Thursday, June 20, 2024

ಸತ್ಯ | ನ್ಯಾಯ |ಧರ್ಮ

ರಕ್ಕಸಿಯರ ಪ್ರೇಮ ಚರಿತೆ

ದೇಶ ಕಂಡ ಅದ್ಭುತ ಪೌರಾಣಿಕ ಪ್ರೇಮ ಕಥೆಗಳಲ್ಲಿ ಶಿವ-ಪಾರ್ವತಿ, ರಾಧಾ-ಕೃಷ್ಣ, ನಳ-ದಮಯಂತಿ ವಿಶ್ವಾಮಿತ್ರ-ಮೇನಕೆ, ಸಾವಿತ್ರಿ-ಸತ್ಯವಾನ, ರತಿ-ಮನ್ಮಥ ಮುಂತಾದವರ ಪ್ರೇಮ ಕಥೆಗಳು ಇಂದಿಗೂ ಮುನ್ನೆಲೆಯಲ್ಲಿವೆ. ಅದರೆ ಇವರಿಗಿಂತಲೂ ರೋಚಕ ಪ್ರೇಮ ಕಥೆಗಳು ಪುರಾಣಗಳಲ್ಲಿ ಕ್ರೂರವಾಗಿ ಚಿತ್ರಿಸಲ್ಪಟ್ಟ ರಾಕ್ಷಸಿಯರದು! ಪ್ರೇಮ ಭಾವ ಎಲ್ಲರಲ್ಲೂ ಒಂದೇ. ಪ್ರೇಮದಿನದಂದು ತನ್ನಿಷ್ಟದ ಇಬ್ಬರು ರಕ್ಕಸಿಯರ ಪ್ರೇಮ ನಿವೇದನೆಗಳನ್ನು ಮೆಲುಕು ಹಾಕಿದ್ದಾರೆ ಲೇಖಕ ಶಂಕರ್‌ ಸೂರ್ನಳ್ಳಿ.


ಇತ್ತೀಚೆಗೆ ತೆರೆಕಂಡ ಶಾರೂಖ್ ಖಾನನ ಪಠಾಣ್ ಸಿನಿಮಾಕ್ಕಾಗಿ ಆತ ಹಿಂದಿನ ಸಿನಿಮಾಗಳಿಗೆಲ್ಲ ಮಾಡಿದಂತೆ ಹೇಳಿಕೊಳ್ಳುವಂತಹ ಯಾವ ಭರ್ಜರಿ ಪ್ರಚಾರಕ್ಕೇನೂ ಇಳಿಯಲೇ ಇಲ್ಲ. ಆತ ಮೆರೆದಂತ ಜಮಾನ ಮುಗಿದು ಆತನ ಹೀರೋಗಿರಿಯ ಚಾರ್ಮ್ ಕಾಲನ ಹೊಡೆತಕ್ಕೆ ಸಿಲುಕಿ ಸಹಜವಾಗಿ ಈಗ ಮಂಕಾಗಿದೆ. ಆದರೂ ಪಠಾಣ್ ಚಿತ್ರ ಭರ್ಜರಿ ಹಿಟ್ ಆಗಿ ಶಾರೂಖ್ ಖಾನ್ ನ ಷಾಹೀ ಗಿರಿಯನ್ನ ಮತ್ತೆ ಇದೀಗ ಮೆರೆಸಿತು. ಪಠಾಣ್ ಚಿತ್ರವನ್ನು ಬಾಯ್ಕಾಟ್ ಮಾಡಿ ಬೀಳಿಸ ಹೊರಟ ಮಂದಿಯಿಂದಾಗಿ ಸಿಕ್ಕ ಪುಕ್ಕಟೆ ಪ್ರಚಾರವೂ ಇದಕ್ಕೆ ಒಂದು ಪ್ರಮುಖ ಕಾರಣ ಎಂಬ ವಿಶ್ಲೇಷಣೆಯಿದೆ. ಅದೇ ರೀತಿ, ಇವತ್ತಿಗೂ ಕೂಡ ಆ ವ್ಯಾಲೆಂಟೈನ್ ಅಂತಂದ್ರೆ ಯಾರು, ಆತನ ಹಿನ್ನೆಲೆಯೇನು ಎಂದು ಹೆಚ್ಚಿನವರಿಗೇನೂ ಗೊತ್ತೇ ಇಲ್ಲ. ಆದರೂ ಕೂಡ ಫೆಬ್ರವರಿ ಬಂತಂದ್ರೆ
ಆತನ ಹೆಸರು ಸದಾ ಪ್ರಚಾರದಲ್ಲಿರುವಂತೆ ನೋಡಿಕೊಳ್ಳಲು ಆತನ ವಿರೋಧಿಗಳೇ ಯಾವತ್ತಿಗೂ ಮರೆಯದೇ ಫೀಲ್ಡಿಗಿಳಿಯುತ್ತಾರೆ.


ಈ ತನಕ ಫೆ 14 ಭಗತ್ ಸಿಂಗ್ ನೇಣುಗಂಬವೇರಿದ ದಿನವಿದು, ಪ್ರೇಮಿಗಳ ದಿನ ಅಲ್ಲ ಎಂದು ಹಬ್ಬಿಸಲಾಯಿತು. ಇದು ನಿಜವಲ್ಲವಾದರೂ ಒಂದುವೇಳೆ ಸತ್ಯವೇ ಆಗಿದ್ದರೂ ಕೂಡ ಅವರವರ ಆಚರಣೆಗಳಿಗೇನೂ ಇದರಿಂದ ಭಂಗವೇನೂ ಇಲ್ಲ ತಾನೇ? ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಜಯಂತಿ ಬರುವುದು ಒಂದೇ ತಾರೀಖಿನಂದು. ನೆನಪಿಸಿಕೊಳ್ಳುವವರು ಇಬ್ಬರನ್ನೂ ಕೂಡ ನೆನಪಿಸಿಕೊಳ್ಳುತ್ತಾರೆ. ಅದು ಅವರವರಿಗೆ ಬಿಟ್ಟಂತಹ ವಿಚಾರ. ಅದೇ ರೀತಿ, ಈ ಸಲದ ಪ್ರೇಮಿಗಳ ದಿನವನ್ನು ಮರೆಸಲು (ಅಥವಾ ಮೆರೆಯಿಸಲು) ಗೋವನ್ನು ಮುದ್ದಿಸುವ ದಿನವನ್ನಾಗಿ ಮಾಡುವ ಸುತ್ತೋಲೆಯನ್ನು ಹೊರಡಿಸಲಾಯಿತಾದರೂ ಪ್ರತಿಯಾಗಿ
ಬಂದಂತಹ ಜನರ ವೆರೈಟಿ ವೆರೈಟಿ ಫೀಡ್ ಬ್ಯಾಕ್ ಗಳಿಗೆ ಉತ್ತರಿಸಲಾಗದೇ ಸುತ್ತೋಲೆಯನ್ನೇ ವಾಪಸ್ ತೆಗೆದು ಕೊಳ್ಳಲಾಯಿತು. ಬಹುಷ ಗೋವುಗಳಿಗೆ ಮಾತು ಬಂದಿದ್ದರೆ (ವರ್ಷಗಳ ಹಿಂದೆ ಸೂರ್ಯನ ಚಲನೆಯನ್ನೇ ನಲ್ವತ್ತು ನಿಮಿಷ ನಿಲ್ಲಿಸಿದ್ದ ಮಹಾನುಭಾವ ನಿತ್ಯಾನಂದ ಪ್ರಾಣಿಗಳೂ ಕೂಡ ನಮ್ಮಂತೆ ಸ್ಪಷ್ಟವಾಗಿ ಮಾತನಾಡುವಂತೆ ಮಾಡುತ್ತೇನೆ ಅಂದಿದ್ದರು. ಬಿ ಆರ್ ಶೆಟ್ಟಿಯವರ ಆಸ್ಪತ್ರೆಯಂತೆ ಅ ಪ್ರೊಜೆಕ್ಟ್ ಸದ್ಯಕ್ಕೆ ನಿಂತಿರಬಹುದೇನೋ) ಗೋವುಗಳು “ನಮ್ಮನ್ನು ಮುದ್ದಿಸೋ ಬದಲು ನಮ್ಮನ್ನು ನರಳುವಂತೆ ಮಾಡುತ್ತಿರುವ ಗಂಟು ರೋಗಕ್ಕೆ ಮೊದಲು ಪರಿಹಾರ ಕಂಡು ಹಿಡಿಯಿರೋ..” ಅಂತ
ಉಗಿಯುತ್ತಿದ್ದವೇನೋ… ಅಂತೂ ಫೆಬ್ರವರಿ 14 ರಂದು ಪ್ರೇಮಿಗಳೆಲ್ಲ ಅವರಿಗೆ ಬೇಕಾದಂತೆ ಆಚರಿಸಿಕೊಳ್ಳುತ್ತಿದ್ದ ತಣ್ಣಗಿನ ಪ್ರೇಮಿಗಳ ದಿನವನ್ನು ಈ ದೇಶದಲ್ಲಿ ಸಖತ್ ಪೋಪ್ಯುಲರ್ ಮಾಡಿದಂತಹ ಕೀರ್ತಿ ಮಾತ್ರ ನಿಸ್ಸಂಶಯವಾಗಿ ಅದರ ವಿರೋಧಿಗಳಿಗೇ ಸಲ್ಲುದೆನ್ನುವುದು ಮಾತ್ರ ಸತ್ಯ.


ತರಹೇವಾರಿ ಪ್ರೇಮ ಕಥೆಗಳ ಭಂಡಾರವೇ ಇಲ್ಲಿದೆ!

ಭಾರತೀಯ ಪೌರಾಣಿಕ ಸಾಹಿತ್ಯಗಳಲ್ಲಿ ತರಹೇವಾರಿ ಪ್ರೇಮ ಕಥೆಗಳ ಭಂಡಾರವೇ ಇದೆ. ಆದು ದುಷ್ಯಂತ ಶಕುಂತಲರದ್ದಿರಬಹುದು. ಯಯಾತಿ- ದೇವಯಾನಿ, ಶರ್ಮಿಷ್ಠೆಯರದ್ದಿರಬಹುದು, ಕರ್ಣ- ವೃಷಾಲಿಯರದ್ದಿರಬಹುದು ರಾಧಾ- ಕೃಷ್ಣ, ಭೀಷ್ಮ ಗೆದ್ದುಕೊಂಡು ಬಂದ ಅಂಬಾ- ಸಾಲ್ವರ ನಡುವಿನ ಕಥೆ ಬಳಿಕ ಭೀಷ್ಮನನ್ನೇ ಕೊಲ್ಲುವ ಸೇಡು ಇತ್ಯಾದಿ ಸಾವಿರಾರು ಕಥೆಗಳು ಕಾಣಸಿಗುತ್ತವೆ. ಅಂತದ್ದರಲ್ಲಿ ನನ್ನನ್ನು ವಿಶೇಷವಾಗಿ ಕಾಡಿದ್ದೆಂದರೆ ಈ ಎರಡು ಸ್ತ್ರೀಪ್ರೇಮ ನಿವೇದನೆಗಳು ಮತ್ತದರ ಬಳಿಕದ ಪರಿಣಾಮಗಳು. ಒಂದು ರಾವಣನ ತಂಗಿ ಶೂರ್ಪನಖಾಳದ್ದಾದರೆ ಮತ್ತೊಂದು ಮಹಾಭಾರತದ ಕಥೆಯಲ್ಲಿ ಬರುವ ಅತ್ಯಂತ ಬಲಿಷ್ಟ ಪಾತ್ರಗಳಾದ ಘಟೋತ್ಕಚ ಮತ್ತು ಬರ್ಬರೀಕರ ಅಮ್ಮ ಮತ್ತು ಅಜ್ಜಿಯಾದ ಹಿಡಿಂಬೆಯದ್ದು. ಇಬ್ಬರೂ ಅಸುರರು ಆದ್ರೆ ಒಬ್ಬರದು ಒಂದೊಂದು ಕಥೆ.


ಪ್ರೇಮ ನಿವೇದನೆಗಾಗಿ ಅಂಗಾಂಗಗಳನ್ನು ಕೊಯ್ಸಿಕೊಂಡು ಬಂದ ಶೂರ್ಪನಖಿ

ಶೂರ್ಪನಖಾ ಲಂಕಾಧಿಪತಿ ರಾವಣನ ತಂಗಿ. ಪರ್ಣಕುಟಿಯಲ್ಲಿರುವ ಕ್ಷತ್ರಿಯ ರಾಮನನ್ನು ಕಂಡು ಮೋಹಿಸಿ ಮದುವೆಯಾಗುವಂತೆ ಕೇಳಿಕೊಳ್ಳುತ್ತಾಳೆ. ಅದಕ್ಕೆ ರಾಮ ಒಪ್ಪದೇ ತಾನು ಈಗಾಗಲೇ ವಿವಾಹಿತನಾಗಿದ್ದು ಇದು ಸಾಧ್ಯವಿಲ್ಲ ಎನ್ನುತ್ತಾನೆ. ಬಹು ಪತ್ನಿತ್ವ, ಬಹುಪತಿತ್ವ, ಗಾಂಧರ್ವ ವಿವಾಹ ಮೊದಲಾದವುಗಳಿಗೆ ಮಾನ್ಯತೆಯಿದ್ದ ಆ ಕಾಲದಲ್ಲಿ ಪಟ್ಟು ಬಿಡದೇ ಶೂರ್ಪನಖಾ ರಾಮನನ್ನು ಮತ್ತೆ ಮತ್ತೆ ಬೇಡಿಕೊಳ್ಳುತ್ತಾಳೆ. ಬಳಿಕ ರಾಮನ ಸೂಚನೆಯ ಮೇರೆಗೆ ತಮ್ಮ ಲಕ್ಷ್ಮಣ ಶೂರ್ಪನಖಾಳ ಕಿವಿ, ಮೂಗು, ಸ್ತನಗಳನ್ನು ವಿರೂಪಗೊಳಿಸಿ ಅವಳನ್ನು ಓಡಿಸುತ್ತಾನೆ. ಕೇವಲ ತನ್ನ ಪ್ರೇಮ ನಿವೇದನೆಗಾಗಿ ಹೆಣ್ಣಿಗೆ ಭೂಷಣವಾದ ಅಂಗಾಂಗಗಳನ್ನು ಕೊಯ್ಸಿಕೊಂಡು ಬಂದ ತಂಗಿಗಾಗಿ ಅಣ್ಣ ರಾವಣ ರಾಮನ ಪತ್ನಿಯನ್ನೇ ಅಪಹರಿಸುತ್ತಾನಾದರೂ ತಂಗಿಗಾದ ಅನ್ಯಾಯವನ್ನು ಅಪಹೃತ ಸೀತೆಯ ಮೇಲೆ ಯಾವತ್ತೂ ಆತ ತೋರುವುದಿಲ್ಲ. ಶೂರ್ಪನಖಿಯೂ ಕೂಡ ಅಣ್ಣನ ಅಧೀನದಲ್ಲೇ ಬಂಧಿಯಾಗಿರುವ ಸೀತೆಯನ್ನು ಹಿಂಸಿಸ ಹೋಗುವುದಿಲ್ಲ.


ಪಾಂಡವರ ಮೊದಲ ಕುಲವಧು ಹಿಡಿಂಬೆ

ಇನ್ನು ನರಭಕ್ಷಕ (ಕಥೆಯಂತೆ) ಹಿಡಿಂಬಾಸುರನ ತಂಗಿ ಊಟಕ್ಕಾಗಿ ಮನುಷ್ಯ ವಾಸನೆಯನ್ನು ಹಿಡಿದು ವಿಶ್ರಾಂತಿಯಲ್ಲಿದ್ದ ಪಾಂಡವರನ್ನು ಕಂಡಾಗ ಯುವಕ ಭೀಮನನ್ನು ನೋಡಿ ಆತನಿಗೆ ಮನಸೋತು ಇದು ತನ್ನ ಊಟ ಎನ್ನುವುದನ್ನೇ ಮರೆತು ಮೋಹಕ್ಕೊಳಗಾಗುತ್ತಾಳೆ. ಮೊದಲೇ ಅರಗಿನ ಅರಮನೆಯಿಂದ ಕಳ್ಳರಂತೆ ತಪ್ಪಿಸಿಕೊಂಡು ಬಂದ ಪಾಂಡವರಿಗೆ ಹಸಿವು, ಶತ್ರುಗಳ ಭಯ ಎಲ್ಲವೂ ಇದ್ದಾಗ ಇಂತಹ ಸಂದಿಗ್ಧ ಸಂದರ್ಭದಲ್ಲಿ ಈಕೆ ಭೀಮನಲ್ಲಿ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾಳೆ. ಬಳಿಕ ಹುಡುಕಿಕೊಂಡು ಬಂದ ಅಣ್ಣ ಹಿಡಿಂಬನ ಸಂಹಾರವೂ ಆಗುತ್ತದೆ. ಪಾಂಡವರಲ್ಲಿ ಯಾರಿಗೂ ಮದುವೆಯಾಗದೆ ಇದ್ದು, ಭೀಮನಿಗಿಂತಲೂ ಹಿರಿಯ ಧರ್ಮರಾಯನೇ ಇದ್ದರೂ ಕೂಡ ರಾಕ್ಷಸ ಹಿಡಿಂಬೆಯನ್ನು ಮದುವೆಯಾಗಲು ಸ್ವತಃ ತಾಯಿ ಕುಂತಿಯೇ ಇಲ್ಲಿ ಸಮ್ಮತಿಸುತ್ತಾಳೆ.


ಆದರೆ ಈ ರಾಕ್ಷಸಿಯೇ ಮುಂದೆ ಪಾಂಡವರ ವಿಜಯಕ್ಕೆ ಪರೋಕ್ಷವಾಗಿ ಕಾರಣಳಾಗುತ್ತಾಳೆ ಕೂಡ. ಅರ್ಜುನನನ್ನು ಕೊಲ್ಲಲೆಂದೇ ಕಾಪಿಟ್ಟ ದಿವ್ಯಾಸ್ತ್ರವನ್ನು ಇದೇ ಹಿಡಿಂಬೆಯ ಮಗ ಘಟೋತ್ಕಚನನ್ನು ಕೊಲ್ಲಲು ಕರ್ಣ ವಿಧಿಯಿಲ್ಲದೇ ಕಳಕೊಳ್ಳಬೇಕಾಗಿ ಬರುತ್ತದೆ. (ಘಟೋತ್ಕಚ ಸತ್ತಾಗ ತಂದೆ ಭೀಮ ಸೇರಿ ಪಾಂಡವರು ಬೇಸರಿಸಿದರೆ ಅರ್ಜುನ ಸಖ ಶ್ರೀಕೃಷ್ಣ ಅರ್ಜುನ ಬಚಾವಾದನೆಂದು ಇದೇ ಕಾರಣಕ್ಕೆ ನಕ್ಕನಂತೆ) ಪಾಂಡವರ ಮೊದಲ ಕುಲವಧುವಾಗಿದ್ದರೂ ಕೂಡ ಹಿಡಿಂಬೆ ಯಾವತ್ತೂ ಕೂಡ ರಾಜಭೋಗ ಬಯಸಿರಲಿಲ್ಲ. ತನ್ನ ಮಗನನ್ನು ಮತ್ತು ಮೊಮ್ಮಗ(ಬರ್ಬರೀಕ)ನನ್ನು ಯುದ್ಧದಲ್ಲಿ ಬಲಿಕೊಟ್ಟು ಒಂಟಿಯಾಗೇ ಬದುಕು ಸಾಗಿಸಿದ್ದಳು ಈ
“ರಕ್ಕಸಿ”..!


ಪ್ರೇಮ ಭಾವ ಎಲ್ಲರಲ್ಲೂ ಒಂದೇ.. ಭಾವಗಳಲ್ಲಿ ಯಾವತ್ತೂ ಭೇಧವಿರದು. ಆದರೆ ಇದು ರಕ್ಕಸಿಯರ ಪ್ರೇಮ ಚರಿತೆ.

ಶಂಕರ್‌ ಸೂರ್ನಳ್ಳಿ

ಲೇಖಕರು

Related Articles

ಇತ್ತೀಚಿನ ಸುದ್ದಿಗಳು