Wednesday, June 19, 2024

ಸತ್ಯ | ನ್ಯಾಯ |ಧರ್ಮ

ನಾಲ್ವರು ಅಧಿಕಾರಿಗಳ ವಜಾ ಸೇರಿದಂತೆ 16 ಪ್ರಸ್ತಾವನೆಗಳ ಅನುಮೋದನೆಗೆ ಸಂಪುಟ ಒಪ್ಪಿಗೆ : ಸಚಿವ ಹೆಚ್.ಕೆ.ಪಾಟೀಲ್ ಸುದ್ದಿಗೋಷ್ಠಿಯ ಸಂಪೂರ್ಣ ವಿವರ

ಬೆಂಗಳೂರು : ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸಚಿವ ಸಂಪುಟ ಕೈಗೊಂಡ ನಿರ್ಣಯಗಳ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಎಚ್ ಕೆ ಪಾಟೀಲ್ ಅವರು ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದರು.

ಈ ಬಾರಿ ಸಂಪುಟ 16 ನಿರ್ಣಯಗಳನ್ನು ಕೈಗೊಂಡಿದೆ. ಪ್ರಮುಖವಾಗಿ ಲೋಕಾಯುಕ್ತ ಇಲಾಖೆಯಲ್ಲಿ ದಾಖಲಾದ ಪ್ರಕರಣದ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಅಧಿಕಾರಿಗಳ ಅಮಾನತು, ಬೆಂಗಳೂರು ಏರೋಸ್ಪೇಸ್ ಉನ್ನತೀಕರಣ, ಸೈಬರ್ ಕ್ರೈಂ ಅಡಿಯಲ್ಲಿ ಬೇಕಾದ ತಾಂತ್ರಿಕತೆ ಉನ್ನತೀಕರಣ, ಆಸ್ಪತ್ರೆಗಳ ಉನ್ನತೀಕರಣ, ಗೃಹ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವೈದ್ಯಕೀಯ ಇಲಾಖೆ, ಸಾರಿಗೆ ಇಲಾಖೆ, ಸಹಕಾರಿ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ಅಡಿಯಲ್ಲಿ ಹೊಸ ಯೋಜನೆಗಳ ಅನುಷ್ಠಾನಕ್ಕೆ ಸಂಪುಟ ಒಪ್ಪಿಗೆ ಸೂಚಿಸಿದೆ ಎಂದು ಸಚಿವರಾದ ಹೆಚ್.ಕೆ.ಪಾಟೀಲ್ ಅವರು ವಿವರಿಸಿದ್ದಾರೆ.

ಸಂಪುಟ ತಗೆದುಕೊಂಡ ನಿರ್ಣಯಗಳು
1. ಡಾ‌.ಎಂ.ಹೆಚ್ ನಾಗೇಶ್ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು ಇವರು ಬೇಜವಾಬ್ದಾರಿ, ಹಣಕಾಸು ದುರುಪಯೋಗದ ಕಾರಣಕ್ಕೆ ನ್ಯಾಯಾಲಯ ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ಸರ್ಕಾರಿ ಸೇವೆಯಿಂದ ವಜಾ ಮಾಡಲು ಸಂಪುಟ ಅನುಮೋದಿಸಿದೆ.
2. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿ ರಾಮನಗರ ಜಿಲ್ಲಾ ಆಸ್ಪತ್ರೆಯ ಹಿರಿಯ ಸ್ತ್ರೀರೋಗ ತಜ್ಞರಾದ ಡಾ.ಉಷಾ ಕುಂದರಗಿ ಅವರನ್ನು ಲೋಕಾಯುಕ್ತ ಟ್ರಾಫ್ಟ್ ಪ್ರಕರಣದಲ್ಲಿ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಸೇವೆಯಿಂದ ಕಡ್ಡಾಯ ನಿವೃತ್ತಿ ಮಾಡಲಾಗಿದೆ.
3. ಡಾ.ಎಸ್.ಟಿ ನಾಗಮಣಿ, ಸಿ.ವಿ.ರಾಮನ್ ಆಸ್ಪತ್ರೆ ಇಂದಿರಾನಗರ ಅವರನ್ನು ಲೋಕಾಯುಕ್ತ ಟ್ರಾಫ್ಟ್ ಪ್ರಕರಣ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಸೇವೆಯಿಂದ ವಜಾ ಮಾಡಲಾಗಿದೆ.
4. ಬೆಂಗಳೂರಿನಲ್ಲಿ ಏರೋಸ್ಪೇಸಸ್ ಹಾಗೂ ರಕ್ಷಣಾ ಉತ್ಕೃಷ್ಟತಾ ಕೇಂದ್ರದ ಸ್ಥಾಪನೆ ಮಾಡಲು ಸಂಪುಟ ಒಪ್ಪಿಗೆ ಸೂಚಿಸಿದೆ. 391 ಕೋಟಿ ರೂಪಾಯಿ ಒಟ್ಟು ಯೋಜನಾ ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ.
5. ಸೈಬರ್ ಕ್ರೈಂ ಇನ್ವೆಸ್ಟಿಗೇಶನ್ ಅಡಿಯಲ್ಲಿ ಡಸಾಲ್ಟ್ ಸಿಸ್ಟಮ್ ಕಂಪನಿಯ 3ಡಿ ಉತ್ಪನ್ನಗಳ ವಿನ್ಯಾಸ, ಪ್ರತ್ಯುನ್ನೀಕರಣ ಇನ್ನಿತರ ಉತ್ಪನ್ನಗಳಲ್ಲಿ ಹೆಸರು ಮಾಡಿದ ಸಂಸ್ಥೆಯ ಜೊತೆಗೆ ಸರ್ಕಾರ ಕೈ ಜೋಡಿಸಲು ಸಂಪುಟದ ಒಪ್ಪಿಗೆ.
7. ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದ ಒಳಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 140 ಕೋಟಿ ರೂಪಾಯಿಗಳ ವೆಚ್ಚ ಇತ್ತು. ಇದಕ್ಕೆ ಅಡಿಶನ್, ಆಲ್ಟರೇಶನ್ ಮತ್ತು ಎಕ್ಸಿಲೇಶನ್ ಕಾರಣಕ್ಕೆ 34 ಕೋಟಿ ಹೆಚ್ಚುವರಿ ಹಣ ನೀಡಲು ಸಂಪುಟ ಒಪ್ಪಿಗೆ ಸೂಚಿಸಿದೆ. ಒಟ್ಟು 187 ಕೋಟಿ ಹಣ ಮಂಜೂರು.
8. ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೊಸ ಹೆಸರು ನೀಡಲಾಗಿದೆ. ಕರಾವಳಿ ಪ್ರದೇಶಾಭಿವೃದ್ದಿ ಮಂಡಳಿ ಎಂದು ಹೆಸರು ಬದಲಾಯಿಸಲು ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ. ಕರಾವಳಿ ಅಭಿವೃದ್ಧಿಗೆ ಮೂರು ಹೊಸ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆ ಸೇರಿಸಲು ಒಪ್ಪಿಗೆ ಸೂಚಿಸಿದೆ. ಮಲೆನಾಡು ಪ್ರದೇಶಾಭಿವೃದ್ದಿ ಅಡಿಯಲ್ಲಿ ಇದ್ದ 3 ಜಿಲ್ಲೆಗಳ 24 ತಾಲ್ಲೂಕುಗಳನ್ನು ಕರಾವಳಿ ಪ್ರದೇಶಾಭಿವೃದ್ದಿಗೆ ಸೇರಿಸಲು ಒಪ್ಪಿಗೆ ಸೂಚಿಸಿದೆ.
9. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಒಳಗೆ ಎಸ್.ಎನ್.ಹಳ್ಳಿಗುಡಿ ಹಿಂದಿನ ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅವರನ್ನು ಪೋಕ್ಸೋ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ಸಾಭೀತಾಗಿದೆ. ಸೇವೆಯಿಂದ ವಜಾ ಮಾಡಲು ಸಂಪುಟ ಒಪ್ಪಿಗೆ ಸೂಚಿಸಿದೆ.
10. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಒಳಗೆ ವೆಹಿಕಲ್ ಟ್ರಾಕಿಂಗ್ ವ್ಯವಸ್ಥೆಗೆ ಕೇಂದ್ರೀಕೃತ ಕಂಟ್ರೋಲ್ ರೂಂ ಸಹಿತವಾಗಿ ಉನ್ನತೀಕರಣ ಅಳವಡಿಕೆಗೆ 3.74 ಕೋಟಿ ಮೊತ್ತ ಅನುದಾನ ನೀಡಲು ಸಂಪುಟದ ಅನುಮೋದನೆ ಆಗಿದೆ. ಇದರ ಅಡಿಯಲ್ಲಿ ಸುದಾರಿತ ನಿರ್ವಹಣೆ, ಪ್ರಯಾಣ ಸಮಯ, ಕಾಯುವ ಸಮಯ ಕಡಿತಗೊಳಿಸುವ ಉದ್ದೇಶ ಹಾಗೂ ಅಪಘಾತ ಮತ್ತು ಅವಘಡಗಳನ್ನು ಕಡಿಮೆ ಮಾಡಬಹುದು.
11. ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಬೆಂಗಳೂರು ಇವರು ನಬಾರ್ಡ್ ಮೂಲಕ ರಿ ಫೈನಾನ್ಸ್ ಪಡೆಯಲು 1600 ಕೋಟಿ ರೂ ಪಡೆಯಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಬ್ಯಾಂಕ್ ಗೆ 1% ಗ್ಯಾರಂಟಿ ಚಾರ್ಜ್ ನಿಂದ ಎಷ್ಟಕ್ಕೆ ಮಾಡಬೇಕು ಎಂದು ಸಂಪುಟ ಸಮಿತಿ ನಿರ್ಧರಿಸಲಿದೆ.
12. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಮತ್ತು MRI ಸೇವೆಗಳನ್ನು ಸರ್ಕಾರಿ ಖಾಸಗೀ ಸಹಭಾಗಿತ್ವದಲ್ಲಿ 47.41 ಕೋಟಿ ಅಂದಾಜು ವೆಚ್ಚದಲ್ಲಿ ಅನುಷ್ಠಾನ ಮಾಡಲು ಸಂಪುಟ ಅನುಮೋದನೆ ನೀಡಿದೆ.
13. ಗೃಹ ಇಲಾಖೆಯಲ್ಲಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 9 ಕ್ರಿಮಿನಲ್ ಮೊಕದ್ದಮೆಗಳನ್ನು ಅಭಿಯೋಜನೆಗಳಿಂದ ಕೈಬಿಡಲಾಗಿದೆ. (ಕೋವಿಡ್ ನಿಯಮ ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ ಹಮ್ಮಿಕೊಂಡಿದ್ದ ಕಾಂಗ್ರೆಸ್ ಮುಖಂಡರ ಮೇಲೆ ದಾಖಲಾದ ಕ್ರಿಮಿನಲ್ ಮೊಕದ್ದಮೆಗಳು) ರಾಮನಗರ ಜಿಲ್ಲೆ ಐಜನೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳು ಇವು.
14. ಗೃಹ ಇಲಾಖೆಯೊಳಗಡೆ ಸೈಬರ್ ಭದ್ರತಾ ನೀತಿಗೆ ಅನುಮತಿ ನೀಡಲಾಗಿದೆ. ರಾಜ್ಯದಲ್ಲಿ ಸೈಬರ್ ಕ್ರೈಂ ಜಾಸ್ತಿ ಆಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ಥಳೀಯ ಜನಪ್ರತಿನಿಧಿಗಳು, ಶೈಕ್ಷಣಿಕ ಸಂಸ್ಥೆಗಳು, ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಜಾಗೃತಿ ಅಭಿಯಾನ ಮೂಡಿಸುವ ಉದ್ದೇಶ ಹೊಂದಿದೆ.
15. ಮಹಿಳಾ ಮತ್ತು ಮಕ್ಕಳಾಭಿವೃದ್ದಿ ಹಾಗೂ ವಿಕಲಚೇತನರ ಹಿರಿಯ ನಾಗರೀಕರ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಅಂಗನವಾಡಿ ಕೇಂದ್ರಗಳ ಮೂಲಕ ಪೂರಕ ಪೌಷ್ಟಿಕ ಆಹಾರ ತಯಾರಿಕೆಗೆ ಪಾಮ್ ಆಯಿಲ್ ಬದಲು, ಸೂರ್ಯಕಾಂತಿ ಎಣ್ಣೆ ಬಳಸಲು ಸಂಪುಟದ ಅನುಮೋದನೆ. ಒಟ್ಟು 66.04 ಕೋಟಿ ವೆಚ್ಚದ ಒಳಗೆ ಖರೀದಿ ನಡೆಯಲಿದೆ.
16. ಬೆಂಗಳೂರು ಮಹಾನಗರ ಪಾಲಿಕೆಯ ಕೆಲವು ಕಾಯ್ದೆಗಳನ್ನು ರಾಜ್ಯದ ಇತರೆ ಮಹಾನಗರ ಪಾಲಿಕೆಗಳಿಗೂ ವಿಸ್ತರಿಸಿ, ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆ, ಪುರಸಭೆ ಕಾಯ್ದೆಗೆ ಅಳವಡಿಸಲು ಸಾದಕ ಬಾದಕ ಪರಿಶೀಲಿಸಲು ಸಚಿವ ಸಂಪುಟದ ಉಪಸಮಿತಿ ರಚಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ.

ಗುತ್ತಿಗೆದಾರರ ಬಿಲ್ ಪಾವತಿ ಬಗ್ಗೆ ಸಂಪುಟದಲ್ಲಿ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬ ವರದಿಗಾರರ ಪ್ರಶ್ನೆಗೆ ಈಗಾಗಲೇ ಸಂಬಂಧಿಸಿದ ಸಚಿವರು ಉತ್ತರಿಸಿದ್ದಾರೆ. ಹಾಗಾಗಿ ಈ ಬಗ್ಗೆ ಉತ್ತರಿಸುವ ಅಗತ್ಯ ಇಲ್ಲ ಎಂದು ಸಚಿವರಾದ ಹೆಚ್.ಕೆ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು