Thursday, June 27, 2024

ಸತ್ಯ | ನ್ಯಾಯ |ಧರ್ಮ

ಸರಣಿ ಟ್ವಿಟ್ ಗಳ ಮೂಲಕ ಬಿಜೆಪಿ ಕಾಲೆಳೆದ ಕಾಂಗ್ರೆಸ್ ; “ಆಪರೇಷನ್ ಕಮಲದ ಆಸಕ್ತಿ, ವಿಪಕ್ಷ ನಾಯಕನ ಆಯ್ಕೆಗೆ ಯಾಕಿಲ್ಲ?”

ರಾಜ್ಯ ವಿಧಾನಸಭೆ ಚುನಾವಣೆ ಮುಗಿದು, ಫಲಿತಾಂಶ ಬಂದು 50 ದಿನ ಮುಗಿಸಿದರೂ ಬಿಜೆಪಿ ಪಕ್ಷ ಸೋಲಿನ ಆಘಾತದಿಂದ ಹೊರಬಂದಂತೆ ಕಾಣುತ್ತಿಲ್ಲ. ಚುನಾವಣಾ ಪೂರ್ವದಲ್ಲೇ ಸೋಲಿನ ಮುನ್ಸೂಚನೆ ಇದ್ದ ಬಿಜೆಪಿಗೆ ಈಗ ಕಾಂಗ್ರೆಸ್ ಪಕ್ಷ ಘೋಷಣೆ ಮಾಡುತ್ತಿರುವ ಗ್ಯಾರಂಟಿ ಯೋಜನೆಗಳಿಗೆ ಕೌಂಟರ್ ನೀಡಲೂ ಸಹ ಹೆಣಗಾಟ ಪಡುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ವಿಪಕ್ಷ ನಾಯಕನ ಆಯ್ಕೆ ವಿಚಾರದಲ್ಲಿ ಬಿಜೆಪಿ ಇಷ್ಟರ ಮಟ್ಟಿಗೆ ಹಿಂದುಳಿದಿರುವುದು, ಪಕ್ಷದ ಆಂತರಿಕ ವಲಯದಲ್ಲಿ ಎಲ್ಲವೂ ಸರಿಯಲ್ಲ ಎಂಬ ಅನುಮಾನ ದಟ್ಟವಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಿಜೆಪಿ ವಿರೋಧ ಪಕ್ಷದ ಸ್ಥಾನ ನಿಭಾಯಿಸಲೂ ಸಹ ಸೋತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಹೊರಗಿನ ರಾಜಕೀಯ ಬದಿಗಿರಲಿ, ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಗೆ ಎಸೆಯುತ್ತಿರುವ ಟ್ವಿಟ್ ಗಳು ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ ಮತ್ತು ಅಷ್ಟೆ ಹಾಟ್ ಕೇಕ್ ನಂತೆ ಚರ್ಚೆಗೆ ಬೀಳುತ್ತಿವೆ. ಇಷ್ಟೆಲ್ಲಾ ಆದರೂ ಬಿಜೆಪಿ ಮಾತ್ರ ಅದಕ್ಕೆ ಸರಿಯಾದ ಕೌಂಟರ್ ಕೂಡಾ ಕೊಡಲಾಗದೆ ಒದ್ದಾಡುತ್ತಿದೆ.

ವಿಧಾನಸಭೆಯ ಮೊದಲ ಬಜೆಟ್ ಅಧಿವೇಶನದ ಇಂದೂ ಸಹ ಕಾಂಗ್ರೆಸ್ ಟ್ವಿಟ್ ಸರಣಿ ಮುಂದುವರೆಸಿದ್ದು, ವಿರೋಧ ಪಕ್ಷದ ನಾರಕರೇ ಇಲ್ಲದೇ ಸದನ ನಡೆಯುತ್ತಿರುವ ಬಗ್ಗೆ ಬಿಜೆಪಿಯನ್ನು ವ್ಯಂಗ್ಯ ಮಾಡಿದೆ. “ಸರ್ಕಾರ ರಚನೆ ಆಯ್ತು, ನಮ್ಮ ಸರ್ಕಾರ ಟೆಕಾಫ್ ಆಗಿ ಹಲವು ದಿನಗಳಾಯ್ತು, ನಮ್ಮ ಗ್ಯಾರಂಟಿ ಯೋಜನೆಗಳ ಜಾರಿಯೂ ಆಯ್ತು, dear @BJP4Karnataka, ಸದನವೂ ಪ್ರಾರಂಭವಾಯ್ತು. ಎಲ್ಲಿ ನಿಮ್ಮ ವಿರೋಧ ಪಕ್ಷದ ನಾಯಕ? ಬಿಜೆಪಿಗೆ ವಿರೋಧ ಪಕ್ಷದ ನಾಯಕನ ಗ್ಯಾರಂಟಿಯನ್ನೂ ಕೊಡಲಾಗುತ್ತಿಲ್ಲ ಎಂದರೆ ಎಂತಹ ಹಿನಾಯ ಸ್ಥಿತಿಯಲ್ಲಿದೆ!” ಎಂಬಂತೆ ಈ ದಿನದ ಮೊದಲ ಟ್ವಿಟ್ ಬಂದಿದೆ.

ಹಾಗೆಯೇ ಎರಡನೇ ಟ್ವಿಟ್ ನಲ್ಲಿ “ಬಿಜೆಪಿಯ 66 ಶಾಸಕರಲ್ಲಿ ವಿರೋಧ ಪಕ್ಷದ ನಾಯಕನಾಗುವ ಅರ್ಹತೆ ಇರುವ ಒಬ್ಬೇ ಒಬ್ಬ ಶಾಸಕನಿಲ್ಲದಿರುವುದು ಅತ್ಯಂತ ನಾಚಿಕೆಗೇಡು. ಕರ್ನಾಟಕದದ ಇತಿಹಾಸದಲ್ಲಿ ವಿರೋಧ ಪಕ್ಷದ ನಾಯಕನಿಲ್ಲದೆ ನಡೆಯುತ್ತಿರುವ ಮೊದಲ ಅಧಿವೇಶನವಿದು. @BJP4Karnataka ಅಧಿಕಾರದಲ್ಲಿದ್ದಾಗಲೂ ಪ್ರಜಾಪ್ರಭುತ್ವವನ್ನು ಗೌರವಿಸಲಿಲ್ಲ, ವಿಪಕ್ಷದಲ್ಲಿದ್ದಾಗಲೂ ಗೌರವಿಸುತ್ತಿಲ್ಲ.” ಎಂದು ಬಿಜೆಪಿ ಪಕ್ಷ ವಿರೋಧ ಪಕ್ಷದ ನಾಯಕನ ಆಯ್ಕೆಯಲ್ಲಿ ಸೋತ ಬಗ್ಗೆ ಟ್ವಿಟ್ ಮಾಡಿ ಬಿಜೆಪಿ ಪಕ್ಷದ ಕಾಲೆಳೆದಿದೆ.

ಇನ್ನು ಬಿಜೆಪಿ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಗೆ 2,500 ಸಾವಿರ ಕೋಟಿ ಕೊಟ್ಟರೆ ಬಿಜೆಪಿಯಲ್ಲಿ ಮುಖ್ಯಮಂತ್ರಿ ಮಾಡಲಾಗುತ್ತದೆ ಎಂಬ ಆರೋಪ ಕೇಳಿ ಬಂದಿತ್ತು. ಕಾಂಗ್ರೆಸ್ ತನ್ನ ಸರಣಿ ಟ್ವಿಟ್ ನಲ್ಲಿ ಅದನ್ನೂ ಪ್ರಸ್ತಾಪಿಸಿ, “ವಿರೋಧ ಪಕ್ಷದ ನಾಯಕನ ಆಯ್ಕೆಗೂ ಎಷ್ಟು ಹಣ ಬಿಕರಿಯಾಗುತ್ತಿದೆ” ಎಂಬಂತೆ ಪ್ರಶ್ನೆ ಎತ್ತಿದೆ.

https://twitter.com/INCKarnataka/status/1675759032030892034?t=3xsF4cV5qyzKqVo7LqhXfA&s=19

ಹಾಗೂ ಬಿಜೆಪಿ ಪಕ್ಷದ ಹಳೆಯ ಟ್ವಿಟ್ ಒಂದರ ಫೋಟೊ ಬಳಸಿ “…. ನಿಮ್ಮ ಹೈಕಮಾಂಡ್ ಕನಿಷ್ಠ ವಿರೋಧ ಪಕ್ಷದ ನಾಯಕನ ಆಯ್ಕೆಯಲ್ಲೂ ನಿಮಗೆ ಗ್ಯಾರಂಟಿ ನೀಡದಿರುವುದು ರಾಜಕೀಯ ಇತಿಹಾಸದಲ್ಲಿಯೇ ಅತ್ಯಂತ ಶೋಚನಿಯ ಸಂಗತಿ.” ಎಂಬಂತೆ ಟ್ವಿಟ್ ಮಾಡಿದೆ.

ಒಟ್ಟಾರೆ ಬಿಜೆಪಿ ಸೋಲಿನ ಸುಳಿಯಲ್ಲಿ ಇರಬೇಕಾದರೇ ಕಾಂಗ್ರೆಸ್ ತನ್ನ ಟ್ವಿಟ್ ಮೂಲಕ ಬಿಜೆಪಿಗೆ ಸೋಲಿನ ರುಚಿಯನ್ನ ಮತ್ತೆ ಮತ್ತೆ ನೆನಪಿಸುತ್ತಿದೆ. ಜೊತೆಗೆ ವಿರೋಧ ಪಕ್ಷದ ನಾಯಕನ ಆಯ್ಕೆಯಲ್ಲಿ ಬಿಜೆಪಿ ಎಡವಿರುವ ಬಗ್ಗೆಯೂ ವ್ಯಂಗ್ಯಬರಿತವಾಗಿ ಟ್ವಿಟ್ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು