Wednesday, June 26, 2024

ಸತ್ಯ | ನ್ಯಾಯ |ಧರ್ಮ

ರಾಜಮೌಳಿ ಶಿಷ್ಯನ ‘1770’ ಇದು ಬಂಕಿಮಚಂದ್ರರ ಆನಂದಮಠ

‘ಬಾಹುಬಲಿ’ ಚಿತ್ರಗಳ ನಂತರ ಪ್ಯಾನ್ ಇಂಡಿಯಾ ನಿರ್ದೇಶಕ ಎಂದೇ ಖ್ಯಾತರಾಗಿರುವ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಈಗ’ ಮತ್ತು ‘ಬಾಹುಬಲಿ’ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅಶ್ವಿನ್ ಗಂಗರಾಜು ಇದೀಗ ‘1770’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 75ನೇ ಸ್ವಾತಂತ್ರ್ಯೋತ್ಸದ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಗಿದೆ.

ಬಂಕಿಮ ಚಂದ್ರ ಚಟರ್ಜಿ ಅವರ ‘ಆನಂದಮಠ’ ಕಾದಂಬರಿಯನ್ನು ಆಧರಿಸಿದ ಈ ಬಹುಭಾಷಾ ಚಿತ್ರವನ್ನು ಎಸ್ಎಸ್1 ಎಂಟರ್ಟೈನ್ಮೆಂಟ್ ಮತ್ತು ಪಿಕೆ ಎಂಟರ್ಟೈನ್ಮೆಂಟ್ ಸಂಸ್ಥೆಗಳಡಿ ಶೈಲೇಂದ್ರ ಕುಮಾರ್, ಸುಜಯ್ ಕುಟ್ಟಿ, ಕೃಷ್ಣಕುಮಾರ್ ಬಿ ಮತ್ತು ಸೂರಜ್ ಶರ್ಮ ನಿರ್ಮಿಸುತ್ತಿದ್ದಾರೆ. ಇನ್ನು, ಖ್ಯಾತ ಲೇಖಕ ಮತ್ತು ಚಿತ್ರನಿರ್ದೇಶಕ ರಾಮ್ ಕಮಲ್ ಮುಖರ್ಜಿ ಈ ಚಿತ್ರದ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. ವಂದೇ ಮಾತರಂಗೆ 150 ವರ್ಷವಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ಈ ಹಿಂದೆ ‘ಆಕಾಶವಾಣಿ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಅಶ್ವಿನ್ ಗಂಗರಾಜು ಅವರಿಗೆ ಇದು ನಿರ್ದೇಶಕರಾಗಿ ಎರಡನೆಯ ಚಿತ್ರ. ಈ ಕುರಿತು ಮಾತನಾಡುವ ಅವರು, ‘ಇಂಥದ್ದೊಂದು ಅದ್ಭುತ ದೃಶ್ಯಕಾವ್ಯವನ್ನು ತೆರೆಗೆ ತರುವುದು ದೊಡ್ಡ ಸವಾಲು. ಆದರೆ, ರಾಜಮೌಳಿ  ಅವರ ತಂದೆ ವಿ. ವಿಜಯೇಂದ್ರ ಪ್ರಸಾದ್ ಅವರು ಕಥೆ, ಚಿತ್ರಕಥೆ ರಚಿಸುತ್ತಿರುವುದರಿಂದ, ಚಿತ್ರ ಅದ್ಭುತವಾಗಿ ಮೂಡಿಬರುತ್ತದೆ ಎಂಬ ವಿಶ್ವಾಸವಿದೆ. ಒಬ್ಬ ನಿರ್ದೇಶಕನಾಗಿ ಬೇರೆ ಕಾಲಘಟ್ಟದ, ಎಮೋಷನ್ಗಳು ಹೆಚ್ಚಿರುವಂತಹ ಮತ್ತು ಆಕ್ಷನ್ ದೃಶ್ಯಗಳಿಗೆ ಹೆಚ್ಚು ಮಹತ್ವ ಇರುವಂತಹ ಚಿತ್ರಗಳನ್ನು ನಿರ್ದೇಶಿಸಬೇಕು ಎನ್ನುವುದು ನನ್ನ ವೈಯಕ್ತಿಕ ಆಸೆ. ಅದಕ್ಕೆ ಅನುಗುಣವಾಗಿ, ಈ ಕಥೆಯಲ್ಲಿ ಎಲ್ಲವೂ ಇದೆ ಎನ್ನುತ್ತಾರೆ.

ಬಂಕಿಮ್ ಚಂದ್ರ ಅವರ ‘ಆನಂದಮಠ’ ಕಾದಂಬರಿಯಲ್ಲಿ ಮೊದಲ ಬಾರಿಗೆ ವಂದೇ ಮಾತರಂ ಕವನವು ಪ್ರಕಟವಾಗಿತ್ತು. ಈ ಕವನವು ಬ್ರಿಟಿಷ್ ಸಾಮ್ರಾಜ್ಯವನ್ನು ಅಕ್ಷರಶಃ ಅಲ್ಲಾಡಿಸಿತ್ತು. ವಂದೇ ಮಾತರಂ ಎನ್ನುವುದು ಮಹರ್ಷಿ ಬಂಕಿಮ ಚಂದ್ರರು ದೇಶವನ್ನು ಒಗ್ಗೂಡಿಸಲು ಉಚ್ಛರಿಸಿದ ಒಂದು ಮಂತ್ರ ಎನ್ನುತ್ತಾರೆ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಬರೆದಿರುವ ವಿಜಯೇಂದ್ರ ಪ್ರಸಾದ್.

ದೊಡ್ಡ ಬಜೆಟ್ನ ಮತ್ತು ಗಾತ್ರದ ಚಿತ್ರಗಳನ್ನು ಮಾಡುವುದಕ್ಕೆ ಇದು ಒಳ್ಳೆಯ ಸಮಯ ಎನ್ನುವುದು ಎಸ್ಎಸ್1 ಎಂಟರ್ಟೈನ್ಮೆಂಟ್ನ ಶೈಲೇಂದ್ರ ಕುಮಾರ್ ಅವರ ಅಭಿಪ್ರಾಯ.

‘1770’ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ತೆರೆಗೆ ಬರುತ್ತಿದೆ. ದಸರಾ ಹೊತ್ತಿಗೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಱರು ಆಯ್ಕೆಯಾಗಲಿದ್ದು, ದೀಪಾವಳಿ ವೇಳೆಗೆ ಅಧಿಕೃತ ಘೋಷಣೆಯಾಗಲಿದೆ.

Related Articles

ಇತ್ತೀಚಿನ ಸುದ್ದಿಗಳು