕರೆಸಿಕೊಂಡಿದ್ದಾರೆ. ನಂತರ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ದೇವೇಗೌಡರೊಂದಿಗೆ ಶಾಸಕರ ಭವನದಿಂದಲೇ ಫೋನ್ ಮೂಲಕ ಸಂಪರ್ಕಿಸಿ, ನೆನ್ನೆ ನಡೆದ ವಿದ್ಯಮಾನಗಳ ಬಗ್ಗೆ ವಿವರಿಸುವಂತೆ ಒಳಮೀಸಲಾತಿ ಹೋರಾಟಗಾರರಿಗೆ ತಿಪ್ಪೇಸ್ವಾಮಿಯವರು ತಿಳಿಸಿದ್ದಾರೆ‌.

ನಂತರ ಹೋರಾಟಗಾರರಿಂದ ಪೋಲಿಸ್ ಅರೆಸ್ಟ್, ಲಾಠಿ ಚಾರ್ಜ್ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಂಡ ದೇವೇಗೌಡರು, ನಡೆದಿರುವ ವಿದ್ಯಮಾನಗಳಿಗೆ ತಮ್ಮ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ.

ಇಂದು ತಾವು ಪ್ರಧಾನಿಯವರನ್ನು ಬೇಟಿಯಾಗಿ ಒಳಮೀಸಲಾತಿ ಮತ್ತು ನಡೆಯುತ್ತಿರುವ ಹೋರಾಟದ ವಿಚಾರದಲ್ಲಿ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸುವುದಾಗಿಯೂ ಮತ್ತು ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಒತ್ತಾಯ ಪಡಿಸಿ, ಪ್ರಧಾನಿಯವರ ಉತ್ತರ ಏನಿದೆ ಎಂದು ಹೋರಾಟಗಾರರಿಗೆ ತಿಳಿಸುವುದಾಗಿ ತಮ್ಮ ನಿಲುವನ್ನು ತಿಳಿಸಿದ್ದಾರೆ ಎಂದು ಒಳಮೀಸಲಾತಿ ಹೋರಾಟದ ಮುಖ್ಯಸ್ಥರಾದ ಭಾಸ್ಕರ್ ಪ್ರಸಾದ್ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಒಳಮೀಸಲಾತಿ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವು ಏನಿರಬಹುದು ಎಂಬುದು ತಿಳಿಯಲಿದೆ. ಆ ನಂತರ ಮುಂದಿನ ಹೋರಾಟದ ರೂಪುರೇಷೆ ಸಿದ್ದಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು