Saturday, June 15, 2024

ಸತ್ಯ | ನ್ಯಾಯ |ಧರ್ಮ

ಸನಾತನ ಧರ್ಮದ ವಿವಾದ: ಉದಯನಿಧಿ ಬೆನ್ನಿಗೆ ನಿಂತ ನಿರ್ದೇಶಕ ಪಾ ರಂಜಿತ್

Pa. Ranjith Supports Udayanidhi Stalin Statement on Sanathana Dharma:

ಸನಾತನ ಧರ್ಮ ಡೆಂಗ್ಯೂ, ಮಲೇರಿಯಾದಂತಹ ಕಾಯಿಲೆ ಇದ್ದಂತೆ ಅದನ್ನು ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡು ಆಡಳಿತ ಪಕ್ಷದ ಸಚಿವ ಉದಯನಿಧಿ ಸ್ಟಾಲಿನ್ ನೀಡಿದ್ದ ಹೇಳಿಕೆಗೆ ಖ್ಯಾತ ನಿರ್ದೇಶಕ ಪಾ ರಂಜಿತ್‌ ಬೆಂಬಲವಾಗಿ ನಿಂತಿದ್ದಾರೆ.

ಮುಖ್ಯಮಂತ್ರಿ ಸ್ಟಾಲಿನ್ ಅವರ ಪುತ್ರ, ಶಾಸಕ/ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಉದಯನಿಧಿ ಸ್ಟಾಲಿನ್ ಹೀರೋ ಆಗಿಯೂ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇನೊಂದು ಕಡೆ ಸನಾತನ ಧರ್ಮದಲ್ಲಿ ನಂಬಿಕೆ ಇರುವ ಅನೇಕರು ಉದಯನಿಧಿಯತ್ತ ಮಣ್ಣು ಎರಚುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರ ಬೆಂಬಲಕ್ಕೆ ಬಂದಿರುವ ನಿರ್ದೇಶಕ ರಂಜಿತ್‌ ಉದಯನಿಧಿಯ ವಿರುದ್ಧ ಕಾರಲಾಗುತ್ತಿರುವ ದ್ವೇಷ ಮತ್ತು ಎಸಗಲಾಗುತ್ತಿರುವ ದಾಳಿಯು ದುರದೃಷ್ಟಕರ ಎಂದಿದ್ದಾರೆ. ಈ ಕುರಿತು ಟ್ವೀಟ್‌ (X) ಮಾಡಿರುವ ಅವರು ತಮ್ಮ ಟ್ವೀಟಿನಲ್ಲಿ,

“ಸಚಿವ ಉದಯನಿಧಿ ಸನಾತನ ಧರ್ಮದ ವಿರುದ್ಧ ನೀಡಿರುವ ಹೇಳಿಕೆಯು ಶತಮಾನಗಳ ಜಾತಿ ವಿರೋಧಿ ಚಳವಳಿಯ ಮೂಲ ತತ್ವವಾಗಿದೆ. ಜಾತಿ ಮತ್ತು ಲಿಂಗದ ಹೆಸರಿನಲ್ಲಿ ನಡೆಯುತ್ತಿರುವ ಅಮಾನವೀಯ ಆಚರಣೆಗಳ ಬೇರು ಸನಾತನ ಧರ್ಮದಲ್ಲಿದೆ. ಕ್ರಾಂತಿಕಾರಿ ನಾಯಕ ಡಾ.ಬಾಬಾಸಾಹೇಬ್ ಅಂಬೇಡ್ಕರ್, ಜಾತಿ ವಿರೋಧಿ ಸುಧಾರಕರಾದ ಅಯೋದಿದಾಸ್ ಪಂಡಿತರ್, ತಂದೈ ಪೆರಿಯಾರ್, ಮಹಾತ್ಮ ಫುಲೆ, ಸಂತ ರವಿದಾಸ್ ಮುಂತಾದವರು ತಮ್ಮ ಜಾತಿ ವಿರೋಧಿ ಸಿದ್ಧಾಂತದಲ್ಲಿ ಇದನ್ನೇ ಪ್ರತಿಪಾದಿಸಿದ್ದಾರೆ.

ಸಚಿವರ ಹೇಳಿಕೆಯನ್ನು ತಿರುಚಿ ಅದನ್ನು ನರಮೇಧದ ಕರೆ ಎಂದು ದುರ್ಬಳಕೆ ಮಾಡಿಕೊಳ್ಳುವ ದುರುದ್ದೇಶಪೂರಿತ ಧೋರಣೆ ಸ್ವೀಕಾರಾರ್ಹವಲ್ಲ. ಸಚಿವರ ಮೇಲೆ ಹೆಚ್ಚುತ್ತಿರುವ ದ್ವೇಷ ಮತ್ತು ದಾಳಿಯು ತುಂಬಾ ಕಳವಳಕಾರಿಯಾಗಿದೆ.

ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಹೊಂದಿರುವ ಸಮಾಜವನ್ನು ಸ್ಥಾಪಿಸಲು ಸನಾತನ ಧರ್ಮದ ನಿರ್ಮೂಲನೆಗೆ ಕರೆ ನೀಡುವ ಉದಯನಿಧಿಯವರ ಮಾತುಗಳಿಗೆ ನಾನು ಬೆಂಬಲವಾಗಿ ನಿಲ್ಲುತ್ತೇನೆ.

ಸಚಿವ ಉದಯನಿಧಿ ಸ್ಟಾಲಿನ್ ಅವರೊಂದಿಗೆ ನಾನಿದ್ದೇನೆ!” ಎಂದಿದ್ದಾರೆ.

ಒಟ್ಟಿನಲ್ಲಿ ಈ ವಿವಾದವು ವಿವಿಧ ತಿರುವುಗಳನ್ನು ತೆಗೆದುಕೊಳ್ಳುತ್ತಿರುವುದರ ಜೊತೆ ಜೊತೆಯಲ್ಲೇ ತಮಿಳುನಾಡಿಗೆ ಇನ್ನೊಬ್ಬ ದ್ರಾವಿಡ ನಾಯಕನ್ನು ನೀಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಇನ್ನು ಉದಯನಿಧಿ ತಾನು ತನ್ನ ಮಾತಿಗೆ ಬದ್ಧನಾಗಿದ್ದ, ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು