Friday, June 14, 2024

ಸತ್ಯ | ನ್ಯಾಯ |ಧರ್ಮ

ವರ್ಣಭೇದದ ಹೇಳಿಕೆ : ಬಾಯ್ತಪ್ಪಿನ ಮಾತು ಎಂಬುದನ್ನು ನಂಬಲಾಗದು‌, ಇದೇ ಬಿಜೆಪಿ ಸಿದ್ದಾಂತ : ಕಿಮ್ಮನೆ ರತ್ನಾಕರ್ ವಾಗ್ದಾಳಿ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಈಶ್ವರ್ ಖಂಡ್ರೆ ಅವರ ಮೈಬಣ್ಣದ ಬಗ್ಗೆ ಶಾಸಕ ಆರಗ ಜ್ಞಾನೇಂದ್ರ ಆಗಿರುವ ಮಾತನ್ನು ಬಿಜೆಪಿಯ ಯಾವೊಬ್ಬ ನಾಯಕ ಕೂಡಾ ಖಂಡಿಸಿಲ್ಲ. ಇದನ್ನು ನೋಡಿದರೆ ಬಿಜೆಪಿ ಪಕ್ಷದ ನಾಯಕರ ಮೌನವೇ ಆರಗ ಜ್ಞಾನೇಂದ್ರ ಅವರ ಹೇಳಿಕೆಯನ್ನು ಸಮರ್ಥಿಸುವಂತಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಬಿಜೆಪಿ ಮತ್ತು ಆರಗ ಜ್ಞಾನೇಂದ್ರ ವಿರುದ್ಧ ಕಿಡಿಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರರಾದ ಕಿಮ್ಮನೆ ರತ್ನಾಕರ್ ಅವರು, “ಬಿಜೆಪಿಯ ಬಹುತೇಕ ನಾಯಕರು ಈ ದೇಶದ ಕಾನೂನಿನ ವಿರುದ್ಧವಾಗಿ, ಸಂವಿಧಾನದ ವಿರುದ್ಧವಾಗಿ, ಅಂಬೇಡ್ಕರ್ ವಿರುದ್ಧವಾಗಿ, ಮಹಾತ್ಮಾ ಗಾಂಧೀಜಿ ವಿರುದ್ಧವಾಗಿ ಮಾತನಾಡಿದಾಗಲೂ ಬಿಜೆಪಿ ಇದೇ ಮೌನವನ್ನು ವಹಿಸಿತ್ತು. ಈ ಮೌನ ಬಿಜೆಪಿ ನಾಯಕರ ನಡೆ ಮತ್ತು ನುಡಿಯನ್ನು ಸಮರ್ಥಿಸುವ ಮೌನವಾಗಿದೆ..” ಎಂದು ಕಿಮ್ಮನೆ ರತ್ನಾಕರ್ ಅವರು ಆರಗ ಜ್ಞಾನೇಂದ್ರ ಹೇಳಿಕೆಯನ್ನು ಖಂಡಿಸದ ಬಿಜೆಪಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಈ ಹಿಂದೆ ಬಸನಗೌಡ ಪಾಟೀಲ್ ಯತ್ನಾಳ್, ಅನಂತಕುಮಾರ್ ಹೆಗ್ಡೆ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಹರಡಿದಾಗ, ಸಂವಿಧಾನದ ವಿರುದ್ಧ ಮಾತನಾಡಿದಾಗಲೂ ಬಿಜೆಪಿಯ ಯಾವ ನಾಯಕನೂ ಅದನ್ನು ಖಂಡಿಸಿರಲಿಲ್ಲ. ಯಾಕೆಂದರೆ ಬಿಜೆಪಿ ಪಕ್ಷ ತಾನು ಪಾಲಿಸಿಕೊಂಡು ಬಂದ ಸಂಸ್ಕೃತಿಯನ್ನೇ ಅವರುಗಳು ಮಾತನಾಡಿದ್ದು. ಅದನ್ನು ಈಗ ಆರಗ ಜ್ಞಾನೇಂದ್ರ ಮುಂದುವರೆಸಿಕೊಂಡು ಬಂದಿದ್ದಾರೆ” ಎಂದು ಕಿಮ್ಮನೆ ರತ್ನಾಕರ್ ವಾಗ್ದಾಳಿ ನಡೆಸಿದ್ದಾರೆ.

“ನಿನ್ನೆಯ ದಿನ ಮಲ್ಲಿಕಾರ್ಜುನ ಖರ್ಗೆ ಮತ್ತು ಈಶ್ವರ್ ಖಂಡ್ರೆ ಮೈಬಣ್ಣದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರಗ ಜ್ಞಾನೇಂದ್ರ ಮಾರನೇ ದಿನ ತಾನು ಬಾಯ್ತಪ್ಪಿನಿಂದ ಈ ಮಾತನ್ನು ಆಡಿದ್ದು ಎಂದು ಹೇಳಿದ್ದಾರೆ. ಆದರೆ ಜಾತಿ, ಧರ್ಮ ಹಾಗೂ ವರ್ಣದ ಆಧಾರದಲ್ಲಿ ಸದಾ ದ್ವೇಷವನ್ನೇ ಉಗುಳುವ ಬಿಜೆಪಿ ಸಿದ್ಧಾಂತದ ಆರಗ ಜ್ಞಾನೇಂದ್ರ ಬಾಯ್ತಪ್ಪಿನಿಂದ ಆಡಿದ ಮಾತು ಎಂಬುದನ್ನು ನಂಬಲಾಗದು. ಇದೇ ಬಿಜೆಪಿ ಸಿದ್ಧಾಂತವಾಗಿದೆ. ಇದನ್ನೇ ಆರಗ ಜ್ಞಾನೇಂದ್ರ ಪ್ರತಿಪಾದಿಸಿದ್ದಾರೆ” ಎಂದು ಕಿಮ್ಮನೆ ರತ್ನಾಕರ್ ಕಿಡಿಕಾರಿದ್ದಾರೆ.

“ರಾಹುಲ್ ಗಾಂಧಿಯವರು ಮೋದಿ ಉಪನಾಮ ಬಳಸಿದ ಮಾತ್ರಕ್ಕೆ ಅವರನ್ನು ಅಪರಾಧಿ ಎಂದು ಬಿಂಬಿಸಿ, ಸಂಸತ್ ಸದಸ್ಯತ್ವ ರದ್ದು ಮಾಡಿದ ಬಿಜೆಪಿ, ಅದೇ ಆಧಾರದಲ್ಲಿ ಖರ್ಗೆ ಅವರ ಮೈಬಣ್ಣದ ಬಗ್ಗೆ ಆಡಿರುವ ಮಾತುಗಳು ಅಪರಾಧ ಅಲ್ಲವೇ? ಈ ಬಗ್ಗೆ ವಿಧಾನಸಭೆಯ ಸ್ಪೀಕರ್ ಅವರಿಗೂ ದೂರು ಕೊಡಲಾಗುವುದು. ನ್ಯಾಯಾಲಯದಲ್ಲೂ ಕೇಸು ದಾಖಲಿಸಲಾಗುವುದು ಎಂದ ಕಿಮ್ಮನೆ ರತ್ನಾಕರ್, ಆರಗ ಜ್ಞಾನೇಂದ್ರ ವಿರುದ್ಧ ತೀರ್ಥಹಳ್ಳಿಲ್ಲೂ ಬೃಹತ್ ಪ್ರತಿಭಟನೆ ನಡೆಸಲಾಗುವುದು” ಎಂದು ತಿಳಿಸಿದರು.

ಇನ್ನು ಕಸ್ತೂರಿ ರಂಗನ್ ವರದಿ ವಿರೋಧಿಸಿ ನಡೆದ ಪ್ರತಿಭಟನೆ ಬಗ್ಗೆ ಮಾತನಾಡಿದ ಕಿಮ್ಮನೆ ರತ್ನಾಕರ್, “ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಕ್ಕೆ ತರಲು ಪಟ್ಟು ಹಿಡಿದಿರೋದು ಕೇಂದ್ರ ಬಿಜೆಪಿ ಸರ್ಕಾರ. ಕಾಂಗ್ರೆಸ್ ಹಿಂದಿನಿಂದಲೂ ಆ ವರದಿಯನ್ನು ವಿರೋಧಿಸಿಕೊಂಡೇ ಬಂದಿದೆ. ಆರಗ ಜ್ಞಾನೇಂದ್ರ ಜನರ ದಾರಿ ತಪ್ಪಿಸಲು ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ನಿಜವಾಗಿಯೂ ಇವರು ಪ್ರತಿಭಟನೆ ಮಾಡೋದೇ ಆದರೆ ಅದು ನರೇಂದ್ರ ಮೋದಿ ವಿರುದ್ಧ ಮಾಡಬೇಕು. ಬಿಜೆಪಿ ಎಲ್ಲರನ್ನೂ ಒಟ್ಟಾಗಿ ತಗೆದುಕೊಂಡು ಹೋಗುವ ಮನಸ್ಥಿತಿ ಇರದ ಕಾರಣ ಇಷ್ಟೆಲ್ಲಾ ಗೊಂದಲ ಏರ್ಪಟ್ಟಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ

“ಆರಗ ಜ್ಞಾನೇಂದ್ರ 21 ವರ್ಷಗಳ ಕಾಲ ಶಾಸಕರಾಗಿ ಕೆಲಸ ಮಾಡಿದವರು. ವಿಧಾನಸಭಾ ಸಮಿತಿಗಳ ಸ್ಥಾನಮಾನದಲ್ಲಿ ಇದ್ದವರು, ಸಚಿವರಾಗಿಯೂ ಕೆಲಸ ಮಾಡಿದವರು. ಇವರಿಗೆ ಸಂವಿಧಾನಾತ್ಮಕವಾಗಿ, ಕಾನೂನಿನ ಚೌಕಟ್ಟಿನಲ್ಲಿ, ಜನಪ್ರತಿನಿಧಿ ಎಂಬ ಜವಾಬ್ದಾರಿ ಅರಿತು ಮಾತನಾಡಬೇಕು ಎಂಬುದರ ಅರಿವು ಇಲ್ಲ. ಇವರದ್ದೇನಿದ್ದರೂ RSS ಸಿದ್ಧಾಂತದ ಚಿಂತನಗಂಗಾ ಓದಿಕೊಂಡು ಬಂದವರಾದ್ದರಿಂದ ಎಲ್ಲಿ, ಹೇಗೆ ಮಾತನಾಡಬೇಕು ಎಂಬ ಕನಿಷ್ಟ ಅರಿವು ಇಲ್ಲ. ಹಾಗಾಗಿ ಆರಗ ಜ್ಞಾನೇಂದ್ರ ಅವರ ವರ್ಣಭೇದ ನೀತಿಯ ಮಾತನ್ನು, ಅವರ ಸಂವಿಧಾನ ಉಲ್ಲಂಘನೆಯನ್ನು ಪರಿಗಣಿಸಿ ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕು ಎಂದು ಕಿಮ್ಮನೆ ರತ್ನಾಕರ್ ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು