Tuesday, June 18, 2024

ಸತ್ಯ | ನ್ಯಾಯ |ಧರ್ಮ

ಜೆಡಿಎಸ್‌ ಕಚೇರಿ ಆವರಣದಲ್ಲಿ ʼವಿದ್ಯುತ್‌ ಕಳ್ಳ ಕುಮಾರಸ್ವಾಮಿʼ ಪೋಸ್ಟರ್!

ಬೆಂಗಳೂರು: ವಿದ್ಯುತ್ ಕಳ್ಳತನ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ವಿಜಿಲೆನ್ಸ್ ತಂಡ ಎಫ್‌ಐಆರ್ ದಾಖಲಿಸಿದ ಬೆನ್ನಲ್ಲೇ, ಕೆಲ ಕಿಡಿಗೇಡಿಗಳು ನಗರದ ಜೆಡಿಎಸ್ ಕಚೇರಿ ಆವರಣದಲ್ಲಿ ‘ವಿದ್ಯುತ್ ಕಳ್ಳ ಕುಮಾರಸ್ವಾಮಿ’ ಎಂಬ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಮಂಗಳವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಶ್ರೀರಾಂಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪೋಸ್ಟರುಗಳನ್ನು ತೆಗೆದಿದ್ದಾರೆ.

ಮಂಗಳವಾರ ರಾತ್ರಿ, ಬೆಂಗಳೂರಿನ ಜೆಡಿಎಸ್ ಕೇಂದ್ರ ಕಚೇರಿಯ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎಂದು ಶಂಕಿಸಲಾದ ಕೆಲವು ಕಿಡಿಗೇಡಿಗಳು ‘ವಿದ್ಯುತ್ ಕಳ್ಳ ಕುಮಾರಸ್ವಾಮಿ’ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ವಿಷಯ ಬೆಳಕಿಗೆ ಬಂದ ನಂತರ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪೋಸ್ಟರ್‌ಗಳನ್ನು ತೆಗೆದಿದ್ದಾರೆ. ಈ ಸಂಬಂಧ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

ಮುಂಜಾಗ್ರತಾ ಕ್ರಮವಾಗಿ ಕುಮಾರಸ್ವಾಮಿ ಅವರ ಜೆಪಿ ನಗರದ ನಿವಾಸಕ್ಕೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಮಂಗಳವಾರ ಕರ್ನಾಟಕ ಕಾಂಗ್ರೆಸ್, ಕುಮಾರಸ್ವಾಮಿ ದೀಪಾವಳಿ ಸಂದರ್ಭದಲ್ಲಿ ತಮ್ಮ ಜೆಪಿ ನಗರದ ಮನೆಗೆ ದೀಪಾಲಂಕಾರ ಮಾಡಲು ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದಿದ್ದಾಗಿ ಆರೋಪಿಸಲಾಗಿತ್ತು.

ಇದಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಆರೋಪವನ್ನು ಒಪ್ಪಿಕೊಂಡರಾದರೂ, ಅದು ಮನೆಗೆ ದೀಪಾಲಂಕಾರ ಮಾಡಲು ಬಂದಿದ್ದ ಕೆಲಸಗಾರರ ಅಚಾತುರ್ಯ ಎಂದಿದ್ದರು. ತಪ್ಪಿಗೆ ದಂಡ ಕಟ್ಟಲು ಸಿದ್ಧ ಎಂದಿದ್ದರು.

ನಂತರ ಬೆಸ್ಕಾಂನ ವಿಜಿಲೆನ್ಸ್ ಅಧಿಕಾರಿಗಳ ತಂಡ ಕುಮಾರಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿದೆ. ಕುಮಾರಸ್ವಾಮಿಗೆ ಬೆಸ್ಕಾಂ ಅಧಿಕಾರಿಗಳು ದಂಡ ವಿಧಿಸುವ ಸಾಧ್ಯತೆಯಿದೆ.

ವಿದ್ಯುತ್ ಕಳ್ಳತನ ಅಕ್ರಮವಾಗಿದ್ದು, ಕುಮಾರಸ್ವಾಮಿ ವಿರುದ್ಧ ಬೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದರು.

Related Articles

ಇತ್ತೀಚಿನ ಸುದ್ದಿಗಳು