Friday, June 14, 2024

ಸತ್ಯ | ನ್ಯಾಯ |ಧರ್ಮ

ವಿಶ್ವವಿದ್ಯಾಲಯಗಳು ಬರಿಯ ಮೂಢ ನಂಬಿಕೆಯಿಂದ ಕೂಡಿದ ಪ್ರಜೆಗಳನ್ನು ಸೃಷ್ಟಿಸುವುದರಿಂದ ಏನು ಪ್ರಯೋಜನ?: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ವೈಜ್ಞಾನಿಕ ಮನೋಭಾವ, ವೈಚಾರಿಕ ಚಿಂತನೆಯಿಲ್ಲದ, ಅಜ್ಞಾನ ತುಂಬಿದ ಪದವೀಧರರು ವಿಶ್ವವಿದ್ಯಾಲಯದಿಂದ ಹೊರಬರುವುದರಿಂದ ಏನು ಪ್ರಯೋಜನ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಅಂತವರಿಂದ ದೇಶಕ್ಕೆ ಮತ್ತು ರಾಜ್ಯಕ್ಕೆ ಮತ್ತು ಸಮಾಜಕ್ಕೆ ಏನೂ ಉಪಯೋಗವಿಲ್ಲ. ಪದವೀಧರರನ್ನು ವೈಜ್ಞಾನಿಕ ಮನೋಭಾವ ಹೊಂದಿರುವ ವ್ಯಕ್ತಿಗಳಾಗಿ ತಯಾರಿಸಬೇಕು ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ ಸೂಚನೆ ನೀಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ತಮ್ಮ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಹಾಗೂ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ವಿಶ್ವವಿದ್ಯಾನಿಲಯಗಳು ದೇಶವನ್ನು ವೈಜ್ಞಾನಿಕವಾಗಿ, ಬೌದ್ಧಿಕವಾಗಿ, ಆರ್ಥಿಕವಾಗಿ ಮತ್ತು ಸುಸಂಸ್ಕೃತ ರೀತಿಯಲ್ಲಿ ಮುನ್ನಡೆಸುವ ಪದವೀಧರರನ್ನು ಸಜ್ಜುಗೊಳಿಸಬೇಕು. ಅಜ್ಞಾನ ತುಂಬಿಕೊಂಡು ಹೊರಬಂದರೆ ದೇಶಕ್ಕಾಗಲಿ ರಾಜ್ಯಕ್ಕಾಗಲಿ ಅಥವಾ ಅವರ ಭವಿಷ್ಯಕ್ಕಾಗಲಿ ಉಪಯೋಗವಾಗುವುದಿಲ್ಲ ಎಂದರು.

ಸರ್ಕಾರಿ ಕಾಲೇಜುಗಳು, ಖಾಸಗಿ ಕಾಲೇಜುಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರ ಜಿಇಆರ್ ಅನುಪಾತವನ್ನು ಯುಯುಸಿಎಂಎಸ್‌ನಲ್ಲಿ ದಾಖಲಿಸಲಾಗುವುದು, ಮಾಹಿತಿ ಸಿದ್ಧವಾಗಿರಬೇಕು ಎಂದು ಈ ಸಂದರ್ಭದಲ್ಲಿ ಸೂಚಿಸಿದರು.

ಜಿಇಆರ್ ದರ ಕಡಿಮೆ ಇರುವ ಚಾಮರಾಜನಗರ, ಯಾದಗಿರಿ, ಹಾಸನ, ಕೊಪ್ಪಳ, ಕೊಡಗು ಮೊದಲಾದ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಅನುಪಾತ ಹೆಚ್ಚಿಸಲು ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಅಗತ್ಯ ಕ್ರಮಗಳು ಮತ್ತು ಸಂಶೋಧನೆಗೆ ಮುಂದಾಗುವಂತೆ ಮುಖ್ಯಮಂತ್ರಿ ಸೂಚಿಸಿದರು. ರಾಜ್ಯದ ಅತ್ಯಂತ ಹಳೆಯ ಹಾಗೂ ಮೊದಲ ವಿವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು