Monday, June 17, 2024

ಸತ್ಯ | ನ್ಯಾಯ |ಧರ್ಮ

ಮಹಿಳಾ ದಿನದ ವಿಶೇಷ | ಹೆಣ್ಮಕ್ಕಳ ತಲೆ ನೋವಿನ ಹಿಂದೆ…

ತನ್ನ ಕೆಲಸಕ್ಕೆ ವೇತನವಿಲ್ಲದಿದ್ದರೂ, ಮಾನ್ಯತೆಯಾದರೂ ದಕ್ಕಿದಾಗ, ತನ್ನ ಅಭಿವ್ಯಕ್ತಿಗೆ, ವಿಚಾರಗಳಿಗೆ ಮನ್ನಣೆ ದೊರಕಿದಾಗ ಮಾತ್ರ ನಮ್ಮ ಹೆಣ್ಣು ಮಕ್ಕಳು ಮುಕ್ತವಾಗಿ ನಗ ಬಲ್ಲರು. ತಲೆ ನೋವು ಬರದೆ, ದಿಂಬಿನಡಿಯಲ್ಲಿ ಗುಳಿಗೆ ಇಡದೆ ನಿಶ್ಚಿಂತೆಯಿಂದ ನಿದ್ದೆ ಮಾಡಬಲ್ಲರು ಕವಿ ಸ್ಮಿತಾ ಅಮೃತ ರಾಜ್‌

ಮಾರ್ಚ್ 8ರಂದು ನಮಗೊಂದು ದಿನ ಸಿಕ್ತು ಅಂತ ಮಹಿಳೆಯರಿಗೆಲ್ಲ ಸಂಭ್ರಮವೋ ಸಂಭ್ರಮ. ಆ ದಿನ ಎಷ್ಟೊಂದು ಕಾರ್ಯಕ್ರಮಗಳು, ಎಷ್ಟೊಂದು ಭಾಷಣಗಳು?. ವೇದಿಕೆಯ ಮೇಲೆ ಕೆಳಗೆ ಎದುರು ಎಲ್ಲಾ ಕಡೆ ಮಹಿಳೆಯರೇ. ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದೇನು? ಅಹವಾಲುಗಳನ್ನು ಸಲ್ಲಿಸುವುದೇನು? ಆದರೆ ಹಲವು ಮಹಿಳೆಯರು ಮನಸು ತೆರೆದು ಮಾತನಾಡಿ ತಮ್ಮ ತಲೆನೋವನ್ನು ತಕ್ಕ ಮಟ್ಟಿಗೆ ಹಗುರ ಮಾಡಿಕೊಳ್ಳುವುದನ್ನು ಅಷ್ಟು ಸುಲಭವಾಗಿ ತಳ್ಳಿಹಾಕಲಾಗದು. ಇದು  ನಿಜಕ್ಕೂ ಖುಷಿಯೆನ್ನಿಸುತ್ತದೆ.. ಆದರೆ ಮಾರನೆ ದಿನ ಆ ಧೈರ್ಯವೆಲ್ಲಾ ಎಲ್ಲಿ ಉಡುಗಿ ಹೋಗಿ ಬಿಡುತ್ತದೋ?, ಮತ್ತು ಅವರೆಲ್ಲಾ ಎಲ್ಲಿ ಮರೆಯಾಗಿ ಬಿಡುತ್ತಾರೋ ? ಅನ್ನೋ ವಿಷಾದವೂ ನನ್ನೊಳಗಿನದು.

ಇನ್ನೂ ಮಹಿಳಾ ದಿನಾಚರಣೆ ಕಳೆದು ವಾರ ಕೂಡ ಆಗಿರಲಿಲ್ಲ. ಹೀಗೇ ಲೋಕಾಭಿರಾಮ ಮಾತಾಡುತ್ತಾ ಗೆಳತಿಯೊಬ್ಬಳು ಪಕ್ಕದ ಶಾಲೆಯಲ್ಲಿ ಹೆಣ್ಣು ಮಗಳೊಬ್ಬಳು ತನ್ನ ಇಬ್ಬರು ಎಳೇ ಮಕ್ಕಳನ್ನು ಕಟ್ಟಿಕೊಂಡು ರಾತ್ರೆ ಹೊತ್ತಿನಲ್ಲಿ  ಶಾಲೆಯಲ್ಲಿ ಬಂದು ತಂಗುತ್ತಿದ್ದ ವಿಷಯವನ್ನು  ಕತೆಯಂತೆ ಹೇಳುತ್ತಿದ್ದಳು. ಕುಡುಕ ಗಂಡ. ಹೊಡೆಯುತ್ತಾನೆ, ಬಡಿಯುತ್ತಾನೆ, ಹೊರಗೆ ದಬ್ಬುತ್ತಾನೆ. ರಾತ್ರೋ ರಾತ್ರಿ ಆಕೆ ಎಲ್ಲಿಗೆ ತಾನೇ ಓಡಿ ಬರಬೇಕು?. ಶಾಲೆಯ ಜಗಲಿಯಷ್ಟೇ ಆಕೆಗೆ ಆಶ್ರಯ ತಾಣ.  ಈ ಹಿಂದೆ ಗಂಡನ ಹೊಡೆತ ತಾಳಲಾರದೆ ಮಕ್ಕಳನ್ನು ಕಟ್ಟಿಕೊಂಡು ಶಾಲೆಗೆ ಓಡಿ ಬಂದು ತಂಗುತ್ತಿದ್ದ , ಅಜ್ಜಿ ಅವರಿವರೊಂದಿಗೆ ಹೇಳುತ್ತಿದ್ದ ಅದೆಷ್ಟೊ ಅಮ್ಮಂದಿರ ಕತೆಗಳಿಗೆ ಕಿವಿಯಾಗಿದ್ದೆ. ಆದರೆ ಆ ಸ್ಥಿತಿ ಇವತ್ತಿಗೂ ಹಲವು ಕಡೆ ಮುಂದುವರಿಯುತ್ತಾ ಬಂದಿದೆಯಲ್ಲಾ ಅಂತ ಖೇದವಾಯಿತು.

ಇಂತಹ ಸಮಸ್ಯೆಗಳು ಎದುರಾದಾಗ ಯಾಕೆ ನಮ್ಮ ಹೆಣ್ಣು ಮಕ್ಕಳು ಪಕ್ಕದ ಮನೆಗೆ ಹೋಗಿ ನಿಲ್ಲುವುದಿಲ್ಲ?. ಅಥವಾ ಪಕ್ಕದ ಮನೆಯವರೇ ಇಂತಹ ವಿಷಯಗಳಲ್ಲಿ ಗಂಡ- ಹೆಂಡಿರ ಜಗಳದ ಮೇಲೆ ನಮಗ್ಯಾಕೆ ಇಲ್ಲದ ಉಸಾಬರಿ ಅಂತ ಮೂಗು ತೂರಿಸುವುದಿಲ್ಲವೊ?, ಅಥವಾ ಅವಳೇ ಇತರರಿಗೆ ತೊಂದರೆ ಕೊಡುವುದಕ್ಕೆ ಮನಸು ಮಾಡುವುದಿಲ್ಲವೋ?. ಅದೇನೇ ಇರಲಿ, ನಡುರಾತ್ರಿಯಲ್ಲಿ ಇವತ್ತಿಗೂ ನಮ್ಮ ಹೆಣ್ಮಕ್ಕಳನ್ನ ಮನೆಯಿಂದ ಹೊರಗೆ ದಬ್ಬಿ ಬಿಡುವ ಪ್ರಸಂಗಗಳು  ಬರುತ್ತವೆ ಎಂದಾದರೆ ಸಮಾನತೆ ಅಂತ ಕೂಗುವ ಘೋಷಣೆಗೂ, ಮಹಿಳಾ ದಿನಾಚರಣೆಯೆಂಬ ಒಂದು ದಿನದ ಪ್ರಹಸನಕ್ಕೂ ಎಷ್ಟು ಅರ್ಥ ಒದಗಿ ಬರಬಲ್ಲದು  ಅಂತ ವಿಷಾದವೆನ್ನಿಸುತ್ತದೆ.  ಈ ಘಟನೆಗಳ ಹಿಂದಿನ ಕಾರಣದ ಸರಿ-ತಪ್ಪುಗಳ ತುಲನೆ ಆನಂತರದ್ದು. ಆದರೆ ಮನೆಯೊಳಗೆ ಸಮಸ್ಯೆಗಳು, ಭಿನ್ನಾಭಿಪ್ರಾಯಗಳು ಎದುರಾದಾಗ ಬೀದಿಗೆ ಬೀಳುವ ಸರದಿ ಹೆಣ್ಣು ಮಕ್ಕಳದ್ದೇ  ಆಗುತ್ತದೆ ಅಂತಾದರೆ ಇದು ಹೆಣ್ಣು ಜೀವಗಳ ಅಸಹಾಯಕ ಸ್ಥಿತಿ ಆಗಿರಬಹುದು, ಆಕೆಯ ಕುರಿತು ಅವರಿವರು ನಡೆದುಕೊಳ್ಳುವ ರೀತಿಯಾಗಿರಬಹುದು. ಎಲ್ಲವು ಭಯ ಹುಟ್ಟಿಸುವಂತದ್ದು. ಕೃಷಿಕ ಮಹಿಳೆಯೊಬ್ಬರ ಇದು ಒಂದು ಉದಾಹರಣೆಯಷ್ಟೆ.  ಇಂತಹ ಹಲವು ಕತೆಗಳು ಹಲವು ಬಗೆಯಲ್ಲಿ ಇರಬಹುದು.

ಸರಕಾರಿ ಉದ್ಯೋಗಿಯಾಗಿರುವ ಗೆಳತಿಯೊಬ್ಬಳ ಆಸಕ್ತಿಗಳು ಹತ್ತು ಹಲವು. ಸಂಗೀತ, ನೃತ್ಯ, ಯಕ್ಷಗಾನ, ನಾಟಕ, ಹೊಲಿಗೆ ಹೀಗೆ. ಒಮ್ಮೆ ಅಚ್ಚರಿಯಿಂದ ಇವಕ್ಕೆಲ್ಲಾ ಪುರುಸೊತ್ತು ಸಿಗುತ್ತಾ ಅಂತ ಕೇಳಿದ್ದೆ. ಆಸಕ್ತಿ ಇದ್ದರೆ ದಾರಿಗಳು ನೂರಾರು . ಆದರೆ ಅದಕ್ಕೊಂದು ಪೂರಕ ವಾತಾವರಣ ಇಲ್ಲದಿದ್ದರೂ ಅಡೆ ತಡೆಯ ವಾತಾವರಣ ಇರಬಾರದು ಅಂದಿದ್ದಳು.  ಅದು ನಿಜವೇ ಅನ್ನಿ. ನೀವು ಬಿಡಿ ಪುಣ್ಯವಂತರು ಅಂದಾಗ ಅವಳ ಉತ್ತರ ಕೇಳಿ ಬೆಚ್ಚಿ ಬೀಳುವ ಸರದಿ ನನ್ನದಾಯಿತು. ತನ್ನ ಆಸಕ್ತಿಯ ಕ್ಷೇತ್ರಗಳಲ್ಲಿ ಮುಂದುವರಿಯಲು ಆಕೆಗೆ ಅನುಮತಿ ಸಿಗದೇ ಇರುವ ಸಂದರ್ಭದಲ್ಲಿ ಆಕೆ ಮಗಳನ್ನು ಇಂತಹ ತರಗತಿಗಳಿಗೆ ಕಳಿಸುತ್ತಾ ಅವಳೊಂದಿಗೆ ತಾನೂ ಕದ್ದು ಮುಚ್ಚಿ ಅಭ್ಯಾಸ ಮಾಡಿ ಪರೀಕ್ಷೆ ಬರೆದು ತನ್ನ ಕನಸನ್ನ ಈಡೇರಿಸಿಕೊಂಡೆ ಅಂತ ಆತ್ಮವಿಶ್ವಾಸದಿಂದ ಹೇಳುವಾಗ ಆಕೆಯ ಕಣ್ಣಿನ ಆಳದಲ್ಲಿ ಕಂಡು ಕಾಣದಂತಿರುವ ನೋವು ಕೆನೆಗಟ್ಟಿ ನಿಂತಂತ್ತಿತ್ತು.  ಆಕೆಯ ಸವಾಲಿನ ಎದೆಗಾರಿಕೆ ಮೆಚ್ಚುವಂತದ್ದಾದರೂ ಎಲ್ಲಾ ಹೆಣ್ಣು ಮಕ್ಕಳಿಗೆ, ಅದರಲ್ಲೂ ಗೃಹಿಣಿಯರಿಗೆ ಮತ್ತು ಕೃಷಿಕ ಮಹಿಳೆಯರಿಗೆ ಅದು ಆಗಿ ಬರುವ ಮಾತಲ್ಲ. ನಮ್ಮ ಹೆಣ್ಮಕ್ಕಳ ಯಶೋಗಾಥೆಯ ಹಿಂದೆ ಇಂತಿಂತ ಅದೆಷ್ಟು ಕತೆಗಳಿರಬಹುದೇನೋ. ಅದು ನೋಡುವ ಕಣ್ಣಿಗೆ ಸುಲಭದಲ್ಲಿ ಗೋಚರಿಸುವ ಸಂಗತಿಯಲ್ಲ.

ನಾನೊಬ್ಬಳು ಕೃಷಿಕ ಮಹಿಳೆ. ನಮ್ಮ ಊರಿನ ಹೆಚ್ಚಿನ ಹೆಣ್ಮಕ್ಕಳು ಬೆವರಿಳಿಸಿ ದುಡಿಯುವ ವರ್ಗವೇ. ಅತಂತ್ರ ಸ್ಥಿತಿಯಲ್ಲಿರುವ ಕೃಷಿಗಾರಿಕೆಯಲ್ಲಿ ಲಾಭಾಂಶ ಸೊನ್ನೆ ಆಗಿರುವ ಕಾರಣ ಮನೆ ಕೆಲಸಗಳನ್ನೆಲ್ಲಾ ಪೂರೈಸಿ ಕೃಷಿ ಕೆಲಸಗಳಲ್ಲೂ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ  ಆಕೆಗೆ ಇದೆ.  ಹಾಗೆ ನೋಡಿದರೆ ಈ ಒತ್ತಡದಿಂದ ಬಿಡುಗಡೆ ಹೊಂದಲು ಇತರ ಯಾವುದೇ ರೀತಿಯಾದಂತಹ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳೋದಿಕ್ಕೆ ಆಕೆಗೆ ಪುರುಸೊತ್ತೇ ಇರುವುದಿಲ್ಲ. ಅವರ ಕೆಲಸಗಳ ಪಟ್ಟಿ ಬೆಳೆಯುತ್ತನೇ ಇರುತ್ತದೆ. ಇನ್ನು ಇಂತಹ ಹಳ್ಳಿ ವಾತಾವರಣದಲ್ಲಿ ಹೀಗೆ ತಮ್ಮ ಆಸಕ್ತಿಗಳಲ್ಲಿ ತೊಡಗಿಸಿಕೊಂಡರೆ ಅಪಹಾಸ್ಯಕ್ಕೆ ಎಡೆಯಾಗಿ ಅವರು ಮೂದಲಿಕೆಗೆ ಒಳಗಾಗುವ ಪ್ರಸಂಗವೂ ಇಲ್ಲದಿಲ್ಲ.  ಮಾಡಲು ಕೈ ತುಂಬಾ ಕೆಲಸ ಇರುವಾಗ ಇವುಗಳೆಲ್ಲಾ ಕೆಲಸವಿಲ್ಲದವರ ಕಾಯಕ ಅಂತ ಹೆಚ್ಚಿನವರ ಅಂಬೋಣ. ಇಂತಹ ಹೊತ್ತಿನಲ್ಲಿ ನಿರಂತರ ಕೆಲಸದಲ್ಲಿ ತೊಡಗಿಸಿ ಕೊಳ್ಳುವುದರ ಮೂಲಕ ಅದನ್ನು ಪೂರ್ತಿ ಮುಗಿಸಿದ ಮೇಲೆಯೇ ಅವರಿಗದು ಬಿಡುಗಡೆಯ ಮಾಧ್ಯಮ. ಒಂದಷ್ಟು ಹೊತ್ತು ಕಾಲು ಚಾಚಿ ಕುಳಿತ ಸಮಯದಲ್ಲಿ ಆಚೆ ಕಡೆಯಿಂದ ಫೋನು ಬಂದರೆ ಒಂದಷ್ಟು ಲಗುಬಗೆಯಲ್ಲಿ ಮಾತು ಮುಗಿಸಿದರೆ ಉಳಿದಂತೆ ಟಿ. ವಿ. ಸೀರಿಯಲ್ ನೋಡುವಾಗಲೂ ಅವರ ಕೈ ವೀಳ್ಯೆದೆಲೆಯ ತೊಟ್ಟು ಮುರಿಯುತ್ತಲೋ, ಕಾಳು ಮೆಣಸು ಬಿಡಿಸುತ್ತಲೋ ಯಾವುದೋ ಕೆಲಸವನ್ನು ಹಚ್ಚಿಕೊಂಡಿರುತ್ತದೆ.

ಹಾಗೆ ನೋಡಿದರೆ ಇಡೀ ಜಗತ್ತಿನಲ್ಲಿ ಅತೀ ಹೆಚ್ಚು ದುಡಿಯುವ ವರ್ಗ ಎಂದರೆ ಮಹಿಳೆಯರೇ. ಅದು ಎಲ್ಲಾ ರಂಗಗಳಿಗೂ ಅನ್ವಯಿಸುತ್ತದೆ. ಆದರೆ ಅವಳಿಗೆ ಅದಕ್ಕೆ ಸರಿಯಾದ ಸ್ಥಾನಮಾನ, ವೇತನ ದೊರಕುತ್ತಿದೆಯಾ? ಎಂಬುದು ಇವತ್ತಿಗೂ ಕೂಡ ಪ್ರಶ್ನೆಯೆ. ಅದರಲ್ಲೂ ತೀರಾ ಅಸಮಾನತೆಗೆ ಒಳಗಾಗುವವರು ನಮ್ಮ ಗೃಹಿಣಿಯರು ಮತ್ತು ಕೂಲಿ ಕಾರ್ಮಿಕ ಮಹಿಳೆಯರು. ನಿಮ್ಮ ದುಡಿಮೆ ತಕ್ಕ ಫಲ ದೊರಕುತ್ತಿದೆಯಾ? ಅನ್ನುವ ಪ್ರಶ್ನೆ ಕೇಳಿದರೆ ಒಂದು ನಿಡುಸುಯ್ಯುವಿಕೆಯೇ ಅವರ ಉತ್ತರವಾಗಬಹುದು.  ಈ ಸಂಧಿಗ್ದತೆಯಲ್ಲಿ ದಿನವೊಂದು ನೆಮ್ಮದಿಯಲ್ಲಿ ಕಳೆದರೆ ಸಾಕೆನ್ನುವ ಧೋರಣೆಯಲ್ಲಿ ಅವಳು ತನ್ನ ಕನಿಷ್ಟ ಸ್ವಾತಂತ್ರ್ಯಕ್ಕೂ, ಆಸೆಗಳಿಗೂ ಕಡಿವಾಣ ಹಾಕಿಕೊಳ್ಳ ಬೇಕಾಗುತ್ತದೆ. ಇದಕ್ಕೆ ಒಂದಷ್ಟು ಅಪವಾದಗಳು ಕೂಡ ಇರಬಹುದು. ಆದರೆ ಬಹುತೇಕ ಹೆಣ್ಮಕ್ಕಳದ್ದು ಒಂದು ರೀತಿಯ ಆತಂಕದಲ್ಲೇ ಕಳೆಯ ಬೇಕಾದ ತೊಳಲಾಟದ ಬದುಕು. ಅತ್ತ ತವರು ಮನೆಯೂ ಇಲ್ಲ, ಇತ್ತ ಗಂಡನ ಮನೆಯೂ ಇಲ್ಲದಂತೆ ಆಗಬಾರದಲ್ಲ ಅನ್ನೋ ದಿಗಿಲಿನಲ್ಲೇ ತನ್ನ ಇಡೀ ಜೀವಮಾನ ಸವೆಸುವಾಗ ಅವಳಿಗೆ ತವರು ಮನೆ ಮತ್ತು ಗಂಡನ ಮನೆಗಳ ಬೆಸೆಯುವ ತಂತು ಅಂತ ಹಣೆಪಟ್ಟಿ ಕೂಡ ಅಂಟಿಸಿ ಬಿಟ್ಟಿರುತ್ತಾರೆ.

 ಇತ್ತೀಚೆಗಂತು ಹೆಣ್ಮಕ್ಕಳನ್ನು ನೋಡಿದಾಗ ಅವರ ಕಣ್ಣಿನಾಳದಲ್ಲಿ ಅಪಾರ ವ್ಯಥೆಯೇ ಹುದುಗಿದಂತೆ ಭಾಸವಾಗುತ್ತದೆ. ಅದಕ್ಕೆ ಕಾರಣ ಕೂಡ ಇಲ್ಲದಿಲ್ಲ. ಗೃಹಿಣಿಯಾಗಿರುವ ಪೇಟೆಯಲ್ಲಿರುವ ಗೆಳತಿಯೊಬ್ಬಳಿಗೆ ಯಾವೊತ್ತೂ ತಲೆ ನೋವು ಅಂತ ನನ್ನ ಬಳಿ ಗೋಗೆರೆಯುತ್ತಲೇ ಇರುತ್ತಾಳೆ. ನನಗೆ ಗೊತ್ತಿರುವ ಮನೆ ಮದ್ದಿನ ಪಟ್ಟಿಯನ್ನೆಲ್ಲಾ ಅವಳ ಮುಂದೆ ಬಿಚ್ಚಿಡುತ್ತಾ ಸಣ್ಣ ಮಟ್ಟಿನ ವೈದ್ಯೆಯೇ ಆಗಿದ್ದೆ. ಕೊನೆಗೊಮ್ಮೆ ಅವಳ ಒಡಲೊಳಗಿನ ಸಂಕಟಗಳನ್ನೆಲ್ಲಾ ಕಕ್ಕಿಕೊಂಡಾಗ ತಲೆ ನೋವಿನ ಅಸಲಿ ಕಾರಣ ತೆರೆದುಕೊಂಡದ್ದು. ಹೊರಗೆ ದುಡಿಯುವ ಗಂಡ ತೋರಿಕೆಗೆಂಬಂತೆ ವಾರಕ್ಕೊಮ್ಮೆ ಹೊರಗೆ ಕರೆದು ಕೊಂಡು ಹೋಗುತ್ತಾನೆ. ತಿಂಡಿ, ಊಟ, ಸುತ್ತಾಟ ಎಲ್ಲಾ ಮುಗಿಸಿ ಮನೆಯೊಳಗೆ ಹೊಕ್ಕಾಗ ಆಕೆಗೆ  ಮತ್ತೆ ತಲೆನೋವು ವಕ್ಕರಿಸಿಕೊಳ್ಳುತ್ತದೆ.  ತಲೆ ನೋವು ಅಂತ ಬಾಯಿ ಬಿಟ್ಟರೆ, ಬಿಟ್ಟಿ ತಿಂದರೆ ಏನು ಆಗುತ್ತೆ ಮತ್ತೆ? ತಿಂದದ್ದು ಕುತ್ತಿ ಅದೇ ತಲೆ ನೋವು ಅಂತ ಕುಹಕ ಬೇರೆ. ಅವಳ ಅನಾರೋಗ್ಯದ ಕಾರಣವನ್ನು ಹೇಳುವುದು ಕೂಡ ತಪ್ಪು ಎನ್ನುವುದು ಅವಳಿಗೆ ಗೊತ್ತಾದ ತಕ್ಷಣ ಅದು ಮತ್ತೊಂದು ದೊಡ್ಡ ತಲೆ ನೋವಾಗಿ ಪರಿಣಮಿಸಿ ಬಿಡುತ್ತದೆ. ನಮ್ಮ ಹೆಣ್ಮಕ್ಕಳನ್ನು ಪದೇ ಪದೇ ಕಾಡುವ ತಲೆ ಶೂಲೆಯ ಹಿಂದೆ ಇಂತಹ ಅನೇಕ ಕಾರಣಗಳಿರುತ್ತವೆ ಅಂತ ವೇದ್ಯವಾಯಿತು. ಎಳವೆಯಲ್ಲಿ ಪ್ರಾಥಮಿಕ ಶಾಲೆಯ ವಿಜ್ಞಾನ ಟೀಚರು ನಮ್ಮೊಂದಿಗೆ ನೀರು ತರಲು ಹೇಳಿ ತಲೆನೋವೆಂದು ಎರಡೆರಡು ಮಾತ್ರೆ ಒಟ್ಟಿಗೆ ನುಂಗಿ ಪಾಠ ಶುರು ಮಾಡುತ್ತಿದ್ದುದರ ಹಿಂದಿನ ಕತೆಯಲ್ಲಿ ಇಂತಹದೇ ಕಾರಣ ಇದ್ದಿರಬೇಕು ಅಂತ ಈಗ ಅನ್ನಿಸುತ್ತಿದೆ. 

  ನಾವು ಕೃಷಿಕರಾಗಿರುವ ಕಾರಣ  ಪೇಟೆಯ ಸಂಬಂಧಿಕರು, ಪರಿಚಿತರು ನಮ್ಮ ಹಳ್ಳಿಯ ಪ್ರಶಾಂತ  ವಾತಾವರಣಕ್ಕೆ ಮನಸೋತು ತಮ್ಮ ತಲೆನೋವು ಕಡಿಮೆ ಮಾಡಿಕೊಳ್ಳಬೇಕೆಂದು ಬರುತ್ತಾರೆ. ಅವರು ತಲೆನೋವು ಕಡಿಮೆ ಮಾಡಿಕೊಂಡು ಹೋಗುತ್ತಾರೇನೋ ಹೌದು. ಆದರೆ  ಯಾವುದೇ ವೀಕ್ ಎಂಡ್ ಗಳ ಪರಿಜ್ಞಾನ ಇಲ್ಲದೆ ದುಡಿಯುವ ಹಳ್ಳಿ ಹೆಣ್ಮಕ್ಕಳ ಬಗ್ಗೆ  ಅವರಿಗೆ ಒಂದು ರೀತಿಯ ಕನಿಕರವೂ ಮತ್ತು ಅಚ್ಚರಿಯೂ.

ಮಹಿಳಾ ದಿನಾಚರಣೆಯ ನೆಪದಲ್ಲಿ  ಗೆಳತಿಯೊಬ್ಬಳಿಗೆ ಶುಭಾಶಯ  ಕೋರೋದಿಕ್ಕೆ ಫೋನಾಯಿಸಿದಾಗ, ಯಾವಾಗ ಯಾವುದೇ ಕಿರಿಕಿರಿಯಿಲ್ಲದೆ ನನಗೆ ಒಪ್ಪುವ ಬಟ್ಟೆ ಧರಿಸುತ್ತೇನೋ ಆಗ ನನಗೆ ನಿಜವಾದ ಮಹಿಳಾ ದಿನಾಚರಣೆ ಅಂತ ನಕ್ಕಿದ್ದಳು. ಈ ನಗುವಿನ ಹಿಂದೆ ಉತ್ತರವಿಲ್ಲದ ಅನೇಕ ಪ್ರಶ್ನೆಗಳಿರುತ್ತವೆ. ಇದರಿಂದ ಬಿಡುಗಡೆ  ಸಿಕ್ಕಿದಾಗ ತನ್ನ ಕೆಲಸಕ್ಕೆ ವೇತನವಿಲ್ಲದಿದ್ದರೂ, ಮಾನ್ಯತೆಯಾದರೂ ದಕ್ಕಿದಾಗ, ತನ್ನ ಅಭಿವ್ಯಕ್ತಿಗೆ, ವಿಚಾರಗಳಿಗೆ ಮನ್ನಣೆ ದೊರಕಿದಾಗ ಮಾತ್ರ ನಮ್ಮ ಹೆಣ್ಣು ಮಕ್ಕಳು ಮುಕ್ತವಾಗಿ ನಗ ಬಲ್ಲರು. ತಲೆ ನೋವು ಬರದೆ, ದಿಂಬಿನಡಿಯಲ್ಲಿ ಗುಳಿಗೆ ಇಡದೆ ನಿಶ್ಚಿಂತೆಯಿಂದ ನಿದ್ದೆ ಮಾಡಬಲ್ಲರೇನೋ.

ಸ್ಮಿತಾ ಅಮೃತರಾಜ್

ಕೊಡಗಿನ ಚೆಂಬುವಿನ ಕೃಷಿಕಳಾದ ಸ್ಮಿತಾ ಕನ್ನಡದ ಸೃಜನಶೀಲ ಬರಹಗಾರ್ತಿ. ಕವಿತೆ ಇವರಿಷ್ಟದ ಅಭಿವ್ಯಕ್ತಿ ಮಾಧ್ಯಮ. ಲಲಿತ ಪ್ರಬಂಧ ಇವರಿಗೆ ಒಳ್ಳೆಯ ಹೆಸರು ತಂದುಕೊಟ್ಟ ಸಾಹಿತ್ಯ ಪ್ರಕಾರ.

Related Articles

ಇತ್ತೀಚಿನ ಸುದ್ದಿಗಳು