Friday, June 14, 2024

ಸತ್ಯ | ನ್ಯಾಯ |ಧರ್ಮ

ಒಟ್ಟು 15 ಪ್ರಸ್ತಾವನೆಗಳ ಅನುಮೋದನೆಗೆ ಸಂಪುಟ ಒಪ್ಪಿಗೆ : ಸಚಿವ ಹೆಚ್.ಕೆ.ಪಾಟೀಲ್ ಸುದ್ದಿಗೋಷ್ಠಿಯ ವಿವರ

ಬೆಂಗಳೂರು : ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ವಿಧಾನ ಸಮ್ಮೇಳನ ಸಭಾಂಗಣದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ, ಶಾಸನ ರಚನೆಗಳ ಹಾಗೂ ಪ್ರವಾಸೋದ್ಯಮ ಸಚಿವರಾದ ಶ್ರೀ ಹೆಚ್ ಕೆ ಪಾಟೀಲ್ ಅವರು ಸಚಿವ ಸಂಪುಟದ ನಿರ್ಣಯಗಳಿಗೆ ಸಂಬಂಧಿಸಿದಂತೆ ಜುಲೈ 27 ರ ಗುರುವಾರ ಪತ್ರಿಕಾ ಗೋಷ್ಠಿ ನಡೆಸಿದರು.

ಅಂಗನವಾಡಿ ಮಕ್ಕಳು, ಗರ್ಭಿಣಿ ಮತ್ತು ಬಾಣಂತಿ ಹೆಣ್ಣು ಮಕ್ಕಳಿಗೆ ಮೊಟ್ಟೆ ವಿತರಣೆ, ಹಾಲಿನ ದರ ಏರಿಕೆ, ರಾಷ್ಟ್ರೀಯ ವನ್ಯಜೀವಿ ತಾಣವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂಬ ಘೋಷಣೆ, ಸನ್ನಡತೆ ಆಧಾರದಲ್ಲಿ 67 ಕೈದಿಗಳ ಬಿಡುಗಡೆ, ಕಲ್ಲು ಗಣಿಗಾರಿಕೆ ಪ್ರದೇಶಗಳಲ್ಲಿನ ದಂಡ ವಸೂಲಿಯ ಬಗೆಗಿನ ಚಿಂತನೆ ಸೇರಿದಂತೆ ಒಟ್ಟು 15 ವಿಚಾರಗಳ ಬಗ್ಗೆ ಇಂದಿನ ಸಂಪುಟದ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಸಿದೆ. ಅವುಗಳಲ್ಲಿ ಈಗಾಗಲೇ 13 ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್ ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.

ಅಂಗನವಾಡಿ ಮಕ್ಕಳಿಗೆ, ಗರ್ಭಿಣಿ ಹಾಗೂ ಬಾಣಂತಿಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನೀಡಲಾಗುವ ಮೊಟ್ಟೆ ವಿತರಣೆಯನ್ನು ವಿಭಾಗವಾರು ಖರೀದಿಸಿ, ವಿತರಿಸಲು ಒಪ್ಪಿಗೆ ನೀಡಲಾಗಿದೆ. 2023-24 ಕ್ಕೆ ಅನ್ವಯವಾಗುವಂತೆ 297.19 ಕೋಟಿ ಮೊತ್ತದಲ್ಲಿ ಹಣ ಬಿಡುಗಡೆ ಮಾಡಲು ಸಂಪುಟ ಒಪ್ಪಿಗೆ ಸೂಚಿಸಿದೆ. ಪ್ರತೀ ಮೊಟ್ಟೆಗೆ 6 ರೂಪಾಯಿ ಮೀರದಂತೆ ಸುಮಾರು 29 ಲಕ್ಷ ಫಲಾನುಭವಿಗಳಿಗೆ ಈ ಸೌಲಭ್ಯ ಸಿಗಲಿದೆ.

ಈ ಬಾರಿಯ ಕ್ಯಾಬಿನೆಟ್ ನಲ್ಲಿ ಹಾಲಿನ ದರ ಏರಿಕೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳ ಆಗಲಿದೆ. ಈ ಪರಿಷ್ಕೃತ ದರ ಆಗಸ್ಟ್ 1 ರಿಂದ ಜಾರಿಗೆ ಬರಲಿದೆ” ಎಂದು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಸಹಕಾರ ಇಲಾಖೆಯ ಅಡಿಯಲ್ಲಿ RIDF-28 ಯೋಜನೆಯಡಿ ಎಪಿಎಂಸಿಗಳಿಗೆ ರಸ್ತೆ ಮಾಡಲು ಹಾಗೂ ಇತರೆ ಮೂಲಭೂತ ಸೌಲಭ್ಯ ಕಲ್ಪಿಸಲು 130.40 ಕೋಟಿ ಮಂಜೂರು ಮಾಡಲು ಸಂಪುಟ ಒಪ್ಪಿಗೆ ಸೂಚಿಸಿದೆ.

ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿನ ಒತ್ತುವರಿ ಪ್ರದೇಶಗಳ ಆಡಿಟ್ ಗೆ ನಿರ್ದೇಶನ ನೀಡಲಾಗಿದೆ ಎಂದ ಸಚಿವರು, ಒತ್ತುವರಿಯಲ್ಲಿ ಖನಿಜ ತೆಗೆದು ಬಳಕೆ ಮಾಡಿದ್ದಿದ್ದರೆ ಅಂತಹವರಿಗೆ ದಂಡ ಹಾಕಲಾಗುತ್ತದೆ. ಈ ಬಾರಿ ಅಂತಹ ದಂಡಕ್ಕೆ ಒನ್ ಟೈಂ ಸೆಟ್ಲಮೆಂಟ್ ಗೆ ಅವಕಾಶ ನೀಡಲಾಗಿದೆ. ಇದೆಲ್ಲಕ್ಕೂ ಸಂಬಂಧಿಸಿದಂತೆ ಒಟ್ಟಾರೆ 6,105 ಕೋಟಿ ದಂಡ ವಸೂಲಿ ಆಗಬೇಕಿದೆ. ದಂಡ ವಸೂಲಿಯ ಮಾರ್ಗದ ಬಗ್ಗೆ ಕ್ಯಾಬಿನೆಟ್ ಸಬ್ ಕಮಿಟಿ ಮಾಡಿ ತೀರ್ಮಾನ ಮಾಡಿಕೊಳ್ಳಲಾಗುತ್ತದೆ. ಸರಿ ಸುಮಾರು ಎಂಟು ವರ್ಷಗಳಿಗೂ ಅಧಿಕ ಕಾಲದ ಬಾಕಿ ಇದಾಗಿದೆ ಎಂದು ಮಾಹಿತಿ ನೀಡಿದರು.

ಅರಣ್ಯ ಮತ್ತು ಜೀವ ಪರಿಸರ ಇಲಾಖೆಯ ರಾಷ್ಟ್ರೀಯ ಹಾಗೂ ವನ್ಯಜೀವಿ ತಾಣವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ನಿರ್ಧಾರ ತೆಗೆದುಕೊಳ್ಳಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಉಪಸಮಿತಿ ರಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಲ್ಲಾ ರೀತಿಯ ಅಧಿಕಾರಕ್ಕೆ ಸಂಪುಟ ಒಪ್ಪಿಗೆ ಸೂಚಿಸಿದೆ.

ಸನ್ನಡತೆಯ ಆಧಾರದಲ್ಲಿ ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿನ ಬಂಧಿಖಾನೆಗಳಿಂದ 67 ಕೈದಿಗಳ ಬಿಡುಗಡೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಈ ಕೈದಿಗಳಿಗೆ ಬಿಡುಗಡೆ ಭಾಗ್ಯ ಸಿಗಲಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ 24, ಮೈಸೂರಿನಿಂದ 8, ಬೆಳಗಾವಿಯಿಂದ 2, ಕಲಬುರಗಿಯಿಂದ 5, ಶಿವಮೊಗ್ಗದಿಂದ 12, ಬಳ್ಳಾರಿಯಿಂದ 8, ಧಾರವಾಡ ಸೆಂಟ್ರಲ್ ಜೈಲಿನಿಂದ 2 ಕೈದಿಗಳು ಈ ಸಂದರ್ಭದಲ್ಲಿ ಬಿಡುಗಡೆಗೊಳ್ಳಲಿದ್ದಾರೆ.

ಇಲ್ಲಿಯವರೆಗೆ ದಾಖಲೆಗಳಲ್ಲಿ ಕೊಡಗರು ಎಂದೇ ಉಲ್ಲೇಖವಾಗುತ್ತಿದ್ದ ಕೊಡವ ಸಮುದಾಯದ ಹೆಸರನ್ನು ಕೊಡವರು ಎಂದು ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಹಿಂದುಳಿದ ವರ್ಗಗಳ ಸಮಿತಿಯ ಅಧ್ಯಕ್ಷರಾಗಿದ್ದ ದ್ವಾರಕಾನಾಥ್ ನೇತೃತ್ವದ ಸಮಿತಿ ನೀಡಿದ್ದ ವರದಿಯಂತೆ, ಹಿಂದುಳಿದ ವರ್ಗದ ಆಯೋಗದ ಶಿಫಾರಸ್ಸಿನಂತೆ ಈ ತಿದ್ದುಪಡಿ ಆದೇಶ ಮಾಡಲಾಗಿದೆ.

ಕಿರಿಯ ಶ್ರೇಣಿ ತಹಶೀಲ್ದಾರ್ ಹುದ್ದೆಗೆ ಕಾನೂನು ಹೋರಾಟ ನಡೆಸಿದ್ದ ಡಾ. ಮೈತ್ರಿ ಅವರ ಮನವಿಯನ್ನು ಸರ್ಕಾರ ಪುರಸ್ಕಾರ ಮಾಡಿದೆ. 2011ರಿಂದ ಕಾನೂನು ಹೋರಾಟ ನಡೆಸಿದ್ದ ಮೈತ್ರಿಯವರನ್ನು ಕೆ ಎ ಎಸ್ ಹುದ್ದೆಗೆ ಪರಿಗಣನೆ ಮಾಡಲಾಗಿದೆ ಎಂದು ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ.

ಲೋಕಾಯುಕ್ತ ವಿಚಾರಣಾ ನಿಬಂಧಕರಾಗಿ ನಿವೃತ್ತ ನ್ಯಾಯಾಧೀಶ ಸಿ. ರಾಜಶೇಖರ್ ಅವರನ್ನು ನೇಮಕ ಮಾಡಲು ಸಂಪುಟ ಒಪ್ಪಿಗೆ ನೀಡಿದೆ.

ಇನ್ನು ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಬೆಂಗಳೂರಿನ ವಾಜಪೇಯಿ ಆರೋಗ್ಯ ಕೇಂದ್ರದಲ್ಲಿ ತೆರೆಯಲು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೆಫ್ರೋ ಯೂರಾಲಜಿಯ ಕಟ್ಟಡ ನಿರ್ಮಿಸಲು ಹೆಚ್ಚುವರಿ ಪರಿಷ್ಕೃತ ಮೊತ್ತದ ಬಿಡುಗಡೆಗೆ ಈ ಬಾರಿಯ ಸಂಪುಟ ಒಪ್ಪಿಗೆ ಸೂಚಿಸಿದೆ.

ಸಾರ್ವಜನಿಕ ಖಾಸಗಿ ಸಹಭಾಗಿತ್ವದ (PPP) ಲೋಕೋಪಯೋಗಿ ಯೋಜನೆಗಳ ಅನುಷ್ಠಾನ ಹಾಗೂ ಪರಿವೀಕ್ಷಣೆಗೆ ಕರ್ನಾಟಕ ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗುವುದು ಎಂದು ಸಚಿವರಾದ ಹೆಚ್.ಕೆ.ಪಾಟೀಲ್ ಮಾಹಿತಿ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು