Saturday, June 15, 2024

ಸತ್ಯ | ನ್ಯಾಯ |ಧರ್ಮ

‌ಉತ್ತರಪ್ರದೇಶ | ಬುಲ್ಡೋಜರ್‌ ಅಡಿ ನೆಲಸಮವಾದ ಗಾಂಧಿ ಪರಂಪರೆಯ ಪ್ರತೀಕ

ಎಲ್ಲದಕ್ಕೂ ಬುಲ್ಡೋಜರ್‌ ಮೂಲಕವೇ ಪರಿಹಾರ ಹುಡುಕುವ ಉತ್ತರ ಪ್ರದೇಶದ ಆದಿತ್ಯನಾಥ್‌ ಸರ್ಕಾರ ಈಗ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪರಂಪರೆಯ ಪ್ರತೀಕವಾಗಿದ್ದ ಕಟ್ಟಡವೊಂದನ್ನು ಅದೇ ಬುಲ್ಡೋಜರ್‌ ಬಳಸಿ ಕೆಡವಿದ್ದಾರೆ. ಈ ಬಾರಿ ಎಂದಿನಂತೆ ರಾಜ್ಯ ಸರ್ಕಾರ ಬುಲ್ಡೋಜರ್‌ಗಳನ್ನು ಕಳುಹಿಸಿದ್ದರೂ ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ಈ ಧ್ವಂಸ ಕಾರ್ಯವನ್ನು ಮಾಡಲಾಗಿದೆ. ವಾರಣಾಸಿಯಲ್ಲಿ ಗಾಂಧಿವಾದಿ ಸಮಾಜ ಸೇವಾ ಸಂಸ್ಥೆ ‘ಅಖಿಲ ಭಾರತ ಸರ್ವ ಸೇವಾ ಸಮಿತಿ’ಗೆ ಸೇರಿದ 12 ಕಟ್ಟಡಗಳನ್ನು ಕೇಂದ್ರ ಸರ್ಕಾರ ಶನಿವಾರ ಬುಲ್ಡೋಜರ್‌ ಬಳಸಿ ಕೆಡವಿ ಹಾಕಿದೆ.

ಇದಕ್ಕೆ ಅಡ್ಡ ಬಂದ ಗಾಂಧಿವಾದಿಗಳನ್ನು ವಶಕ್ಕೆ ಪಡೆದು ಸ್ವತಂತ್ರ ಹೋರಾಟಗಾರ ಜಯಪ್ರಕಾಶ ನಾರಾಯಣ ಅವರು ಸ್ಥಾಪಿಸಿದ್ದ ಗಾಂಧಿ ವಿದ್ಯಾ ಸಂಸ್ಥಾನ ಸೇರಿದಂತೆ ಹಲವು ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು.

ಈ ಕಟ್ಟಡಗಳಿಗೆ ಸೇರಿದ ಜಾಗ ತಮಗೆ ಸೇರಿದ್ದು ಎಂದು ರೈಲ್ವೇ ಇಲಾಖೆ ಹೇಳುತ್ತಿದ್ದರೆ, ಗಾಂಧಿವಾದಿಗಳು ಅಂದಿನ ಕೇಂದ್ರ ಸರಕಾರದಿಂದ ಖರೀದಿಸಿದ್ದೇವೆ ಎಂದು ಹೇಳುತ್ತಲೇ ಬಂದಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್, ಅಲಹಾಬಾದ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಕೂಡ ರೈಲ್ವೆ ಪರವಾಗಿ ತೀರ್ಪು ನೀಡಿದ್ದವು ಮತ್ತು ಇದರೊಂದಿಗೆ ಆಡಳಿತವು ಪೊಲೀಸ್ ಭದ್ರತೆಯ ನಡುವೆ ಈ ಕಟ್ಟಡಗಳನ್ನು ಕೆಡವಿತು. ಏತನ್ಮಧ್ಯೆ, ಈ ಸಂಸ್ಥೆಯ ಕಟ್ಟಡಗಳನ್ನು ನೆಲಸಮಗೊಳಿಸಿದ್ದನ್ನು ಪ್ರಮುಖ ರಾಜಕಾರಣಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದ್ದಾರೆ.

ಈ ಸಂಬಂಧ, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ದೇಶದಲ್ಲಿ ಮಹಾತ್ಮರ ಹೆಸರನ್ನು ಅಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಸರ್ವಸೇವಾ ಸಂಘದ ದ್ವಾರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹತ್ತು ಗಾಂಧಿವಾದಿಗಳನ್ನು ಬಂಧಿಸಲಾಯಿತು. ಈ ನೆಲಸಮ ಕಾರ್ಯ ಇತಿಹಾಸದಲ್ಲಿ ನಾಚಿಕೆಗೇಡಿನ ಘಟನೆಯಾಗಿ ಉಳಿಯುತ್ತದೆ ಎಂದು ಸರ್ವ ಸೇವಾ ಸಂಘದ ಅಧ್ಯಕ್ಷ ಚಂದನ್ ಪಾಲ್ ಟೀಕಿಸಿದರು.

ಮತ್ತೊಬ್ಬ ನಾಯಕ ರಾಮ್ ಧೀರಜ್ ಬಂಧನಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಉತ್ತರ ಪ್ರದೇಶ ಸರ್ಕಾರ ಮತ್ತು ಭಾರತೀಯ ರೈಲ್ವೆ ಗಾಂಧಿಯನ್ನು ಗುರಿಯಾಗಿಸಿಕೊಂಡು ಕೆಟ್ಟ ರಾಜಕೀಯದಲ್ಲಿ ತೊಡಗಿವೆ. ಆಡಳಿತಗಳು ರೈಲ್ವೇ ಜೊತೆಗಿನ ಸಂಘದ ಭೂ ವ್ಯವಹಾರವನ್ನು, ನಕಲಿ ದಾಖಲೆಗಳ ಸಹಾಯ ಪಡೆದು ಅಕ್ರಮವೆಂದು ನ್ಯಾಯಾಲಯದಲ್ಲಿ ಸಾಬೀತುಪಡಿಸಿದ್ದಾರೆ” ಎಂದು ಹೇಳಿದರು.

ಆದರೆ, ನಾವು ಕೇವಲ ನ್ಯಾಯಾಲಯದ ಆದೇಶವನ್ನು ಪಾಲಿಸುತ್ತಿದ್ದೇವೆ ಎಂದು ಕೆಡವುವ ಕಾರ್ಯದಲ್ಲಿ ಭಾಗವಹಿಸಿದ್ದ ವಾರಣಾಸಿ ಆಯುಕ್ತ ಕೌಶಲ್ ರಾಜ್ ಶರ್ಮಾ ಹೇಳಿದ್ದಾರೆ.

ಮೇ ತಿಂಗಳಿನಲ್ಲಿ ಗಾಂಧಿ ವಿದ್ಯಾ ಸಂಸ್ಥಾನವನ್ನು ತೆರವು ಮಾಡುವಂತೆ ಸರ್ವಸೇವಾ ಸಂಘಕ್ಕೆ ಸರ್ಕಾರ ನೋಟಿಸ್ ನೀಡಿತ್ತು. ಇದನ್ನು ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ ಸಂಸ್ಥೆಗೆ ಹಸ್ತಾಂತರಿಸುವುದಾಗಿ ಪ್ರಕಟಿಸಲಾಗಿದೆ. ಆದರೆ ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್) ನಿಯಂತ್ರಣದಲ್ಲಿದೆ ಎಂದು ಗಾಂಧಿವಾದಿಗಳು ಆರೋಪಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು