Thursday, June 13, 2024

ಸತ್ಯ | ನ್ಯಾಯ |ಧರ್ಮ

ಸಲಿಂಗ ವಿವಾಹ ಕುರಿತು ಇಂದು ಸುಪ್ರೀಂ ಕೋರ್ಟ್ ತೀರ್ಪು: ಈ ಪ್ರಕರಣದ ಇದುವರೆಗಿನ ಬೆಳವಣಿಗೆಗಳ ಪೂರ್ಣ ವಿವರ

ಸಲಿಂಗ ವಿವಾಹಗಳನ್ನು ಕಾನೂನುಬದ್ಧಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಕೆಲವೇ ಗಂಟೆಗಳಲ್ಲಿ ತನ್ನ ತೀರ್ಪನ್ನು ನೀಡುವ ಸಾಧ್ಯತೆಯಿದೆ.

ಅರ್ಜಿದಾರರ ಪ್ರಕಾರ, ಸಲಿಂಗಕಾಮಿಗಳು ಮದುವೆಯಾಗುವುದನ್ನು ವಿರೋಧಿಸುವುದು  ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಮತ್ತು ಇದು  ಅವರನ್ನು  “ಎರಡನೇ ದರ್ಜೆಯ ನಾಗರಿಕರು” ಎನ್ನುವಂತೆ ನೋಡುತ್ತದೆ.

ಸಲಿಂಗ ವಿವಾಹಗಳನ್ನು ಸರ್ಕಾರ ಮತ್ತು ಧಾರ್ಮಿಕ ಮುಖಂಡರು ಬಲವಾಗಿ ವಿರೋಧಿಸುತ್ತಾರೆ. ಇದು ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದೆಯೆನ್ನುವುದು ಅವರ ಅಭಿಪ್ರಾಯ.

ನ್ಯಾಯಾಲಯದ ತೀರ್ಪು ಸಲಿಂಗ ವಿವಾಹಗಳ ಪರವಾಗಿ ಬಂದರೆ, ಭಾರತದಲ್ಲಿ ಲಕ್ಷಾಂತರ LGBTQ+ ಜನರು ಮದುವೆಯಾಗುವ ಹಕ್ಕನ್ನು ಹೊಂದಲಿದ್ದಾರೆ.

ಈ ತೀರ್ಪು ಭಾರತೀಯ ಸಮಾಜದಲ್ಲಿ ಅನೇಕ ಬದಲಾವಣೆಗಳಿಗೆ ಕಾರಣವಾಗುತ್ತದೆ ಮತ್ತು ದತ್ತು, ವಿಚ್ಛೇದನ, ಉತ್ತರಾಧಿಕಾರ ಮುಂತಾದ ಅನೇಕ ಕಾನೂನುಗಳನ್ನು ಬದಲಾಯಿಸುವ ಅವಶ್ಯಕತೆ ಎದುರಾಗುತ್ತದೆ.

ಏಪ್ರಿಲ್ ಮತ್ತು ಮೇ  ತಿಂಗಳಲ್ಲಿ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಸಲಿಂಗ ವಿವಾಹಗಳನ್ನು ಕಾನೂನುಬದ್ಧಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸುತ್ತಿತ್ತು.

ನ್ಯಾಯಪೀಠದ ನೇತೃತ್ವ ವಹಿಸಿದ್ದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಇದು ಆದ್ಯತೆಯ ವಿಷಯವಾಗಿದೆ ಎಂದು ಹೇಳಿದರು.

ಸಾರ್ವಜನಿಕ ಹಿತದೃಷ್ಟಿಯಿಂದ ನ್ಯಾಯಾಲಯದಲ್ಲಿನ ವಾದಗಳನ್ನು ನೇರ ಪ್ರಸಾರ ಮಾಡಲಾಯಿತು. ನ್ಯಾಯಾಲಯವು ಪ್ರಕರಣದ ತೀರ್ಪನ್ನು ಮೇ 12ರಂದು ಕಾಯ್ದಿರಿಸಿದೆ.

ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಚಂದ್ರಚೂಡ್ ಅವರು ಧಾರ್ಮಿಕ ವೈಯಕ್ತಿಕ ಕಾನೂನುಗಳಿಗೆ ಹೋಗುವುದಿಲ್ಲ, ಆದರೆ ವಿವಿಧ ಜಾತಿಗಳು ಮತ್ತು ವಿಭಿನ್ನ ಧರ್ಮಗಳ ಮದುವೆಗಳನ್ನು ಕಾನೂನುಬದ್ಧಗೊಳಿಸುವ ವಿಶೇಷ ಕಾನೂನಿನಲ್ಲಿ LGBTQ+ಸಮುದಾಯವನ್ನು ಸೇರಿಸಬಹುದೇ ಎಂದು ಪರಿಶೀಲಿಸುವುದಾಗಿ  ಹೇಳಿದರು.

ಅರ್ಜಿದಾರರು ಯಾರು? ಅವರಿಗೆ ಬೇಕಿರುವುದೇನು?

ಸಲಿಂಗ ದಂಪತಿಗಳು, LGBTQ+ಕಾರ್ಯಕರ್ತರು  ಮತ್ತು ಇತರ ಸಂಘಟನೆಗಳು ಸಲ್ಲಿಸಿದ್ದ 21 ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಅರ್ಜಿದಾರರ ವಕೀಲರು ಮದುವೆಯೆನ್ನುವುದು ಇಬ್ಬರು ವ್ಯಕ್ತಿಗಳ ಒಕ್ಕೂಟವಾಗಿದೆ ಮತ್ತು ಅದು ಕೇವಲ ಪುರುಷ-ಮಹಿಳೆ ಸಂಬಂಧವಷ್ಟೇ ಅಲ್ಲ ಎಂದು ವಾದಿಸಿದರು. ಈಗಿನ ಕಾಲದ ಮದುವೆಯಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಪ್ರತಿಬಿಂಬಿಸಲು ಕಾನೂನುಗಳನ್ನು ಬದಲಾಯಿಸಬೇಕು ಎಂದು ಅವರು ಹೇಳಿದರು. ಸಲಿಂಗ ದಂಪತಿಗಳು ಸಹ ಮದುವೆಯೊಂದಿಗೆ ಬರುವ ಗೌರವವನ್ನು ಬಯಸುತ್ತಾರೆ ಎಂದು ಅವರು ವಾದಿಸಿದರು.

ಸಂವಿಧಾನವು ಪ್ರತಿಯೊಬ್ಬರಿಗೂ ತಮ್ಮ ಆಯ್ಕೆಯ  ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು ನೀಡುತ್ತದೆ ಮತ್ತು ಲೈಂಗಿಕತೆಯ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುತ್ತದೆ ಎಂದು ಅರ್ಜಿದಾರರು ನ್ಯಾಯಾಲಯದಲ್ಲಿ ಪದೇ ಪದೇ ವಾದಿಸಿದ್ದಾರೆ.

 ಸಲಿಂಗ ದಂಪತಿಗಳು ಮದುವೆಯಾಗಲು ಸಾಧ್ಯವಾಗದ ಕಾರಣ ಬ್ಯಾಂಕುಗಳಲ್ಲಿ ಜಂಟಿ ಖಾತೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ, ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಮತ್ತು ಜಂಟಿಯಾಗಿ ಮನೆ ಖರೀದಿಸಲು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು.

ವಿಚಾರಣೆಯ ಸಮಯದಲ್ಲಿ, ನ್ಯಾಯಾಧೀಶರು ಸಲಿಂಗ ದಂಪತಿಗಳ ಕಾಳಜಿಗಳ ಬಗ್ಗೆ ಸಹಾನುಭೂತಿ ತೋರಿದರು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಏನು ಮಾಡಲು ಬಯಸುತ್ತೀರಿ ಎಂದು ಸರ್ಕಾರವನ್ನು ಕೇಳಿದರು.

ಸರ್ಕಾರ ಹೇಳಿದ್ದೇನು?

ಸಲಿಂಗ ವಿವಾಹಗಳನ್ನು ಕಾನೂನುಬದ್ಧಗೊಳಿಸುವುದು ಸಂಸತ್ತಿನ ವ್ಯಾಪ್ತಿಯಲ್ಲಿರುವ ವಿಷಯ ಎಂದು ಹೇಳಿದ ಸರ್ಕಾರ,  ಪ್ರಕರಣವನ್ನು ನ್ಯಾಯಾಲಯ ನಿರ್ವಹಿಸಿದ ರೀತಿಯನ್ನು ಪ್ರಶ್ನಿಸಿದೆ.

ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ಪ್ರಕರಣದಲ್ಲಿ ಸಲ್ಲಿಸಲಾದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಮದುವೆಯು ವಿರುದ್ಧ ಲಿಂಗಗಳ ಪುರುಷರು ಮತ್ತು  ಮಹಿಳೆಯರ ನಡುವೆ ಮಾತ್ರ ನಡೆಯುತ್ತದೆ ಎಂದು ಅವರು ವಾದಿಸಿದರು.

ಈ ಪ್ರಕರಣದಲ್ಲಿ ಅರ್ಜಿಗಳನ್ನು ಸಲ್ಲಿಸಿದವರನ್ನು ಉಲ್ಲೇಖಿಸಿದ ಅವರು, “ಅವೆಲ್ಲವೂ ಪಟ್ಟಣಗಳಲ್ಲಿನ ಕೆಲವೇ ಕೆಲವು ಸೆಲೆಬ್ರಿಟಿಗಳ ಅಭಿಪ್ರಾಯಗಳನ್ನು ಪ್ರತಿಬಿಂಬಿಸುತ್ತಿವೆ” ಎಂದು ಹೇಳಿದರು.

ಭಾರತದ ಎಲ್ಲಾ ಪ್ರಮುಖ ಧರ್ಮಗಳ ಹಿರಿಯರು ಜಂಟಿಯಾಗಿ ಸಲಿಂಗ ವಿವಾಹಗಳನ್ನು ವಿರೋಧಿಸಿದ್ದಾರೆ. ಮದುವೆ ಮನರಂಜನೆಯಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಸರ್ಕಾರ ಮತ್ತು ಧಾರ್ಮಿಕ ಮುಖಂಡರ ವಿರೋಧದ ಹೊರತಾಗಿಯೂ, ನ್ಯಾಯಾಧೀಶರು ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡರು.

1954ರ ವಿಶೇಷ ವಿವಾಹ ಕಾಯ್ದೆಯಲ್ಲಿ  LGBTQ+ಜನರನ್ನು ಸೇರಿಸಲು ಬದಲಾವಣೆಗಳನ್ನು ಮಾಡಬಹುದೇ, ಇದು ಧಾರ್ಮಿಕ ವೈಯಕ್ತಿಕ ಕಾನೂನುಗಳಡಿ ಬರುವುದಿಲ್ಲ ಎಂದು ಹೇಳಬಹುದೇ ಅಥವಾ ಇಲ್ಲವೇ ಎನ್ನುವುದನ್ನು ಪರಿಶೀಲಿಸುವುದಾಗಿ ನ್ಯಾಯಾಲಯ ಹೇಳಿದೆ.

ವಿಶೇಷ ವಿವಾಹ ಕಾಯ್ದೆ ಎಂದರೇನು?

ಭಾರತದಲ್ಲಿ, ಮುಸ್ಲಿಂ ವಿವಾಹ ಕಾಯ್ದೆ ಮತ್ತು ಹಿಂದೂ ವಿವಾಹ ಕಾಯ್ದೆಯಂತಹ ಧಾರ್ಮಿಕ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಹೆಚ್ಚಿನ ಸಂಖ್ಯೆಯ ವಿವಾಹಗಳು ನಡೆಯುತ್ತವೆ.

ಆದಾಗ್ಯೂ, ಈ ಕಾನೂನುಗಳ ಅಡಿಯಲ್ಲಿ, ಒಂದೇ ಧರ್ಮ ಅಥವಾ ಒಂದೇ ಜಾತಿಗೆ ಸೇರಿದ ಇಬ್ಬರು ವ್ಯಕ್ತಿಗಳ ನಡುವಿನ ವಿವಾಹಗಳನ್ನು ಮಾತ್ರ ಅನುಮತಿಸಲಾಗಿದೆ, ಅಂದರೆ, ಹಿಂದೂ ಅಥವಾ ಮುಸ್ಲಿಂ ಸಮುದಾಯದ ವ್ಯಕ್ತಿಯು ಬೇರೆ ಧರ್ಮದಲ್ಲಿ ಮದುವೆಯಾಗಲು ಬಯಸಿದರೆ, ಅವರಲ್ಲಿ ಒಬ್ಬರು ತಮ್ಮ ಧರ್ಮವನ್ನು ಬದಲಾಯಿಸಬೇಕಾಗುತ್ತದೆ. 

“ಇದು ಬಹಳ ಸಮಸ್ಯಾತ್ಮಕ ಪರಿಕಲ್ಪನೆಯಾಗಿದೆ. ಇದು ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿಯುತ್ತದೆ ಮತ್ತು ಭಾರತದ ಸಂವಿಧಾನವು ಖಾತರಿಪಡಿಸಿದ ನಿಮ್ಮ ಆಯ್ಕೆಯ ಧರ್ಮವನ್ನು ಆಚರಿಸುವ ಹಕ್ಕನ್ನು ಕಸಿದುಕೊಳ್ಳುತ್ತದೆ” ಎಂದು ವಕೀಲ ಅಕ್ಷತ್ ಬಾಜಪೇಯಿ ಹೇಳುತ್ತಾರೆ.

ಹೀಗಾಗಿ ಸ್ವಾತಂತ್ರ್ಯದ ನಂತರ ವಿವಿಧ ಧರ್ಮಗಳು ಮತ್ತು ಜಾತಿಗಳ ಮದುವೆಗಳಿಗೆ ಕಾನೂನು ವ್ಯವಸ್ಥೆಯನ್ನು ತರಲು ಸರ್ಕಾರ ನಿರ್ಧರಿಸಿತು.

“ಸಂಸತ್ತು 1954ರ ವಿಶೇಷ ವಿವಾಹ ಕಾಯ್ದೆಯನ್ನು ಜಾರಿಗೆ ತಂದಿದೆ, ಇದು ಮದುವೆಯಾಗಲು ಧರ್ಮವನ್ನು ತ್ಯಜಿಸುವ ಅಗತ್ಯವಿಲ್ಲ ಎಂದು ಒತ್ತಿಹೇಳುತ್ತದೆ. ಈ ಕಾನೂನು ವೈಯಕ್ತಿಕ ಸ್ವಾತಂತ್ರ್ಯದ ವಿಷಯದಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ” ಎಂದು ಬಾಜಪೇಯಿ ಹೇಳಿದರು.

ಕಾಯ್ದೆಯಲ್ಲಿ ‘ಪುರುಷ’ ಮತ್ತು  ‘ಮಹಿಳೆ’ ಎಂಬ ಪದಗಳನ್ನು ‘ಸಂಗಾತಿ’  ಎಂಬ ಪದದಿಂದ ಬದಲಾಯಿಸಿದರೆ, ವಿವಾಹ ಸಮಾನತೆ ಲಭ್ಯವಾಗುತ್ತದೆ ಎಂದು ಅರ್ಜಿದಾರರು ನ್ಯಾಯಾಲಯದಲ್ಲಿ ವಾದಿಸಿದರು.

ಆದರೆ, ತನಿಖೆ ಮುಂದುವರೆದಂತೆ,  ಈ ಒಂದು ಕಾನೂನಿನಲ್ಲಿ ಬದಲಾವಣೆಗಳನ್ನು ಮಾಡುವುದರಿಂದ ಹೆಚ್ಚು ಪ್ರಯೋಜನವಿಲ್ಲ ಎಂಬುದು ಸ್ಪಷ್ಟವಾಯಿತು.

ವಿಚ್ಛೇದನ, ದತ್ತು, ಉತ್ತರಾಧಿಕಾರ, ಜೀವನಾಂಶ ಮತ್ತು ಇತರ ಸಮಸ್ಯೆಗಳನ್ನು ನಿಯಂತ್ರಿಸುವ ಡಜನ್ನುಗಟ್ಟಲೆ ಕಾನೂನುಗಳು ಧಾರ್ಮಿಕ ವೈಯಕ್ತಿಕ ಕಾನೂನುಗಳ ವ್ಯಾಪ್ತಿಯಲ್ಲಿ ಬರುತ್ತವೆ. ಹೀಗಾಗಿ ಈ ಒಂದು ಕಾನೂನಿನಲ್ಲಿ ಬದಲಾವಣೆಗಳನ್ನು ಮಾಡಿದರೆ ಸಾಲದು ಎಂಬುದು ಸ್ಪಷ್ಟ.

“ಇದು ಅಪರೂಪದ ಪರಿಸ್ಥಿತಿ ಮತ್ತು ಈ ತೀರ್ಪನ್ನು ನೀಡಲು ಉನ್ನತ ಮಟ್ಟದ ರಾಜಕೀಯದ ಅಗತ್ಯವಿದೆ” ಎಂದು ಬಾಜಪೇಯಿ ಹೇಳಿದರು.

ಕೋರ್ಟಿನ ಮುಂದಿರುವ ಇತರ ಮಾರ್ಗಗಳು ಯಾವುವು?

ನ್ಯಾಯಾಲಯದ ತೀರ್ಪು ಹೇಗೆ ಬರುತ್ತದೆ ಎಂದು ಊಹಿಸುವುದು ತುಂಬಾ ಕಷ್ಟ.

ಆದರೆ, ಸಲಿಂಗ ದಂಪತಿಗಳಿಗೆ ಜಂಟಿ ಬ್ಯಾಂಕ್ ಖಾತೆಗಳನ್ನು ತೆರೆಯುವುದು, ವಿಮಾ ಪಾಲಿಸಿಗಳಲ್ಲಿ ಪಾಲುದಾರರನ್ನು ನಾಮನಿರ್ದೇಶನ  ಮಾಡುವುದು ಮತ್ತು ಆಸ್ತಿಯ ಸಹ-ಮಾಲೀಕತ್ವವನ್ನು ನೀಡುವುದು ಮುಂತಾದ ಸಾಮಾಜಿಕ ಮತ್ತು  ಕಾನೂನು ಹಕ್ಕುಗಳನ್ನು ನೀಡುವ ಸಾಧ್ಯತೆಯಿದೆ ಎಂದು  ಎಲ್ಲರೂ ಊಹಿಸುತ್ತಿದ್ದಾರೆ.

ಸಲಿಂಗ ದಂಪತಿಗಳಿಗೆ ಈ ಹಕ್ಕುಗಳನ್ನು ನೀಡುವ ವಿಷಯವನ್ನು ಸರ್ಕಾರ ಪರಿಗಣಿಸುತ್ತಿದೆ ಎಂದು ಸಾಲಿಸಿಟರ್ ಜನರಲ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.

ಜಾಗತಿಕವಾಗಿ ಹೆಚ್ಚು ಅಂಗೀಕರಿಸಲ್ಪಟ್ಟ ಅಂಕಿಅಂಶಗಳ ಪ್ರಕಾರ, ಸುಮಾರು 140 ಮಿಲಿಯನ್ LGBTQ+ಜನರನ್ನು  ಹೊಂದಿರುವ ದೇಶದಲ್ಲಿ ಎಲ್ಲರೂ ಸುಪ್ರೀಂ ಕೋರ್ಟ್ ತೀರ್ಪನ್ನು ಕುತೂಹಲದಿಂದ ಕಾಯುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು