Sunday, June 16, 2024

ಸತ್ಯ | ನ್ಯಾಯ |ಧರ್ಮ

ಕೆಇಎ ಪರೀಕ್ಷೆಗೆ ಹಿಜಾಬ್ ನಿಷೇಧ: ಸುಳ್ಳು ಸುದ್ದಿಯೆಂದ ಸಚಿವ ಸುಧಾಕರ್

ಬೆಂಗಳೂರು: ನಿನ್ನೆ ಕೆಇಎ ಪರಿಕ್ಷೆಗೆ ಸಂಬಂಧಿಸಿದಂತೆ ಹೊರಡಿಸಲಾಗಿದ್ದ ವಸ್ತ್ರ ಸಂಹಿತೆಯಲ್ಲಿ ಹಿಜಾಬ್‌ ಧರಿಸುವುದನ್ನು ಕೂಡಾ ನಿಷೇಧಿಸಲಾಗಿದೆಯೆಂದು ವರದಿಯಾಗಿತ್ತು. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ. ಸುಧಾಕರ್ ಹಿಜಾಬ್‌ ಧರಿಸಲು ಯಾವುದೇ ಆಕ್ಷೇಪ ಇಲ್ಲ ಎಂದು ತಿಳಿಸಿದ್ದಾರೆ.

KEA ಹೊರಡಿಸಿದ್ದ ವಸ್ತ್ರ ಸಂಹಿತೆಯನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ ಹಲವರು ಖಂಡಿಸಿ ಹೇಳಿಕೆ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಉನ್ನತ ಶಿಕ್ಷಣ ಸಚಿವ ”ಹಿಜಾಬ್‌ ಇತರ ತಲೆ ಹೊದಿಕೆಗಳಂತೆ ಅಡ್ಡಿಯಾಗುವುದಿಲ್ಲ. ಹಿಜಾಬ್ ಧರಿಸಿ ಅಭ್ಯರ್ಥಿಗಳು ಪರೀಕ್ಷಾ ಅಕ್ರಮಕ್ಕೆ ಬ್ಲೂಟೂತ್ ಸಾಧನಗಳನ್ನು ಬಳಸಲು ಸಾಧ್ಯವಿಲ್ಲ. ಡ್ರೆಸ್ ಕೋಡ್ ನಿಯಮಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ” ಎಂದು ಅವರು ಬೇಸರ ವ್ಯಕ್ತಪಡಿಸಿದರು.

”ಪರೀಕ್ಷಾ ಕೇಂದ್ರದಲ್ಲಿ ಕಟ್ಟುನಿಟ್ಟಾದ ಭದ್ರತಾ ಕ್ರಮಗಳು ಇರಲಿವೆ. ಹಿಜಾಬ್ ಧರಿಸಿರುವ ಅಭ್ಯರ್ಥಿಗಳು ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಿಗೆ ವರದಿ ಮಾಡಿಕೊಳ್ಳಬೇಕು. ಹಿಂದಿನ ವರ್ಷಗಳಲ್ಲಿ ವರದಿಯಾಗಿರುವ ವಂಚನೆ ಘಟನೆಗಳನ್ನು ತಡೆಗಟ್ಟಲು ಹೆಚ್ಚಿನ ಮೆಟಲ್ ಡಿಟೆಕ್ಟರ್‌ಗಳನ್ನು ಬಳಸಲಾಗುತ್ತದೆ. ಹಾಗಾಗಿ ಸಂಪೂರ್ಣ ತಪಾಸಣೆ ಇರಲಿದೆ. ಈ ನಿಯಮಗಳು ಹೊಸದೇನಲ್ಲ. ಅವು ಮೊದಲೇ ಅಸ್ತಿತ್ವದಲ್ಲಿವೆ. ಅನಗತ್ಯ ಕ್ಯಾಪ್ ಅಥವಾ ಸ್ಕಾರ್ಫ್‌ಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಈ ನಿಷೇಧ ಹಿಜಾಬ್‌ಗೆ ಅನ್ವಯಿಸುವುದಿಲ್ಲ” ಎಂದು ಈ ಸಂದರ್ಭದಲ್ಲಿ ಅವರು ತಿಳಸಿದರು.

ನ.18 ಮತ್ತು 19 ರಂದು ರಾಜ್ಯಾದ್ಯಂತ ವಿವಿಧ ನೇಮಕಾತಿ ಪರೀಕ್ಷೆಗಳು ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಪರೀಕ್ಷಾ ಪ್ರಾಧಿಕಾರ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆಯನ್ನು ನಿಗದಿಪಡಿಸಿ ಆದೇಶ ಹೊರಡಿಸಿತ್ತು.

Related Articles

ಇತ್ತೀಚಿನ ಸುದ್ದಿಗಳು