ವಿಜಯನಗರ: ಪಣಿಯನ್ ಬುಡಕಟ್ಟು ಸಮುದಾಯಕ್ಕೆ ಸೇರಿದವರಾದ ದಿವ್ಯಾ ಪಣಿಯನ್ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಡಾಕ್ಟರೇಟ್ ನೋಡಿ ಗೌರವಿಸಿದೆ. ಇದರೊಂದಿಗೆ ಅವರು ಎರವ ಸಮುದಾಯದ ಮೊದಲ ಪಿಎಚ್ಡಿ ಪದವೀಧರರಾಗಿ ಹೊರಹೊಮ್ಮಿದ್ದಾರೆ.
ಹೆಗ್ಗಡದೇವನ ಕೋಟೆಯ ಡಿ ಬಿ ಕುಪ್ಪೆ ಗ್ರಾಮ ಪಂಚಾಯತಿಯ ಸೇಬಿನಕೊಲ್ಲಿ ಹಾಡಿಯ ನಿವಾಸಿಯಾದ ರಾಜು ಮತ್ತು ಲಕ್ಷ್ಮಿಯವರ ಮಗಳಾದ ದಿವ್ಯಾ ಎಸ್ ಆರ್ ಅವರು ಕಿತ್ತು ತಿನ್ನುವ ಬಡತನದ ನಡುವೆಯೇ ಛಲದಿಂದ ಓದಿ ಇಂದು ಸಮುದಾಯವೇ ಹೆಮ್ಮೆ ಪಡುವಂತಹ ಸಾಧನೆಯನ್ನು ಸಾಧಿಸಿದ್ದಾರೆ.

ಅರಣ್ಯಧಾರಿತ ಜೀವನದ ನಡುವೆಯೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಚ್ಚೂರು ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಡಿ.ಬಿ ಕುಪ್ಪೆಯಲ್ಲಿ ಮಧ್ಯಾಮಿಕ ಶಿಕ್ಷಣ, ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜುನಲ್ಲಿ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ, ಸರಕಾರಿ ಪ್ರಥಮ ಧರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣ, ಛಾಯಾದೇವಿ ಬಿ ಎಡ್ ಕಾಲೇಜು ಎನ್ ಆರ್ ಮೊಹಲ್ಲ ಮೈಸೂರು ಇಲ್ಲಿ ವೃತ್ತಿ ಶಿಕ್ಷಣವನ್ನು ಹಾಗೂ ಎಂ ಎ ಮತ್ತು ಪಿಎಚ್ಡಿಯನ್ನು ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ ಪಡೆದಿದ್ದಾರೆ.
ದಿವ್ಯಾ ಅವರು ʼಪಣಿಯನ್ ಬುಡಕಟ್ಟಿನ ಸಾಮಾಜಿಕ ಅಧ್ಯಯನʼ ಎನ್ನುವ ವಿಷಯದ ಕುರಿತು ಡಾ. ಕೆ ಎಮ್ ಮೇತ್ರಿಯವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ಪ್ರೌಢ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.