Friday, June 14, 2024

ಸತ್ಯ | ನ್ಯಾಯ |ಧರ್ಮ

ಸಿನಿಮಾ | ಎಲ್ಲಾ ವರ್ಗದ  ಪ್ರೇಕ್ಷಕರನ್ನು ಮುಟ್ಟುವ ʼಜೈಲರ್ʼ

ದೇಶದಾದ್ಯಂತ ರಜನೀಕಾಂತ್‌, ಶಿವರಾಜ್‌ ಕುಮಾರ್ ನಟನೆಯ ಜೈಲರ್‌ ಸಿನೆಮಾ ತೆರೆಯ ಮೇಲೆ ಬಂದಿದೆ.‌ ಜೈಲರ್‌ ಹೇಗಿದೆ? ಮನೋಜ್ ಆರ್ ಕಂಬಳಿಯವರ ರಿವ್ಯೂ ಓದಿ.

ತಮ್ಮ ವಿಶೇಷ ಅಭಿನಯದ ಮೂಲಕವೇ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದಂತಹ ಹೊಸ ಛಾಪನ್ನು ಮೂಡಿಸಿದ ಕಲಾವಿದ ಸೂಪರ್ ಸ್ಟಾರ್ ರಜನಿಕಾಂತ್. ಅವರ ಬಹಳಷ್ಟು ಸಿನಿಮಾಗಳಲ್ಲಿ ಮಾತು ಕಡಿಮೆ, ಚಟುವಟಿಕೆ ಜಾಸ್ತಿ. ಒಂದು ರೀತಿಯಲ್ಲಿ ಕೈಗೆ ಬಂದರೆ ಕನ್ನಡಕ ಎದುರಾಳಿ ನಡುಕ. ಅದೇ ರೀತಿ ಈ ಸಿನಿಮಾದಲ್ಲೂ (ಜೈಲರ್) ಮುಂದುವರೆದಿದೆ.

ಜೈಲರ್ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ.  ಚಿತ್ರಕ್ಕೆ ನೆಲ್ಸನ್ ಆ್ಯಕ್ಷನ್ ಕಟ್ ಹೇಳಿದ್ದಾರೆ.  ಮುಖ್ಯ ತಾರಾಗಣದಲ್ಲಿ ರಜನಿಕಾಂತ್, ವಿನಾಯಕನ್, ರಮ್ಯಾಕೃಷ್ಣ, ಶಿವರಾಜ್ ಕುಮಾರ್, ಜಾಕಿ ಶ್ರಾಫ್, ಮೋಹನ್ ಲಾಲ್, ಯೋಗಿ ಬಾಬು, ಸುನೀಲ್, ವಸಂತ್ ರವಿ ಇದ್ದಾರೆ.

ನಿರ್ದೇಶಕ ನೆಲ್ಸನ್‌ ರವರು ರಜನಿಕಾಂತ್‌ ಇಟ್ಟುಕೊಂಡು ಒಂದು ಮಾಸ್‌ ಸಿನಿಮಾ ಮಾಡಲು ಹೋಗಿದ್ದಾರೆ. ಒಂದು ರೀತಿಯಲ್ಲಿ ಏನೋ ಮಾಡಲು ಹೋಗಿ ಇನ್ನೇನೋ ಮಾಡಿದ್ದಾರೆ ಅನ್ನಿಸುತ್ತದೆ. ಒಂದು ಕಾಲದಲ್ಲಿ ರಜನಿಕಾಂತ್‌ ಜೈಲರ್‌ ಆಗಿದ್ದು, ನಂತರ ತನ್ನ ಮಗನು ಪೊಲೀಸ್‌ ಆಫೀಸರ್‌ ಆಗಿ ಯಾವುದೋ ಕೇಸ್‌ ಇನ್ವೆಷ್ಟಿಗೇಟ್‌ ಮಾಡುವ ಸಂದರ್ಭದಲ್ಲಿ ಕಳೆದು ಹೋದಾಗ, ರಜನಿಕಾಂತ್‌ ಮಗನನ್ನು ಬಿಡಿಸಿಕೊಂಡು ಬರಲು ತಾನು ಎಷ್ಟು ಪಂಟರ್‌ ಎಂದು ತೋರಿಸಿರುವುದೇ ಕಥೆಯ ಹಂದರ.

ಟೈಗರ್‌ ಮುತ್ತುವೇಲ್‌ ಪಾಂಡಿಯನ್‌ ಎಂಬ ನಿವೃತ್ತ ಜೈಲರ್ ಪಾತ್ರದಲ್ಲಿ ರಜನಿಕಾಂತ್‌ ಕಾಣಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಬಹಳಷ್ಟು ಅಬ್ಬರಿಸುತ್ತಿದ್ದ ವ್ಯಕ್ತಿ ಈಗ ತುಂಬಾ ಸೈಲೆಂಟ್‌ ಆಗಿದ್ದು, ಮಗನು ಕಾಣೆಯಾದ ಆನಂತರದಿಂದ ತಾನು ಎಷ್ಟು ವೈಲೆಂಟ್ ಎಂದು ತೋರಿಸಿದ್ದಾರೆ.

ನಿರ್ದೇಶಕ ನೆಲ್ಸನ್ ಸಿನಿಮಾಗಳಲ್ಲಿ ಮಾಸ್ ಮತ್ತು ಕ್ರೈಂ ಜೊತೆಗೆ ಡಾರ್ಕ್ ಹ್ಯೂಮರ್ ಇರುವುದು ನಿಶ್ಚಿತ. ಚಿತ್ರದಲ್ಲಿ ಯಾವ ಪಾತ್ರವೇ ಕೊಲೆಯಾಗಲಿ ರಕ್ತವು ಪರದೆಯ ಮೇಲೆ ಬರಲೇಬೇಕು. ಇದನ್ನು ಜೈಲರ್ ನಲ್ಲಿಯೂ ಅಳವಡಿಸಿದ್ದಾರೆ. 

ಮುಖ್ಯವಾಗಿ ಅತಿಥಿ ಪಾತ್ರಗಳು ಚಿತ್ರದಲ್ಲಿ ಹೊಸ ಬೆಳಕನ್ನು ಬೀರುತ್ತವೆ. ಅಂದರೆ ಈಗ ಬರುತ್ತಿರುವ ಸಾಕಷ್ಟು ಚಿತ್ರಗಳು ಪ್ಯಾನ್ ಇಂಡಿಯಾವನ್ನು ತಲೆಯಲ್ಲಿ ಕಟ್ಟಿಕೊಂಡು ಐದಾರು ಭಾಷೆಯಲ್ಲಿ ರಿಲೀಸ್ ಆಗುತ್ತಿವೆ. ಈ ಚಿತ್ರವು ಪ್ಯಾನ್ ಇಂಡಿಯಾ ಮಾದರಿಯಲ್ಲಿಯೇ ಇದೆ. ಆದರೆ ಇದರ ವಿಶೇಷವೆಂದರೆ ಪ್ಯಾನ್ ಇಂಡಿಯಾ ನಟರನ್ನು ಒಂದೇ ತೆರೆಯಲ್ಲಿ ತಂದಿರುವುದು. ರಜನಿಕಾಂತ್, ತಮಿಳುನಾಡು ಸುತ್ತಮುತ್ತಲಿನ ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಅಲ್ಲಿಯ ನಟರನ್ನು ಭೇಟಿ ಮಾಡುವುದು ಮತ್ತು ಅವರ ಭಾಷೆಯಲ್ಲಿ ಮಾತನಾಡುವುದು ವಿಶೇಷ. ಕರ್ನಾಟಕದಲ್ಲಿ  ಶಿವರಾಜ್ ಕುಮಾರ, ಕಿಶೋರ್, ಕೇರಳದಲ್ಲಿ ಮೋಹನ್ ಲಾಲ್, ತೆಲುಗಿನ ನಾಗ ಬಾಬು, ಸುನಿಲ್ ಕೂಡ ಇದ್ದಾರೆ. ಬಿಹಾರಿನಲ್ಲಿ ಜಾಕಿಶ್ರಾಫ್ ಸಿಗುತ್ತಾರೆ. ಇವೆಲ್ಲವೂ ಸಹ ಪ್ಯಾನ್ ಇಂಡಿಯಾ ತಲುಪಲು ಇನ್ನಷ್ಟು ಸುಲಭವಾಗಬಹುದು ಎಂಬ ಉದ್ದೇಶದಿಂದಲೇ ಬಳಸಿರುವಂತಿದೆ. 

ಇತ್ತಿಚೆಗೆ ವೈರಲ್ ಆದ ‘ಕಾವಲಯ್ಯ’ ಸಾಂಗ್ ಇದೇ ಚಿತ್ರದ್ದು. ಈ ಹಾಡಿನಲ್ಲಿ ತಮನ್ನಾ ಭಾಟಿಯ ಅವರ ಡ್ಯಾನ್ಸ್ ಸಾಕಷ್ಟು ವೈರಲ್ ಆಗಿತ್ತು. ಆದರೆ ಚಿತ್ರದಲ್ಲಿ ತಮನ್ನಾ ಭಾಟಿಯ ಪಾತ್ರ ಇರುವಿಕೆಗೆ ಸಂಬಂಧವಿಲ್ಲ ಅನ್ನಿಸುತ್ತದೆ. 

ರಜನಿಕಾಂತ್ ಅವರ  ವಯಸ್ಸಿಗೆ  ಸಹಜವಾದ  ಪಾತ್ರವನ್ನೆ ಕಟ್ಟಿಕೊಟ್ಟಿರುವುದು ವಿಶೇಷ. ಇದು ರಜನಿಕಾಂತ್ ಫ್ಯಾನ್‌ ಗಳಿಗೆ ಸ್ವಲ್ಪವೂ ಬೇಸರ ತರಿಸುವುದಿಲ್ಲ. ಎಲ್ಲಾ ಚಿತ್ರಗಳಂತೆ ರಜನಿಕಾಂತ್ ಕನ್ನಡಕ ಹಾಕುವುದು, ಸಿಗರೇಟ್ ಹಚ್ಚುವುದು, ಇನ್ನು ಫೈಟ್ ಸೀನ್‌ಗಳಲ್ಲಿ ಆದೇ ಸ್ಟೈಲ್ ಅನ್ನು ಮುಂದುವರಿಸಿದ್ದಾರೆ. ಬಹಳ ಮುಖ್ಯವಾಗಿ ರಜನಿಕಾಂತ್ ಒನ್ ಮ್ಯಾನ್ ಶೋ ರೀತಿಯಲ್ಲಿ ಕಂಡರೂ ಅವರ ಪಾತ್ರವನ್ನು ಸರಿದೂಗಿಸಲು ಸಾಕಷ್ಟು ಪಾತ್ರಗಳು ಜೊತೆಯಾಗಿ ನಿಲ್ಲುತ್ತವೆ. ತಂದೆ  ಮಗನ ಎಮೋಷನ್ ಸೀನ್ ನೋಡುಗರನ್ನು ಭಾವುಕರಾಗಿಸುತ್ತದೆ.

ಚಿತ್ರದಲ್ಲಿ ಮ್ಯೂಸಿಕ್ ಮತ್ತು ಕ್ಯಾಮೆರಾ ಕೆಲಸ ಜನರನ್ನು ಹಿಡಿದಿಡುತ್ತದೆ. ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಹಿನ್ನೆಲೆ ಸಂಗೀತದ ಮೂಲಕ ಪ್ರೇಕ್ಷಕರನ್ನು ಇನ್ನೊಂದು ಲೋಕಕ್ಕೆ ಕರೆದೊಯ್ಯುತ್ತಾರೆ. ವಿಜಯ್ ಕಾರ್ತಿಕ್ ಕಣ್ಣನ್ ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಒಂದು ಮಾಸ್ ಲೋಕವನ್ನೆ ಸೃಷ್ಟಿಸಿದ್ದಾರೆ.

ಮನೋಜ್ ಆರ್ ಕಂಬಳಿ

ಇದನ್ನೂ ಓದಿ‘ಗುಲಾಬಿ ಚೌಕಟ್ಟಿ’ನಲ್ಲಿಯೇ ಲಿಂಗ ಸಮಾನತೆಯ ಚರ್ಚೆಗೆ ಆಹ್ವಾನಿಸುವ ಬಾರ್ಬಿ..

Related Articles

ಇತ್ತೀಚಿನ ಸುದ್ದಿಗಳು