Monday, June 17, 2024

ಸತ್ಯ | ನ್ಯಾಯ |ಧರ್ಮ

ದಾರಿತಪ್ಪಿದ ಪರಿಷತ್ತುಗಳು, ಅರ್ಥ ಕಳೆದುಕೊಂಡ ಸಮ್ಮೇಳನಗಳು

ಸಾಹಿತ್ಯ ಪರಿಷತ್ತು ಏರ್ಪಡಿಸುವ ಸಾಹಿತ್ಯ ಸಮ್ಮೇಳನಗಳಲ್ಲಿ ಒಂದಲ್ಲ ಒಂದು ವಿವಾದವೇಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ಇದೇ ಜನವರಿ ಆರರಂದು ಆರಂಭವಾಗಲಿರುವ ಹಾವೇರಿ ಸಮ್ಮೇಳನಕ್ಕೂ ತಾತ್ತ್ವಿಕ ವಿರೋಧ ವ್ಯಕ್ತವಾಗಿದೆ.  ಈ ಹಿನ್ನೆಲೆಯಲ್ಲಿ ಸಾಹಿತ್ಯ ಸಮ್ಮೇಳನಗಳು, ಸಾಹಿತ್ಯ ಪರಿಷತ್ತು ಬದಲಾದ ಪರಿಯ ಸೂಕ್ಷ್ಮ ಚಿತ್ರಣವನ್ನು ನೀಡಿದ್ದಾರೆ ಶ್ರೀನಿವಾಸ ಕಾರ್ಕಳ ಇಂದಿನ ಶ್ರೀನಿ ಕಾಲಂ ನಲ್ಲಿ

ಆ ದಿನಗಳಲ್ಲಿ ಸಾಹಿತ್ಯ ಸಮ್ಮೇಳನ ಎಂದರೆ ಊರ ಜಾತ್ರೆಯೇನೋ ಎಂಬಂಥ ಸಂಭ್ರಮ, ಸಡಗರ. ‘ನಮ್ಮೂರ ಕಾರ್ಯಕ್ರಮ, ನಮ್ಮ ಕಾರ್ಯಕ್ರಮ’ ಎಂಬ ಪ್ರೀತಿ, ಉತ್ಸಾಹ. ಊರ ಜಾತ್ರೆಯಲ್ಲಿ ದೇವರು ಮುಖ್ಯವಾದರೆ, ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯವೇ ದೇವರಲ್ಲವೇ? ನಮ್ಮ ಇಷ್ಟದ ಲೇಖಕರನ್ನು ನೋಡುವ, ಅವರ ಮಾತುಗಳನ್ನು ಆಲಿಸುವ, ಅವರನ್ನು ಮಾತನಾಡಿಸುವ ಅವಕಾಶ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸವಿಯುವ ಅವಕಾಶ, ಪುಸ್ತಕ ಮಳಿಗೆಗಳೂ ಇರುವುದರಿಂದ ನಮಗಿಷ್ಟವಾದ ಪುಸ್ತಕ ಖರೀದಿಸುವ ಅವಕಾಶ. ಎಲ್ಲಕ್ಕಿಂತ ಮುಖ್ಯವಾಗಿ ಲಿಂಗ, ಜಾತಿ, ಮತಧರ್ಮ ಗಡಿರೇಖೆಗಳನ್ನು ಮೀರಿ, ಕೇವಲ ಸಾಹಿತ್ಯದ ಹೆಸರಿನಲ್ಲಿ, ಸಾಹಿತ್ಯಾಸಕ್ತರೆಲ್ಲ ಒಂದೆಡೆ ಸೇರುವ ಅನನ್ಯ ಅವಕಾಶವನ್ನು ಈ ಸಮ್ಮೇಳನಗಳು ಒದಗಿಸುತ್ತಿದ್ದವು.

ಸರಳ ಊಟ, ಸರಳ ವೇದಿಕೆ, ಆಡಂಬರ ರಹಿತ ಸಮಾರಂಭ, ಹಾಗಾಗಿ ಖರ್ಚೂ ಸೀಮಿತ. ಜನ ತಾವೇ ಹಣ ಹಾಕಿ ಮತ್ತು ಕೆಲ ಕೆಲಸಗಳಿಗೆ ದಾನಿಗಳ ಸಣ್ಣ ನೆರವು ಪಡೆದು ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸುತ್ತಿದ್ದರು. ಶಾಲೆಗಳಲ್ಲಿ ಕನ್ನಡ ಬೋಧಿಸುತ್ತಿದ್ದ ಶಿಕ್ಷಕರು, ಉಪನ್ಯಾಸಕರು ದೊಡ್ಡ ಪ್ರಮಾಣದಲ್ಲಿ ಸಾಹಿತ್ಯ ಪರಿಚಾರಿಕೆಯ ಕೆಲಸಗಳಲ್ಲಿ ತೊಡಗಿ ಕೊಂಡಿರುತ್ತಿದ್ದರು. ಆಗೆಲ್ಲ ಸಾಹಿತ್ಯ ಸಂಘಟನೆಗಳ ಚುಕ್ಕಾಣಿ ಹಿಡಿದಿದ್ದವರು ಸಾಹಿತ್ಯದೊಂದಿಗೆ ನಂಟು ಇದ್ದವರೇ ಆಗಿದ್ದರು. ಹಾಗಾಗಿ ಅವರಿಗೆ ಸಾಹಿತ್ಯವಷ್ಟೇ ಮುಖ್ಯವಾಗಿತ್ತು. ಹೀಗೆ, ಅವು ನಿಜವಾದ ಅರ್ಥದಲ್ಲಿ ‘ಸಾಹಿತ್ಯ ಸಮ್ಮೇಳನ’ಗಳಾಗಿದ್ದವು.

ಸಾಹಿತ್ಯ ಸಂಘಟನೆಗಳಿಗೆ ಸಾಹಿತಿಗಳೇ ಮುಖ್ಯಸ್ಥರಾಗಬೇಕೇ? ಸಾಹಿತ್ಯಾಸಕ್ತರು ಮುಖ್ಯಸ್ಥರಾಗಬಾರದೇ? ಎಂಬ ತಕ್ಕಮಟ್ಟಿಗೆ ತರ್ಕಬದ್ಧ ಪ್ರಶ್ನೆಗೆ ಉತ್ತರವಾಗಿ ಸಣ್ಣ ಸಣ್ಣ ಬದಲಾವಣೆಗಳಾಗಲಾರಂಭಿಸಿದವು. ಅದೇ ಹೊತ್ತಿನಲ್ಲಿ ಜನರ ಕೈಯಲ್ಲಿ ದುಡ್ಡು ಓಡಾಡಲಾರಂಭಿಸಿತು, ಉಪನ್ಯಾಸಕರಿಗೆ ಯುಜಿಸಿ ಸ್ಕೇಲ್ ಬಂತು, ಅವರಲ್ಲಿ ಬಹುತೇಕರಿಗೆ ಇತರ ಆಸಕ್ತಿಗಳ ಸೆಳೆತ ಅತಿಯಾಗಿ ಅವರು ಸಾಹಿತ್ಯ ಸಂಘಟನೆಯ ಕೆಲಸಗಳಿಂದ ಕೊಂಚ ದೂರ ಸರಿದರು. ಸಾಹಿತಿಗಳಾಗಿರುವ ಮಾತು ಒತ್ತಟ್ಟಿಗಿರಲಿ, ಸಾಹಿತ್ಯದ ಗಂಧ ಗಾಳಿ ಇಲ್ಲದ ಪಕ್ಕಾ ವ್ಯಾಪಾರಿಗಳು ಸಾಹಿತ್ಯ ಸಂಘಟನೆಗಳ ಚುಕ್ಕಾಣಿ ಹಿಡಿದು ಕೊಂಡರು. ಏಕಕಾಲಕ್ಕೆ ಮತೀಯ ಸಂಘಟನೆ ಮತ್ತು ವಿಪ್ರ ಸಂಘದ ಅಧ್ಯಕ್ಷರಾಗಿದ್ದವರು ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದುದನ್ನೂ ಕಾಣುವ ‘ಭಾಗ್ಯ’ ನಮ್ಮದಾಯಿತು. ವ್ಯಾಪಾರಿಗಳು ಸಾಹಿತ್ಯ ಪರಿಷತ್ತನ್ನು ವಶಪಡಿಸಿಕೊಂಡ ಮೇಲೆ ಅಲ್ಲಿ ಸಾಹಿತ್ಯೇತರ ಆಸಕ್ತಿಗಳು ಹಾಜರಾಗುವುದು ಅಚ್ಚರಿಯೇನೂ ಅಲ್ಲವಲ್ಲ?

ಸಾಹಿತ್ಯ ಸಮ್ಮೇಳನಕ್ಕೆ ಬಹುವರ್ಣದ ದುಬಾರಿ ಕರೆಯೋಲೆಗಳು, ಸಮ್ಮೇಳನಾಧ್ಯಕ್ಷರ ಅಡ್ಡಪಲ್ಲಕ್ಕಿ ಉತ್ಸವಗಳು, ಸಮ್ಮೇಳನಾಧ್ಯಕ್ಷರಿಗೆ ಹಮ್ಮಿಣಿ, ಭಾರೀ ಪ್ರಚಾರ, ತಮಗೆ ಬೇಕಾದವರಿಗೆ ಸನ್ಮಾನ, ಅದೂ ಒಬ್ಬಿಬ್ಬರಿಗಲ್ಲ ಇಪ್ಪತ್ತು ಮುವ್ವತ್ತು ಮಂದಿಗೆ, ಭರ್ಜರಿ ಊಟ, ಊಟದಲ್ಲಿ ಏನೇನು ಇರಲಿವೆ ಎಂಬ ಬಗ್ಗೆ ಮೊದಲೇ ಪತ್ರಿಕೆಗಳಿಗೆ ಮಾಹಿತಿ, ಸಮ್ಮೇಳನದ ಬಗ್ಗೆ ದುಬಾರಿ ಸ್ಮರಣ ಸಂಚಿಕೆ ಹೀಗೆ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಒಂದನ್ನು ಹೊರತು ಪಡಿಸಿ ಮತ್ತೆ ಎಲ್ಲ ಅವಲಕ್ಷಣಗಳೂ ಕಾಣಿಸಿಕೊಂಡವು.

ಇಷ್ಟೊಂದು ವೈಭವದ ಸಮ್ಮೇಳನ ಮಾಡಿದ ಮೇಲೆ ಅದಕ್ಕೆ ಹಣ ಬೇಕಲ್ಲವೇ? ಅದಕ್ಕಾಗಿ ದೊಡ್ಡ ದೊಡ್ಡ ಉದ್ಯಮಿಗಳ ಹಿಂದೆ ಹೋಗಲಾಯಿತು. ಅವರು ಹೇಗೆ ಶ್ರೀಮಂತ ಉದ್ಯಮಿಗಳಾದರು  ಎಂಬುದು ಮುಖ್ಯವಾಗಲಿಲ್ಲ. ಅನ್ಯ ಹಿತಾಸಕ್ತಿಗಳವರ ನೇತೃತ್ವ, ರಾಜಕಾರಣಿಗಳು, ಉದ್ಯಮಿಗಳು ಮತ್ತು ಸರಕಾರದ ಹಣ ಬಂದ ಮೇಲೆ ಅದರೊಂದಿಗೆ ರಾಜಕೀಯವೂ ಬರುವುದು ಬೇಡವೇ? ಬಂತು. ಕಾಲವೂ ಬದಲಾಯಿತು, ಕಾಲಧರ್ಮವೂ ಬದಲಾಯಿತು. ಒಟ್ಟಿನಲ್ಲಿ ಸಾಹಿತ್ಯ ಸಂಘಟನೆಯೊಂದು ಯಾವ ಉದ್ದೇಶಕ್ಕೆ ಹುಟ್ಟಿಕೊಂಡಿತೋ ಕನ್ನಡ ಸಮ್ಮೇಳನವನ್ನು ಯಾವ ಉದ್ದೇಶಕ್ಕೆ ಶುರು ಮಾಡಲಾಯಿತೋ ಅದನ್ನು ಮರೆತು ಬೇರೆಯೇ ಉದ್ದೇಶ ಅಲ್ಲಿ ಕಾಣಿಸಿಕೊಂಡಿತು.

ಕನ್ನಡ ಸಾಹಿತ್ಯ ಪರಿಷತ್ತು

ನಾನು ಇವನ್ನೆಲ್ಲ ಮುಖ್ಯವಾಗಿ ಜಿಲ್ಲಾ ಮತ್ತು ತಾಲೂಕು ಸಾಹಿತ್ಯ ಪರಿಷತ್ತು ಮತ್ತು ಸಾಹಿತ್ಯ ಸಮ್ಮೇಳನಗಳನ್ನು ಗಮನದಲ್ಲಿರಿಸಿಕೊಂಡು ಹೇಳುತ್ತಿದ್ದೇನೆ. ಇದನ್ನೇ ರಾಜ್ಯ ಮಟ್ಟದ ಸಾಹಿತ್ಯ ಪರಿಷತ್ತು ಮತ್ತು ಸಮ್ಮೇಳನಗಳಿಗೂ ಅನ್ವಯಿಸಿ ಹೇಳಬಹುದು.

ಅಕಾಡೆಮಿಗಳಂಥ  ಇತರ ಸಂಸ್ಥೆಗಳಿಗೆ ಹೋಲಿಸಿದರೆ ಕನ್ನಡ ಸಾಹಿತ್ಯ ಪರಿಷತ್ತು ಒಂದು ಸ್ವಾಯತ್ತ ಸಂಸ್ಥೆ. ಅದಕ್ಕೆ ಅದರದ್ದೇ ಆದ ಸಂವಿಧಾನವಿದೆ, ತನ್ನದೇ ಆದ ಒಂದು ಅಸ್ತಿತ್ವವಿದೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಪದವಿಯೂ ಹಾಗೆಯೇ. ಅದು ಸರ್ಕಾರೀ ಕೃಪಾಪೋಷಿತ ಪದವಿಯಲ್ಲ.

ಅಲ್ಲದೆ, ಪರಿಷತ್ತಿಗೆ ನಾಡಿನ ಜನರೊಂದಿಗೆ ಭಾವನಾತ್ಮಕ ಸಂಬಂಧ ಇದೆ. ಪರಿಷತ್ತಿನ ಸಮ್ಮೇಳನಕ್ಕೆ ಲಕ್ಷಾಂತರ ಜನ ಸೇರುತ್ತಾರೆ. ಯಾವ ಸಮ್ಮೇಳನಗಳಿಗೂ ಪರಿಷತ್ತಿನ ಸಮ್ಮೇಳನಕ್ಕಿರುವ ಸಾಂಸ್ಕೃತಿಕ ಸಾಮಾಜಿಕ ಮಹತ್ತ್ವವಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿಗೆ ಜಿಲ್ಲೆ, ತಾಲೂಕು ಹೀಗೆ ರಾಜ್ಯದಾದ್ಯಂತ ಶಾಖೆಗಳಿವೆ. ಇವುಗಳಿಗೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆಯುತ್ತದೆ. ಹೀಗೆ ಸಾಹಿತ್ಯ ಪರಿಷತ್ತು ರಾಜ್ಯದಲ್ಲಿ ಒಂದು ಬೃಹತ್ ವ್ಯವಸ್ಥೆಯ ರೂಪ ತಾಳಿದೆ.

ಇಂತಹ ಒಂದು ಮಾದರಿ ಸಂಸ್ಥೆಯ ಕನಸು ಕಂಡುದು ನಾಲ್ವಡಿ ಕೃಷ್ಣರಾಜ ಒಡೆಯರ್. ಅವರು 1915 ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತನ್ನು ಆರಂಭಿಸಿದರು. ಅದು ಹುಟ್ಟಿದ ಕಾಲಕ್ಕೆ ಕರ್ನಾಟಕ ಏಕೀಕರಣದ ಕೆಲಸವೂ ಭರದಿಂದ ನಡೆಯುತ್ತಿದ್ದುದರಿಂದ ಸಾಹಿತ್ಯ ಪರಿಷತ್ತು ಅದರಲ್ಲೂ ಮಹತ್ತ್ವದ ಕೆಲಸ ಮಾಡಿತು. ಮುಂದೆ ಕನ್ನಡ ಪುಸ್ತಕಗಳ ಪ್ರಕಟಣೆ, ವಾಚನಾಲಯಗಳ ಸ್ಥಾಪನೆ, ಉಪನ್ಯಾಸಗಳ ಆಯೋಜನೆ ಹೀಗೆ ಬಹುವಿಧ ಕೆಲಸಗಳ ಮೂಲಕ ನಾಡಿನ ಹೆಮ್ಮೆಯ ಸಂಸ್ಥೆಯಾಗಿ ಬೆಳೆಯಿತು.

ಡಿ ವಿ ಗುಂಡಪ್ಪ, ಬಿ ಎಂ ಶ್ರೀಕಂಠಯ್ಯ, ಅ ನ ಕೃಷ್ಣರಾಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ತಿ ತಾ ಶರ್ಮ, ಎ ಎನ್ ಮೂರ್ತಿರಾವ್, ಬಿ ಶಿವಮೂರ್ತಿ ಶಾಸ್ತ್ರಿ, ಜಿ ವೆಂಕಟಸುಬ್ಬಯ್ಯ, ಜಿ ನಾರಾಯಣ, ಹಂ ಪ ನಾಗರಾಜಯ್ಯ, ಜಿ ಎಸ್ ಸಿದ್ದಲಿಂಗಯ್ಯ, ಸಾ ಶಿ ಮರುಳಯ್ಯ, ಎನ್ ಬಸವಾರಾಧ್ಯ, ಚಂದ್ರಶೇಖರ ಪಾಟೀಲ ಮೊದಲಾದ ವಿದ್ವಾಂಸರು, ಕನ್ನಡದ ಮಹತ್ತ್ವದ ಲೇಖಕರು ಪರಿಷತ್ತನ್ನು ಸಮರ್ಥವಾಗಿ ಮುನ್ನಡೆಸಿ ಅದಕ್ಕೊಂದು ಘನತೆ ತಂದಿತ್ತರು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮನಸು ಮಾಡಿದರೆ ಹೇಗೆ ಸರಕಾರಕ್ಕೇ ಸೆಡ್ಡು ಹೊಡೆಯಬಲ್ಲರು ಎಂಬುದಕ್ಕೆ ಚಂದ್ರಶೇಖರ ಪಾಟೀಲರು ಒಂದು ಉದಾಹರಣೆ.

ದಾರಿತಪ್ಪಿದ ಪರಿಷತ್ತು

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದು ಕನ್ನಡಿಗರ ಹೆಮ್ಮೆಗೆ ಭಾಜನವಾದ ಈ ಸಂಸ್ಥೆ ಈಗ ಯಾವ ಸ್ಥಿತಿಯಲ್ಲಿದೆ? ಅದು ಏನು ಕೆಲಸ ಮಾಡುತ್ತಿದೆ? ಅದಕ್ಕೆ ನಡೆಯುವ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಪಾತ್ರವೇನು? ಅಪಾರ ಖರ್ಚು, ಪ್ರಚಾರ, ಜಾತಿಲಾಬಿ ಇವು ಶಾಸನಸಭೆಗೆ ನಡೆಯುವ ಚುನಾವಣೆಗಿಂತ ಯಾವ ರೀತಿಯಲ್ಲಿ ಕಡಿಮೆಯಿದೆ? ಈಗ ಅದರ ಅಧ್ಯಕ್ಷರಾಗಿರುವವರು ಯಾರು? ಅವರ ಅರ್ಹತೆಗಳೇನು? ಕೋಟಿ ಕೋಟಿ ಹಣ ಸರಕಾರದಿಂದ ಪಡೆದ ಮೇಲೆ ಸರಕಾರ ಹೇಳಿದಂತೆ ಕೇಳುವ ಮತ್ತು ಪರಿಷತ್ತನ್ನು ಸರಕಾರವು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುವ ಪರಿಸ್ಥಿತಿ ಬರುವುದಿಲ್ಲವೇ?

ಕನ್ನಡದ ಬಗ್ಗೆ ಸದಾ ಕಾಳಜಿಯಿಂದ ಮಾತನಾಡುವ ಹಿರಿಯ ವಿದ್ವಾಂಸ ಪ್ರೊಫೆಸರ್ ಬಿಳಿಮಲೆಯವರು ಹೇಳುವ ಹಾಗೆ, “ಲಕ್ಷಾಂತರ ಮತದಾರರಿರುವ ಪರಿಷತ್ತಿಗೆ ಲೇಖಕರು ಅಧ್ಯಕ್ಷರಾಗುವ ಅವಕಾಶ ಈಗ ಕಳೆದುಹೋಗಿದೆ. ಸರಕಾರೀ ಅನುದಾನದಿಂದ ವರುಷಕ್ಕೊಂದು ಸಮ್ಮೇಳನವನ್ನು ನಡೆಸುವ ‘ಈವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆ’ಯಾಗಿ ಪರಿಷತ್ತು ಪರಿವರ್ತನೆಗೊಂಡಿದೆ. 21ನೇ  ಶತಮಾನದ ಕನ್ನಡ-ಕರ್ನಾಟಕವು ಬಗೆ ಬಗೆಯ  ಸಮಸ್ಯೆಗಳನ್ನು ಇದಿರಿಸುತ್ತಿದೆ. ಜಾಗತೀಕರಣವನ್ನು ಕನ್ನಡದಂತಹ ದೇಸೀ ಭಾಷೆ ಇದಿರಿಸುವ ಕ್ರಮಗಳು ಯಾವುವು? ಹಿಂದಿ ಭಾಷೆಯ ಜೊತೆ ನಮ್ಮ ಸಂಬಂಧಗಳು ಹೇಗಿರಬೇಕು? ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕವು ಇವತ್ತು ಕೋಮುವಾದದ ಪ್ರಯೋಗಶಾಲೆಯಾಗುತ್ತಿದ್ದಾಗ ಪರಿಷತ್ತು ಕರ್ನಾಟಕವನ್ನು ಹೇಗೆ ರಕ್ಷಿಸುತ್ತದೆ? ಎಂಬಿತ್ಯಾದಿ ತುರ್ತು ಪ್ರಶ್ನೆಗಳಿಗೆ ಪರಿಷತ್ತಿನಲ್ಲಿ ಯಾವುದೇ ಉತ್ತರಗಳಿದ್ದಂತಿಲ್ಲ”.

ಹಾವೇರಿ ಸಾಹಿತ್ಯ ಸಮ್ಮೇಳನ ವಿವಾದ

ಇಷ್ಟೇ ಆಗಿದ್ದರೆ ಪರವಾಗಿಲ್ಲ, ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಬೆಳವಣಿಗೆಗಳು ನಮ್ಮನ್ನು ಬೆಚ್ಚಿಬೀಳಿಸಬೇಕು. ಕಳೆದ ಒಂದೆರಡು ವರ್ಷಗಳಿಂದ ಒಂದು ನಿರ್ದಿಷ್ಟ ಸಮುದಾಯವನ್ನು ಮುಖ್ಯವಾಹಿನಿಯಿಂದ ಹೊರಗಿಡುವ ಕೆಲಸ ಸರಕಾರದ ಬೆಂಬಲದೊಂದಿಗೆ ಬಹಿರಂಗವಾಗಿಯೇ ಆರಂಭವಾಯಿತು; ಶಾಲೆಯಿಂದ, ವ್ಯಾಪಾರದಿಂದ ಎಲ್ಲೆಡೆಯಿಂದಲೂ. ಆದರೆ ಸಾಂಸ್ಕೃತಿಕ ಕ್ಷೇತ್ರಗಳಿಂದಲೂ ಅವರನ್ನು ಹೊರಗಿಡುವ ಕೆಲಸ ಅಧಿಕೃತವಾಗಿಯೇ ಆರಂಭವಾಗಿರುವುದನ್ನು ಹಾವೇರಿ ಸಮ್ಮೇಳನದಲ್ಲಿ ನೋಡುತ್ತಿದ್ದೇವೆ. ನಾವು ಹಾಗೆ ಮಾಡಿಲ್ಲ ಎಂದು ಪರಿಷತ್ ಅಧ್ಯಕ್ಷರು ಎಷ್ಟೇ ಸಮಜಾಯಿಷಿ ನೀಡಿದರೂ ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ಸಮ್ಮಾನಗೊಳ್ಳುವ ಮಂದಿಗಳಲ್ಲಿ ಮುಸ್ಲಿಂ ಸಮುದಾಯದ ಒಬ್ಬ ವ್ಯಕ್ತಿಗೂ ಕಾಣಿಸಿಕೊಳ್ಳುವ ಅರ್ಹತೆ ಇಲ್ಲ ಎಂದು ಸಾಹಿತ್ಯ ಪರಿಷತ್ತು ಭಾವಿಸಿದರೆ ಅದನ್ನು ಆಕಸ್ಮಿಕ ಎನ್ನಬೇಕೋ ಅಥವಾ ಕೋಮುವಾದಿ ಮನಸಿನಿಂದ ಪ್ರೇರಿತ ನಿಲುವು ಎಂದು ತಿಳಿಯಬೇಕೋ?

ಈ ವಿಷಯದಲ್ಲಿ ಚಿಂತಕ ರಾಜೇಂದ್ರ ಚೆನ್ನಿಯವರ ಮಾತುಗಳು ಬಹಳ ಮುಖ್ಯ ಎನಿಸುತ್ತವೆ. ಅವರು, “ಕನ್ನಡ ಸಾಹಿತ್ಯದ ಮುಖ್ಯ ಲಕ್ಷಣವೇ ಬಹುತ್ವ. 9 ನೇ ಶತಮಾನದ ಕವಿರಾಜಮಾರ್ಗದ ಕೃತಿಗೆ ಹಲವು ಕನ್ನಡಗಳಿವೆ, ವರ್ಗದೊಂದಿಗೆ ದೇಸಿ ಇದೆ ಎನ್ನುವ ತಿಳಿವಳಿಕೆ ಇತ್ತು. ಕ್ರಮೇಣ ವಿಸ್ತಾರವಾಗುತ್ತಾ, ವಿಶಾಲವಾಗುತ್ತಾ ಕನ್ನಡ ಸಾಹಿತ್ಯವು ಎಲ್ಲ ವರ್ಗಗಳ ಅಭಿವ್ಯಕ್ತಿಯಾಗುವ ಪ್ರಯತ್ನದಲ್ಲಿ ವಿಕಸನಗೊಂಡಿದೆ. ಇಂತಹ ಪರಂಪರೆಯನ್ನು ವಿಕೃತಿಗೊಳಿಸಿ ಅಲ್ಪಸಂಖ್ಯಾತರನ್ನು ಹೊರಗಿಡುವ ಏಕಮಾತ್ರ ಉದ್ದೇಶದಿಂದ ಹಾವೇರಿ ಸಮ್ಮೇಳನವನ್ನು ರೂಪಿಸಿದಂತೆ ತೋರುತ್ತದೆ. ಇದು ಕೇವಲ ಒಂದು ಸಮುದಾಯದ ಪ್ರಶ್ನೆಯಲ್ಲ, ಕನ್ನಡ ಸಾಹಿತ್ಯವನ್ನು ನಾವು ಹೇಗೆ ಪರಿಕಲ್ಪಿಸಿಕೊಳ್ಳುತ್ತೇವೆ ಎನ್ನುವ ಮೂಲ ಪ್ರಶ್ನೆಯಾಗಿದೆ…. ಹಾವೇರಿ ಸಮ್ಮೇಳನವು ಈಗಾಗಲೇ ಬಿಗಡಾಯಿಸಿರುವ ಸಮಾಜದ ಆರೋಗ್ಯವನ್ನು ಚಿಂತಾಜನಕವಾಗಿಸುವ ಯತ್ನದಂತೆ ಕಾಣುತ್ತದೆ” ಎನ್ನುತ್ತಾರೆ.

ಕನ್ನಡದ ಒಳಗೊಳ್ಳುವ ಪರಂಪರೆ

ಕನ್ನಡದವರಾದ ನಮ್ಮದು ಹಿಂದಿನಿಂದಲೂ ಒಳಗೊಳ್ಳುವ ಪರಂಪರೆ. ಅನೇಕ ಮತಗಳವರು ಸಿದ್ಧಾಂತಗಳವರು ಕನ್ನಡ ನಾಡಿಗೆ ಹೊರಗಿನಿಂದ ಬಂದರು. ಅವರನ್ನೆಲ್ಲ ನಮ್ಮವರನ್ನಾಗಿ ಮಾಡಿಕೊಂಡ ಪರಂಪರೆ ನಮ್ಮದು. ನಾವು ‘ಮನುಷ್ಯ ಕುಲಂ ತಾನೊಂದೇ ವಲಂ’ ಎಂದ ಪಂಪನ ಕುಲಜರು, ‘ವಸುದೈವ ಕುಟುಂಬಕಂ’ ಎಂಬ ಉದಾತ್ತ ಜೀವನತತ್ತ್ವದ ಪ್ರತಿಪಾದಕರು, ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದ ಕುವೆಂಪು ರವರ ನೆಲದವರು.

ಕನ್ನಡ ನಾಡ ಗೀತೆ ‘ಜಯಭಾರತ ಜನನಿಯ ತನುಜಾತೆ’ ಯು ಕನ್ನಡ ನಾಡನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ ಎನ್ನುತ್ತದೆ. ‘ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿಕ, ಜೈನರುದ್ಯಾನ’ ಎನ್ನುತ್ತದೆ. ಇದು ಕನ್ನಡ ಪರಂಪರೆ.

‘ಪರ ಧರ್ಮವನ್ನೂ ಪರ ವಿಚಾರಗಳನ್ನೂ ಸಹಿಸಿಕೊಳ್ಳುವುದೇ ನಿಜವಾದ ಧರ್ಮ’ ಎನ್ನುತ್ತಾನೆ ಕವಿರಾಜ ಮಾರ್ಗಕಾರ.

ಹಾವೇರಿ ಪರಿಸರದಿಂದ ರೂಪುಗೊಂಡ ಮತ್ತು ಹಿಂದೂ ಮುಸ್ಲಿಂ ಉಭಯ ಧರ್ಮಗಳನ್ನೂ ಜೀವಿಸಿದ ಸಂತ ಶಿಶುನಾಳ ಶರೀಫರು ಕನ್ನಡ ಪರಂಪರೆಯ ಅತ್ಯುತ್ತಮ ಪ್ರತಿನಿಧಿ. ಕನ್ನಡ ಸಾಹಿತ್ಯ ಪರಂಪರೆಯ ಉದ್ದಕ್ಕೂ ‘ಎಲ್ಲರನ್ನೂ ಒಳಗೊಳ್ಳುವ’ ಈ ವಿವೇಕ ಎದ್ದು ಕಾಣುತ್ತದೆ.

ಸಾಹಿತ್ಯ ಯಾವತ್ತೂ ಜೀವ ಪರವಾಗಿರಬೇಕು. ಅಲ್ಲಿ ದ್ವೇಷ, ಪ್ರತೀಕಾರ, ಭೇದಭಾವಗಳಿಗೆ ಜಾಗ ಇರಕೂಡದು. ಸಾಹಿತ್ಯದ ಸಾರ್ಥಕತೆ ಇರುವುದು ಎಲ್ಲರನ್ನೂ ಒಳಗೊಳ್ಳುವುದರಲ್ಲಿ. ಈ ಒಳಗೊಳ್ಳುವ ಮನೋಧರ್ಮವೇ ಇಲ್ಲದೆ ಹೋದಲ್ಲಿ, ಸಾಹಿತ್ಯಕ್ಕೆ ಅರ್ಥವೂ ಇಲ್ಲ, ಅದರ ಅಗತ್ಯವೂ ಇಲ್ಲ.

ಜನಸಾಹಿತ್ಯ ಸಮ್ಮೇಳನ

ಇಂತಹ ಸಂದರ್ಭದಲ್ಲಿ (ಜನವರಿ 8, 2023) ಬೆಂಗಳೂರಿನಲ್ಲಿ ‘ಜನಸಾಹಿತ್ಯ ಸಮ್ಮೇಳನ’ ಆಯೋಜಿಸಲಾಗಿದೆ. ಇದು ಪ್ರತಿರೋಧದ ಸಮಾವೇಶವೂ ಅಲ್ಲ ಪರ್ಯಾಯ ಸಮಾವೇಶವೂ ಅಲ್ಲ. ಬದಲಿಗೆ ಕನ್ನಡ ಮತ್ತು ಕನ್ನಡನಾಡಿನ ಬಗ್ಗೆ ನಿಜ ಕಾಳಜಿಯಿಂದ ನಡೆಯುತ್ತಿರುವ ಸಮಾವೇಶ. ದಾರಿ ತಪ್ಪಿದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯನ್ನು ಎಚ್ಚರಿಸುವ ಮತ್ತು ವಿಶ್ವಮಾನವತೆ ಪ್ರತಿಪಾದಿಸಿದ ಕುವೆಂಪು ಅವರ ಕನಸಿನ ‘ಸರ್ವಜನಾಂಗದ ಶಾಂತಿಯ ತೋಟ’ವನ್ನು ಹಸಿರಾಗಿ ಉಳಿಸಿಕೊಳ್ಳುವ ಉದ್ದೇಶದ ಸಮಾವೇಶ.

ಅಲ್ಲದೆ ಸಂಘಟಕರೇ ಹೇಳುವಂತೆ, “ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಸಂಬಂಧಿಸಿದಂತೆ ಭಾರತವು ಇವತ್ತು ಬಹಳ ಗಂಭೀರ ಬಿಕ್ಕಟ್ಟುಗಳನ್ನು ಇದಿರಿಸುತ್ತಿದೆ. 1990 ರ ದಶಕದಲ್ಲಿ ಜ್ಯಾರಿಗೆ ಬಂದ ಜಾಗತೀಕರಣ ಪ್ರಕ್ರಿಯೆಯು ಭಾರತದ ಸುಮಾರು 19,500 ಕ್ಕ್ಕೂ ಹೆಚ್ಚು ತಾಯ್ನುಡಿಗಳನ್ನು ಅಂಚಿಗೆ ತಳ್ಳಿದೆ. ಖಾಸಗೀಕರಣವು ಆರ್ಥಿಕ ಅಸಮಾನತೆಯನ್ನು ಇನ್ನಷ್ಟು ಹೆಚ್ಚು ಮಾಡಿದೆ. ದಲಿತರು ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಿರಂತರವಾಗಿ ಮುಂದುವರೆದಿದೆ. ಸಾಮಾಜಿಕ ನ್ಯಾಯಕ್ಕಾಗಿ ಚಾಲ್ತಿ ತಂದ ಮೀಸಲಾತಿಯನ್ನು ಅರ್ಥಹೀನಗೊಳಿಸಿ ಅದನ್ನು ಯಾರ್ಯಾರೋ ಕಿತ್ತು ತಿನ್ನುವಂತೆ ಮಾಡಲಾಗಿದೆ. ಸಂವಿಧಾನದ ಬಗ್ಗೆಯೂ ಅಪನಂಬಿಕೆಗಳನ್ನು ಹರಡಲಾಗಿದೆ. ಉಗ್ರವಾಗಿ ಬೆಳೆದ ಕೋಮುವಾದವು ದೇಶವನ್ನು ಒಡೆದು ಮೂಲಭೂತವಾದವನ್ನು ಬೆಳೆಸಿದೆ. ವಿಜ್ಞಾನದ ಜಾಗವನ್ನು ಮೂಢನಂಬಿಕೆಗಳು ಆಕ್ರಮಿಸಿಕೊಂಡಿವೆ. ಭಾರತದ ಬಹುತ್ವಕ್ಕೆ ಧಕ್ಕೆಯಾಗಿದೆ. ಇಂಥ ಸಂದರ್ಭದಲ್ಲಿ ಲೇಖಕರು ಕಲಾವಿದರು ಏನು ಮಾಡಬೇಕು ಎಂಬ ಪ್ರಶ್ನೆಗೆ ನಾವಿಂದು ಮುಖಾಮುಖಿಯಾಗಿ ಉತ್ತರಗಳನ್ನು ಕಂಡುಕೊಳ್ಳಬೇಕಾಗಿದೆ. ನಿಜ ತಿಳಿದಿರುವ ಲೇಖಕರು ಗಟ್ಟಿಯಾಗಿ ಮಾತಾಡಬೇಕಾದ ಕಾಲವಿದು”.

ಕನ್ನಡ ಮತ್ತು ಕನ್ನಡಿಗರ ನಿಜ ಕಾಳಜಿಯಿಂದ ನಡೆಯುತ್ತಿರುವ ಜನಸಾಹಿತ್ಯ ಸಮಾವೇಶ ಯಶಸ್ವಿಯಾಗಲಿ ಎಂದು ಹಾರೈಸೋಣ.

ಶ್ರೀನಿವಾಸ ಕಾರ್ಕಳ

ಚಿಂತಕರು, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

Related Articles

ಇತ್ತೀಚಿನ ಸುದ್ದಿಗಳು