Tuesday, June 18, 2024

ಸತ್ಯ | ನ್ಯಾಯ |ಧರ್ಮ

ತನ್ನ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ಕತ್ತು ಸೀಳಿ ಸಾಯಿಸಿದ ಬಾಲಕ

ಹೊಸ ದೆಹಲಿ, ಸೆಪ್ಟೆಂಬರ್.4: ದೆಹಲಿಯ ಸರಕಾರಿ ಶಾಲೆಯ 8ನೇ ತರಗತಿಯಲ್ಲಿ ಓದುತ್ತಾ ಚಿಂದಿ ಹಾಯುವ ಕೆಲಸ ಮಾಡುತ್ತಿದ್ದ 14 ವರ್ಷದ ಬಾಲಕನೊಬ್ಬ ಎರಡು ತಿಂಗಳ ಹಿಂದೆ ಬೇಟಿಯಾಗಿದ್ದ 28 ವರ್ಷದ ಯುವಕನ ಕತ್ತು ಸೀಳಿ ಕೊಲೆ ಮಾಡಿದ್ದ. ತನ್ನ ತಂದೆ ನಾಪತ್ತೆಯಾದ ನಂತರ ನಾಲ್ವರು ಒಡಹುಟ್ಟಿದವರನ್ನು ನೋಡಿಕೊಂಡು ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದ ಈ ಬಾಲಕ ಹೊಟ್ಟೆ ತುಂಬಿಸಿಕೊಳ್ಳಲು ಚಿಂದಿ ಹಾಯುವ ಕೆಲಸ ಮಾಡುತ್ತಿದ್ದ. ಈ ಮಧ್ಯೆ ಈತ ಮಹಮ್ಮದ್‌ ಎಂಬಾತನನ್ನು ಹತ್ಯೆ ಮಾಡಿದ್ದು, ಈಗ ಈ ಹತ್ಯೆಯ ಹಿಂದಿರುವ ಆಘಾತಕಾರಿ ಕಾರಣ ಬೆಳಕಿಗೆ ಬಂದಿದೆ.

ಎರಡು ತಿಂಗಳ ಹಿಂದೆ ಶಿಕ್ಷಕನಾಗಿದ್ದ ಮಹಮ್ಮದ್‌ ವಸೀಮ್‌ ಆಲಿಯಾಸ್‌ ಅಲ್ತಾಫ್ ಎಂಬಾತನನ್ನು ಪಾರ್ಕೊಂದರಲ್ಲಿ ಬೇಟಿ ಮಾಡಿದ್ದ. ಅಲ್ತಾಫ್ ಬಾಲಕನಿಗೆ ತಿಂಡಿ ತಿನಿಸುಗಳನ್ನು ನೀಡಿ ಸ್ನೇಹ ಬೆಳೆಸಿಕೊಂಡಿದ್ದ. ನಂತರ ಬಾಟ್ಲಾ ಹೌಸ್‌ನಲ್ಲಿರುವ ಖಾಲಿ ಜಾಗವೊಂದರಲ್ಲಿ ಆಮಿಷ ಒಡ್ಡಿ ಆ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿಕೊಂಡು, ಪದೇ ಪದೇ ಭೇಟಿಯಾಗುವಂತೆ ಬ್ಲಾಕ್ ಮೇಲ್ ಮಾಡಿದ್ದಾನೆ.

ಎರಡು ತಿಂಗಳ ಕಾಲ, ಆಗಸ್ಟ್ 30 ರವರೆಗೆ ಬಾಲಕನ ಮೇಲೆ ಸತತವಾಗಿ ಲೈಂಗಿಕ ದೌರ್ಜನ್ಯ ಎಸಗಿದು, ಇದರಿಂದ ಬೇಸತ್ತ ಬಾಲಕ ಅಲ್ತಾಫ್‌ನ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ.
ಅದೇ ದಿನ ಜಾಮಿಯಾ ನಗರದ ಒಂದು ಕೋಣೆಯೊಂದರಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ಅಲ್ತಾಫ್‌ ಬಗ್ಗೆ ಪಿಸಿಆರ್ ಕರೆ ಮಾಡಿದ್ದರು ಎಂದು ಡಿಸಿಪಿ (ಆಗ್ನೇಯ) ರಾಜೇಶ್ ಡಿಯೋ ಹೇಳಿದ್ದಾರೆ.

“ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಕತ್ತು ಸೀಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಮಾರು 28 ವರ್ಷ ವಯಸ್ಸಿನ ವ್ಯಕ್ತಿಯ ಮೃತದೇಹ ಕಂಡುಬಂದಿದೆ. ಮೃತನನ್ನು ಮೊಹಮ್ಮದ್ ವಸೀಮ್‌ ಆಲಿಯಾಸ್‌ ಅಲ್ತಾಫ್‌ ಎಂದು ಗುರುತಿಸಲಾಗಿದೆ. ಶಿಕ್ಷಕನಾಗಿದ್ದ ಈತ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದ. ಈ ಆಸ್ತಿ ಅಲ್ತಾಫ್ ಕುಟುಂಬಕ್ಕೆ ಸೇರಿದ್ದು, ಕೆಲ ದಿನಗಳ ಹಿಂದೆ ಬಾಡಿಗೆಗೆ ಕೊಡಲಾಗಿತ್ತು. ಹಾಗಾಗಿ ಅಲ್ತಾಫ್ ತಮ್ಮ ಕುಟುಂಬದೊಂದಿಗೆ ಝಾಕಿರ್ ನಗರದಲ್ಲಿನ ಮನೆಯಲ್ಲಿ ವಾಸಿಸುತ್ತಿದ್ದ ಎಂದು ಡಿಸಿಪಿ ತಿಳಿಸಿದ್ದಾರೆ.

ಅವಿವಾಹಿತರಾಗಿದ್ದ ಅಲ್ತಾಫ್ ತನ್ನ ಬೇಡಿಕೆಗಳಿಗೆ ಮಣಿಯದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ‌ ಆ ವಿಡಿಯೋ ಹರಿಯಬಿಡುವುದಾಗಿ ಅಪ್ರಾಪ್ತನಿಗೆ ಬೆದರಿಕೆ ಹಾಕುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದ್ದು, ಮೃತನ ಫೋನನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದೊಂದೇ ಪ್ರಕರಣವಲ್ಲ!
ಅಪ್ರಾಪ್ತ ಬಾಲಕರಿಗೆ ಲೈಂಗಿಕ ಕಿರುಕುಳ ನೀಡುವುದು, ಅವರನ್ನು ಬೆದರಿಸಿ ರೇಪ್‌ ಮಾಡುವ ಪ್ರಕರಣಗಳು ನಡೆಯುತ್ತಿದ್ದರೂ, ಪ್ರಕರಣ ದಾಖಲಾಗದೆ ಬೆಳಕಿಗೆ ಬರುತ್ತಿಲ್ಲ. ಆತ್ಮ ರಕ್ಷಣೆಗಾಗಿ ಹತ್ಯೆ ಮಾಡುವುದು ಇದೇ ಮೊದಲಲ್ಲ.

2023ರ ಏಪ್ರಿಲ್‌ನಲ್ಲಿ ಮುಂಬೈನಲ್ಲಿ ನಟನಾಗುವ ತನ್ನ ಕನಸನ್ನು ಹೊಂದಿದ್ದ 16 ವರ್ಷದ ಹುಡುಗನೊಬ್ಬ ಮನೆ ಬಿಟ್ಟು ಓಡಿಹೋಗಿದ್ದ. ಈತ ಎರಡು ತಿಂಗಳ ಕಾಲ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಕೊಂದಿರುವುದು ವರದಿಯಾಗಿತ್ತು.

ಉತ್ತರ ದೆಹಲಿಯ ಕೆಂಪು ಕೋಟೆ ಬಳಿ ಆ ವ್ಯಕ್ತಿಯ ಶವ ಪತ್ತೆಯಾಗಿತ್ತು. ಹುಡುಗ ಶಂಭು ಎಂಬಾತನನ್ನು ಓಲ್ಡ್‌ ಡೆಲ್ಲಿ ರೈಲು ನಿಲ್ದಾಣದಲ್ಲಿ ಭೇಟಿಯಾಗಿ ಆತನೊಂದಿಗೆ ತೆರಳಿದ್ದ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿತ್ತು. ಶಂಭು ಹುಡುಗನಿಗೆ ಹಲವು ಬಾರಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದು, ಏಪ್ರಿಲ್ 14 ರಂದು ಶಂಭುವಿನ ತಲೆಗೆ ಬಡಿಗೆಯಿಂದ ಹೊಡೆದು ಕೊಂದಿದ್ದಾನೆ.

2022ರಲ್ಲಿ ಸುಮಾರು ಆರು ತಿಂಗಳ ಕಾಲ ತನ್ನ ಮೇಲೆ ಅತ್ಯಾಚಾರವೆಸಗುತ್ತಿದ್ದ ವ್ಯಕ್ತಿಯನ್ನು ಕೊಂದ ಆರೋಪದ ಮೇಲೆ 13 ವರ್ಷದ ಬಾಲಕಿಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದರು. ಕೊಲೆಗೀಡಾದ ವ್ಯಕ್ತಿ ಇತರ ಪುರುಷರೊಂದಿಗೆ ದೈಹಿಕ ಸಂಬಂಧ ಮಾಡುವಂತೆ ಒತ್ತಾಯಿಸಿದ್ದ. ನಿರಂತರ ಹಿಂಸೆ ಮತ್ತು ಬ್ಲ್ಯಾಕ್‌ಮೇಲ್‌ನಿಂದ ಬೇಸತ್ತ ಅಪ್ರಾಪ್ತ ಬಾಲಕಿ ಒಂದು ರಾತ್ರಿ ಬಟ್ಟೆಯ ತುಂಡಿನಿಂದ ಕತ್ತು ಹಿಸುಕಿ ಕೊಂದಿದ್ದಾಳೆ.

2017 ರಲ್ಲಿ ಉತ್ತರ ಪ್ರದೇಶದ ಬರೇಲಿಯಲ್ಲಿ 14 ವರ್ಷದ ಬಾಲಕಿಯೊಬ್ಬಳು ಕುಡಿದು ತನ್ನ ಮೇಲೆ ಅತ್ಯಾಚಾರ ಎಸಗಲು ಮುಂದಾದ ತನ್ನ ತಂದೆಯನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಂದ ಪ್ರಕರಣ ವರದಿಯಾಗಿತ್ತು.

IPC Section 300 ಕೊಲೆಯನ್ನು ವ್ಯಾಖ್ಯಾನಿಸುವಾಗ ಆತ್ಮರಕ್ಷಣೆ ರಕ್ಷಣೆ, ಹಠಾತ್ ಪ್ರಚೋದನೆ ಸೇರಿದಂತೆ ಇತರ ಐದು ವಿನಾಯಿತಿಗಳನ್ನು ನೀಡುತ್ತದೆ. ಇದು ಕೊಲೆಯಾದರೂ ಮರಣ ಅಥವಾ ಜೀವಾವಧಿ ಶಿಕ್ಷೆಯನ್ನು ನೀಡದೆ ಕೊಲೆಗೆ ಸಮನಾವಲ್ಲದ ಅಪರಾಧವಾದ ಈ ನರಹತ್ಯೆಯನ್ನು ಸಣ್ಣ ಅಪರಾಧವೆಂದು ಪರಿಗಣಿಸಿ ಕಡಿಮೆ ಶಿಕ್ಷೆಯನ್ನು ನೀಡಲಾಗುತ್ತದೆ.

Related Articles

ಇತ್ತೀಚಿನ ಸುದ್ದಿಗಳು