Wednesday, June 19, 2024

ಸತ್ಯ | ನ್ಯಾಯ |ಧರ್ಮ

‘ಅಜಿತ್ ಪವಾರ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಲಿದ್ದಾರೆ’ ; ಅಚ್ಚರಿ ಮೂಡಿಸಿದ ‘ಸಾಮ್ನಾ’ ವರದಿ

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರದ ಎನ್ಸಿಪಿ ನಾಯಕ ಅಜಿತ್ ಪವಾರ್ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇತ್ತ ಇದನ್ನೇ ಉಲ್ಲೇಖಿಸಿ ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಯು ಎನ್‌ಸಿಪಿಯ ಅಜಿತ್‌ ಪವಾರ್‌ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಹೇಳಿಕೆಯನ್ನು ನೀಡಿ ಮಹಾರಾಷ್ಟ್ರ ರಾಜ್ಯದ ರಾಜಕೀಯ ಬೆಳವಣಿಗೆಯಲ್ಲಿ ಅಚ್ಚರಿ ಹುಟ್ಟಿಸಿದೆ.

ಭಾನುವಾರದ ದಿನ ಸುಮಾರು 40 ಶಾಸಕರ ಬಲಾಬಲದೊಂದಿಗೆ ಅಜಿತ್ ಪವಾರ್, ಏಕನಾಥ್ ಶಿಂಧೆ ಸರ್ಕಾರಕ್ಕೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ NCP ಪಕ್ಷ, NDA ಜೊತೆಗೆ ಅಧಿಕೃತವಾಗಿ ಗುರುತಿಸಿಕೊಂಡಂತಾಗಿದೆ. ಇತ್ತ ಶಿವಸೇನೆಯ ಮುಖವಾಣಿ ‘ಸಾಮ್ನಾ’ ಮಾಡಿದ ವರದಿ ಈಗ ಮಹಾರಾಷ್ಟ್ರ ಭಾಗದಲ್ಲಿ ಹೆಚ್ಚು ಚರ್ಚಿತ ವಿಚಾರವಾಗಿದೆ. ಇದಕ್ಕೆ ಸರಿಯಾಗಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾದ ದೇವೇಂದ್ರ ಫಡ್ನವೀಸ್ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ‘ಸಾಮ್ನಾ’ ವರದಿಗೆ ಸರಿಯಾದ ಬೆಳವಣಿಗೆ ಎಂದೇ ರಾಜಕೀಯ ವಲಯದ ಚರ್ಚೆಯಾಗಿದೆ.

ಇತ್ತ ಬಿಜೆಪಿ ಜೊತೆಗೆ ಗುರುತಿಸಿಕೊಂಡು ಬಹುತೇಕ ಬಹುಮತದೊಂದಿಗೆ ಸರ್ಕಾರ ರಚಿಸಿದ ಏಕನಾಥ್ ಶಿಂಧೆಗೂ ಸಹ ಅಜಿತ್ ಪವಾರ್ ಬೆಂಬಲಿಗ ಶಾಸಕರ ಬೆಂಬಲ ಅನಗತ್ಯವಾಗಿತ್ತು. ಆ ಹಿನ್ನೆಲೆಯಲ್ಲಿ ಏಕನಾಥ್ ಶಿಂಧೆಗೂ ಸಹ ಅಜಿತ್ ಪವಾರ್ ಬೆಂಬಲದಿಂದ ಅಸಮಾಧಾನ ಇದೆ ಎಂದಂತಾಗಿದೆ.

ಒಂದರ್ಥದಲ್ಲಿ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಸೇರ್ಪಡೆ ಆಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ಮುಂದಿನ ದಿನಗಳಲ್ಲಿ ಅನಿರೀಕ್ಷಿತ ಘಟ್ಟಕ್ಕೆ ತಲುಪುವ ಸಾಧ್ಯತೆ ಬಂದರೂ ಅಚ್ಚರಿ ಇಲ್ಲ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಪಕ್ಷದ ಮುಖಂಡರ ಸಭೆಯನ್ನು ಇಂದು ಸಂಜೆ ಕರೆದಿದ್ದಾರೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿರುವ ಎನ್‌ಸಿಪಿ ನಾಯಕರನ್ನು ಬಿಜೆಪಿಗೆ ಸೇರಿಸಿಕೊಂಡಿರುವುದು ಏಕನಾಥ್‌ ಶಿಂಧೆ ಬಳಗಕ್ಕೆ ಆಕ್ರೋಶ ತರಿಸಿದೆ ಎಂದು ಹೇಳಲಾಗುತ್ತಿದೆ.

ಇತ್ತ NCP ನಾಯಕ ಶರದ್ ಪವಾರ್ ಸಹ ಈ ಬೆಳವಣಿಗೆಯಿಂದ ನನಗೆ ಯಾವ ಆಘಾತವೂ ಆಗಿಲ್ಲ. ಹಿಂದೆ 6 ಶಾಸಕರ ಬಲ ಹೊಂದಿದ್ದ ನನಗೆ ಈಗ ಈ ಮಟ್ಟಕ್ಕೆ ಪಕ್ಷ ಬೆಳೆಸಿದ್ದೇನೆ. ಮುಂದೆಯೂ ಕೂಡಾ ಪಕ್ಷವನ್ನು ಸದೃಢವಾಗಿ ಕಟ್ಟಲು ನನಗೆ ಶಕ್ತಿ ಇದೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಶಾಸಕರ ಮೇಲಿನ ಶಿಸ್ತು ಕ್ರಮ ನನ್ನ ವ್ಯಾಪ್ತಿಗೆ ಬರುವಂತದ್ದಲ್ಲ. ಅದನ್ನು ರಾಜ್ಯ ಘಟಕದ ಮುಖ್ಯಸ್ಥರಾದ ಜಯಂತ್ ಪಾಟೀಲ್ ತಗೆದುಕೊಳ್ಳಲಿದ್ದಾರೆ ಎಂದೂ ಸ್ಪಷ್ಟಪಡಿಸಿದ್ದಾರೆ.

ಇನ್ನು ಮಹಾರಾಷ್ಟ್ರದ ವಿರೋಧ ಪಕ್ಷದ ಸ್ಥಾನವನ್ನು ಕಾಂಗ್ರೆಸ್ ವಹಿಸಿಕೊಳ್ಳಲಿದೆ. ಪಕ್ಷದ ಬಲಾಬಲದ ಆಧಾರದಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನಕ್ಕೆ ಬಂದು ಕೂರಲಿದೆ ಎಂಬ ಸುಳಿವನ್ನು ಶರದ್ ಪವಾರ್ ನೀಡಿದ್ದಾರೆ. ಜೊತೆಗೆ ಪ್ರತಿಪಕ್ಷದ ಸ್ಥಾನಕ್ಕೆ ಕಾಂಗ್ರೆಸ್ ಕೂರುವುದಾದರೆ ನನ್ನ ಬೆಂಬಲವಿದೆ ಎಂದೂ ಸಹ ಶರದ್ ಪವಾರ್ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು