Wednesday, June 19, 2024

ಸತ್ಯ | ನ್ಯಾಯ |ಧರ್ಮ

ಪುಲ್ವಾಮಾ | ಆ ನಲವತ್ತು ಧೀರ ಯೋಧರ ಸಾವಿಗೆ ಯಾರು ಹೊಣೆ?

ಸತ್ಯಪಾಲ್ ಮಲಿಕ್ ಹೇಳಿದ ಮಾತುಗಳಿಂದ ಪುಲ್ವಾಮಾ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಯೋಧರ ಬಗೆಗಿನ ಸರಕಾರದ ನಿಷ್ಕಾಳಜಿ, ದೇಶಭಕ್ತಿಯ ಬಗೆಗಿನ ಅವರ ಸೋಗಲಾಡಿತನಗಳು, ದೇಶದ ಭದ್ರತೆಯ ವಿಷಯದಲ್ಲಿ ಬೇಜವಾಬ್ದಾರಿಯ ನಡೆಗಳು ಮೊದಲಾದವುಗಳ ಬಗೆಗಿನ ಅನೇಕ ಸ್ಫೋಟಕ ಸಂಗತಿಗಳು ಹೊರಬಿದ್ದಿವೆ. ಚುನಾವಣಾ ಪ್ರಚಾರಕ್ಕೆ ವ್ಯಾಪಕವಾಗಿ ಬಳಸಿಕೊಂಡುದನ್ನು ನೋಡುವಾಗ ಪುಲ್ವಾಮಾ ಘಟನೆಯನ್ನು ಬೇಕೆಂದೇ ನಡೆಯಗೊಡಲಾಯಿತೇ ಎಂಬ ಅನುಮಾನವೂ ಮೂಡುವಂತಾಗಿದೆ. – ಶ್ರೀನಿವಾಸ ಕಾರ್ಕಳ.

ನಲವತ್ತು ಜನ ಯೋಧರು ಒಬ್ಬ ಉಗ್ರನನ್ನು ಸುತ್ತುವರಿದು ಕೊಲ್ಲುವುದು ಹೊಸ ವಿಷಯವೇನಲ್ಲ. ಆದರೆ ಒಬ್ಬ ಉಗ್ರಗಾಮಿಯು ಕೆಲವೇ ಕ್ಷಣಗಳಲ್ಲಿ ನಲವತ್ತು ಮಂದಿ ಯೋಧರ ಬಲಿ ಪಡೆಯುವುದು ಸಾಧಾರಣ ವಿಷಯವೇ? ಅದನ್ನು ನಂಬಲು ಸಾಧ್ಯವೇ? ನಂಬಲೇ ಬೇಕಾಗುತ್ತದೆ. ಅದು ನಡೆದುದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ, ಫೆಬ್ರವರಿ 14, 2019 ರಂದು!

ಆ ದುರದೃಷ್ಟಕರ ದಿನ ಭಾರತದ 2, 547 ಮಂದಿ CRPF ಯೋಧರನ್ನು ಹೊತ್ತ 78 ವಾಹನಗಳ ಸಾಲು ಜಮ್ಮುವಿನಿಂದ ನಸುಕಿನ 3.30 ಕ್ಕೆ ಹೊರಟಿತ್ತು. ಅವು ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಸಂಚರಿಸಿ ಶ್ರೀನಗರ ತಲಪಿ, ಮುಂದೆ ಪುಲ್ವಾಮಾ ಜಿಲ್ಲೆಯ ಆವಂತಿಪುರ ಪ್ರದೇಶದ ಹೆದ್ದಾರಿಯ ಲಡೂರಾ ಕ್ರಾಸಿಂಗ್ ಮೂಲಕ ಹಾದುಹೋದವು. ಇನ್ನೇನು ಶ್ರೀನಗರದಿಂದ 20 ಕಿಲೋಮೀಟರ್ ದೂರದ ಲೆತ್ಪೋರಾ ತಲಪುತ್ತಿದ್ದಂತೆ, ಮಧ್ಯಾಹ್ನ 3.15ಕ್ಕೆ ಅದಿಲ್ ಅಹಮದ್ ದರ್ ಎಂಬ ಕಾಶ್ಮೀರಿ ಆತ್ಮಹತ್ಯಾ ಬಾಂಬರ್ 300 ಕೆಜಿ ಆರ್ ಡಿ ಎಕ್ಸ್ ತುಂಬಿದ್ದ ತನ್ನ ಕಾರನ್ನು ವೇಗವಾಗಿ ಚಲಾಯಿಸಿ, ಯೋಧರನ್ನು ಹೊತ್ತು ಚಲಿಸುತ್ತಿದ್ದ ವಾಹನವೊಂದಕ್ಕೆ ಡಿಕ್ಕಿ ಹೊಡೆಸಿದ. ಕ್ಷಣಾರ್ಧದಲ್ಲಿ ಬಸ್ ಕರಟಿಹೋಯಿತು. 76 ನೇ ಬೆಟಾಲಿಯನ್ ನ 40 ಮಂದಿ ಯೋಧರ ದೇಹವೂ ಛಿದ್ರ ಛಿದ್ರವಾಯಿತು.

ಸುದ್ದಿ ಹರಡುತ್ತಿದ್ದಂತೆ ಇಡೀ ದೇಶವೇ ಆಘಾತಕ್ಕೊಳಗಾಯಿತು. ಒಬ್ಬರಲ್ಲ ಇಬ್ಬರಲ್ಲ, ನಲವತ್ತು ಯೋಧರು ಒಮ್ಮೆಲೇ ಸಾವಿಗೀಡಾಗುವುದು!? ಅದೂ ಯುದ್ಧದಲ್ಲಿ ಅಲ್ಲ, ಉಗ್ರರ ಬಾಂಬ್ ದಾಳಿಗೆ ಒಳಗಾಗಿ!?

ಆದರೆ ದೇಶದ ಪ್ರಧಾನಿ ಸುಲಭಕ್ಕೆ ಲಭ್ಯರಿರಲಿಲ್ಲ. ಅವರು ಉತ್ತರಾಖಂಡದ ಜಿಮ್ ಕಾರ್ಬೆಟ್ ನ್ಯಾಶನಲ್ ಪಾರ್ಕ್ ನಲ್ಲಿ ಡಿಸ್ಕವರಿ ಚಾನಲ್ ನ ಬೇರ್ ಗ್ರಿಲ್ಸ್ ಜತೆಯಲ್ಲಿ ಫೋಟೋ ಶೂಟ್ ನಲ್ಲಿ ಭಾಗಿಯಾಗಿದ್ದರು. ಸಂಜೆ ಐದು ಗಂಟೆಗೆ ಅವರು ಫೋನ್ ಮೂಲಕವೇ ರುದ್ರಪುರ ಬಿಜೆಪಿ ರ್‍ಯಾಲಿಯನ್ನು ಉದ್ದೇಶಿಸಿ ಭಾಷಣ ಕೂಡಾ ಮಾಡಿದ್ದರು. ಈ ಎಲ್ಲ ಲೆಕ್ಕಾಚಾರದ ಪ್ರಕಾರ ಪುಲ್ವಾಮಾ ಘಟನೆಯ ಸುದ್ದಿ ಅವರಿಗೆ ಘಟನೆ ನಡೆದ ಅರ್ಧ ಗಂಟೆಯಲ್ಲಿಯೇ ತಿಳಿದಿರಬಹುದು ಎನ್ನಲಾಗಿದೆ. ಆದರೂ ಅವರು ತಮ್ಮ ಕಾರ್ಯಕ್ರಮ ಮೊಟಕುಗೊಳಿಸಿ ಹಿಂದಿರುಗಿರಲಿಲ್ಲ! ಹಿಂದಿರುಗಿದ್ದು ಸಂಜೆ 7 ರ ಸುಮಾರಿಗೆ!

ದಾರುಣ ಘಟನೆಯೊಂದು ಚುನಾವಣೆಗೆ ಬಳಕೆ

ನಲವತ್ತು ಅಮಾಯಕರ ಯೋಧರ ಸಾವು ಸೂತಕದ ವಾತಾವರಣವನ್ನು ನಿರ್ಮಿಸಬೇಕಿತ್ತು. ಆದರೆ ಎಂದಿನಂತೆ ಸರಕಾರ ಮತ್ತು ಅದರ ಐಟಿ ಸೆಲ್ ಅದನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ತಡಮಾಡಲಿಲ್ಲ. ಸರಕಾರದ  ಗುಲಾಮಗಿರಿಯಲ್ಲಿ ತೊಡಗಿಕೊಂಡಿರುವ ಮಾಧ್ಯಮಗಳಂತೂ ಈ ಅತ್ಯಂತ ಸೂಕ್ಷ್ಮ ವಿಚಾರವನ್ನೂ ವೈಭವೀಕರಿಸುತ್ತಾ, ಅದನ್ನು  ತಮ್ಮ ಒಲವಿನ ಪಕ್ಷದ ಓಟಿನ ಲಾಭಕ್ಕೆ ತಿರುಗಿಸತೊಡಗಿದವು. ಪಾಕಿಸ್ತಾನ ಹೇಗೂ ಅವರಿಗೆ ಸದಾ ಕಾಲದ ಪಂಚಿಂಗ್ ಬ್ಯಾಗ್. ಆದರೆ ಭಾರತ ಸರಕಾರದ ಹೊಣೆಗಾರಿಕೆಯ ಬಗ್ಗೆ ಅವರಲ್ಲಿ ಪ್ರಶ್ನೆಗಳಿರಲಿಲ್ಲ! ಪತ್ರಕರ್ತ ಆರ್ನಾಬ್ ಗೋಸ್ವಾಮಿಯಂತೂ ವಾಟ್ಸ್ ಅಪ್ ಚಾಟ್ ನಲ್ಲಿ ’The attack, we won like crazy’ ಎಂದು ಬರೆದುಕೊಂಡದ್ದೂ ಮುಂದೆ ಪತ್ತೆಯಾಯಿತು.

ಪುಲ್ವಾಮಾ ದಾಳಿ ನಡೆದುದು 2019 ರ ಸಾರ್ವತ್ರಿಕ ಚುನಾವಣೆಗಿಂತ ಎಂಟು ವಾರಗಳ ಮೊದಲು. ತಕ್ಷಣ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾತೃಸಂಸ್ಥೆ ಆರ್ ಎಸ್ ಎಸ್ ನಿರಂತರವಾಗಿ ಭಾವನೆಗಳನ್ನು ಬಡಿದೆಬ್ಬಿಸತೊಡಗಿದವು. ಪ್ರತೀಕಾರದ ದಾಳಿಗೆ ಕರೆಕೊಡತೊಡಗಿದವು. ನರೇಂದ್ರ ಮೋದಿಯೊಬ್ಬರೇ ಈ ದೇಶದ ಹಿತಾಸಕ್ತಿಯ ರಕ್ಷಕ ಎಂದು ಬಿಂಬಿಸಿದವು. ಪ್ರೈಮ್ ಟೈಮ್ ಟಿವಿಗಳು ದೊಡ್ಡ ಮಟ್ಟದಲ್ಲಿ ರಾಷ್ಟ್ರೀಯ ಭದ್ರತೆಯನ್ನು ರಾಜಕೀಯೀಕರಣಗೊಳಿಸಿದವು.

ಇಷ್ಟಾದಮೇಲೆ ಯಾವುದೇ ಸರಕಾರ ಸುಮ್ಮನಿರುವುದೇ? ಪುಲ್ವಾಮಾ ನಡೆದ ಸರಿಯಾಗಿ ಹನ್ನೆರಡು ದಿನಗಳಲ್ಲಿ, ಅಂದರೆ ಫೆಬ್ರವರಿ 26, 2019 ರಂದು ವಾಯುಪಡೆಯ ಮಿರಾಜ್ 2,000 ಜೆಟ್ ಗಳು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಹೋಗಿ ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಬಾಂಬ್ ಎಸೆದು ಬಂದವು. ಪುರಾವೆಯೇ ಇಲ್ಲದಿದ್ದರೂ 300 – 350 ಉಗ್ರರು ಸತ್ತರು ಎಂದು ಹೇಳಲಾಯಿತು. ಪ್ರಧಾನಿಗಳು ಪುಲ್ವಾಮಾ ದಾಳಿಯಲ್ಲಿ ಸತ್ತ ಯೋಧರ ಫೋಟೋ ಇರಿಸಿಕೊಂಡೇ ಮತ ಕೇಳಿದರು. ಇವೆಲ್ಲ ಕೊನೆಗೂ ಫಲ ನೀಡಿದವು. ಬಿಜೆಪಿ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾರಕ್ಕೆ ಮರಳಿತು.

ಉತ್ತರವಿಲ್ಲದ ಪ್ರಶ್ನೆಗಳು

ಪ್ರತೀಕಾರದ ಕರೆ, ವೈಭವೀಕರಣದ ಉನ್ಮಾದದ ನಡುವೆ ಪುಲ್ವಾಮಾ ಕುರಿತ ಅನೇಕ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದುಕೊಂಡವು. ಫ್ರಂಟ್ ಲೈನ್ ಪತ್ರಿಕೆ ತನ್ನ ತನಿಖಾ ವರದಿಯಲ್ಲಿ ಹೇಳಿದಂತೆ 2019 ಫೆಬ್ರವರಿ 14 ರ ದಾಳಿಗೆ ಸಂಬಂಧಿಸಿದಂತೆ 11 ಗುಪ್ತಚರ ವರದಿಗಳು ಎಚ್ಚರಿಕೆ ನೀಡಿದ್ದವು. ದಾಳಿಯ ಹಿಂದಿನ ದಿನವೂ ಎಚ್ಚರಿಕೆ ನೀಡಲಾಗಿತ್ತು. ಅವುಗಳಲ್ಲಿ ಕೆಲವಂತೂ ಅತ್ಯಂತ ನಿಖರವಾಗಿದ್ದವು. ಯೋಧರ ವಾಹನಗಳನ್ನು ಗುರಿಮಾಡಲಾಗುವುದು ಎಂದೂ ಎಚ್ಚರಿಸಿದ್ದವು. ಆದರೂ ಯಾಕೆ ಎಚ್ಚರ ವಹಿಸಲಿಲ್ಲ? ನರ ಹುಳವೂ ಪ್ರವೇಶಿಸಲು ಅವಕಾಶ ಇರದ ರಸ್ತೆಯಲ್ಲಿ 300 ಕೆಜಿ ಆರ್ ಡಿ ಎಕ್ಸ್ ತುಂಬಿದ ಕಾರು ಬಂದುದು ಹೇಗೆ? ಅದನ್ನು ಯಾರೂ ತಡೆಯಲಿಲ್ಲ ಯಾಕೆ? ಅದಕ್ಕಿಂತಲೂ ಮುಖ್ಯವಾಗಿ ಇಷ್ಟೊಂದು ದೊಡ್ಡ ಪ್ರಮಾಣದ ವಿಸ್ಫೋಟಕ ಸರಬರಾಜಾದುದು ಎಲ್ಲಿಂದ? ವಾಹನಗಳು ಇಂತಹ ಸಮಯ ಇಲ್ಲೇ ಬರುತ್ತವೆ ಎಂದು ಉಗ್ರರಿಗೆ ಮಾಹಿತಿ ಹೋದುದು ಹೇಗೆ?

ಈ ಪ್ರಶ್ನೆಗಳಲ್ಲಿಯೇ ಉತ್ತರಗಳಿದ್ದುವಾದರೂ ಪ್ರಶ್ನೆಗಳನ್ನು ಕೇಳುವುದು ಸುಲಭವಾಗಿರಲಿಲ್ಲ. ಯಾಕೆಂದರೆ ಸರಕಾರವನ್ನು ಪ್ರಶ್ನಿಸುವುದು ಎಂದರೆ ದೇಶವನ್ನು ಪ್ರಶ್ನಿಸುವುದು ಎಂಬ ನರೇಟಿವ್ ಅದಾಗಲೇ ಕಟ್ಟಿನಿಲ್ಲಿಸಲಾಗಿತ್ತು.

ಸತ್ಯಪಾಲ್ ಮಲಿಕ್ ಬಹಿರಂಗಗೊಳಿಸಿದ ರಹಸ್ಯ

ಇತ್ತೀಚೆಗೆ ಸತ್ಯಪಾಲ್ ಮಲಿಕ್ ಅವರು ‘ದಿ ವೈರ್’ ಯೂಟ್ಯೂಬ್ ಚಾನಲ್ ನ ಕರಣ್ ಥಾಪರ್ ಗೆ ನೀಡಿದ ಸಂದರ್ಶನದಲ್ಲಿ ಆಡಿದ ಮಾತುಗಳು ದೇಶದ ಸಾರ್ವಜನಿಕ ವಲಯದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿವೆ. ಸತ್ಯಪಾಲ್ ಮಲಿಕ್ ಬಿಜೆಪಿ ನಾಯಕ, ಮೋದಿಯವರಿಗೆ ಆಪ್ತ ಮತ್ತು ನಂಬಿಗಸ್ತರಾಗಿದ್ದವರು ಹಾಗೂ ಪುಲ್ವಾಮಾ ಘಟನೆಯಾದಾಗ ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದವರು.

ಅವರು ಹೇಳುವ ಪ್ರಕಾರ ‘ಸಿ ಆರ್ ಪಿ ಎಫ್ ಯೋಧರನ್ನು ಜಮ್ಮುವಿನಿಂದ ಶ್ರೀನಗರಕ್ಕೆ ಸಾಗಿಸಲು ವಿಮಾನಗಳ ಬೇಡಿಕೆ ಇಡಲಾಗಿತ್ತು. ಬೇಕಿದ್ದುದು ಕೇವಲ 5 ವಿಮಾನಗಳು. ಅದನ್ನು ಒದಗಿಸುತ್ತಿದ್ದರೆ 40 ಜೀವಗಳು ಉಳಿಯುತ್ತಿದ್ದವು. ಆದರೆ ಗೃಹ ಸಚಿವಾಲಯ ವಿಮಾನ ಕೊಡಲು ಒಪ್ಪಲಿಲ್ಲ. ನ್ಯಾಶನಲ್ ಪಾರ್ಕ್ ನಿಂದ ಹೊರಬಂದ ಪ್ರಧಾನಿ ನರೇಂದ್ರ ಮೋದಿಯವರು ಫೋನ್ ಮಾಡಿ ಘಟನೆಯ ಬಗ್ಗೆ ವಿಚಾರಿಸಿದರು. ಅಗ ಇದು ನಮ್ಮ ತಪ್ಪಿನಿಂದ ಆದ ಘಟನೆ ಎಂದೆ. ಪ್ರಧಾನಿಗಳು ‘ನೀನು ಸುಮ್ಮನಿರು’ ಎಂದರು. ಅಜಿತ್ ದೋವಲ್ ಕೂಡಾ ಹೀಗೇ ಅಂದರು. ಅವರಿಗೆಲ್ಲ ಪಾಕಿಸ್ತಾನದತ್ತ ವಿಷಯ ತಿರುಗಿಸಿ ಅದನ್ನು ಲಾಭ ಮಾಡಿಕೊಳ್ಳುವ ಬಯಕೆ ಇದ್ದಂತಿತ್ತು’ ಎಂದರು.

ಸರಕಾರದ ಮತ್ತು ಮಾಧ್ಯಮಗಳ ಮೌನ

ಸತ್ಯಪಾಲ್ ಮಲಿಕ್ ಹೇಳಿದ ಮಾತುಗಳಿಂದ ಪುಲ್ವಾಮಾ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಯೋಧರ ಬಗೆಗಿನ ಸರಕಾರದ ನಿಷ್ಕಾಳಜಿ, ದೇಶಭಕ್ತಿಯ ಬಗೆಗಿನ ಅವರ ಸೋಗಲಾಡಿತನಗಳು, ದೇಶದ ಭದ್ರತೆಯ ವಿಷಯದಲ್ಲಿ ಬೇಜವಾಬ್ದಾರಿಯ ನಡೆಗಳು ಮೊದಲಾದವುಗಳ ಬಗೆಗಿನ ಅನೇಕ ಸ್ಫೋಟಕ ಸಂಗತಿಗಳು ಹೊರಬಿದ್ದಿವೆ. ಚುನಾವಣಾ ಪ್ರಚಾರಕ್ಕೆ ವ್ಯಾಪಕವಾಗಿ ಬಳಸಿಕೊಂಡುದನ್ನು ನೋಡುವಾಗ ಪುಲ್ವಾಮಾ ಘಟನೆಯನ್ನು ಬೇಕೆಂದೇ ನಡೆಯಗೊಡಲಾಯಿತೇ ಎಂಬ ಅನುಮಾನವೂ ಮೂಡುವಂತಾಗಿದೆ. ಇದರ ಬಗ್ಗೆ ಸರಕಾರ ಸ್ಪಷ್ಟೀಕರಣ ನೀಡಿ ಅನುಮಾನ ಪರಿಹರಿಸಬೇಕಿತ್ತಲ್ಲವೇ? ಆದರೆ ಸರಕಾರ ಮಾತನಾಡುತ್ತಿಲ್ಲ. ಮೌನವನ್ನು ಸಮ್ಮತಿ ಲಕ್ಷಣ ಎಂದು ತಿಳಿಯಬೇಕೇ?

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಬಲ ವಿಪಕ್ಷದಂತೆ ಕೆಲಸ ಮಾಡಬೇಕಾದ ಸುದ್ದಿ ಮಾಧ್ಯಮಗಳು ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕಿತ್ತಲ್ಲವೇ? ಅವೂ ಮಾತನಾಡುತ್ತಿಲ್ಲ. ತಮ್ಮ ಮಾ‍ಧ‍್ಯಮ ಧರ್ಮವನ್ನೇ ಮರೆತುಬಿಟ್ಟಿರುವ ಅವು ಈ ಬಗ್ಗೆ ಪ್ರೈಮ್ ಟೈಮ್ ಡಿಬೇಟುಗಳನ್ನು ಮಾಡಲೇಬಾರದು ಎಂದು ನಿರ್ಧರಿಸಿದಂತಿದೆ. ಈ ನಿಟ್ಟಿನಲ್ಲಿ ಅವುಗಳಿಗೆ ಸರಕಾರದ ಆದೇಶವೇ ಇದ್ದಂತಿದೆ. ಇಂಡಿಯಾ ಟುಡೇ ವಾಹಿನಿಯ ಪತ್ರಕರ್ತ ಶಿವ ಆರೂರ್ ಸತ್ಯಪಾಲ್ ಮಲಿಕ್ ರ ಸಂದರ್ಶನ ಮಾಡಿದವರನ್ನು ‘ಈಡಿಯಟ್’ ಎಂದು ಕರೆದಿದ್ದಾನೆಂದರೆ ಇವರು ಯಾವ ಮಟ್ಟಿಗೆ ಮಾರಿಕೊಂಡಿದ್ದಾರೆ ಯೋಚಿಸಿ.

ಸತ್ಯ ತಿಳಿಯುವುದು ನಮ್ಮ ಹಕ್ಕು

ಸರಕಾರ ಉತ್ತರಿಸದಿರಬಹುದು. ವಿಷಯಾಂತರ ಮಾಡಲು ಯತ್ನಿಸಬಹುದು. ಇದಕ್ಕೆ ಗೋದಿ ಮೀಡಿಯಾಗಳೂ ನೆರವಾಗಬಹುದು. ಆದರೆ ಈ ದೇಶದ ಪ್ರಜ್ಞಾವಂತ ಪ್ರಜೆಗಳಾಗಿ ಸರಕಾರದ ಲೋಪಗಳನ್ನು ನಾವು ಪ್ರಶ್ನಿಸಲೇಬೇಕಲ್ಲವೇ? ಪುಲ್ವಾಮಾದಂತಹ ಘಟನೆಯ ಸತ್ಯವನ್ನು ತಿಳಿಯುವ ಹಕ್ಕು ನಮಗೆ ಇದ್ದೇ ಇದೆಯಲ್ಲವೇ? ಹಿರಿಯ ಸಾಮಾಜಿಕ ರಾಜಕೀಯ ಹೋರಾಟಗಾರ, ಅಂಕಣಕಾರ ಸುಧೀಂದ್ರ ಕುಲಕರ್ಣಿ ತನ್ನ ಒಂದು ಟ್ವೀಟ್ ನಲ್ಲಿ ಹೀಗೆ ಹೇಳುತ್ತಾರೆ. ‘India belongs to WE THE PEOPLE… Our constitution speaks in the name of WE THE PEOPLE.. Therefore WE THE PEOPLE have a right to know, What happened in Pulvama? How did it happen? Why did it happen? and most importantly could it have been prevented?’ ಅಂದರೆ, ಭಾರತವು ‘ಈ ದೇಶದ ಜನತೆಯಾದ ನಮಗೆ’ ಸೇರಿದ್ದು… ‘ಈ ದೇಶದ ಜನತೆಯಾದ ನಾವು’ ಎಂದೇ ಸಂವಿಧಾನ ಮಾತನಾಡುತ್ತದೆ.. ಆದ್ದರಿಂದ ‘ಈ ದೇಶದ ಜನತೆಯಾಗಿ  ನಮಗೆ’ ಪುಲ್ವಾಮಾದಲ್ಲಿ ಏನು ಸಂಭವಿಸಿತು? ಹೇಗೆ ಸಂಭವಿಸಿತು? ಯಾಕೆ ಸಂಭವಿಸಿತು? ಎಲ್ಲಕ್ಕಿಂತಲೂ ಮುಖ್ಯವಾಗಿ ಅದನ್ನು ತಡೆಯಬಹುದಿತ್ತೇ? ಎಂಬುದನ್ನು ತಿಳಿಯುವ ಹಕ್ಕು ಇದೆ.

ಪುಲ್ವಾಮಾದಲ್ಲಿ ನಲವತ್ತು ಯೋಧರ ಅನ್ಯಾಯದ ಸಾವಿಗೆ ನ್ಯಾಯ ದೊರೆಯಬೇಕಾದರೆ ಆ ಘಟನೆಯನ್ನು ಕುರಿತ ಪೂರ್ಣ ಸತ್ಯ ಬಯಲಿಗೆ ಬರಬೇಕಾಗಿದೆ. ಗುಪ್ತಚರ ಮಾಹಿತಿಯ ಹೊರತಾಗಿಯೂ ಕರ್ತವ್ಯಲೋಪ ಎಸಗಿದ ಯಾರೇ ಆಗಿರಲಿ, ಅವರಿಗೆ ಶಿಕ್ಷೆಯಾಗಲೇಬೇಕು. ಇಲ್ಲವಾದಲ್ಲಿ ನಮ್ಮದು ಚುನಾವಣಾ ದೇಶಭಕ್ತಿ ಎನಿಸಿಕೊಳ್ಳುತ್ತದೆಯೇ ಹೊರತು, ನಿಜ ದೇಶಭಕ್ತಿಯೆನಿಸಿಕೊಳ್ಳುವುದಿಲ್ಲ.

ಶ್ರೀನಿವಾಸ ಕಾರ್ಕಳ

ಚಿಂತಕರೂ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡವರು.

ಇದನ್ನೂ ಓದಿ

ಹೊಸ ಸಂಸತ್ ಕಟ್ಟಡ: ದೇವರಿಲ್ಲದ ಗುಡಿಯಾಗದಿರಲಿ https://peepalmedia.com/new-parliament-building-dont-be-a-godless-temple/

ಅಘೋಷಿತ ತುರ್ತುಪರಿಸ್ಥಿತಿಯ ಅಗಣಿತ ರೂಪಗಳು https://peepalmedia.com/unannounced-emergency/

Related Articles

ಇತ್ತೀಚಿನ ಸುದ್ದಿಗಳು