Friday, June 14, 2024

ಸತ್ಯ | ನ್ಯಾಯ |ಧರ್ಮ

ಬಹುಮುಖಿ ಪ್ರತಿಭೆ ನನ್ನವ್ವ ಬುರ್ರಕಥಾ ಕಮಲಮ್ಮ..!

ಸೋಬಾನೆ, ಜೋಗುಳ, ಸೂಲಗಿತ್ತಿ, ಗಿಡಮೂಲಿಕೆಯ ಔಷಧಿ ಸೇರಿದಂತೆ ವಿಶೇಷವಾಗಿ ಬುರ್ರಕಥಾ, ಜನಪದ ಹಾಡುಗಳ ಮೂಲಕ ಮನೆಮಾತಾಗಿರುವ ನನ್ನ ಹೆತ್ತವ್ವ ಶ್ರೀಮತಿ ಕಮಲಮ್ಮ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಹಟ್ಟಿ ಪಟ್ಟಣದ (ಹಟ್ಟಿ ಚಿನ್ನದ ಗಣಿ) ನಿವಾಸಿ. ಇವರ ಕಲೆಗಾರಿಕೆ ಮತ್ತು ಕಸುಬುದಾರಿಕೆಯನ್ನು ಅವರ ಮಗ ಶಿವರಾಜ್‌ ಮೋತಿ ಕಣ್ಣಿಗೆ ಕಟ್ಟುವಂತೆ ಇಲ್ಲಿ ವಿವರಿಸಿದ್ದಾರೆ.

ನಮ್ಮ ಪೂರ್ವಜರು ಆಂಧ್ರದವರು. ಆಗ ಹಗಲುವೇಷ, ಬುರ್ರಕಥೆ ಹೇಳುತ್ತಾ ಹೀಗೆ ಲೋಕ ಸಂಚಾರಿಯಾಗಿ ವಲಸೆ ಬರುತ್ತಾ-ಬರುತ್ತಾ ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ನೆಲೆಗೊಂಡಿದ್ದಾರೆ. ನಮ್ಮ ಹಿರಿಯರ ಆಂಧ್ರದಲ್ಲಾಗಲಿ, ಈಗಿನ ಕರ್ನಾಟಕದಲ್ಲಾಗಲಿ ಒಂದು ಖಾಯಂ ನೆಲೆಸುವ ಮೂಲಸ್ಥಳ ನಿಗದಿತವಾಗಿ ಇದೇ ಅಂತ ನಮಗೆ ಇರಲಿಲ್ಲ. ಆಗ ಒಂದು ಊರಲ್ಲಿ ನೆಲೆಸಿದ್ರೆ ತಿಂಗಳಿಗಿಂತ ಹೆಚ್ಚು ದಿನಗಳಿದ್ದ ಊರುಗಳ ಉದಾಹರಣೆಯೇ ಇಲ್ಲ. ಊರಿಗೊಂದು ನಾಲ್ಕು ದಿನ ಬೂದಿ ಹಾಕ್ತಾ ಹೋಗೋರು. ತಾವಿದ್ದ ಊರು ಬಿಡುತ್ತೇವೆ ಎಂದರೆ, ಮುಂದಿನ ಊರಲ್ಲಿ ಇರೋಕೆ ಸ್ಥಳ, ಪ್ರಾಣಿಗಳಿಗೆ ಹುಲ್ಲು, ನೀರು, ಆಹಾರದ ಸಂಪನ್ಮೂಲಗಳು ಸಿಗುತ್ತವೆಯಾ ಅಂತ ಖಚಿತತೆಗೆ ಮೊದಲಿಗೆಯೇ ಒಬ್ಬರು ಜಾಗ ನೋಡ್ಕಂಡು ಬರೋರು. ಒಂದು ಬಾಟಲಿ ಹೆಂಡ ಕುಡಿಯೋರು. ಆಗ ಹೆಂಡ ಎಂಟಾಣೆ-ನಾಕಾಣೆಗೆ ಸಿಗುತ್ತಿತ್ತು. ಜಾಸ್ತಿ ಗುಡ್ಡಗಾಡು ನೋಡೋರು ಅಡವಿಯಲ್ಲೆ ಇರೋರು. ಯಾಕೆಂದರೆ ಅಡವಿ ಪ್ರಾಣಿಗಳನ್ನ ಬೇಟೆಯಾಡುವವರು ಹಾಗೂ ಹೆಂಡ ಕುಡಿದು ರಾತ್ರಿಯೇ ಜಾಸ್ತಿ ಇವರದು ಅಕ್ಕಪಕ್ಕದವರ ಜೊತೆ ಜಗಳವಿರುತ್ತಿತ್ತು. ಊರಿನ ಜನಕ್ಕೆ ನಮ್ಮ ಜಗಳ ಕೇಳಿಸಬಾರದು ಒಂದು ವೇಳೆ ಗೊತ್ತಾಗಿ ಕಿರಿಕಿರಿ ಎನಿಸಿ ಊರು ಬಿಡಿಸಿ ಬಿಡುವವರು ಎಂಬ ಭಯದಿಂದಲೇ ಊರ ಹೊರಗಡೆ ಗುಡಾರಗಳಲ್ಲಿ ವಾಸಿಸುತ್ತಿದ್ದರು. ಅಜ್ಜ(ನನ್ನವ್ವನ ತಂದೆ) ಅಡವಿಯೊಳಗಿನ ಪಲ್ಯ ತಿನ್ನಿಸಿಯೇ ಬೆಳೆಸಿದ್ದಾರೆ. ಆಡು, ದನ ಸಾಕಿದ್ರೂ ಸಹ ಅವುಗಳಿಗೆ ಅಡವಿಯೊಳಗಿನ ಮೇವು, ನೀರೇ ಗತಿ. ಮತ್ತೆ ಮನೇಲಿ ಈಗಿನ ತರಹ ಹುಲ್ಲಾಗಲಿ, ನೀರಾಗಲಿ ಹಾಕ್ತಿದ್ದರು ಅನ್ನುವಂಗಿಲ್ಲ. ಇವರಿಗೂ ಅಡವಿಯೇ ಊಟ ಆಗಿರುತ್ತಿತ್ತು ಎಂದು ನನ್ನವ್ವ ನೆನಪಿಸಿ ಹೇಳುತ್ತಾ, ಹಿಂಗೆಲ್ಲ ಬದುಕಿದ ನಂತರ ಮೂವತ್ತು ವರ್ಷದ ಹಿಂದೆ ಖಾಯಂ ಆಗಿ ಇವರ ತಂದೆ ಮಸ್ಕಿ ತಾಲೂಕಿನ ಕುಗ್ರಾಮವಾದ ನೆಲಕೋಳದಲ್ಲಿ ನೆಲೆಗೊಳ್ಳುತ್ತಾರೆ. ಕಾರಣ, ಅಲ್ಲಿನ ಜನ ನೀವೆಲ್ಲ ಚೆನ್ನಾಗಿ ಹಗಲುವೇಷ, ಬುರ್ರಕಥೆ ಹೇಳುವವರು. ಮಕ್ಳು ಮರಿ ಕಟ್ಕೊಂಡು ಊರೂರು ಯಾಕೇ ಸುತ್ತುತ್ತೀರಿ ನಮ್ಮೂರಲ್ಲೆ ಇದ್ದುಬಿಡಿ ಅಂತ ಇವರಿಗೆ ಎಂಟು ಎಕರೆ ಗೈರಾಣಿ ಭೂಮಿ ಯತಗಲ್ ರಾಮನಗೌಡ, ಶಾಣುಗೌಡ, ಹನುಮಗೌಡ, ನೆಲಕೋಳದ ತಳವಾರ ರಂಗಪ್ಪ (ಇಲ್ಲಿ ಹೆಸರಿಸಿದ ಕೆಲವೊಬ್ಬರು ಈಗಲೂ ಇದ್ದಾರೆ) ಮುಂತಾದ ಗಣ್ಯರು ಸೇರಿ ಕೊಟ್ಟಿದ್ದರು. ಸುಮಾರು ವರ್ಷ ಅಲ್ಲಿ ವ್ಯವಸಾಯ ಮಾಡಿ ಆ ಹೊಲದಲ್ಲಿ ದಾಸರಾವು ಸೇರಿದ್ದಕ್ಕಾಗಿ ಜೀವಭಯಕ್ಕೆ ಆ ಭೂಮಿ ಸಹ ಬಿಟ್ಟರು.

ನನ್ನವ್ವ ಕಮಲಮ್ಮನ ತಾಯಿ ನಾಗಮ್ಮ, ಅಜ್ಜಿ ಯಲ್ಲಮ್ಮ ಬುರ್ರಕಥಾ ಹೇಳುತ್ತಿದ್ದರು. ಆಗಿನ‌ ಕಾಲದಲ್ಲಿ ಡುಮ್ಕಿ ಯಲ್ಲಮ್ಮ, ನಾಗಮ್ಮ ಬುರ್ರಕಥೆ ಹೇಳುತ್ತಾರಂದ್ರೆ ಸಾಕು ಅಲ್ಲಿನ ಜನ ಸೇರೋರು. ಅಷ್ಟೊಂದು ಚಿರಪರಿಚಿತ ಪರಿಣಿತರು. ಆಗವರನ್ನು ಮೀರಿಸುವವರು ಯಾರೂ ಸಹ ಇರಲಿಲ್ಲ. ಆಗ ವೇದಿಕೆಗಳ ಮುಖವೇ ನೋಡದ ಪ್ರತಿಭೆಗಳವು. ಆ ವ್ಯವಸ್ಥೆಯೂ ಇರಲಿಲ್ಲ. ಇಡೀ ಊರಿಗೆ ರಾತ್ರಿ ಒಂದು ಬಡಾವಣೆಯ ಸಾರ್ವಜನಿಕ ಸ್ಥಳದಲ್ಲಾಗಲಿ, ಯಾರದಾದ್ರೂ ಮನೆಮುಂದೆಯಾಗಲಿ, ದೇವಸ್ಥಾನಗಳ ಮುಂದೆಯಾಗಲಿ ಬುರ್ರಕಥೆ ಹೇಳುತ್ತಿದ್ದರು. ಅದೇ ಇವರ ವೇದಿಕೆಯಾಗಿತ್ತು. ನಾಗಮ್ಮನ ಹಿಂದೆ ಹಿಮ್ಮೇಳವಾಗಿ ಅಮ್ಮ ಹೋಗುತ್ತಿದ್ದರು. ಸುಮಾರು ವರ್ಷಗಳ ಕಾಲ ಹಿಮ್ಮೇಳವಾಗಿಯೇ ಇದ್ದರು. ಅಜ್ಜಿ ನಾಗಮ್ಮನಿಗೆ ಕೆಮ್ಮು-ದಮ್ಮು, ಕಫ ಸೇರಿ ಸುಸ್ತುಯಾದ ಕಾರಣ ಬುರ್ರಕಥೆ ಬಿಟ್ಟರು. ಅವರ ಮಕ್ಕಳು ಒತ್ತಾಯಪೂರ್ವಕವಾಗಿ ಬುರ್ರಕಥೆಯೇ ಹೇಳಬೇಡ ಅಂತ ಬಿಡಿಸಿದರು. ಅವರ ನಂತರ ನನ್ನ ತಾಯಿ ಈಗಲೂ ಬುರ್ರಕಥೆಯ ಪರಂಪರೆ ಮುಂದುವರೆಸುತ್ತಾ ಬರುತ್ತಿದ್ದಾರೆ. ಅಜ್ಜಿ ನಾಗಮ್ಮನಿಗೆ ಬರುವ ಕಥೆಗಳೆಲ್ಲವೂ ನನ್ನವ್ವನಿಗೆ ಈಗ ಬರುತ್ತವೆ. ನನ್ನ ತಾಯಿಯ ವಿದ್ಯೆಯನ್ನೇ ಯಥಾವತ್ತಾಗಿ ನಾನು ಕಲಿತುಕೊಂಡೆ ಎಂದು ಬಹು ಹೆಮ್ಮೆಯಿಂದ ಅಮ್ಮ ಹೇಳಿಕೊಳ್ಳುತ್ತಾರೆ.

20-25 ವರ್ಷದ ಹಿಂದೆ ಬಹುತೇಕ ರಾಯಚೂರು ಜಿಲ್ಲೆಯ ಹಟ್ಟಿ ಗ್ರಾಮ, ರಾಯದುರ್ಗ, ದೇವರ ಭೂಪುರು ಇತ್ಯಾದಿ ಸಾಕಷ್ಟು ಊರುಗಳಲ್ಲಿ ಲೆಕ್ಕವಿಲ್ಲದಂತೆ ಬುರ್ರಕಥೆಗಳನ್ನು ಹೇಳಿದ್ದಾರೆ. ಈಗ ಕೇಳುವ ಅಥವಾ ಆಲಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆ ಆದುದ್ದರಿಂದ ಆ ವಾತಾವರಣ  ಇಲ್ಲ. ಈಗಲೂ ಯಾರಾದರೂ ಕಥೆ ಹೇಳಿ ಅಂದರೆ ಅಮ್ಮ ಹೇಳುತ್ತಾರೆ.

ಆಗಿನ ಜನ ಇವರನ್ನು ಕರೆದು ಕಥೆ ಹೇಳಿ, ಹಾಡು ಹೇಳಲು ಬರ್ರೀ ಅಂತ ಮನೆಗೆ ಬಂದು ಕರೆದುಕೊಂಡು ಹೋಗಿ ತಮ್ಮ ಮನೆಮುಂದೆ ಕೂರಿಸಿಕೊಂಡು ಆಲಿಸುತ್ತಿದ್ದರು. ಇಂದು ಆ ಜನಗಳ‌ ಮನಸ್ಥಿತಿ ಇಲ್ಲದವರಂತಾಗಿದೆ. ಇಡೀ ರಾತ್ರಿ ಬುರ್ರಕಥೆ ಹೇಳಿದ್ರೆ ಆಗ ಇಪ್ಪತ್ತರಿಂದ ಮೂವತ್ತು ರೂಪಾಯಿ ದುಡ್ಡು, ಮುಂಜಾನೆ ಮನೆಮನೆಗೆ ಹೋದ್ರೆ ಕಥೆ ಕೇಳಿದವರು ಉಡಿಹಕ್ಕಿ ಹಾಕಿ ದವಸ-ಧಾನ್ಯಗಳನ್ನು ಶೇರುಗಟ್ಟಲೇ ಕೊಡುತ್ತಿದ್ದರು.

ನಮ್ಮ ಕಾಯಕವೇ ಬುರ್ರಕಥೆ ಹೇಳುವುದು. ಬುರ್ರಕಥೆಯನ್ನು ಹೇಳಿದ್ರೆನೆ ಹೊಟ್ಟೆ ತುಂಬುವುದು. ಹಾಗಾಗಿ ಕಲೆಯೇ ಜೀವ, ಅದರಿಂದಲೇ ನಮ್ಮ ಜೀವನವೆಂಬ ಧ್ಯೇಯವಾಕ್ಯ ನಮ್ಮದಾಗಿದೆ. ದಿನಾಲೂ ಜೋಳಿಗೆ ತೆಗೆದುಕೊಂಡೇ ಹೋಗಬೇಕು ಇಲ್ಲದಿದ್ದರೆ, ಅಂದು ಉಪವಾಸ ಕಟ್ಟಿಟ್ಟ ಬುತ್ತಿ. ಬಹುಶಃ ರಾಯಚೂರು ಜಿಲ್ಲೆಯ ಬಹುತೇಕ ಹಳ್ಳಿ-ನಗರಗಳೆನ್ನದೇ ಭಿಕ್ಷೆಗಾಗಿ ಸುತ್ತಿದ್ದಾರೆ. ಆದ್ರೆ ಈಗ ನಮ್ಮ ಒತ್ತಡಕ್ಕೆ(ಮಕ್ಕಳು) ಮಣಿದು ನಿಲ್ಲಿಸಿದ್ದಾರೆ.

ಅಮ್ಮ ಕಮಲಮ್ಮ ಮುಖ್ಯ ಹಾಡುಗಾರ್ತಿಯಾಗಿದ್ದರೆ, ಹಿಮ್ಮೇಳವಾಗಿ ದಿ.ಶಾಂತಮ್ಮಜ್ಜಿ, ಅತ್ತೆ ದಿ.ದೇವಮ್ಮ (ನನ್ನಪ್ಪನ ತಾಯಿ), ದುರುಗಮ್ಮ, ಲಿಂಗಮ್ಮ ಇರುತ್ತಿದ್ದರು. ಈಗ ದುರುಗಮ್ಮ, ಗಂಗಮ್ಮ, ಗಿರಿಜಮ್ಮ, ಮಲ್ಲಮ್ಮ, ನೀಲಮ್ಮ ಹಿಮ್ಮೇಳವಾಗಿ ಇರುತ್ತಾರೆ. ಈ ಅದ್ಭುತ ಅನಕ್ಷರಸ್ಥೆ ಕಲಾವಿದೆಯ ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಕಥನಕಾವ್ಯಗಳು ಕಲಾ ರಸಿಕರನ್ನು ಮನಸೂರೆಗೊಳಿಸುತ್ತವೆ. ತಂಬೂರಿಯೊಂದಿಗೆ ಗಗ್ಗರ ಮತ್ತು ಡಕ್ಕೆಗಳನ್ನು ನುಡಿಸುತ್ತಾ ಮಹಾಕಾವ್ಯ ಹಾಡುತ್ತಾರೆ. ಇವರ ಅಕ್ಕಪಕ್ಕದಲ್ಲಿ ಶಿಷ್ಯರು ಕುಳಿತು ಹಿಮ್ಮೇಳ ಕೊಡುತ್ತಾರೆ. ಜನಪದ ಕಾವ್ಯ, ಕಥನಗಳನ್ನು ಹಾಡುವ ಮೂಲಕ ಜನರನ್ನು ರಂಜಿಸಿ ವಿಶೇಷವಾಗಿ ಆಕರ್ಷಿಸುತ್ತಾರೆ. ನನ್ನವ್ವ ತನ್ನ ಕಂಚಿನ ಸುಮಧುರ ಕಂಠದಿಂದ ಬುರ್ರಕಥಾ ಮಹಾಕಾವ್ಯಗಳನ್ನು ಹಾಡಲಾರಂಭಿಸಿದರೆ ಎದೆ ತುಂಬಿ ಬರುತ್ತದೆ. ತಂಬೂರಿ, ಗಗ್ಗರಿ ಹಿಡಿದು “ತಂದಾನ,, ತಾನ ತಾನ,‌ ತಂದಾನ” ಎಂಬ ಪಲ್ಲವಿಯೊಂದಿಗೆ ಹಾಡಲು ನಿಂತರೆ ಪ್ರೇಕ್ಷಕರು ತಲೆದೂಗೋದಂತೂ ತಪ್ಪುವುದಿಲ್ಲ. 

ಮೂಲತಃ ತನ್ನ ತಾಯಿ ಹಾಡುವ ಕಥನಗಳನ್ನು ಕಲಿತು ಇಂದಿಗೂ ಪ್ರಮುಖವಾಗಿ ಹಾಡುವ ಕಥೆಗಳೆಂದರೆ- ಬಾಲನಾಗಮ್ಮನ ಕಥೆ, ಏಳು ಮಕ್ಕಳ ತಾಯಿ ಭೂಲಕ್ಷ್ಮೀ ಕಥೆ, ಶರಬಂಧರಾಜ ಕಥೆ, ಬಾಲರಾಜ ಕಥೆ, ಚಿತ್ರಶೇಖರ-ಸೋಮಶೇಖರ ಕಥೆ, ಲಕ್ಷಪತಿರಾಜ ಕಥೆ, ಆದೋನಿ ತಿಕ್ಕಲಕ್ಷಮ್ಮ ಕಥೆ, ಸವಾರೆಮ್ಮ ಕಥೆ, ಹೇಮರೆಡ್ಡಿ ಮಲ್ಲಮ್ಮ ಕಥೆ, ಬಳ್ಳಾರಿ ಕೂಸಲಿಂಗ ಕಥೆ, ಕುಮಾರಸ್ವಾಮಿ ಕಥೆ ಇತ್ಯಾದಿ ಬುರ್ರಕಥಾಗಳನ್ನು ಹಾಡುತ್ತಾರೆ. ಈ ಕಥೆಗಳಲ್ಲಿ ಹೆಚ್ಚಿನವು ನಾನಾ ಕಾರಣಗಳಿಂದ ಕಥಾ ನಾಯಕ ಅಥವಾ ನಾಯಕಿ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿದ್ದೇ ಆಗಿರುತ್ತದೆ. ಈ ಕಥೆ ಕೇಳಿದ ಜನರು ಇಂಥ ಮಹಾತ್ಮರೇ ಕಷ್ಟಪಟ್ಟ ಮೇಲೆ ಸಾಮಾನ್ಯರಾದ ತಮ್ಮ ಕಷ್ಟ ದೊಡ್ಡದಲ್ಲ ಎಂದು ಭಾವಿಸುತ್ತಾರೆ.

ಒಂದೂರಲ್ಲಿ ಇದ್ದರೆಂದರೆ, ಪುರುಷರು ನಾಲ್ಕುದಿನ ಹಾರ್ಮೋನಿಯಂ, ತಬಲ, ಪರಿಕರಗಳನ್ನು ತೆಗೆದುಕೊಂಡು ಹಗಲುವೇಷ ಹಾಕಿ ಐದನೇ ದಿನಕ್ಕೆ ಪಾಲು ಇಟ್ಟು ಗೌರವಾರ್ಥವಾಗಿ ಮನೆಮನೆಗೆ ತೆರಳಿ ಹಣ, ದವಸ-ಧಾನ್ಯ, ಕಾಳುಕಡ್ಡಿ ಸ್ವೀಕರಿಸುತ್ತಿದ್ದರೆ, ಮಹಿಳೆಯರು ದಂಬಡಿ, ಡಕ್ಕೆ, ತಂಬೂರಿ, ಡುಮುಕಿ ತೆಗೆದುಕೊಂಡು ಬುರ್ರಕಥಾ, ಜನಪದ ಇತ್ಯಾದಿ ಪಾರಂಪರಿಕವಾಗಿ ಬಂದಂತಹ ಹಾಡುಗಳನ್ನು ಹಾಡುತ್ತಾ ದೇಣಿಗೆ ಸ್ವೀಕರಿಸುತ್ತಿದ್ದರು. ಆಗ ಬಂದಂತಹ ಧಾನ್ಯಗಳನ್ನು ಹೀಗಿನಂತೆಯೇ ನನ್ನವ್ವನ ಸಮುದಾಯದ ತಲೆಮಾರುಗಳಿಗೆ ಮಾರುವುದು ತಿಳಿದಿರಲಿಲ್ಲ ಆಗ ಒಂದು ರೂ.ಗೆ ಜೋಳ ಸಿಗುತ್ತಿದ್ದವು. ಅವೆಲ್ಲವೂ ಆಗುವತನಕ ತಿಂದು ಮುಂದಿನ ಊರಿಗೆ ಅಲೆಮಾರಿಗಳಾಗಿ ಹೋಗುತ್ತಿದ್ದರು.

ಬಹಳ ಲೆಕ್ಕವಿಲ್ಲದಷ್ಟು ಜನಪದ, ಸೋಬಾನೆ ಪದ, ಜೋಗುಳ ಪದ, ಬೀಸುವ ಪದ, ಕುಟ್ಟುವ ಪದ, ತೊಟ್ಟಿಲು ಪದ, ಸೀಮಂತ ಕಾರ್ಯಕ್ರಮ, ಬಸವಣ್ಣ, ಇತ್ಯಾದಿ ದೇವರ ಮೇಲೆ ಪದ, ಹಬ್ಬ-ಹುಣ್ಣಿಮೆಗಳಲ್ಲಿ ಹತ್ತಿ ಬಿಡಿಸುವಾಗಿನ ಪದಗಳು, ಬಿತ್ತನೆ ಸಂದರ್ಭದ ಪದ, ಮದುವೆಯ ಅರಿಶಿಣದ ಪದಗಳನ್ನು, ಮೈನೆರೆದಾಗ ಕರೆದ್ರೆ ಅಲ್ಲೂ ಸಹ ಸಾಕಷ್ಟು ಹಾಡುಗಳನ್ನು ಹಾಡುತ್ತಾರೆ ಹಾಗೂ ಪರಂಪರಾಗತ ಹಾಡುಗಳ ಜೊತೆಗೆ ಬುರ್ರಕಥೆಗಳನ್ನೂ ಹೇಳುತ್ತಾರೆ. ತೆಲುಗು ಭಾಷೆಯಲ್ಲೂ ಸಹ ಆದೋನಿಯ ತಿಕ್ಕಲಕ್ಷ್ಮಮ್ಮನ ಕಥೆ, ಬಾಲನಾಗಮ್ಮ ಕಥೆ ಇತ್ಯಾದಿ ಮಹಾಕಾವ್ಯಗಳನ್ನು ಹಾಗೂ ಕೆಲ ಜನಪದ ಹಾಡುಗಳನ್ನೂ ಸಹ ಹಾಡುತ್ತಾರೆ. ನನ್ನ ತಾಯಿಯಲ್ಲಿ ಜನಪದದ ಭಂಡಾರವೇ ಅಡಗಿದೆ. ಅದನ್ನು ಗುರುತಿಸುವ, ಸಂಪಾದಿಸಿ ಮುಂದಿನ ಪೀಳಿಗೆಗೆ ಪರಿಚಯಿಸಲು ಸಂರಕ್ಷಿಸಿ ಉಳಿಸಬೇಕಾದ ಕಾರ್ಯವಾಗಬೇಕಿದೆ.

ನನ್ನವ್ವನ ತಂದೆ ದಿ. ಬಸವಲಿಂಗಪ್ಪ , ತಾಯಿ ದಿ.ನಾಗಮ್ಮ. ನಮ್ಮವ್ವ ವಯಸ್ಕಳಾಗುತ್ತಿದ್ದಂತೆ ಲಿಂಗಸಗೂರು ತಾಲೂಕಿನ ಗುಂತಗೋಳದ ದಿ. ಶರಣಪ್ಪ(ನನ್ನಪ್ಪನ ಅಪ್ಪ) ಅವರ ಮಗ ಹನುಮಂತಪ್ಪನಿಗೆ(ನಮ್ಮಪ್ಪ) ಮದುವೆ ಮಾಡಿ ಕೊಟ್ಟಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಹಟ್ಟಿ ಪಟ್ಟಣಕ್ಕೆ(ಹಟ್ಟಿ ಚಿನ್ನದ ಗಣಿ) ಬಂದು ಸುಮಾರು 40-45 ವರ್ಷಗಳಿಂದಲೇ ಶಾಶ್ವತವಾಗಿ ಇಲ್ಲೆ ನೆಲೆಸಿದ್ದಾರೆ. ನಮ್ಮಜ್ಜ ಶರಣಪ್ಪ ಬಹುರೂಪಿ ಚೌಡಯ್ಯನಂತೆ ಕಲಾಕಾರ ಹಾಗಾಗಿ ಗುಂತಗೋಳ, ಗುರುಗುಂಟ, ಹಟ್ಟಿ ಸುತ್ತಮುತ್ತ ಕೆಲ ಹಳ್ಳಿಗಳಲ್ಲಿ ಈಗಲೂ ಹಿರಿಯರಲ್ಲಿ ಅಳಿಯದ ಚಿರಪರಿಚಿತವಾದ ವ್ಯಕ್ತಿ.

ಬಾಲ್ಯದಲ್ಲಿ ಹಿಟ್ಟಿನ ಗಿರಣಿಯಲ್ಲಿ ಕೂತು ಬೀಸೋಕೆ ಬಂದವರತ್ರ ಸ್ವಲ್ಪ-ಸ್ವಲ್ಪ ಹಿಟ್ಟನ್ನು ಪಡೆಯುತ್ತಿದ್ದರು. ಈಚಿಲ ಚಾಪೆಯೂ ಹೆಣೆದಿದ್ದಾರೆ ಈಗಲೂ ಸಹ ಇದ್ರೆ ಹೆಣೆಯುತ್ತಾರೆ. ಮಣ್ಣಿನ ಕೊಡದಾಗ ನೀರು ಕುಡಿದು, ಮಣ್ಣಿನ ಗಡಿಗ್ಯಾಗ ಅಡುಗೆ ಮಾಡಿಕೊಂಡೂ ಮಣ್ಣಿನ ಹೆಂಚಿನ‌ ಮೇಲೆ ರೊಟ್ಟಿ ಮಾಡಿ ಅದು ಒತ್ತಟ್ಟಿಗೆ ಸುಟ್ಟರೆ, ಒತ್ತಟ್ಟಿಗೆ ಸುಡುತ್ತಿರಲಿಲ್ಲ ಹಸಿ-ಬಿಸಿ ಇದ್ದಿದ್ದಂಗೆ ಮಾಡ್ಕೊಂಡು ಹಾಗೆಯೇ ತಿನ್ನುತ್ತಿದ್ದರು ಎಂದು ತಮ್ಮ ಆಗಿನ ಕರಾಳ ದಿನವನ್ನು ಹೀಗೆಯೇ ಬಿಚ್ಚಿಡುತ್ತಾ ಹೋಗುತ್ತಾರೆ. ಆಗ ನೆಲ್ಲನ್ನು ಬೀಸಿ ಕುಟ್ಟಿ ಅಕ್ಕಿ ಮಾಡಿ ಅನ್ನ ಮಾಡಿಕೊಂಡು ತಿನ್ನುತ್ತಿದ್ದರು. ನೆಲ್ಲು-ಸಜ್ಜೆ ಬೀಸುತ್ತ ಕುಟ್ಟಿದ್ದಾರೆ. ಆದರೆ ಈಗಿನವರು ಮಾಡಕ್ಕಾಗದ ಕೆಲಸವದು. ಕೂಲಿನಾಲಿ ಮಾಡಿ ಸಹ ತುಂಬಾ ಕಷ್ಟಪಟ್ಟು ಜೀವನ ಇಲ್ಲಿಯವರೆಗೆ ಸವೆಸಿದ್ದಾರೆ. ಈಗ ಇವರತ್ರ ಜಮೀನಿಲ್ಲ. ಮೂರು ರೂಪಾಯಿ ಕೂಲಿಗಾಗಿ ದಿನಪೂರ್ತಿ ಬೆನ್ನು ಮುರಿದುಕೊಂಡು ದುಡಿದಿದ್ದಾರೆ.

ನಾಲ್ಕು ರೂ. ಕೂಲಿಗೆ ಕಿವ್ಯಾಗ, ಮೂಗಿನ್ಯಾಗ ಮಣ್ಣು ಸೋರತಿತ್ತು. ಬರುವಾಗ ತೋಟದವರು ಪಂಪ್ ಸೆಟ್  ಚಾಲೂ ಮಾಡಿದ್ರೆನೆ ಜಳಕ ಮಾಡಿ ಮನೆಗೆ ಬರುವ ಸ್ಥಿತಿ ಇತ್ತು. ಆಗಿನ ಕಾಲಕ್ಕೆ ಇವರ ಒಂದು ತಿಂಗಳಿನ ಕೂಲಿಯ ಆದಾಯ ಲೆಕ್ಕ ಹಾಕಿದರೆ 25-30 ಮಾತ್ರ ಇರುತ್ತಿತ್ತು. ಬಾಲಕಾರ್ಮಿಕರಾಗಿ ಹೊಟ್ಟೆ ತುಂಬಿಸುವ ಅನಿವಾರ್ಯತೆಯ ಕಾಯಕದಲ್ಲಿ ಬೆಳೆದವರು. ಆ ದುಡ್ಡನ್ನು ಇವರ ತಂದೆ ತಲೆಗೆ ಟವೆಲ್ ಸುತ್ತಿಕೊಂಡು ಸುತ್ತಲಿನ ದೇವರಿಗೆಲ್ಲ ಧನ್ಯತಾಯಿಂದ ನಮಸ್ಕರಿಸಿ ಎಣಿಸುತ್ತಿದ್ದರೆಂದು ಮುಗುಳ್ನಗುತ್ತಾ, ನೆಲಕೋಳದ ತಳವಾರರ ಬಾವಿಯಲ್ಲಿ ಹೊಂಡು ತೆಗೆಯಲು ಎರಡೂವರೆ ರೂ. ಗೆ ಕೂಲಿ, ಕಾಚಾಪುರದ ಕರಾಳೆಪ್ಪರ ಹೊಲದಲ್ಲಿ ಕಸ, ಕಳೆವು ತೆಗೆಯಲು ಕೂಲಿಗೆ ಹೋಗಿದ್ದೇವೆಂದು ಹಿಂದಿನ ನೆನಪಿನ ಬುತ್ತಿಯನ್ನು ಎಳೆಎಳೆಯಾಗಿ ಕಣ್ಮುಂದೆ ನಡೆದಂತೆ ರೋಚಕವಾಗಿ ನನಗೆ ತಿಳಿಸಿದಾಗ ನಿಜವಾಗಲೂ ನನಗೆ ರೋಮಾಂಚನವಾಗುತ್ತದೆ.

ಪುರುಷರಿಗೆ ಹಗಲುವೇಷ, ಮಹಿಳೆಯರಿಗೆ ಬುರ್ರಕಥೆಯೇ ನಮ್ಮ ಸಮುದಾಯದ ಕಾಯಕ. ಆಗ ಹಗಲುವೇಷ ಆಡಿದ್ರೆ ಒಬ್ಬೊಬ್ಬರಿಗೆ ಆದಾಯ ಕೇವಲ 40-50 ಅಷ್ಟೇ ಬರುತಿತ್ತು. ನಮ್ಮ ಕುಲವೃತ್ತಿಯೇ ಬುರ್ರಕಥೆ ಆಗಿರುವುದರಿಂದ ಆಗ ಬುರ್ರಕಥೆ ಅಂದ್ರೆನೇ ಇವರುಗಳಿಗೆ ತಿಳಿಯುತ್ತಿರಲಿಲ್ಲವಂತೆ. ಆಗ ಡುಮುಕಿ ಅಂದ್ರೆ ಮಾತ್ರ ಗೊತ್ತಾಗುತ್ತಿತ್ತು, ಆ ಕಾಲಕ್ಕೆ ಡುಮುಕಿ ಅಷ್ಟೊಂದು ಹೆಸರುವಾಸಿ ವಾದ್ಯ. ಈಗ ಇತ್ತೀಚಿಗೆ ಬರುಬರುತ್ತಾ ಅಕ್ಷರ ಬಲ್ಲವರಿಂದ ಈ ಕಲೆ ಬುರ್ರಕಥೆ ಅಂತ ಗೊತ್ತಾಗಿದೆ ಎಂದು ಅಮ್ಮ ಹೇಳುತ್ತಾರೆ.

ಬಡತನದಲ್ಲಿಯೇ ಅರಳಿದ ಪ್ರತಿಭೆ ಅನಕ್ಷರಸ್ಥರಾದರೂ ಬುರ್ರಕಥಾ, ಜನಪದ ಹೇಳುವುದರಲ್ಲಿ ಹಾಗೂ ಸೂಲಗಿತ್ತಿಯ ಕಾಯಕ ಮಾಡುವುದರಲ್ಲಿ ನಿಸ್ಸೀಮರು ಹಾಗೂ ಎತ್ತಿದ ಕೈ ಅಂದರೆ ತಪ್ಪಾಗಲಾರದು. ನಮ್ಮವ್ವ ಸೂಲಗಿತ್ತಿಯ ಪ್ರವೃತ್ತಿಯನ್ನ ಕಾಯಕ ಮಾಡಿಕೊಳ್ಳದೇ, ಬುರ್ರಕಥೆಯನ್ನು ಮಾತ್ರ ಕಾಯಕ ಮಾಡಿಕೊಂಡಿದ್ದಾರೆ. ಇವರಿಗೆ ಒಂಬತ್ತು ಜನ ಮಕ್ಕಳು. ಆರು ಗಂಡು, ಮೂರು ಹೆಣ್ಣು. ಎರಡು ಹೆಣ್ಣು ಒಂದು ಗಂಡು ತೀರಿ ಸದ್ಯ ಐದು ಗಂಡು-ಒಂದು ಹೆಣ್ಣು ಒಟ್ಟು ಆರು ಮಕ್ಕಳಿದ್ದಾರೆ.(ನಾನು ನಾಲ್ಕನೇ ಮಗ) ಮೂರು ಗಂಡ್ಮಕ್ಕಳಿಗೆ ಮದುವೆಯೂ ಮಾಡಿದ್ದಾರೆ. ಕರ್ನಾಟಕದ ಬಯಲಾಟ, ಯಕ್ಷಗಾನಗಳ ರೀತಿಯಲ್ಲಿ ಬುರ್ರಕಥೆ ಆಂಧ್ರದಲ್ಲಿ ಹೆಚ್ಚು ಜನಪ್ರಿಯ ಜನಜನಿತವಾದ ಕಲೆ. ಆಧುನಿಕ ಜನಪ್ರಿಯ ಮನೋರಂಜನಾ ಮಾಧ್ಯಮಗಳು ಪ್ರಚಾರಕ್ಕೆ ಬರುವ ಪೂರ್ವದಲ್ಲಿ ಗ್ರಾಮೀಣ ಪರಿಸರದ ಮನೋರಂಜನಾ ಮಾಧ್ಯಮವಾಗಿದ್ದ ಕಲೆ ಇದು.

ಕಮಲಮ್ಮ ಚಿಕಿತ್ಸೆಯಲ್ಲಿ ತೊಡಗಿರುವುದು

ಅಮ್ಮನಿಗೆ ಹೆರಿಗೆ ಆದ್ರೂ ಸಹ ಒಂದು ಗುಳಿಗೆಯಾಗಲಿ(ಮಾತ್ರೆ), ಸೂಜಿ ಸಹ ತೆಗೆದುಕೊಂಡಿಲ್ಲ. ಮನೆಯಲ್ಲಿಯೇ ಬಾಣಂತನ ಮಾಡಿಕೊಂಡಿದ್ದಾರೆ. ನಮಗೆ ಹೆರಿಗೆ ಆದ್ರೂ ಸಹ ಪಕ್ಕದ ಮನೆಯವರೆಗೆ ಕಿಂಚಿತ್ತೂ ಸಹ ತಿಳಿಯುತ್ತಿರಲಿಲ್ಲ. ಹಂಗ ಬಾಣಂತನ ಮಾಡ್ಕೋತಿದ್ವಿ. ಈಗಿನವರದು ಸಿಜೇರಿಯನ್ ಅದೂ-ಇದೂ ಅಂತ ಆಗ್ತವೆ ಎಂದು ಮಗು ಹೊಟ್ಟೆಯಲ್ಲಿರುವಾಗ ಉರಿ ಕಟ್ಟು ಮಾಡಿ ಹೆಣ್ಮಕ್ಕಳು ಇಟ್ಟುಕೊಳ್ಳುವ ಕ್ಲಿಪ್ ನ್ನು ಇಡುತ್ತಾರೆ. ಒಬ್ಬೊಬ್ಬರು ಹಾ ಎಂದು ಗಾಬರಿಯಾದ್ರೆ ಎದೆಗೆ ತಾಗಿಕೊಂಡರೆ ಮರಣ ಹೊಂದುವ ಸಂಭವವೇ ಹೆಚ್ಚು. ಸೂಲಗಿತ್ತಿಯರು ಉರಿಯನ್ನು ಹೊರಗೆ ಬಂದಾಗಲೇ ಕಟ್ಮಾಡೋದು ಆದರೆ ಆಸ್ಪತ್ರೆಲಿ ಒಳಗಿರುವಾಗಲೇ ಕಟ್ಮಾಡಿ ಕ್ಲಿಪ್ ಹಚ್ಚಿ ಅಥವಾ ಕತ್ತರಿಸಿ ಬಿಟ್ಟು ಬಿಡುತ್ತಾರೆ. ಹಾಗಾಗಿ ಬಾಣಂತಿಗೆ ತ್ರಾಸಾಗೋದು ಸರ್ವೇ ಸಾಮಾನ್ಯ. ಚೊಲೋ ಬಾಣಂತನ ಆದ್ರೂ ಸಹ ದಾರಿ ಇಲ್ಲ. ಅದಿಲ್ಲ-ಇದಿಲ್ಲ ಅಂತ ಬಾಣಂತಿಯರನ್ನು ಮುಗ್ಗುಲ-ಮುಗ್ಗುಲು ಮಾಡಿ ಕಳಿಸುತ್ತಾರೆಂದು ಸೂಲಗಿತ್ತಿಯ ಕಾರ್ಯ, ಆಯಾಮಗಳನ್ನು ತಿಳಿಸುತ್ತಾರೆ.

ಗರ್ಭೀಣಿಯರು ಬ್ಯಾನಿ ತಿಂದ್ರೆ, ಮಗು ಅಡ್ಡಲಾಗಿದ್ರೆ ಸೀದಾ ಮಾಡ್ಕೋತ್ತಾರೆ. ಗಂಡಾಗಿದ್ರೆ ಎಡಕ್ಕಿರುತ್ತೆ, ಹೆಣ್ಣಾಗಿದ್ರೆ ಬಲಕ್ಕಿರುತ್ತೆ. ಆದರೆ ಈಗ ಆಧುನಿಕ ಆಹಾರ ಪದ್ಧತಿಗಳಿಂದ ತಾಯಿ ಹೊಟ್ಟೆಲಿ ಮಗು ಅತ್ತಂದಿತ್ತ ತಿರುಗುವುದರಿಂದ ನಿಖರವಾಗಿ ಹೇಳಲು ಅಸಾಧ್ಯ. ಕೈಯಾಡಿಸಿ ಒಬ್ಬೊಬ್ಬ ಹೆಂಗಸಿಗೆ ಪಕ್ಕೆಗೆ, ಎದಿಮ್ಯಾಲೆ, ಅಡ್ಡಲೂ ಇರ್ತದೆ ಆದ್ರೂ ಸಹ ಹೆಣ್ಣೋ-ಗಂಡು ಅಂತ ನೋಡುತ್ತಾರೆ. ಒಳ್ಳೆಣ್ಣೆ ಹೊಕ್ಕಳ ಬುಡ್ಡಿ ಮೇಲೆ ಬಿಟ್ಟು ಯಾಕಂದ್ರೆ, ಬೆವರು ಬಂದಿದ್ರೆ ಸರಿಯಾಗಿ ಇದೇ ಸಮಯಕ್ಕೆ ಪಕ್ಕಾ ಹಡೆಯುತ್ತಾಳೆಂದು ಖಾತ್ರಿಯಾಗುತ್ತಿತ್ತು. ಕೆಲವರು ತಂಗಳ ಆಹಾರ ತಿಂದಿದ್ರೆ ಬ್ಯಾನಿಯಿದ್ರೆ ಇನ್ನೂ ತಡ ಆಗುತ್ತದೆ ಅಂತ ನಿಟ್ಟುಸಿರು ಬಿಟ್ಟು ನಿರ್ಭಯದಿಂದ ಇರುತ್ತಿದ್ದರೆಂದು ಹೇಳುವಾಗ ನಾವೇ ಹೆರಿಗೆ ಮನೆಯನ್ನು ಹೊಕ್ಕು ಬಂದಂತೆ ಅನುಭವವಾಗುತ್ತದೆ.

ಅಮ್ಮನ ತಲೆಮಾರಿನ ಸಮುದಾಯದ ತಾಯಂದಿರಿಗೆ ಹೆರಿಗೆ ಆದ್ರೆ ಊರಿನ ಮನೆ-ಮನೆಗಳಿಗೆ ತೆರಳಿ ಅಮ್ಮಾ, ಹರಿಬಿ (ಬಟ್ಟೆ), ಕಟ್ಟಿಗೆ ಕೊಡು. ಮಾಸು ಇಳಿಸೋಕೆ ಮಣ್ಣಿನ ಮಗಿ ಕೊಡು, ಸ್ವಲ್ಪ ಕುಳ್ಳು ಕೊಡಮ್ಮಾ ಬಾಣಂತಿ ಇದಾಳೆಮ್ಮ ಉಟ್ಕೊಳ್ಳಲಿಕ್ಕೆ ಬಟ್ಟೆಯಿಲ್ಲ. ಸೀರಿ ಕೊಡು ತಾಯಿ, ಕೂಸಿಗೊಂದು ಬಟ್ಟೆ ಕೊಡು ತಾಯಿ ಅಂತ ಕೇಳುವವರಂತೆ. ಎರಡು ಸೀರೆ ಕೊಟ್ಟಿದ್ರೆ ಒಂದು ಹರಿದು ಕೂಸಿಗೆ ತುಂಡು ತುಂಡು ಹಾಕಿ ಅವರದೇ ಊಟ, ಬಟ್ಟೆ ತಿಂದು ಒಂದೈದು ದಿನವಾದರೆ ಹೆರಿಗೆ ಮುಗಿಯಿತು. ಮತ್ತೊಂದು ಊರಿಗೆ ತಲೆಮೇಲೆ ಹೊತ್ತುಕೊಂಡು ಊರೂರಿಗೆ ಜೀವನ ಮಾಡ್ತಾ ಹೋಗುವವರು. ಭಾರವಾದ ವಸ್ತುಗಳಿದ್ರೆ ಆಕಳ ಮೇಲೆ ಹಾಕೋರಂತೆ.

ಸುಮಾರು ಐದುನೂರು ಹೆರಿಗೆ ಮಾಡಿಸಿರಬಹುದು. ತಾಯಿ ನಾಗಮ್ಮನಿಂದ ಸೂಲಗಿತ್ತಿ, ತಂದೆ-ತಾಯಿಯಿಂದ ಔಷಧಿಗಳನ್ನು ಕೊಡುವುದು ಕಲಿತಿದ್ದಾರೆ. ಈಗಲೂ ಪರಿಚಯಸ್ಥರು, ಸಮುದಾಯದವರು ಮಕ್ಕಳಿಗಾಗಲಿ, ತಮಗಾಗಲಿ ಔಷಧಿಗಾಗಿ ಬರುತ್ತಾರೆ. ಬಹುತೇಕ ಔಷಧಿಗಳನ್ನು ಅಡವಿಯಿಂದಲೇ ತರುತ್ತಾರೆ. ಇವರ ಕೈಯಿಂದ ಗುಣವಾದವರು ಇವರಿಗೆ ಹೃತ್ಪೂರ್ವಕವಾಗಿ ಧನ್ಯತಾಭಾವದಿಂದ ನಮಸ್ಕರಿಸುತ್ತಾರೆ. (ಎಷ್ಟೋ ಮಕ್ಕಳ ತಾಯಿ ನನ್ನವ್ವ ಸೂಲಗಿತ್ತಿ, ಜನಪದ ವೈದ್ಯೆಯೂ ಸಹ ಹೌದು ಎಂಬ ಹೆಮ್ಮೆ ನನಗಿದೆ.) ಈಗಲೂ ನಮ್ಮ ಮನೆಯಲ್ಲಿ ಯಾರಿಗಾದರೂ ಜ್ವರ ಇತ್ಯಾದಿ ಏನಾಗಿದ್ದರೂ ಸಹ ಅಮ್ಮನೇ ಮೊದಲ ವೈದ್ಯರು ಬೇಗ ಗುಣಪಡಿಸಲು ಎತ್ತಿದ ಕೈ. ತಾಯಿಯ ತಾಯಿ ಸೂಲಗಿತ್ತಿ ಮಾಡುತ್ತಿದ್ದಳು. ಅಮ್ಮ ಚಿಕ್ಕ ಮಕ್ಕಳ ತರ ಮುಂದೆ ಹೋಗಿ ನೋಡುತ್ತಾ ನಿಲ್ತಿದ್ದರಂತೆ. ತಾಯಿ ನಾಗಮ್ಮ ಜೊತೆ ಸೂಲಗಿತ್ತಿಯ ಸಹಾಯಕಳಾಗಿ ಅವರಿಂದೆ ಬುರ್ರಕಥಾ, ಜನಪದ ಹಾಡುಗಳೂ ಸಹ ಹೇಳುತ್ತಿದ್ದಕ್ಕಾಗಿ ಆಗ ನೀನು ಹುಷಾರಿದ್ದಿ ಮಾ, ಸ್ವಲ್ಪ ಹೆರಿಗೆ ಮಾಡೋದು ಕಲಿತ್ಕೋ ಅಂತ ಬಾಣಂತನದ ಆಯಾಮಗಳನ್ನು ಹಿಂಗ – ಹಿಂಗ ಅಂತ ನಾಗಮ್ಮ ತೋರಿಸಿ ಕಲಿಸಿಕೊಟ್ಟಿದ್ದಾರೆ ಎಂದು ಸ್ಮರಿಸುತ್ತಾರೆ.

ತಾನು ಆತುಕೊಂಡ ಕಾಯಕಗಳನ್ನು ಅಷ್ಟೇ ಕಸುಬುದಾರಿಕೆಯಿಂದ ನಡೆಸಿಕೊಂಡು ಬರುತ್ತಿರುವ ನನ್ನವ್ವ ಬುರ್ರಕಥಾ ಕಮಲಮ್ಮ ತನ್ನ ಪಾಡಿಗೆ ತಾನು ಎಲೆಮರೆಯ ಕಾಯಂತೆ ಇದ್ದರೂ ಅನೇಕ ಮಹನೀಯರು ಅವರ ಕಲಾಸೇವೆಯನ್ನು ಗುರುತಿಸಿ ಪರಸ್ಕಾರವನ್ನೂ ಮಾಡಿದ್ದಾರೆ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಶಿವರಾಜ್ ಮೋತಿ
ಯುವ ಬರಹಗಾರ, ಕಾನೂನು ವಿದ್ಯಾರ್ಥಿ, ಧಾರವಾಡ

Related Articles

ಇತ್ತೀಚಿನ ಸುದ್ದಿಗಳು