Thursday, June 13, 2024

ಸತ್ಯ | ನ್ಯಾಯ |ಧರ್ಮ

ವಚನವಂಚನೆ ಸರ್ಕಾರ: ಬಿಜೆಪಿಗೆ ಸಿದ್ದರಾಮಯ್ಯ ಸವಾಲ್‌!

ಬೆಂಗಳೂರು: ರಾಜ್ಯ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದಾಗ ನೀಡಿದ್ದ ಭರವಸೆಗಳನ್ನು ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದು, 3 ವರ್ಷಗಳ ನಂತರ ಎಷ್ಟು ವಚನಗಳನ್ನು ಈಡೇರಿಸಿದ್ದೀರಿ? ಉತ್ತರಿಸಿ ಎಂದು ಸವಾಲ್‌ ಹಾಕಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, 2018ರ ಚುನಾವಣೆ ಪ್ರಣಾಳಿಕೆಯಲ್ಲಿ ಬಿಜೆಪಿ ಪಕ್ಷದವರು ರಾಜ್ಯದ ಜನತೆಗೆ ಸುಮಾರು 600 ಭರವಸೆಗಳನ್ನು ನೀಡಿದ್ದರು. ಅಧಿಕಾರಕ್ಕೆ ಬಂದು 3 ವರ್ಷಗಳ ನಂತರ ಎಷ್ಟು ವಚನಗಳನ್ನು ಈಡೇರಿಸಿದ್ದಾರೆ ಎಂದು ಉತ್ತರಿಸಲಿ. ನಾವು 2013ರ ಚುನಾವಣೆ ವೇಳೆ ಜನರಿಗೆ 165 ಭರವಸೆಗಳನ್ನು ನೀಡಿ, ಅವುಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು, ಜೊತೆಗೆ ಹೆಚ್ಚುವರಿ 30 ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೆವು, ಬಿಜೆಪಿತನ್ನ ಪ್ರಣಾಳಿಕೆಯ ಭರವಸೆಗಳಲ್ಲಿ 10% ಕೂಡ ಈಡೇರಿಸಿಲ್ಲ. ಉಳಿದ ಭರವಸೆಗಳ ಈಡೇರಿಕೆ ಯಾವಾಗ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಬಾಕಿ ಇರುವ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 1.5 ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದು ಬಿಜೆಪಿ ಅವರು ವಚನ ನೀಡಿದ್ದರು. ಕಳೆದ ಮೂರು ವರ್ಷಗಳಲ್ಲಿ ಕೇವಲ 48 ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಉಳಿದ ಒಂದು ಲಕ್ಷ ಕೋಟಿ ರೂಪಾಯಿಯ ಯೋಜನೆಗಳು ಜಾರಿಯಾಗೋದು ಯಾವಾಗ? ಎಂದು ಕೇಳಿದರು.

ಅಧಿಕಾರಕ್ಕೆ ಬಂದ ಕೂಡಲೇ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ 1 ಲಕ್ಷದ ವರೆಗಿನ ರೈತರ ಸಾಲ ಮನ್ನಾ ಮಾಡುವ ಭರವಸೆಯನ್ನು ಬಿಜೆಪಿ ಅವರು ನೀಡಿದ್ದರು. ಹಿಂದೊಮ್ಮೆ ಸಾಲ ಮನ್ನಾ ಮಾಡಲು ನೋಟ್ ಪ್ರಿಂಟ್ ಮಾಡುವ ಮೆಷಿನ್ ಇಲ್ಲ ಎಂದಿದ್ದ ಬಿ.ಎಸ್.‌ ಯಡಿಯೂರಪ್ಪ ವಚನ ಭ್ರಷ್ಟತೆಯಲ್ಲಿ ನಿಸ್ಸೀಮರು ಎಂದು ಕಟುವಾಗಿ ಟೀಕಿಸಿದ್ದಾರೆ.

ಪರಿಶಿಷ್ಟ ಹಾಗೂ ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಹಾಸ್ಟೆಲ್,  ಬಾತ್ ರೂಂ ಕಿಟ್ ವಿತರಣೆ ಮಾಡುವ ಯೋಗ್ಯತೆ ಬಿಜೆಪಿ ಸರ್ಕಾರಕ್ಕೆ ಇಲ್ಲ. ಇದು ಅಸಮರ್ಥ ಮುಖ್ಯಮಂತ್ರಿಗಳಿಂದ ಮ್ಯಾನೇಜ್ ಮಾಡಲ್ಪಡುತ್ತಿರುವ ದಿವಾಳಿ ಸರ್ಕಾರ ಎಂದು ವ್ಯಂಗ್ಯವಾಡಿದ್ದಾರೆ.

ದೇವರಾಜ ಅರಸು ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿಗೆ ಕಳೆದ 3 ವರ್ಷಗಳಿಂದ ಅಗತ್ಯ ಅನುದಾನ ನೀಡಿಲ್ಲ. ಖಾಲಿ ಕೈಲಿರುವ ನಿಗಮಗಳಿಂದ ಶೋಷಿತರ ಕಲ್ಯಾಣ ಸಾಧ್ಯವೇ ಬಿಜೆಪಿ? ಎಂದು ಸಿದ್ದರಾಮಯ್ಯ ಗುಡುಗಿದರು.

ನಮ್ಮ ಸರ್ಕಾರದ 5 ವರ್ಷಗಳ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದೆವು, ರಾಜೀವ್‌ ಗಾಂಧಿ ವಸತಿ ಯೋಜನೆ ಪ್ರಾಧಿಕಾರದಿಂದ ಯಾರು ಬೇಕಾದರೂ ಈ ಮಾಹಿತಿ ಪಡೆದುಕೊಳ್ಳಬಹುದು. ಇಡೀ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಂಜೂರು ಮಾಡಿ, ಕಟ್ಟಿಸಿಕೊಟ್ಟ ಒಂದೇ ಒಂದು ಮನೆ ತೋರಿಸಲಿ ಎಂದು ಸವಾಲ್‌ ಹಾಕಿದ್ದಾರೆ.

ನಾವು ಬೆಂಗಳೂರು ನಗರಕ್ಕೆ 1 ಲಕ್ಷ ಮನೆ ನಿರ್ಮಾಣ ಮಾಡಬೇಕೆಂದು ಬಜೆಟ್ ನಲ್ಲಿ ಹಣ ಒದಗಿಸಿ, 1072 ಎಕರೆ ಜಮೀನನ್ನು ನೀಡಿ, ಆನ್‌ ಲೈನ್‌ ಮೂಲಕ ಅರ್ಜಿ ಕರೆದು 50,000 ಮನೆಗಳನ್ನು ಮಂಜೂರು ಮಾಡಿದ್ದೆವು, ಬಿಜೆಪಿ ಸರ್ಕಾರ ಬಂದಮೇಲೆ ಎಲ್ಲಾ ಅರ್ಜಿಗಳನ್ನು ವಜಾ ಮಾಡಿದೆ. ಹೊಸದಾಗಿ ಅರ್ಜಿಯನ್ನು ಕರೆದಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಾಲ ಜಾಸ್ತಿಯಾಗಿದೆ ಎಂದು ಸಿ.ಟಿ.ರವಿ ಹೇಳುತ್ತಿದ್ದರು. ನಮ್ಮ ಸರ್ಕಾರದ ಕೊನೆ ಬಜೆಟ್‌ ಮಂಡಿಸಿದಾಗ ರಾಜ್ಯದ ಮೇಲಿದ್ದ ಒಟ್ಟು ಸಾಲ 2.4 ಲಕ್ಷ ಕೋಟಿ. ನಾನು ಅಧಿಕಾರಕ್ಕೆ ಬರುವ ಮೊದಲು ಈ ಸಾಲ 1.36 ಲಕ್ಷ ಕೋಟಿ ಇತ್ತು. ನಮ್ಮನ್ನು ಸಾಲ ಮಾಡಿ ತುಪ್ಪ ತಿನ್ನುವವರು ಎಂದು ಟೀಕಿಸುತ್ತಿದ್ದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಸಾಲ 5 ಲಕ್ಷದ 40 ಸಾವಿರ ಕೋಟಿಗೆ ಏರಿದೆ. ಕೇವಲ 4 ವರ್ಷಗಳಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದ್ದು ಬಿಜೆಪಿ ಸಾಧನೆ ಅಲ್ಲವೇ? ಎಂದು ಪ್ರಶ್ನಿಸುವ ಮೂಲಕ ಸಿ.ಟಿ.ರವಿ ಅವರಿಗೆ ತಿರುಗೇಟು ನೀಡಿದ್ದಾರೆ.

ನಮ್ಮ ಅವಧಿಯಲ್ಲಿ ಸಾಲವು ರಾಜ್ಯದ ಜಿಡಿಪಿ ಯ 25% ಒಳಗಡೆ ಇತ್ತು, ಫಿಸ್ಕಲ್‌ ಢಿಫಿಸಿಟ್‌ 3% ಒಳಗಡೆ ಇತ್ತು ಹಾಗೂ ರಾಜಸ್ವ ಉಳಿಕೆ ಇತ್ತು. ಆದರೆ ಈ ವರ್ಷ 19,000 ಕೋಟಿ ವಿತ್ತೀಯ ಕೊರತೆ ಎದುರಿಸುತ್ತಿದ್ದೇವೆ. ಬಿಜೆಪಿ ನಾಯಕರು ಸಾಲ ಮಾಡಿ ಸಂಬಳ ಕೊಡುವಷ್ಟು ರಾಜ್ಯವನ್ನುದಿವಾಳಿಯೆಬ್ಬಿಸಿದ್ದಾರೆ.ಈ ವರ್ಷ ಸರ್ಕಾರವು ಅಸಲು ಮತ್ತು ಬಡ್ಡಿ ಸೇರಿ ಒಟ್ಟು 43,000 ಕೋಟಿ ಸಾಲದ ಮರುಪಾವತಿ ಮಾಡಬೇಕು. ನಾಚಿಕೆಗೆಟ್ಟ ಬಿಜಿಪಿ ನಾಯಕರು ಈ ಸಾಲದ ಹಣದಲ್ಲೂ 40% ಕಮಿಷನ್‌ ಹೊಡೆಯುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಬಿಜಿಪಿ ಆಡಳಿತದಲ್ಲಿ ನಡೆದ ಹಗರಣಗಳು ಒಂದೊಂದಾಗಿ ಹೊರಬಂದು ಐಎಎಸ್, ಐಪಿಎಸ್ ಅಧಿಕಾರಿಗಳು ಜೈಲು ಸೇರಿದ್ದಾರೆ. ಮುಖ್ಯಮಂತ್ರಿಗಳಿಗೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲ. ಹಾಗಾಗಿಯೇ ಮಾಧುಸ್ವಾಮಿ ಅವರು ಇಲ್ಲಿ ಸರ್ಕಾರ ನಡೆಯುತ್ತಿಲ್ಲ, ಕೇವಲ ಮ್ಯಾನೇಜ್‌ ಮಾಡುತ್ತಿದ್ದೇವೆ ಎಂದು ಹೇಳಿದ್ದು. ಅಧಿಕಾರಕ್ಕೆ ಬಂದ 24 ಗಂಟೆಗಳ ಒಳಗೆ ಎಸ್.ಟಿ ಸಮುದಾಯಕ್ಕೆ 7.5% ಮೀಸಲಾತಿ ಕಲ್ಪಿಸಿಕೊಡುತ್ತೇವೆ, ಇದನ್ನು ಬೇಕಾದರೆ ರಕ್ತದಲ್ಲಿ ಬರೆದುಕೊಡ್ತೇನೆ ಎಂದಿದ್ದ ಶ್ರೀರಾಮುಲು ಮಹಾ ವಚನಭ್ರಷ್ಟ ಎಂದು ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ವಚನ ಭ್ರಷ್ಟತೆಯನ್ನು ಮುಚ್ಚಿಡಲು  ಬಿಜೆಪಿ ನಾಯಕರು ಜನರ ನಡುವೆ ಧರ್ಮ, ಭಾಷೆ, ಆಚಾರ, ವಿಚಾರಗಳಲ್ಲಿ ವಿವಾದ ಸೃಷ್ಟಿಸಿ, ತಮ್ಮನ್ನು ಧರ್ಮ ರಕ್ಷಕರಂತೆ ಬಿಂಬಿಸಿಕೊಳ್ಳುವ ಕೀಳು ರಾಜಕೀಯದ ಮೊರೆ ಹೋಗಿದ್ದಾರೆ. ರಾಜ್ಯದ ಜನ ಈ ನಾಟಕವನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು