Saturday, June 15, 2024

ಸತ್ಯ | ನ್ಯಾಯ |ಧರ್ಮ

ಘನತೆಯ ಬದುಕು-ಸಾಂಸ್ಕೃತಿಕ ಮಧ್ಯಪ್ರವೇಶ

ಮೊದಲನೆಯದಾಗಿ ಘನತೆಯ ಬದುಕು ಎನ್ನುವುದೇ ತುಂಬಾ ಸಂಕೀರ್ಣವಾದ ಸಂಗತಿ. ಅವರವರ ಭಾವಕ್ಕೆ, ಅವರವರ ಭಕುತಿಯ ತೆಕ್ಕೆಗೆ ದಕ್ಕುವ ಹಾಗೂ ದಕ್ಕದಿರುವ ಸಂಗತಿ. ಯಾಕೆಂದರೆ ಯಾವುದು ಘನತೆಯ ಬದುಕು ಎನ್ನುವುದೇ ಮತ್ತೆ ಮತ್ತೆ ಕೇಳಿಕೊಳ್ಳಬೇಕಾದ ವಿಚಾರ. ಆತ್ಮಾವಲೋಕನ ಮಾಡಿಕೊಳ್ಳಬಹುದಾದ ಆಚಾರ.

ಇಲ್ಲಿ ಘನತೆ ಶಬ್ದಕ್ಕೆ ಸಮಾನಾರ್ಥಕವಾಗಿ ನೆಮ್ಮದಿ, ಗೌರವ, ಸುಖ, ಶಾಂತಿ ಅಂತಾ ಏನಾದರೂ ಆರೋಪಿಸಬಹುದಾಗಿದೆ. ಈ ನೆಮ್ಮದಿಯ ನೆಲೆಗಳನ್ನು ಕಂಡುಕೊಳ್ಳುವುದರಲ್ಲಿಯೇ ಮನುಷ್ಯನ ಆಯಸ್ಸಿನ ಬಹುಭಾಗ ಕಳೆದು ಹೋಗುತ್ತದೆಯಾದರೂ ಅದು ಯಾರ ಅಳತೆಗೂ ಸಿಕ್ಕದ ಮಾಯಾಮೃಗ. ನೆಮ್ಮದಿ ಸಿಕ್ಕಿದೆ ಎಂದು ಭ್ರಮೆಯಲ್ಲಿರ ಬಹುದಾದರೂ ಅದೂ ಸಹ ತಾತ್ಕಾಲಿಕ ಮಾನಸಿಕ ಸ್ಥಿತಿ. ಸಮಯ ಸಂದರ್ಭ ಸನ್ನಿವೇಶಗಳು ಬದಲಾದಂತೆಲ್ಲಾ ಕಟ್ಟಿಕೊಂಡ ನೆಮ್ಮದಿಯ ನೆಲೆಯೂ ಸ್ಥಿತ್ಯಂತರಗೊಳ್ಳುವುದೇ ಬದುಕಿನ ವಾಸ್ತವ.

ದೇವರ ಪೂಜೆ ಪುನಸ್ಕಾರಗಳಲ್ಲಿ  ಬದುಕಿನ ಸಾರ್ಥಕತೆ ಕಂಡುಕೊಂಡ ನನ್ನ ತಾಯಿಯನ್ನು ಕೇಳಿದರೆ ಅದೇ ನೆಮ್ಮದಿಯ ಬದುಕು ಎನ್ನುವಳು. ಸದಾ ಹೊಲಮನೆ ಕಾಯಕ ನಿಷ್ಟನಾದ ತಾತನನ್ನು ಕೇಳಿದರೆ ದುಡಿದು ತಿನ್ನುವುದೇ ಘನತೆಯ ಬದುಕು ಎನ್ನುವನು. ಕುಡುಕರು ಕುಡಿತದಾನಂದದಲ್ಲೇ ನೆಮ್ಮದಿ ಕಂಡುಕೊಂಡರೆ, ದೈವ ಭಕ್ತಿಯಲಿ ಹಲವರು ಘನತೆಯ ಬದುಕು ಇದೆ ಎನ್ನುವರು. ಕೆಲವರು ಸಂಪಾದನೆಯೊಂದೇ ಘನತೆಯ ಬದುಕಿಗೆ ದಾರಿ ಎಂದು ಕೊಂಡರೆ, ಇನ್ನು ಹಲವರು ಸಂಪಾದಿಸದೇ ಸುಖವಾಗಿರ ಬೇಕೆನ್ನುವವರು. ಹೀಗೆ, ಘನತೆಯ ನೆಮ್ಮದಿಯ ಸಾರ್ಥಕತೆಯ ಬದುಕು ಅವರವರ ಭಾವಕ್ಕೆ ಸಂಬಂಧಿಸಿದ್ದು. ಆದರೆ ಇದೆಲ್ಲಾ ವೈಯಕ್ತಿಕ ನೆಲೆಯ ಮಾತಾಯಿತು.

ಆದರೆ ಇಲ್ಲಿ ಪ್ರಸ್ತಾಪಿಸಲಾದ ಘನತೆಯ ಬದುಕು ಸಾಮೂಹಿಕ ಜನತೆಯ ನೆಮ್ಮದಿಯ ಬದುಕಿಗೆ ಸಂಬಂಧಿಸಿದ್ದು. ಯಾವುದೇ ಕಾಲಕ್ಕೂ ಯಾವುದೇ ಕಾರಣಕ್ಕೂ ದೇಶವಾಸಿಗಳೆಲ್ಲಾ ಘನತೆಯ ಬದುಕನ್ನು ಬಾಳುತ್ತಿದ್ದರು ಎನ್ನುವುದು ಮನುಕುಲದ ಚರಿತ್ರೆಯಲ್ಲಿ ದಾಖಲಾಗಿಲ್ಲ. ಹಾಗೆ ಬಾಳಬೇಕೆಂದರೂ ಅದನ್ನು ಹಾಳು ಮಾಡುವ ಹುನ್ನಾರಗಳು ನಿರಂತರವಾಗಿ ನಡೆಯುತ್ತಲೇ ಬಂದಿವೆ, ಬರುತ್ತಿವೆ. 

ಯಾಕೆಂದರೆ.. ಘನತೆಯ ಬದುಕು ಎನ್ನುವುದು ಎಲ್ಲರ ಬಯಕೆಯಾಗಿದೆ. ಎಲ್ಲರೂ ನೆಮ್ಮದಿಯಾಗಿ ಬದುಕಬೇಕೆಂಬುದು ಎಲ್ಲಾ ಸಮಾಜ ಸುಧಾರಕರ ಆದರ್ಶವೂ ಆಗಿದೆ. ಇಂತಹ ಯುಟೋಪಿಯಾ ಮನುಕುಲದ ಅಗತ್ಯವೂ ಆಗಿದೆ. ಆದರೆ ವಾಸ್ತವದಲ್ಲಿ ಅದು ಸಾಧ್ಯವೇ ಅನ್ನುವುದೇ ಪ್ರಶ್ನೆ. ಯಾಕೆಂದರೆ ಯಾವುದೇ ಅಸಮಾನ ವ್ಯವಸ್ಥೆಯಲ್ಲಿ ಘನತೆಯ ಬದುಕು ಎನ್ನುವುದೇ ಉಳ್ಳವರ, ಮೇಲ್ವರ್ಗದವರ ಸ್ವತ್ತಾಗಿರುತ್ತದೆ. ತಾರತಮ್ಯ ಇರುವ ಯಾವುದೇ ಸಮಾಜದಲ್ಲಿ ಆಳುವ ವರ್ಗಗಳ ನಿರ್ದೇಶನದಡಿಯಲ್ಲಿ ಅಸಂಖ್ಯಾತ ದುಡಿಯುವ ವರ್ಗ ಶೋಷಣೆಗೆ ಒಳಗಾಗುತ್ತಲೇ ಇರುತ್ತದೆ. ಶೋಷಕ ಪ್ರಭುತ್ವದಲ್ಲಿ ಬಹುಸಂಖ್ಯಾತ ಶೋಷಿತರಿಗೆ ಘನತೆಯ ಬದುಕು ಎನ್ನುವುದೇ ಮರೀಚಿಕೆಯಾಗಿರುತ್ತದೆ.

ಹಿಂದಿನ ಕತೆ ಬಿಡೋಣ. ಸ್ವಾತಂತ್ರ್ಯದ ನಂತರ ಈ ದೇಶದ ಸ್ಥಿತಿಯ ಬಗ್ಗೆ ಅವಲೋಕಿಸೋಣ. ಭಾರತಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಬಂದಿತು. ಅಂಬೇಡ್ಕರರವರು ಸಮಾನತೆಯ ಆಧಾರದ ಮೇಲೆ ಸಂವಿಧಾನವನ್ನೂ ರಚಿಸಿದರು. ಆದರೆ ಅಸಮಾನತೆ ತೊಲಗಿದೆಯಾ? ಜಾತಿ ವ್ಯವಸ್ಥೆ ಶಿಥಿಲ ಗೊಂಡಿದೆಯಾ? ಲಿಂಗ ತಾರತಮ್ಯ ಅವನತಿ ಹೊಂದಿದೆಯಾ? ಶೋಷಕ ಮತ್ತು ಶೋಷಿತರ ನಡುವಿನ ವ್ಯತ್ಯಾಸ ವಿನಾಶವಾಗಿದೆಯಾ? ಈ ಯಾವುದೇ ಪ್ರಶ್ನೆಗೂ ಉತ್ತರ ಇಲ್ಲ ಎನ್ನುವುದೇ ಆಗಿರುವಾಗ ಸಮಾನತೆ ತರುವಲ್ಲಿ ಸಂವಿಧಾನ ಸೋತಿದೆಯಾ ಅಥವಾ ಸಂವಿಧಾನದ ಆಶಯವನ್ನು ಜಾರಿಮಾಡದೇ ಮೇಲ್ವರ್ಗದ ಹಿತಾಸಕ್ತಿಯ ಆಳುವ ವರ್ಗಗಳು ತಮ್ಮ ಹಿಡಿತವನ್ನು ಬಿಟ್ಟುಕೊಡದೆ ಗಟ್ಟಿಗೊಳಿಸಿಕೊಂಡೇ ಬಂದಿವೆಯಾ?

ಕೃಪೆ: ದಿ ಪ್ರಿಂಟ್

ನಮ್ಮ ದೇಶದಲ್ಲಿ ಜಾರಿಯಲ್ಲಿರುವುದು ಪ್ರಜಾಪ್ರಭುತ್ವ ಎನ್ನುವುದೇ ಆಳುವ ವರ್ಗಗಳು ಹುಟ್ಟಿಸಿದ ಭ್ರಮೆ. ಇಲ್ಲಿರುವುದು ಬಂಡವಾಳಶಾಹಿ ಪ್ರಜಾಪ್ರಭುತ್ವ ಎನ್ನುವುದೇ ನಿರಾಕರಿಸಲಾಗದ ವಾಸ್ತವ. ಯಾವುದೇ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸಮಾನತೆ ಎನ್ನುವುದು ಸಾಧ್ಯವೇ? ಶೋಷಕ ಪ್ರಭುಗಳು ತನ್ನೆಲ್ಲಾ ಪ್ರಜೆಗಳಿಗೆ ಘನತೆಯ ಬದುಕನ್ನು ಹೊಂದುವ ಅವಕಾಶವನ್ನು ಒದಗಿಸಿಕೊಡಲು ಆಗುತ್ತದಾ? ಬಂಡವಾಳವಾದ ಎನ್ನುವುದೇ ಕೆಲವರ ಲಾಭಕ್ಕಾಗಿ ಹಲವರನ್ನು ಶೋಷಿಸುವ ವ್ಯವಸ್ಥೆಯಾಗಿರುವಾಗ ಸಮಾನತೆ ಎಂಬುದು ಕೇವಲ ಆದರ್ಶದ ಮಾತಲ್ಲದೆ ಬೇರೆ ಇನ್ನೇನು? ಜಾಗತೀಕರಣ ಎಂಬುದೇ  ಬಂಡವಾಳವಾದದ ಜಾಗತಿಕ ವಿಸ್ತರಣೆಯಾಗಿರುವಾಗ, ಅದೇ ಈಗ ಕಾರ್ಪೋರೇಟಿಕರಣಗೊಂಡು ದೇಶವನ್ನು ನಿಯಂತ್ರಣಕ್ಕೆ ತೆಗೆದು ಕೊಂಡಿರುವಾಗ, ಆಳುವ ಪ್ರಭುಗಳು ಕಾರ್ಪೋರೇಟ್ ಲೂಟಿ ವ್ಯವಸ್ಥೆಯ ವ್ಯವಸ್ಥಾಪಕರಾಗಿರುವಾಗ ಈ ದೇಶದಲ್ಲಿರುವ ಅಸಂಖ್ಯಾತ ಕೆಳ ತಳ ವರ್ಗದವರಿಗೆ, ರೈತ ಕೂಲಿ ಕಾರ್ಮಿಕರಿಗೆ ಘನತೆಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿದೆಯಾ? ಜನ ದಂಗೆ ಎದ್ದಾರು ಎನ್ನುವ ಭಯದಲ್ಲಿ ಹಾಗೂ ಚುನಾವಣಾ ವ್ಯವಸ್ಥೆಯ ಸೋಲಿನ ಆತಂಕದಲ್ಲಿ ಪ್ರಭುತ್ವ ಕೊಡಮಾಡುವ ಜನಪರ ಹೆಸರಿನ ಯೋಜನೆಗಳು, ಉಚಿತ ಕೊಡುಗೆಗಳು, ಸಾಲಮನ್ನಾ ಸವಲತ್ತುಗಳೆಲ್ಲ ಕೇವಲ ಜನತೆಯ ಕಣ್ಣೊರೆಸುವ ಹಾಗೂ ಪ್ರತಿಭಟನಾ ಸಾಧ್ಯತೆಗಳನ್ನು ಡೈಲ್ಯೂಟ್ ಮಾಡುವ ತಂತ್ರಗಳಾಗಿವೆ. ಬದುಕನ್ನು ಕಟ್ಟಿಕೊಳ್ಳುವ ಅವಕಾಶಗಳನ್ನು ಸೃಷ್ಟಿಸುವ ಬದಲು ದುಡಿಯುವ ಜನರನ್ನು ಈ ಯೋಜನೆಗಳ ಭ್ರಮೆಯಲ್ಲಿ ಬದುಕುವಂತೆ ಮಾಡುವುದರಲ್ಲೇ ಬಂಡವಾಳವಾದದ ಗೆಲುವಿದೆ; ಸಂವಿಧಾನದ ಸಮಾನತೆಯ ಆಶಯದ ಸೋಲಿದೆ. ಘನತೆಯ ಬದುಕು ಎನ್ನುವುದೇ ಇದ್ದುದರಲ್ಲಿ ಹೊಂದಾಣಿಕೆ ಮಾಡಿಕೊಂಡು ನೆಮ್ಮದಿ ಕಂಡುಕೋ ಎನ್ನುವ ಸಿದ್ಧಾಂತದಲ್ಲಿದೆ. 

ಅದರ ಜೊತೆಯಲ್ಲಿ ಅಸಮಾನತೆಯನ್ನೇ ತನ್ನ ಅಜೆಂಡಾ ಮಾಡಿಕೊಂಡ ಈ ಮನುವಾದಿ ಪ್ರಭುತ್ವವೂ ಬಂಡವಾಳಶಾಹಿಗಳು ಹಾಗೂ ಕಾರ್ಪೋರೇಟ್ ಲೂಟಿಕೋರರ ಜೊತೆ ಸೇರಿಕೊಂಡು ಕಳೆದ ಹತ್ತು ವರ್ಷದಿಂದ ಭಾರತದ ಆಡಳಿತದ ಚುಕ್ಕಾಣಿ ಹಿಡಿದಿದೆ. ಜಾತಿ ಧರ್ಮಾಭಿಮಾನದ ಉನ್ಮಾದವನ್ನು ಕೆರಳಿಸಿ, ಅನ್ಯಧರ್ಮ ದ್ವೇಷವನ್ನು  ಉಲ್ಬಣಿಸುವಂತೆ ಮಾಡಿ ಇಡೀ ದೇಶವನ್ನೇ ಕೇಸರಿಕರಣಗೊಳಿಸುವ ಪ್ರಯತ್ನವನ್ನು ಮಾಡುತ್ತಿದೆ. ಹೇಗಾದರೂ ಮಾಡಿ ಸಮಾನತೆ ಸಾರುವ ಸಂವಿಧಾನವನ್ನು ಮೊದಲು ಶಿಥಿಲಗೊಳಿಸಿ, ನಂತರ ಬದಲಾಯಿಸಿ ಮನುಧರ್ಮಶಾಸ್ತ್ರವನ್ನೇ ಹಿಂದೂರಾಷ್ಟ್ರದ ಸಂವಿಧಾನವನ್ನಾಗಿಸುವ ಯೋಜನೆ ಈ ಹಿಂದುತ್ವವಾದಿ ಸಂಘ ಪರಿವಾರದ ಉನ್ನತ ನಾಯಕರುಗಳದ್ದಾಗಿದೆ. ಮುಂದೊಮ್ಮೆ ಅವರ ಯೋಜನೆ ಕಾರ್ಯಗತವಾದರೆ ಬಹುಜನರ ಬದುಕು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗುತ್ತದೆ. ಸಂವಿಧಾನದ ಆಶ್ರಯದಲ್ಲಿ ಇರುವುದರಲ್ಲೇ ನೆಮ್ಮದಿಯ ನೆಲೆ ಕಂಡುಕೊಂಡಿದ್ದೇವೆಂಬ ಭ್ರಮೆಯಲ್ಲಿರುವವರೂ ಸಹ ಹಿಂದುತ್ವವಾದಿ ಪ್ರಭುತ್ವದಲ್ಲಿ ಗುಲಾಮರಾಗಿ ಕೇವಲ ಬದುಕುವ ಹಕ್ಕನ್ನೇ ಕಳೆದು ಕೊಳ್ಳುತ್ತಾರೆ. ಮತ್ತದೇ ಸನಾತನವಾದಿಗಳ ವರ್ಣಬೇಧ ವ್ಯವಸ್ಥೆಯಲ್ಲಿ ಪ್ರತಿಭಟನೆಯ ಧ್ವನಿಯನ್ನೂ ಹತ್ತಿಕ್ಕಲಾಗುತ್ತದೆ. 

ಇಂತಹ ಘೋರ ವ್ಯವಸ್ಥೆ ಮುಂದೆಂದೂ ಬರಲೇಬಾರದು ಎನ್ನುವುದಾದರೆ ಸಾಂಸ್ಕೃತಿಕ ಮಧ್ಯಪ್ರವೇಶದ ಅವಶ್ಯಕತೆ ಇಂದಿನ ತುರ್ತು ಅಗತ್ಯವಾಗಿದೆ. ಇರುವ ಸಂವಿಧಾನವನ್ನು ಉಳಿಸಿಕೊಂಡು ಮತಾಂಧರ ಹುನ್ನಾರಗಳನ್ನು ಹಿಮ್ಮೆಟ್ಟಿಸುವುದಕ್ಕೆ ಸಾಂಸ್ಕೃತಿಕ ಎಚ್ಚರ ಬೇಕಾಗಿದೆ. 

ಏನಿದು ಸಾಂಸ್ಕೃತಿಕ ಮಧ್ಯಪ್ರವೇಶ?  ದೇಶ ಯಾವುದೇ ಇರಲಿ, ಪ್ರಭುತ್ವ ಎಂತುಹುದೇ ಇರಲಿ. ಎಲ್ಲಿ ಕಲೆ, ಸಾಹಿತ್ಯ, ಭಾಷೆಯ ಪ್ರಜ್ಞೆ ಸಕ್ರಿಯವಾಗಿರುತ್ತದೋ, ಈ ಸಾಂಸ್ಕೃತಿಕ ಕ್ಷೇತ್ರದ ರೂವಾರಿಗಳು ಆಳವ ವರ್ಗಗಳು ಹುಟ್ಟಿಸುವ ಭ್ರಮೆ, ಮತಾಂಧತೆ, ಹುಸಿ ದೇಶಪ್ರೇಮಗಳ ಕುರಿತು ತಮ್ಮ ಕಲೆ ಸಾಹಿತ್ಯಗಳ ಮೂಲಕ ಜನರನ್ನು ಜಾಗೃತ ಗೊಳಿಸುತ್ತಾ ಇರುತ್ತಾರೋ ಅಲ್ಲಿ ಶೋಷಕರ ವಿರುದ್ಧದ ಪ್ರತಿಭಟನೆ ಹುಟ್ಟಿಕೊಳ್ಳಲು ಸಾಧ್ಯ. ಪ್ರಭುತ್ವ ಸೃಷ್ಟಿಸುವ ಹುನ್ನಾರಗಳನ್ನು ಮೆಟ್ಟಿ ನಿಲ್ಲಲು ಸಾಧ್ಯ.

ದೇಶವೆಂದರೆ ಬರೀ ಕಲ್ಲು ಮಣ್ಣು ಕಟ್ಟಡಗಳಲ್ಲ. ದೇಶವೆಂದರೆ ಅಲ್ಲಿ ವಾಸಿಸುವ ಜನಗಳು. ಯಾವ ದೇಶದಲ್ಲಿ ಪ್ರಜ್ಞಾವಂತ ಜನರು ಇರುತ್ತಾರೋ, ತಮ್ಮ ಘನತೆಯ ಬದುಕಿನ ಹಕ್ಕಿಗಾಗಿ ಹೋರಾಡುತ್ತಾರೋ ಅಲ್ಲಿ ಪ್ರಭುತ್ವವೂ ಜನರ ಆಶೋತ್ತರಗಳಿಗೆ ಪೂರಕವಾಗಿ ಸ್ಪಂದಿಸುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಆ ರೀತಿಯ ಅನಿವಾರ್ಯತೆಯನ್ನು ಜನಹೋರಾಟಗಳು ಮಾತ್ರ ಹುಟ್ಟುಹಾಕಲು ಸಾಧ್ಯ. ಇಲ್ಲದೇ ಹೋದರೆ ಪೋಷಕ ಪ್ರಭುತ್ವ ದ ಶೋಷಣೆಯ ಕೋಟೆ ಅಭೇದ್ಯ.

ಜಾಗತೀಕರಣದ ನಂತರದ ಕಾಲಘಟ್ಟದಲ್ಲಿ ಪ್ರಭುತ್ವಗಳು ಜನಹೋರಾಟಗಳನ್ನು ಸಾಮ ಬೇಧ ದಂಡಾದಿ ತಂತ್ರಗಳ ಮೂಲಕ ಒಡೆದು ಹಾಕುವುದರಲ್ಲಿ ಯಶಸ್ವಿಯಾಗಿವೆ. ಸಂಖ್ಯಾತ್ಮಕ ಬಿಡಿ ಬಿಡಿ ಹೋರಾಟಗಳು ನಡೆಯುತ್ತಲೇ ಇವೆಯಾದರೂ ಅವುಗಳನ್ನು ಅಲ್ಲಲ್ಲೇ ಶಮನಗೊಳಿಸುವ ಕಲೆ ಪ್ರಭುತ್ವಕ್ಕೆ ಸಿದ್ಧಿಸಿದೆ. ಹುಸಿ ಭರವಸೆಗಳನ್ನು ಕೊಟ್ಟು ಮಹಾ ರೈತ ಆಂದೋಲನವನ್ನೇ ನಿಲ್ಲಿಸಿ, ಕೊಟ್ಟ ಭರವಸೆಗಳನ್ನೂ ಈಡೇರಿಸದೇ ಇರುವ ಸಂಘೀ ಪ್ರಭುತ್ವದ ಧೋರಣೆಯೇ ಇದಕ್ಕೆ ಉದಾಹರಣೆಯಾಗಿದೆ. ಅಲ್ಲಿ ಸಾವಿರ ಜನ ಹಕ್ಕೊತ್ತಾಯಕ್ಕಾಗಿ ಹೋರಾಟ ಮಾಡಿದರೆ ಇತ್ತ ಕೋಟ್ಯಾಂತರ ಜನರ ಭಾವನೆಗಳನ್ನು ರಾಷ್ಟ್ರಪ್ರೇಮ, ದೇವರು ಧರ್ಮದ ಹೆಸರಲ್ಲಿ ಹೇಗೆ ಉನ್ಮಾದಗೊಳಿಸಬೇಕು ಎನ್ನುವುದು ಹಿಂದುತ್ವವಾದಿ ನಾಯಕತ್ವಕ್ಕೆ ಚೆನ್ನಾಗಿ ಗೊತ್ತಿದೆ. 

ದೆಹಲಿಯ ರೈತ ಹೋರಾಟ

ಈಗ ಆಗಲೇ ಬೇಕಾಗಿರುವುದು ಜನತೆಯಲ್ಲಿ ಬಿತ್ತಲಾಗಿರುವ ಭಾವನಾತ್ಮಕ ಉನ್ಮಾದವನ್ನು ಹೋಗಲಾಡಿಸಿ ನಿಜದ ಅರಿವನ್ನು ತೋರುವ ಕೆಲಸ. ಅಂದರೆ ಜನಜಾಗೃತಿ. ಇದನ್ನು ಮಾರಿಕೊಂಡ ಹೋರಾಟಗಾರರಿಂದ, ಅವಕಾಶವಾದಿ ಸಂಘಟನೆಗಳಿಂದ ಮಾಡಲು ಖಂಡಿತಾ ಸಾಧ್ಯವಿಲ್ಲ.  ಜನಮಾನಸದಲ್ಲಿ ಪ್ರಜ್ಞೆಯನ್ನು ಜಾಗೃತ ಗೊಳಿಸುವ, ಪ್ರಭುತ್ವದ ಮನುವಾದಿ ಧೋರಣೆಯ ಅಪಾಯಗಳ ಕುರಿತು ಎಚ್ಚರಿಸುವ ಕೆಲಸವನ್ನು ಸಾಂಸ್ಕೃತಿಕ ಮಧ್ಯಪ್ರವೇಶದ ಮೂಲಕ ಮಾಡಬೇಕಿದೆ. ಸಾಂಸ್ಕೃತಿಕ ಲೋಕದಲ್ಲೂ ಮಾರಿಕೊಂಡವರು, ಅವಕಾಶವಾದಿಗಳು, ಪ್ರಭುತ್ವದ ಪರವಾಗಿರೋರು ಬೇಕಾದಷ್ಟು ಇದ್ದಾರೆ. ಇಂತವರು ಜನರ ದಿಕ್ಕನ್ನೂ ಪ್ರಭುತ್ವದ ಪರವಾಗಿ ತಿರುಗಿಸ ಬಲ್ಲರು. ಆದರೆ ನಿಜವಾದ ಜನಪರ ಕಾಳಜಿಯುಳ್ಳವರು, ಘನತೆಯ ಬದುಕಿನ ಅನುಷ್ಠಾನದ ಆಶಯ ಇರುವವರೂ ಸಾಂಸ್ಕೃತಿಕ ಲೋಕದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರ್ಯನಿರತರಾಗಿದ್ದಾರೆ.

ನಾರಾಯಣ ಗುರುಗಳ ಚಳವಳಿ ಆಧಾರಿತ ನಾಟಕ “ಶೂದ್ರ ಶಿವ

ಪ್ರಭುತ್ವದ ದಮನದ ವಿರುದ್ಧ  ಕವಿತೆಗಳನ್ನು ಬರೆದು ಎಚ್ಚರಿಸುವ ಕವಿಗಳಿದ್ದಾರೆ, ಸಾಹಿತ್ಯದ ವಿವಿಧ ಪ್ರಕಾರಗಳ ಮೂಲಕ ಸಾಮಾಜಿಕ ಎಚ್ಚರದ ದ್ವನಿಯಾಗಿರುವ ಸಾಹಿತಿಗಳೂ ಅನೇಕರಿದ್ದಾರೆ. ಶೋಷಕರ ಹುನ್ನಾರಗಳನ್ನು ಕಲಾತ್ಮಕ ರೂಪದಲ್ಲಿ ಬಯಲು ಗೊಳಿಸುವ ರಂಗಕರ್ಮಿಗಳೂ ಇದ್ದಾರೆ. ಭಾಷೆಯ ಮೇಲೆ ಪ್ರಭುತ್ವದ ದಬ್ಬಾಳಿಕೆಯನ್ನು ವಿರೋಧಿಸುವ ಭಾಷಾಭಿಮಾನಿಗಳೂ ಇದ್ದಾರೆ. ಆಳದಲ್ಲಿ ಸದಾ ಪ್ರಭುತ್ವದ ದಮನವನ್ನು ವಿರೋಧಿಸುತ್ತಲೇ ಬಂದಿರುವ ಜಾನಪದ ಕಲಾವಿದರಿದ್ದಾರೆ. ಆದರೆ ಈ ಎಲ್ಲಾ ಸಾಂಸ್ಕೃತಿಕ ಪ್ರತಿರೋಧದ ಧ್ವನಿಗಳನ್ನು  ಒಳಗೊಳ್ಳುವ, ಒಂದು ಗೂಡಿಸುವ, ಒಂದು ವೇದಿಕೆಯಡಿಯಲ್ಲಿ ತರುವ ಪ್ರಾಮಾಣಿಕ ಕೆಲಸ ಆಗಬೇಕಿದೆ. ಅಂತಹ ಸಮರ್ಥ ಸಾಂಸ್ಕೃತಿಕ ಸಂಘಟನೆಯೊಂದರ ತುರ್ತು ಅಗತ್ಯ ಈಗ ಬೇಕಾಗಿದೆ. ಕಲೆ ಸಾಹಿತ್ಯಗಳ ಮೂಲಕ ಜನತೆಯನ್ನು ತಲುಪಿ ಜಾಗೃತಿ ಮಾಡಬಹುದಾದ ಎಲ್ಲಾ ಜನಪರ ಶಕ್ತಿಗಳು ಒಂದಾಗಬೇಕಿದೆ. ಹೀಗೆ ಸಾಂಸ್ಕೃತಿಕ ಮಧ್ಯಪ್ರವೇಶ ಆಗದೇ ಹೋದರೆ, ಜನಾಂದೋಲನಗಳಿಗೆ ಶಕ್ತಿ ತುಂಬದೇ ಹೋದರೆ, ಜನರನ್ನು ಕೋಮುವಾದಿ ಹುನ್ನಾರಗಳ ವಿರುದ್ದ ಎಚ್ಚರಿಸದೇ ಇದ್ದರೆ ಈ ದೇಶ ಹಿಂದುತ್ವವಾದಿಗಳ ವಶವಾಗುವುದರಲ್ಲಿ ಸಂದೇಹವೇ ಇಲ್ಲ. ಮನುವಾದಿ ಪ್ರಣೀತ ಸಂವಿಧಾನ ಜಾರಿಯಾಗುವುದರಲ್ಲಿ ಎರಡು ಮಾತಿಲ್ಲ. ಜನತೆಯ ಘನತೆಯ ಬದುಕು ಎಂಬುದು ಕನಸಾಗಿಯೇ ಉಳಿಯುವುದು ನಿಶ್ಚಿತ. ಮತ್ತೆ ಹಲವು ಶತಮಾನಗಳ ಕಾಲ ಅಸಮಾನ ವರ್ಣವ್ಯವಸ್ಥೆಯಲ್ಲಿ ಈ ದೇಶದ ಬಹುಸಂಖ್ಯಾತರು ಬೆಂದು ಬೂದಿಯಾಗುವುದು ಖಚಿತ. 

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ- ಪ್ಯಾಲೆಸ್ಟೈನ್: ವಿಶ್ವಸಂಸ್ಥೆಯಲ್ಲಿ ಭಾರತದ ಎಡಬಿಡಂಗಿ ನೀತಿ

Related Articles

ಇತ್ತೀಚಿನ ಸುದ್ದಿಗಳು