Thursday, June 20, 2024

ಸತ್ಯ | ನ್ಯಾಯ |ಧರ್ಮ

ತಮಿಳುನಾಡು ಹಾಗೂ ಕರ್ನಾಟಕ ಎರಡೂ ರಾಜ್ಯಗಳ ಪ್ರತಿಷ್ಠೆಯ ಕಣವಾದ ಮೇಕೆದಾಟು ಯೋಜನೆ

ಸೋಮವಾರದ ದಿನ ಮೇಕೆದಾಟು ಆಣೆಕಟ್ಟು ಯೋಜನೆಯ ಕುರಿತಾದ ಮಹತ್ವದ ಸಭೆಯಲ್ಲಿ ಕರ್ನಾಟಕ ಸರ್ಕಾರ ರಾಜ್ಯದ ನೀರಾವರಿ ಇಲಾಖೆಯ ಎಲ್ಲಾ ಪ್ರಮುಖ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು. ಸಭೆಯಲ್ಲಿ ಮೇಕೆದಾಟು ಯೋಜನೆಯ ರೂಪುರೇಷೆ, ಅದರ ಕಾನೂನಿನ ತೊಡಕು, ಯೋಜನೆ ವಿಸ್ತರಿಸಿಕೊಳ್ಳುವ ವ್ಯಾಪ್ತಿ ಸೇರಿದಂತೆ ಪ್ರಮುಖ ವಿಚಾರವಾಗಿ ಚರ್ಚೆ ನಡೆಸಲಾಗಿದೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಶಾಸಕರು, ಸಂಸದರು ಹಾಗೂ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು. ಬೆಂಗಳೂರಿನ ವಿಕಾಸ ಸೌಧದಲ್ಲಿ ನಡೆದ ಈ ಸಭೆ ಈಗ ತಮಿಳುನಾಡು ಸರ್ಕಾರದ ನಿದ್ದೆಗೆಡಿಸಿದೆ. ರಾಜಕೀಯವಾಗಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಹಾಗೂ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಷ್ಟೇ ದೋಸ್ತಿ ಇದ್ದರೂ, ಅನಾದಿಕಾಲದಿಂದ ಬಂದ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ರಾಜಕೀಯ ಸಂಘರ್ಷ ಮಾತ್ರ ಇದ್ದೇ ಇದೆ.

ಇತ್ತ ಮಾತುಕತೆ ಅಡಿಯಲ್ಲಿ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ಮನಸ್ಸನ್ನು ಉಭಯ ನಾಯಕರು ಮಾಡಿದರೂ ತಮಿಳುನಾಡಿನಲ್ಲಿ ಮಾತ್ರ ಬಿಜೆಪಿ ಪಕ್ಷ ಮೇಕೆದಾಟು ವಿಚಾರದಲ್ಲಿ ದೊಡ್ಡ ಸಂಘರ್ಷ ಹುಟ್ಟು ಹಾಕುವ ಎಲ್ಲಾ ಮುನ್ಸೂಚನೆ ಕಂಡುಬಂದಿದೆ. ಇತ್ತ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೇಕೆದಾಟು ಯೋಜನೆಗೆ ಪಟ್ಟು ಹಿಡಿದಿದ್ದ ಡಿ.ಕೆ.ಶಿವಕುಮಾರ್ ಗೂ ಇದು ಪ್ರತಿಷ್ಠೆಯ ಕಣವಾಗಿದೆ. ಅಣೆಕಟ್ಟು ಕಟ್ಟುವುದನ್ನು ಪ್ರತಿಷ್ಠೆಯ ಕಣವಾಗಿಸಿಕೊಂಡಿರುವ ಡಿ.ಕೆ ಶಿವಕುಮಾರ್ ಅವರಿಗೆ ತಮಿಳುನಾಡು ಸರ್ಕಾರ ಅಡ್ಡಿಯಾಗುವ ಸಾಧ್ಯತೆ ಇದೆ.

ಇದರ ಜೊತೆಗೆ ಕೆಲವೇ ದಿನಗಳ ಹಿಂದೆ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರೂ ಆದ ಡಿ.ಕೆ.ಶಿವಕುಮಾರ್ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಮೇಕೆದಾಟು ಯೋಜನೆಗೆ ಸಂಬಂಧಿಸಿದ ಮಾತುಕಥೆ ನಡೆಸಿದ್ದೂ ಸಹ ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆ ನಂತರ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ವಿರುದ್ಧ ಅಲ್ಲಿನ ಪ್ರತಿಪಕ್ಷಗಳು ಸಮರ ಸಾರಿವೆ.

ಹಾಗೆಯೇ ತಮಿಳುನಾಡು ಜಲಸಂಪನ್ಮೂಲ ಸಚಿವರೂ ಸಹ ಈ ಯೋಜನೆ ಒಂದು ರಾಜಕೀಯ ಗಿಮಿಕ್ ಎಂದು ಪ್ರತಿಕ್ರಿಯಿಸಿದ್ದಾರೆ. “ಕಾನೂನಾತ್ಮಕವಾಗಿಯೂ ಈ ಯೋಜನೆ ಜಾರಿಗೆ ಹಲವು ಅಡ್ಡಿ ಇದೆ. ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ಒಪ್ಪಿಗೆ ಸೂಚಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ ಮೇಕೆದಾಟು ಯೋಜನೆ, ತಮಿಳುನಾಡು ಮತ್ತು ಕರ್ನಾಟಕ ಎರಡೂ ರಾಜ್ಯಕ್ಕೆ ಪ್ರತಿಷ್ಠೆಯ ವಿಚಾರವಾಗಿದ್ದು, ಇಲ್ಲಿ ಯೋಜನೆ ಆದರೂ ಆಗದಿದ್ದರೂ ಎರಡೂ ರಾಜ್ಯಗಳ ರಾಜಕೀಯದಲ್ಲಿ ದೊಡ್ಡ ಮಟ್ಟದ ಪರಿಣಾಮ ಕೂಡಾ ಉಂಟಾಗಬಹುದು ಎಂದೇ ನಿರೀಕ್ಷಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು