Saturday, June 15, 2024

ಸತ್ಯ | ನ್ಯಾಯ |ಧರ್ಮ

ಗೆಳೆಯ ನಿಖಿಲನಿಗೊಂದು ಪತ್ರ

ಯಾತನೆ, ಪರಿತಾಪ, ತಲ್ಲಣ, ಸೋಲು, ನಿರಾಶೆಗಳಿಲ್ಲದ ಬದುಕು ಯಾರದ್ದೂ ಇಲ್ಲ. ಅದರೆ ಅನೇಕ ಸನ್ನಿವೇಶಗಳು ಆತ್ಮಹತ್ಯೆಯ ಆಯ್ಕೆಯನ್ನು ಹೆಚ್ಚಿಸುತ್ತವೆ. ಆತ್ಮಹತ್ಯೆ ಮಾಡಿಕೊಳ್ಳುವವರ ಪ್ರೀತಿ ಪಾತ್ರರ ಮೇಲೆ ಅದು ಬೀರುವ  ಪರಿಣಾಮ ಮಾತ್ರ ಅಂತಿಂಥದ್ದಲ್ಲ. ವಿದ್ಯಾರ್ಥಿನಿ ದಿವ್ಯಶ್ರೀ ಅದರಂತೆ ತನ್ನ ಗೆಳೆಯನ ದುಡುಕಿನ ತೀರ್ಮಾನದ ಕುರಿತು ಬರೆಯುತ್ತಾ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ.

ಗೆಳೆಯ

ನೀನೇನೋ ಸುದ್ದಿಯ ಸದ್ದಿಲ್ಲದೇ ನಮ್ಮನ್ನೆಲ್ಲ ಬಿಟ್ಟುಹೋದೆ. ಈ ನಿನ್ನ ಸಮಾಜ ನೀ ಹೊರಟು ಹೋದ ಕಾರಣ ಕೇಳುತ್ತಿದೆ, ಹೇಳು ಆ ಸುದ್ದಿ ಎಲ್ಲಿ ಬಿಟ್ಟೋಗಿರುವೆ?

ನಿನಗೆ ಗೊತ್ತಾ? ನೀ ಚಿಕ್ಕವನಿದ್ದಾಗ ನಿನಗೆ ತುತ್ತು ತಿನ್ನಿಸಿ ಎತ್ತಿ ಆಡಿಸಿದ ಅವ್ವ, ಈಗ ಅವಳ ಕೂಲಿ ಕೇಳುತ್ತಿದ್ದಾಳೆ. ನಿನಗೆ ಅವ್ವ ಅಂತ ಬರೆಯಲು ಅಕ್ಷರ ಕಲಿಸಿದವರೆಲ್ಲ ಗುರುದಕ್ಷಿಣೆ ಕೇಳುತ್ತಿದ್ದಾರೆ. ನಿನಗೆ ಬದುಕು ಕಲಿಸಿದ ಸಮಾಜ ಅದಕ್ಕೆ ಪ್ರತಿಯಾಗಿ ನಿನ್ನಿಂದ ದೊಡ್ಡ ಫಲವನ್ನೇನೋ ನಿರೀಕ್ಷಿಸುತ್ತಿದೆ. ಹೇಳು ಈಗ ಇವರಿಗೆಲ್ಲ ಏನೆಂದು ಉತ್ತರ ಕೊಡುವೆ?  ಇಷ್ಟೆಲ್ಲ ಜವಾಬ್ದಾರಿ ಹೊತ್ತ ನೀನು ಹೇಡಿಯಂತೆ ತಲೆಮರೆಸಿಕೊಂಡೆಯಲ್ಲ, ಇದಕ್ಕೆಲ್ಲಾ ಬೆಲೆ ತೆರಲು ಇಲ್ಲಿ ಯಾರನ್ನ ಬಿಟ್ಟುಹೋಗಿರುವೆ?

ನೀನು, ನಿನ್ನ ಬದುಕು ನಿನ್ನದಷ್ಟೇ ಅಂದುಕೊಂಡಿದ್ದೆ ಅನಿಸುತ್ತಿದೆ. ನಿನ್ನ ಊಹೆ ತಪ್ಪು ಗೆಳೆಯ. ನಿನ್ನ ಇಡೀ ಬದುಕು ನಿನಗೆ ಈ ಸಮಾಜ ಕೊಟ್ಟ ಬಹುದೊಡ್ಡ ಉಡುಗೊರೆ, ಸ್ವಲ್ಪ ಊಹಿಸಿಕೊ… ನಿನ್ನ ಹೆತ್ತವ್ವ ನೀ ಹುಟ್ಟಿದ ಕ್ಷಣವೇ ನಿನ್ನ ಬೀದಿಯಲ್ಲಿ ಬಿಟ್ಟು ಹೋಗಿದ್ದರೆ ಜೀವನ ಹೇಗಿರುತ್ತಿತ್ತು? ನೀ ಶಾಲೆಗೆ ಮೊದಲ ಹೆಜ್ಜೆಯನಿಟ್ಟಾಗ, ಅಕ್ಷರದವ್ವ ನಿನ್ನ ಹೊಡೆದು ಆಚೆಗಟ್ಟಿದ್ದರೆ ಏನು ಮಾಡುತ್ತಿದ್ದೆ? ನೀನು ಬೆಳೆದ ಪ್ರತಿ ಹಂತದಲ್ಲೂ ನಿನ್ನ ನೋವು ನಲಿವಿನ ಜೊತೆಗೆ, ನಿನಗೆ ಬದುಕು ಕಲಿಸಿದ ಸಮಾಜ ನಿನ್ನ ಒಂಟಿಯಾಗಿ ಬಿಟ್ಟಿದ್ದರೆ, ಎಲ್ಲಿಗೆ ಹೋಗುತ್ತಿದ್ದೆ? ಹೀಗೆ ತುಸು ಹಿಂದೆಮುಂದೆ ಯೋಚಿಸದೆ, ಪೆಪ್ಪರಮೆಂಟಿಗೆ ಹಟ ಹಿಡಿದ ಚಿಕ್ಕ ಪಾಪುವಿನಂತೆ ಸಾವನ್ನ ಹಿಂಬಾಲಿಸಿ ಹೋದೆಯಲ್ಲ, ಹೇಳು ಅಲ್ಲಿ ಅದ್ಯಾವ ಸುಖ ಸಿಕ್ಕಿದೆ ನಿನಗೆ?

ನಿನಗಿಲ್ಲಿ ಕಷ್ಟವೇ ಇರಲಿಲ್ಲ ಅಂತೇನೂ ನಾ ಹೇಳುತ್ತಿಲ್ಲ, ನಡುದಾರಿಯಲ್ಲಿ ಹೆತ್ತವಳ ಕಳೆದುಕೊಂಡ ನಿನಗೆ, ದೂರದೂರಿನ ಕೊಂಚ ಅಭಿಮಾನದ ಅಪ್ಪನ ಪ್ರೀತಿ ಎಷ್ಟು ಸಿಕ್ಕಿರಬಹುದೆಂದು ನಾ ಊಹಿಸಬಲ್ಲೆ. ಆದರೆ  ಅವರಿಬ್ಬರೂ ಕೊಡಬಹುದಾಗಿದ್ದ ಪ್ರೀತಿಗಿಂತಲೂ ಹತ್ತಾರುಪಟ್ಟು ಪ್ರೀತಿಯನ್ನು ಬೊಗಸೆಯಲ್ಲಿ ಮೊಗೆ ಮೊಗೆದು ಸುರಿದಳಲ್ಲ ನಿನ್ನವ್ವ ಆ ಎಪ್ಪತ್ತರ ಮುದುಕಿ! ಅವಳಿಗಾದರೂ ನೀನು ಊರುಗೋಲಾಗಿರಲು ಬದುಕಿರಬೇಕಿತ್ತು. ನನಗಷ್ಟೇ ಅಲ್ಲಾ, ಇಡೀ ಊರಿಗೂ ಗೊತ್ತು! ನೀನು ಎರಡು ದಶಕಗಳ ಉದ್ದಕ್ಕೂ ಕೆಂಡದಲ್ಲಿ ಹದಗೊಂಡಿದ್ದು! ಇನ್ನೇನೂ ಉರಿಯುವ ಬೆಂಕಿಯಿಂದ ತಪ್ಪಿಸಿಕೊಂಡು ತಣ್ಣಗೆ ನಿನ್ನದೇ ನೆರಳಿನಲ್ಲಿ ನೆಮ್ಮದಿಯಿಂದ ಕೂರುವ ಹೊತ್ತಿಗೆ ಮತ್ತೆ ನೀನೇ ಆ ಜ್ವಾಲೆಗೆ ಧುಮುಕಿ ಬೆಂದು ಬೂದಿಯಾದದ್ದು ನಮಗೆಲ್ಲ ನೀ ಮಾಡಿದ ದ್ರೋಹ, ನಾನಂತೂ ಯಾವತ್ತಿಗೂ ನಿನ್ನ ಕ್ಷಮಿಸಲಾರೆ.

ನೆನಪಿದೆಯಾ ನಿಂಗೆ?

ಅದೇ ಹೈಸ್ಕೂಲ್‌ನಲ್ಲಿ  ಟೀಚರ್ ” ನಿಮ್ಮ ಗುರಿಗಳೇನು” ಅಂತ ಕೇಳಿದ್ದಾಗ  ನೀನು ಎದ್ದು ನಿಂತು ಎದೆ ಉಬ್ಬಿಸಿ “PSI ಆಗ್ತೀನಿ” ಅಂತ ಹೇಳಿದ್ದು ನೀನು ಮರೆತಿರಬೇಕು, ನಾನಂತೂ ಮರೆತಿಲ್ಲ. ಆ ಮಾತು ಇವತ್ತಿಗೂ ನನ್ನ ಕಿವಿಯಲ್ಲಿ ಗುನುಗುತ್ತಿದೆ. ಅದು ಬರಿ ನಿನ್ನ ಮಾತಾಗಿರಲಿಲ್ಲ, ಅದರಲ್ಲಿ  ನೀ ಅನುಭವಿಸಿದ ನೋವುಗಳಿಗೆಲ್ಲ ಪೂರ್ಣವಿರಾಮ ಇಕ್ಕುವ ಛಲ ಇತ್ತು, ನಿನ್ನ ಸಾಕಿದ ಅವ್ವನ ಸುಕ್ಕುಗಟ್ಟಿದ ಕೆನ್ನೆಯ ಮೇಲೆ ಸದಾ ತೊಟ್ಟಿಕ್ಕುವ ಹನಿಗಳಿಗೆ ಅಂತ್ಯ ಹಾಡುವ ದಿಟ್ಟ ಕನಸಿತ್ತು. ಆದರೆ ಇವತ್ತು?

ನೀನೇನೋ ಸಾವನ್ನೇ ಆರಿಸಿಕೊಂಡು ನಿನ್ನ ನೋವುಗಳಿಗೆಲ್ಲ ಶಾಶ್ವತ ಪರಿಹಾರ ಕಂಡುಕೊಂಡೆ, ಆದರೆ ನಿನ್ನವರೆನಿಸಿಕೊಂಡವರ ಗತಿ? ನೀ ಊಹಿಸಲು ಸಾಧ್ಯವಿಲ್ಲ.

ನಿನಗೆ ತುಸು ಸಮಯವಿದ್ದರೆ ಬಂದು ನೋಡು, ನೀ ತೊರೆದು ಹೋದ ಸಮಾಜ ನಿನಗಾಗಿ ಹೇಗೆಲ್ಲಾ ಪರಿತಪಿಸುತ್ತಿದೆ ಎಂದು.

ಮುಂದೊಂದು ದಿನ ನೀನು ನಿನ್ನಂತ ಹಲವು ಮಕ್ಕಳ ಬದುಕಿಗೆ ಮಾರ್ಗದರ್ಶಕನಾಗುತ್ತಿದ್ದೆ. ಆದರೆ ಈಗ ಎಲ್ಲರಿಂದ ಹೇಡಿ ಎಂದು ಕರೆಸಿಕೊಂಡು ಹೋಗಿರುವೆ. ಬದುಕಿಗೇನೋ ಅಂತ್ಯ ಹಾಡಿರುವೆ. ಆದರೆ ನಿನ್ನ ನೆನಪಿನ ಅಂಗಳದಲ್ಲಿನ ಹೂವುಗಳು ನಿನಗಾಗಿ ಸದಾ ಹಂಬಲಿಸುತ್ತಿವೆ. ಮತ್ತೆ ಬಂದು ಬಿಡು ಗೆಳೆಯ…

ನನ್ನ ಪತ್ರ ತಲುಪಿದ ಕೂಡಲೇ, ನನ್ನ ಪ್ರಶ್ನೆಗಳಿಗೆಲ್ಲ ಉತ್ತರ ಬರೆದು ಕಳಿಸು…

ಇಂತಿ

ನಿನ್ನ ಕಾಯುವಿಕೆಯಲ್ಲಿ

ಗೆಳತಿ ದಿವ್ಯ.

ದಿವ್ಯಶ್ರೀ ಅದರಂತೆ

ಬೆಂಗಳೂರಿನ ಸೈಂಟ್‌ ಜೋಸೆಫ್‌ ಕಾಲೇಜಿನ ಇಂಗ್ಲಿಷ್‌ ಸಾಹಿತ್ಯದ ವಿದ್ಯಾರ್ಥಿನಿ

Related Articles

ಇತ್ತೀಚಿನ ಸುದ್ದಿಗಳು